Sunday, January 1, 2012

"ಗುಮ್ಮನ ಕರೆಯದಿರೆ.."


                    
ಬ್ಬಾ ಟಾಕೀಸ್!
ಸುಮಾರು ವರ್ಷಗಳ ಹಿಂದೆ ಅಂಥದೊಂದು ಹೆಸರಿನ ಸಿನೆಮಾ ಟಾಕೀಸು ಗದುಗಿನಲ್ಲಿತ್ತು. ತಮಾಷೆಯೆಂದರೆ,
'ಮಹಾಲಕ್ಷ್ಮಿ ಚಿತ್ರಮಂದಿರ' ಎಂಬ ಸುಂದರವಾದ ಡೀಸೆಂಟ್ ಹೆಸರೊಂದು ಈ ಟಾಕೀಸಿಗಿತ್ತಾದರೂ ಗದುಗಿನಲ್ಲಿ ಯಾರೊಬ್ಬರೂ
ಅದನ್ನು ಅದರ ನಿಜನಾಮಧೇಯದಿಂದ ಗುರುತಿಸುತ್ತಿರಲಿಲ್ಲ. ಅವರಿಗೆಲ್ಲ 'ಡಬ್ಬಾ ಟಾಕೀಸ್' ಅಂದರೆ ಮಾತ್ರ ಗೊತ್ತಾಗುತ್ತಿತ್ತು. 
ಇಂಥದೊಂದು ಟಾಕೀಸಿನ interior ದೃಶ್ಯ ನಿಜಕ್ಕೂ ನೋಡುವಂತಿರುತ್ತಿತ್ತು.

ಸಿನೆಮಾ ನೋಡುತ್ತಿರುವಾಗ ಹುಚ್ಚಾಗಿಯೋ, ಥ್ರಿಲ್ಲಾಗಿಯೋ ಪ್ರೇಕ್ಷಕ ಮಹಾಶಯ ತೂರಿಬಿಟ್ಟ ಪೇಪರ್ ರಾಕೆಟ್ಟುಗಳು 
ಟಾಕೀಸಿನ ಸೀಲಿಂಗಿಗೆ ವರ್ಷಗಟ್ಟಲೇ ಅಂಟಿಕೊಂಡಿದ್ದರೆ, ಎಲೆಅಡಿಕೆಯ ಪ್ರೋಕ್ಷಣೆಯಿಂದ ನೆಲವೆಲ್ಲ ರೆಡ್ಡುರೆಡ್ದಾದ 
ಕಾರ್ಪೆಟ್ಟಿನಂತೆ ಕಂಗೊಳಿಸುತ್ತಿತ್ತು. ಅಪರೂಪಕ್ಕೊಮ್ಮೆ ಪ್ರದರ್ಶಿಸುತ್ತಿದ್ದ ದೆವ್ವದ ಸಿನೆಮಾ ನೋಡಲು ಬಂದ ಪ್ರೇಕ್ಷಕರ ಕಾಲಡಿ
ಇಲಿ,ಜಿರಳೆಗಳು ಸದ್ದಿಲ್ಲದೇ ಹರಿದಾಡಿ ಆ ಇಡೀ ಹಾರರ್ ಸೀನಿಗೆ ಡಬಲ್ ಕಿಕ್ ಕೊಡುತ್ತಿದ್ದವು. ಯಾವತ್ತಾದರೊಮ್ಮೆ ಹಿಟ್ಟಾದ
ಸಿನೆಮ ಬಂದುಬಿಟ್ಟರೆ ಟಿಕೆಟ್ಟುಗಳನ್ನು ಸಿಕ್ಕಂತೆ ಸೇಲು ಮಾಡಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲೂ ಸೀಟು ಸಿಗದೇ ತಗಡಿನ ಕುರ್ಚಿ,
ಮರದ ಕುರ್ಚಿ, ಕೊನೆಗೆ ಬೆಂಚೂ ಕೂಡ ಹಾಕಲಾಗುತ್ತಿತ್ತು. ಅದು ಬಿಡಿ, ಥೇಟರ್ ನೊಳಗೆ pillar ಗಳಿರುವದನ್ನು ಎಲ್ಲಾದರೂ
ಕೇಳಿದ್ದೀರಾ? ಇಲ್ಲಿ ಪ್ರೇಕ್ಷಕ ಮತ್ತು ಪರದೆಯ ಮಧ್ಯೆ ಅಲ್ಲಲ್ಲಿ ಐದಾರು ಕಂಬಗಳಿದ್ದು, ಅಂಥ ಕಂಬಗಳ ಹಿಂದೆ ಕುಳಿತುಕೊಳ್ಳುವದು
ಯಾರಿಗೂ ಇಷ್ಟವಿರಲಿಲ್ಲವಾದ್ದರಿಂದ ಸೀಟಿಗಾಗಿ ಆಗಾಗ ಸಣ್ಣಪುಟ್ಟ ಯುದ್ಧಗಳಾಗುತ್ತಿದ್ದವು.

ಇಷ್ಟಾದರೂ ಡಬ್ಬಾ ಟಾಕೀಸು ಎಲ್ಲರ ಮನದಲ್ಲಿ ನೆಲೆಯೂರಿತ್ತು. ಯಾಕೆಂದರೆ, ಆ ಟಾಕೀಸಿನವರ ಪ್ರಾಮಾಣಿಕತೆಯ ಪರಾಕಾಷ್ಟತೆ
ಎಷ್ಟಿತ್ತೆಂದರೆ, ಜನರೇಟರ್ ಸೌಲಭ್ಯವಿಲ್ಲದ ಈ ಥೇಟರ್ ನಲ್ಲಿ ಕರೆಂಟು ಕೈಕೊಟ್ಟರೆ ಸಿನೆಮಾ ಅಲ್ಲಿಗೇ ಶುಭಂ! 
ಹಾಗೆ ಸಿನೆಮಾ ಅರ್ಧಕ್ಕೆ ಬಿಟ್ಟು ಮನೆಗೆ ಹೊರಟ ಪ್ರೇಕ್ಷಕರಿಗೆ ಅವರವರ ಟಿಕೆಟ್ಟಿನಲ್ಲಿ ಮಾರ್ಕ್ ಮಾಡಿ ಮರುದಿನ ಅದೇ ಸಿನೆಮ
ಮತ್ತೊಮ್ಮೆ ನೋಡಲು ಅವಕಾಶ ಕಲ್ಪಿಸಲಾಗುತ್ತಿತ್ತು.

ಇಂತಿಪ್ಪ ಡಬ್ಬಾ ಟಾಕೀಸು ನನ್ನ ಬಾಲ್ಯದ ಮಲ್ಟಿಪ್ಲೆಕ್ಸ್ ಆಗಿತ್ತು. ಆವತ್ತಿನ ಅತ್ಯುತ್ತಮ ಸಂದೇಶವುಳ್ಳ ಚಿತ್ರಗಳನ್ನು ನಾನು 
ನೋಡಿದ್ದು ಇಲ್ಲಿಯೇ. ಈ ಟಾಕೀಸಿನಲ್ಲಿ ನನಗೆ free entry ಅಷ್ಟೇ ಅಲ್ಲ, wild card entry ಥರ ನಾನು ಯಾವಾಗ 
ಬೇಕಾದರೂ ನುಗ್ಗಿ ಹೊರಬರಬಹುದಿತ್ತು. ಯಾಕೆಂದರೆ, ನಮ್ಮಜ್ಜ ಇಲ್ಲಿ projector operator ಆಗಿದ್ದ! ನನ್ನ ಸೋದರಮಾವ
ಟಿಕೇಟು ಹರಿದುಕೊಡುತ್ತಿದ್ದ. ಹೀಗಾಗಿ ಟಾಕೀಸಿಗೆ ಬರುವ ಎಲ್ಲ ಸಿನೆಮಾಗಳಿಗೂ ನಮ್ಮ ಇಡೀ ಕುಟುಂಬಕ್ಕೆ ಎಂಟ್ರಿ ಫ್ರೀ ಇತ್ತು.
ಹಾಗಂತ ನನ್ನದೇನೂ ಖುಷಿಪಡುವ ಪರಿಸ್ಥಿತಿ ಇರಲಿಲ್ಲ. ಮನೆಮಂದಿಯೆಲ್ಲ ಎಂಥ ಸಿನೆಮಾಗೆ ಹೋಗಬೇಕು ಎಂಬುದನ್ನು
ಅಜ್ಜ ಸೆನ್ಸಾರ್ ಮಾಡುತ್ತಿದ್ದ. ಹಾಗಾಗಿ ನಾವೆಲ್ಲ ನೋಡಿದ್ದು ಸತಿ ಸಕ್ಕೂಬಾಯಿ, ಚಂದ್ರಹಾಸ, ಕೃಷ್ಣದೇವರಾಯ, ಲವಕುಶ,
ದೇವರ ಮಕ್ಕಳು, ಮಕ್ಕಳ ಸೈನ್ಯ- ಬರೀ ಇಂಥ ಚಿತ್ರಗಳನ್ನೇ! ಹಾಗೆ ಸಿನೆಮಾ ನೋಡಲು ಹೋದಾಗ ನಮಗೆಲ್ಲ ಬಾಲ್ಕನಿ
ಸೀಟಿನ ಎತ್ತರದ row ಒಂದನ್ನು ಕಾಯ್ದಿರಿಸಲಾಗುತ್ತಿತ್ತು. ಮತ್ತು ಇದೇ ಸೀಟು ನನ್ನಲ್ಲಿ ಒಂಥರಾ ಸಿಟ್ಟು ತರಿಸುತ್ತಿತ್ತು.

ಜಾಸ್ತಿ ದುಡ್ಡು ಕೊಟ್ಟು ಸಿನೆಮಾ ನೋಡುವವರಿಗೆ ಪರದೆಯ ಎದುರಿಗೇ ಕೂಡಿಸುತ್ತಾರೆಂದೂ, ಕಡಿಮೆ ದುಡ್ಡು ಕೊಟ್ಟವರಿಗೆ
ಹಿಂದಿನ ಬಾಲ್ಕನಿ ಸೀಟು ಕೊಡುತ್ತಾರೆಂದೂ ಮತ್ತು ನಮ್ಮಂಥ 'ಫ್ರೀ' ಗಿರಾಕಿಗಳಿಗೆ ಎಲ್ಲಕ್ಕಿಂತ ಹಿಂದೆ ಜಾಗ 
ಕೊಡುತ್ತಾರೆಂದೂ ನನ್ನ ನಂಬಿಕೆಯಾಗಿತ್ತು. ಹಾಗಾಗಿ ಪ್ರತೀಬಾರಿ ಪಿಕ್ಚರ್ ಗೆ ಹೋದಾಗಲೂ ಮುಂದಿನ ಸೀಟಾದ 
'ಗಾಂಧೀಕ್ಲಾಸ್' ಗೆ ಹೋಗುತ್ತೇನೆಂದು ಮನೆಯವರಿಗೆ ಗಂಟು ಬೀಳುತ್ತಿದ್ದೆ. ಅಕ್ಕನಿಗೆ ಏನು ಹೇಳಬೇಕೆಂಬುದು ಗೊತ್ತಾಗದೆ
ತಲೆ ತಲೆ ಚಚ್ಚಿಕೊಳ್ಳುತ್ತಿದ್ದಳು..
ಹೀಗಿದ್ದಾಗ, ಅದೊಮ್ಮೆ ಬಹುಶಃ ನಾನು ಮೂರೋ, ನಾಲ್ಕೋ ಕ್ಲಾಸಿನಲ್ಲಿರಬೇಕು. 'ಸಂಪೂರ್ಣ ರಾಮಾಯಣ' ಅಂತ ಪಿಕ್ಚರ್ರು ಬಂತು. 
ದೇವರ ಸಿನೆಮಾ ಅಂದಮೇಲೆ ಕೇಳಬೇಕೆ? ಸಿನೆಮಾಗೆ ಹೋಗಲು ಮನೆಯಲ್ಲಿ ತಯಾರಿ ನಡೆಯತೊಡಗಿತು. ಆದರೆ ನನ್ನ
ಕರ್ಮ, ಯಾವುದ್ಯಾವುದೋ ಕಾರಣಗಳಿಂದಾಗಿ ಮನೆಯಲ್ಲಿ ಸಿನೆಮಾ ನೋಡುವದು postpone ಆಗತೊಡಗಿತು.
ನನಗೋ, ಒಳಗೊಳಗೇ ತಳಮಳ; ನಾವುಗಳು ನೋಡದೇ 'ರಾಮಾಯಣ' ಎತ್ತಂಗಡಿಯಾಗಿ ಬಿಟ್ಟರೇ?

ಲೆಕ್ಕಾಚಾರ ಸರಳವಾಗಿತ್ತು. ಅಷ್ಟೊತ್ತಿಗಾಗಲೇ ನಮ್ಮ ಬಾಲ್ಯಕಾಲದ ಆಟಗಳಾದ ಗೋಲಿ, ಬುಗುರಿ, ಚಿಣಿಪಣಿ ಎಲ್ಲ ಒಂದು ರೌಂಡು
ಮುಗಿಸಿ ಬೋರುಹೊಡೆದು ರಾಮಾಯಣದ ಬಿಲ್ಲಿಗೆ ಬಂದು ನಿಂತಿದ್ದೆವು. ಮರದ ಟೊಂಗೆಯ ಬಿಲ್ಲು ನಮ್ಮ ಹೈಟಿಗೆ 
ನಿಲುಕುತ್ತಿರಲಿಲ್ಲವಾದ್ದರಿಂದ ತೆಂಗಿನಗರಿಯ ಪೊರಕೆಕಡ್ಡಿ ಬಿಲ್ಲಿಗೇ ತೃಪ್ತಿಯಾಗಿದ್ದೆವು. ಈಗ 'ಸಂಪೂರ್ಣ ರಾಮಾಯಣ'ದ 
ಪೋಸ್ಟರಿನ ಹೊಳೆಯುವ ಬಿಲ್ಲನ್ನು ನೋಡಿ ಹ್ಯಾಗಾದರೂ ಮಾಡಿ ಅಂಥದೇ ಬಿಲ್ಲು ತಯಾರಿಸಬೇಕೆಂಬ ಪ್ಲಾನು ತಲೆಯಲ್ಲಿ
ಅರಳತೊಡಗಿತ್ತು. ಇಲ್ಲಿ ನೋಡಿದರೆ, ಮನೆಯಲ್ಲಿ ಯಾವುದ್ಯಾವುದೋ ಸುಡುಗಾಡು ಕಾರಣಗಳಿಂದಾಗಿ ಸಿನೆಮಾಗೆ 
ಹೋಗುವದನ್ನೇ ಮುಂದೂಡುತ್ತಿದ್ದಾರೆ.

ನಾನಾದರೂ ಎಷ್ಟು ದಿನ ಅಂತ ಕಾಯೋದು? ನೋಡೋವರೆಗೂ ನೋಡಿದೆ: ಆಮೇಲೆ ನನಗಿಂತ ಚಿಕ್ಕವನಾಗಿದ್ದ 
ಕಸಿನ್ ನೊಬ್ಬನನ್ನು ಜೊತೆಯಾಗಿಸಿಕೊಂಡು ಮನೆಯಲ್ಲಿ ಹೇಳದೇ ಕೇಳದೆ ಸೀದಾ ಥೇಟರ್ ಗೆ ನುಗ್ಗಿದೆ.
ಅಜ್ಜನಿಗೆ ಈ ವಿಷಯ ಗೊತ್ತಿಲ್ಲ; ಸೋದರಮಾವನಿಗೂ ಗೊತ್ತಿಲ್ಲ. ಸಿದ್ಧ ಕವಲೂರಿಗೆ ಕೈಬೀಸಿಗೊಂಡು ಹೋದಂತೆ,
ಥೇಟರ್ ನೊಳಗೆ ನುಗ್ಗುತ್ತಿದ್ದ ನಮ್ಮಿಬ್ಬರನ್ನು ಅಲ್ಲಿದ್ದ ಗೇಟ್ ಕೀಪರ್, "ಯಾರ್ರಲೇ ನೀವು? ಟಿಕೀಟು ಎಲ್ಲಿದಾವೆ..?"
ಅಂತ ಹಾಕ್ಕೊಂಡು ಉಗಿಯತೊಡಗಿದ.
ಗಾಬರಿಬಿದ್ದ ನಾನು, "ರೀ, ನಾನು ರೀಲು ಬಿಡೋವ್ರ ಮೊಮ್ಮೊಗ ರೀ.." ಅಂತೆಲ್ಲ ತಡಬಡಿಸತೊಡಗಿದೆ. ಅಷ್ಟರಲ್ಲಿ
ನಮ್ಮ ಮನೆಗೆ ಆಗಾಗ ಬರುತ್ತಿದ್ದ (ಇದೇ ಟಾಕೀಸಿನಲ್ಲಿದ್ದ) ಅಜ್ಜನ ಗೆಳೆಯರೊಬ್ಬರು ನಮ್ಮನ್ನು ನೋಡಿ ಬಳಿಗೆ ಬಂದು
ಗೇಟ್ ಕೀಪರ್ ಗೆ, "ರಾಯರ ಮೊಮ್ಮೊಗ ಬಿಡಪ್ಪಾ.." ಅಂತ ಒಳಗೆ ಕಳಿಸಿದರು.
ಅಂತೂ ಇಂತೂ ನನ್ನ ಬಹುದಿನದ ಆಸೆ ನೆರವೇರಿತ್ತು. ಕಾತರಿಸಿ ಕಾಯುತ್ತಲಿದ್ದ ಪರದೆ ಮುಂದಿನ ಗಾಂಧಿಕ್ಲಾಸಿನ 
ಮೊಟ್ಟ ಮೊದಲನೇ ಸೀಟಿನಲ್ಲಿ ಪದ್ಮಾಸನ ಹಾಕಿದೆ..

ಸರಿ,'ಸಂಪೂರ್ಣ ರಾಮಾಯಣ' ಶುರುವಾಯಿತು. ರಾಮ ಹುಟ್ಟಿ, ಬೆಳೆದು, ದೊಡ್ಡವನಾಗಿ, ಸೀತೆಯನ್ನು ಮದುವೆಯಾಗಿ, 
ರಾವಣ ಅವಳನ್ನು ಕಿಡ್ನಾಪ್ ಮಾಡಿದ್ದೂ ಆಯಿತು. ರಾಮ, ಲಕ್ಷ್ಮಣನೊಂದಿಗೆ ಸೀತೆಗಾಗಿ ಕಾಡಿನಲ್ಲಿ ಹುಡುಕಾಡುತ್ತಿದ್ದಾನೆ. 
ರಾತ್ರಿಯಾಗಿದೆ. ಕಗ್ಗತ್ತಲಿನಲ್ಲಿ ಎಲ್ಲೋ ನರಿಯೊಂದು ಕರ್ಕಶವಾಗಿ ಊಳಿಡುತ್ತಿದೆ. ಸುತ್ತಲೂ ಚಿತ್ರವಿಚಿತ್ರವಾದ ಸದ್ದುಗಳು. 
ಆಗಾಗ ರಾಮನ ಮೇಲೆ ಬೀಳುವ ಫ್ಲಾಶ್ ನ ಬೆಳಕು, ಗುಡುಗಿನ ಶಬ್ದ ಇಡೀ ಸೀಕ್ವೆನ್ಸ್ ಗೆ ಒಂದು ಭಯಂಕರವಾದ 
ಹಾರರ್ ಥೀಮನ್ನು ತಂದುಕೊಟ್ಟಿವೆ. ಆಗ ಬಂದಳು ನೋಡಿ!
ದೊಡ್ಡ ಮೂಗಿನ ಕಪ್ಪುವರ್ಣದ ದೇಹ. ತನ್ನ ಕೆಂಪು ಕಣ್ಣುಗಳನ್ನು ತಿರುಗಿಸುತ್ತ, ವಿಕಾರಮುಖದ ತಾಟಕಿ ರಾಕ್ಷಸಿ ಗಹಗಹಿಸಿ 
ನಗುತ್ತ ಎದುರಿಗಿದ್ದ ಸೈಜುಗಲ್ಲೊಂದನ್ನು ಅನಾಮತ್ತಾಗಿ ಎತ್ತಿ ರಾಮನ ಮೇಲೆ ಎಸೆದೇಬಿಟ್ಟಳು..

"ಅಯ್ಯಯ್ಯಪೋ..ಸತ್ವಿ.." ಅಂತ ಕಿರುಚಿದ ನಾವು, ನಮ್ಮ ತಲೆ ಮೇಲೇ ಕಲ್ಲು ಬಿತ್ತು ಅಂತ ಮನೆ ಕಡೆ ಓಟ ಕಿತ್ತಿದ್ದೆವು!
ಮರ್ಯಾದೆ ಯಾರಪ್ಪನ ಮನೆಯದು ನೋಡಿ: ಭಯಬಿದ್ದ ವಿಷಯ ಯಾರಲ್ಲೂ ಬಾಯ್ಬಿಡಲಿಲ್ಲ. ಅಷ್ಟೇ ಅಲ್ಲ, ಪ್ರತೀಬಾರಿಯೂ ಈ ಸಲ
ಗಟ್ಟಿಧೈರ್ಯ ಮಾಡಿ ಪೂರ್ತಿ ಸಿನೆಮಾ ನೋಡೇಬಿಡೋಣ ಅಂದುಕೊಂಡು ಗದುಗಿನ ವೀರನಾರಾಯಣನ ಅಂಗಾರ ಹಣೆಗೆ ಮೆತ್ತಿಕೊಂಡು ರಘುಕುಲತಿಲೋತ್ತಮರಂತೆ ಟಾಕೀಸಿಗೆ ಹೋಗುತ್ತಿದ್ದ ನಮಗೆ ತಾಟಕಿಯ ದರುಶನವಾಗುತ್ತಿದ್ದಂತೆ ನಮ್ಮ ರಾಮಾಯಣ ಅಲ್ಲಿಗೇ ಸಂಪೂರ್ಣವಾಗುತ್ತಿತ್ತು. ಕೊನೆಗೂ ನನಗೆ "ಸಂಪೂರ್ಣ ರಾಮಾಯಣ" ಪೂರ್ಣವಾಗಿ ನೋಡಲಾಗಲೇ ಇಲ್ಲ!

ಎಷ್ಟು ನಿಜ?ಭಯವೊಂದಿದ್ದೊಡೆ ಹಗ್ಗವೂ ಹಾವಾಗಿ ಕಾಡಿತ್ತು ನೋಡಾ..

ಈ ಭಯ ಅನ್ನುವದು ಒಮ್ಮೊಮ್ಮೆ ಎಷ್ಟೊಂದು ಸುಂದರ ಮತ್ತು ಭಯಂಕರ. ಬಾಲ್ಯದಲ್ಲಿ ತಾಟಕಿಗೆ ಭಯಬಿದ್ದು ಓಡಿದೆವು. 
ಆಮೇಲೆ ಎಕ್ಸಾಮ್ ರಿಸಲ್ಟಿಗಾಗಿ ಭಯಬಿದ್ದೆವು. ಮುಂದೆ ಬೆಳೆದಂತೆಲ್ಲ adult ಸಿನೆಮಾಗಳ interval ನಲ್ಲಿ 
ಯಾರಾದರೂ ಪರಿಚಯದವರು ನೋಡಿಯಾರೆಂದು ಭಯಬಿದ್ದೆವು. ಅದೇ ಭಯದಲ್ಲಿ ಸುಳ್ಳುಸುಳ್ಳೇ ನೆಗಡಿಯ ನೆಪಮಾಡಿ 
ಕರ್ಚಿಫ್ ನಿಂದ ಮುಖ ಮುಚ್ಚಿಕೊಂಡೆವು. ಪ್ರೇಮ ಸಫಲವಾಗಲಿಲ್ಲವೆಂದು ಭಯಬಿದ್ದೆವು; ಕಾಮ ವಿಫಲವಾದಾಗಲೂ ಭಯಬಿದ್ದೆವು.
ಮತ್ತು ಇದೇ ಭಯದಿಂದಾಗಿ ಒಮ್ಮೊಮ್ಮೆ ಎಂಥೆಂಥದೋ ಕೆಟ್ಟಕೆಲಸಗಳನ್ನು ಆದಷ್ಟು ಮುಂದೂಡುತ್ತ ಬಂದೆವು.
Fine. No regrets!

ಆದರೇನು ವೈಚಿತ್ರ್ಯವೋ, ದುರಂತವೋ- ಕೊನೆಗೊಮ್ಮೆ ಎಲ್ಲ ಭಯಗಳನ್ನು ಮೆಟ್ಟಿನಿಂತ ಮೇಲೆ ಎಲ್ಲವನ್ನೂ ಮರೆತುಬಿಟ್ಟೆವು.
ಹಾಗಾಗಿ ಇವತ್ತು, ಊಟ ಮಾಡದ ಮಗುವಿಗೆ, ತಂಟೆ ಮಾಡುವ ಕಂದಮ್ಮಗಳಿಗೆ ಶೂನ್ಯದಲ್ಲಿ ಬೆರಳು ತೋರಿಸುತ್ತ 
"ದೆವ್ವ ಬರ್ತದೆ ನೋಡು.." ಅಂತಲೋ, "ಗುಮ್ಮ ಬರ್ತಾನೆ ನೋಡೂ.." ಅಂತಲೋ, ಮಗುವಿನ ಮುಗ್ಧ ತಲೆಯೊಳಗೆ 
ರೂಪಿಲ್ಲದ, ರೂಹಿಲ್ಲದ, ಅಸಲಿಗೆ ಅಸ್ತಿತ್ವದಲ್ಲೇ ಇರದ entity ಬಗ್ಗೆ ವಿಚಿತ್ರ ಹೆದರಿಕೆ ತುಂಬುತ್ತಿರುವ ಈ ಘಳಿಗೆಯಲ್ಲಿ-
ಊಹುಂ,ನಮಗೆ ಯಾವ ಭಯವೂ ಕಾಡುತ್ತಿಲ್ಲ...

---    
(ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.)

30 comments:

Anonymous said...

hmm...........iShTavO iShTa aaytu! Happy New year Sirrrrrrr :-))) Anjali Ramanna

Ashok Shettar (ಅಶೋಕ ಶೆಟ್ಟರ್) said...

ಅಳಿವಿನಂಚಿನಲ್ಲಿರುವ ಲಲಿತ ಪ್ರಬಂಧವೆಂಬ ಸಾಹಿತ್ಯಪ್ರಕಾರವೊಂದಕ್ಕೆ ನೀವು ಆಕ್ಷಿಜನ್ನಿನೋಪಾದಿಯಲ್ಲಿ ಬಂದಿದ್ದೀರಿ ಎಂಬ ನನ್ನ ನಂಬಿಕೆ ನಿಜವಾಗುತ್ತಿದೆ:)ತುಂಬ ಇಂಟೆರೆಸ್ಟಿಂಗ್ ಆಗಿದೆ..ಓದಿಸಿಕೊಂಡು ಹೋಗುತ್ತದೆ.ಬರೆಯುತ್ತಿರಿ,ನಾವು ಓದುತ್ತಿರುತ್ತೇವೆ.

Badarinath Palavalli said...

ನಮ್ಮ ಹಳ್ಳಿಯ ಟೆಂಟು ಸಿನಿಮಾದಲ್ಲಿ ಮಣ್ಣನ್ನು ಗುಡ್ಡೆ ಮಾಡಿಕೊಂಡು ಕೂರುತ್ತಿದ್ದ ನೆನಪು ತರಸಿ ಬಿಟ್ರೀ ಸರ್.

ನೆನಪುಗಳನ್ನು ಹೀಗೆ ನೀವು ಉತ್ಖಲನ ಮಾಡುತ್ತಿದ್ದರೆ, ನಮ್ಮ ವಯಸ್ಸು ಬಾಲ್ಯಕ್ಕೆ ಮುಖ ಮಾಡುತ್ತದೆ.

ಧನ್ಯವಾದಗಳು.

ನನ್ನ ಬ್ಲಾಗಿಗೆ ಬನ್ನಿ ನಿಮ್ಮ ಓದಿಗಾಗಿ ನಾಲ್ಕೈದು ಕವನಗಳು ದಾರಿ ಕಾದಿವೆ.

Anonymous said...

RJ,ನಿಮ್ಮ ಬರಹಗಳು ತುಂಬಾ ಸಂವೇದನಶೀಲವಾಗಿ ಮತ್ತು ರೀಡೆಬಲ್ ಆಗಿವೆ...ಒಂದು ಒಳ್ಳೆಯ ಓದಿನೊಂದಿಗೆ ನನ್ನ ಹೊಸವರ್ಷವನ್ನು ಆರಂಭಿಸಬೇಕೆಂದು ನನ್ನಾಸೆಯಾಗಿತ್ತು........ಅದು ಈಗ ನೆರವೇರಿದೆ.ಗಂಭೀರವಾದ ಸಮಸ್ಯೆಯೊಂದನ್ನು ಎಷ್ಟು ನವಿರಾಗಿ ಹೇಳಿದೆರಲ್ಲ.ಇದಕ್ಕೇ ಹೇಳೋದು,ನೀವು RJ ಅಂದ್ರೆ ರೈಟರ್ಸ್ ಜಾಕಿ!!! :-) wish you happy new year
~Suresh

Pratima Keerti said...

ಗಂಭೀರ ವಿಚಾರವನ್ನು ಸರಳವಾದ, ಮನಮೆಚ್ಚುವಂತಹ ಬರಹದಲ್ಲಿ ನೀವು ವ್ಯಕ್ತಪಡಿಸಿದ ಪರಿ ಇಷ್ಟವಾಯಿತು.. ಹೊಸವರ್ಷದ ಮೊದಲ ಕ್ಷಣದಲ್ಲಿ ಓದಿದ ಬರಹ ಬಹಳ ಚೆನ್ನಾಗಿತ್ತು...ನಮ್ಮೂರ ಟಾಕೀಸ್, ಅಲ್ಲಿನ ತಿಗಣೆಗಳ ಕಾಟ,ಆದರೂ ಪಿಕ್ಚರ್ ನೋಡಲೇಬೆಕೆಂಬ ಬಯಕೆ ಎಲ್ಲ ಒಮ್ಮೆ ನೆನಪಾಯಿತು..ಅಭಿನಂದನೆಗಳು ಮತ್ತು ಹೊಸವರ್ಷದ ಶುಭಾಶಯಗಳು..
ಪ್ರತಿಮಾ ಶಾನಭಾಗ್

sunaath said...

ಹಳೆಯ ನೆನಪುಗಳು ಹೊಸ ವರ್ಷಕ್ಕೆ ಆಪ್ಯಾಯಮಾನವಾಗಿ ನುಗ್ಗಿವೆ. ಇದು Rejuvenating tonic! ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

satish said...

ಅಗದಿ ಚಲೋ ಬರದೀರ್ ನೋಡ್ರಿಪ .ನಮ್ಮೂರು ಚಳ್ಳಕೆರೆ ನಲ್ಲೂ ಜಯಲಕ್ಷ್ಮಿ ಟಾಕೀಸ್ ಅಂತ ಇತ್ತು .ನಾನು ನನ್ನ ತಮ್ಮ ಬೇಸಿಗೆ ರಜೆ ಗೆ ಹೋದಾಗ ಹಿಂಗೆ ಗಾಂಧಿ ಕ್ಲಾಸ್ ನಲ್ಲೆ ಕೂತ್ಕೋ ಬೇಕು ಅಂತ ಹಠ ಮಾಡಿ ನಮ್ಮ ಅಜ್ಜನ ಕೈಲ್ಲಿ ಬೈಸ್ಕೊಂಡ್ ಬಂದಿದ್ದ್ವಿ .ಈಗ ನೆನೆಸ್ಕೊಂಡ್ರೆ ಎಲ್ಲ ಕನ್ನಡಿಯೊಳಗಿನ ಗಂಟು ಅನ್ನಿಸ್ತದ .ಬಾಲ್ಯದ ಆಟ ಆ ಹುಡುಗಾಟ ,ಛೆ ಎಂತ ಅಮೋಘವಾಗಿತ್ತು .ನಾನ್ ಮಿಸ್ ಮಾಡ್ಕೊತ ಇದ್ದೇನೆ ಆ ದಿನಗಳನ್ನ ,ಮತ್ತೊಮ್ಮೆ ಹೃತ್ಪೂರ್ವಕ ಹೊಸ ವರ್ಷದ ಶುಭಾಶಯಗಳೊಂದಿಗೆ ಬಾಲ್ಯವನ್ನ ನೆನಪಿಸಿದ್ದಕ್ಕೆ ನಮೋ ನಮಃ .

Mavalli Satya said...

ಬಾಲ್ಯದ ನೆನಪುಗಳ ಕಾಟ ಬಲು ಮಧುರ.ಅಮೃಥಕ್ಕಿಂತ ರುಚಿ ಜಾಸ್ತಿ.
ನಿಮ್ಮ ನೆನಪುಗಳ ಜೊತೆ ಜೊತೆಯಲ್ಲೇ ನಾನು ಕೂಡ ನನ್ನ ನೆನಪುಗಳು ಮರುಕಳಿಸಿ
ಸಣ್ಣ ಪ್ರವಾಸ ಮಾಡುವಂತಾಯಿತು. ಧನ್ಯವಾದಗಳು. ಇನ್ನು ಹೆಚ್ಚು ಹೆಚ್ಚು ಬರೆಯಿರಿ.

umesh desai said...

ಬಹಳ ಒಳ್ಳೆ ಬರಹ. ಶೆಟ್ರು ಹೇಳಿದ ಹಾಗೆ ಲಲಿತ ಪ್ರಬಂಧ ಮುಗಿಯುವ ಗತಿಯಲ್ಲಿರುವಾಗ ನಿಮ್ಮಂತಹದವರ ಬರಹ ಸಂಜೀವಿನಿಯಾಗುತ್ತದೆ.

ತೇಜಸ್ವಿನಿ ಹೆಗಡೆ said...

good one.. liked it :) Happy new year ...

Manjunatha Kollegala said...

""ಅಯ್ಯಯ್ಯಪೋ..ಸತ್ವಿ.." ಅಂತ ಕಿರುಚಿದ ನಾವು,ನಮ್ಮ ತಲೆ ಮೇಲೇ ಕಲ್ಲು ಬಿತ್ತು ಅಂತ ಮನೆ ಕಡೆ ಓಟ ಕಿತ್ತಿದ್ದೆವು!"

ಸೂಪರ್ ಸೀಕ್ವೆನ್ಸ್. ಅದನ್ನ ಕಲ್ಪನೆ ಮಾಡಿಕೊಂಡು ಬಿದ್ದುಬಿದ್ದು ನಗು ಬರುತ್ತಿದೆ. ನಿಮ್ಮ "ಭಯಾಗ್ರಫಿ" ಚೆನ್ನಾಗಿದೆ. ಅದೆಷ್ಟು ಪ್ರಾಮಾಣಿಕವಾಗಿ ಸ್ವಾರಸ್ಯವಾಗಿ ಕಟ್ಟಿಕೊಟ್ಟಿದ್ದೀರಿ! ನನ್ನ ತಮ್ಮನನ್ನು ಭಕ್ತಪ್ರಹ್ಲಾದ (ರಾಜ್ ಕುಮಾರರದ್ದು) ಚಿತ್ರಕ್ಕೆ ಕರಕೊಂಡು ನಾಲ್ಕು ಸಲ ಹೋಗಿದ್ದೆ, ಒಮ್ಮೆಯಾದರೂ ಅವ ನರಸಿಂಹಾವತಾರ ನೋಡಲಿಲ್ಲ. ವರಾಹಾವತಾರದಲ್ಲೇ ಬೆದರಿ, ಕಣ್ಮುಚ್ಚಿ, ಗೋಗರೆದು ಎಬ್ಬಿಸಿ ಮನೆಗೆ ಕರಕೊಂಡು ಬಂದುಬಿಡುತ್ತಿದ್ದ. ಕೊನೆಗೆ ಒಬ್ಬನೇ ಹೋಗಿ ನೋಡಿ ಬಂದೆ. ಆಗೆಲ್ಲಾ ನಾನಂತು SSLC ಆದ್ದರಿಂದ ಅದಕ್ಕೆಲ್ಲಾ ನಾನೇನು ಹೆದರುತ್ತಿರಲಿಲ್ಲ ಬಿಡಿ :) ಇನ್ನು ನನ್ನದೇ ಭಯೋಪಾಖ್ಯಾನ ಬರೆಯಬೇಕೆಂದರೆ ಅದೇ ದೊಡ್ಡ ಪುರಾಣ.

Anonymous said...

Joshi,
ಅಪರೂಪಕ್ಕೊಮ್ಮೆ ಪ್ರದರ್ಶಿಸುತ್ತಿದ್ದ ದೆವ್ವದ ಸಿನೆಮಾ ನೋಡಲು ಬಂದ ಪ್ರೇಕ್ಷಕರ ಕಾಲಡಿ ಇಲಿ,ಜಿರಳೆಗಳು ಸದ್ದಿಲ್ಲದೇ ಹರಿದಾಡಿ ಆ ಇಡೀ ಹಾರರ್ ಸೀನಿಗೆ ಡಬಲ್ ಕಿಕ್ ಕೊಡುತ್ತಿದ್ದವು....
"ರೀ,ನಾನು ರೀಲು ಬಿಡೋವ್ರ ಮೊಮ್ಮೊಗ ರೀ.."
"ಅಯ್ಯಯ್ಯಪೋ..ಸತ್ವಿ.."
Mentioning of words and creating scenes are superb..what a writing.God bless you.Kudos.....

ಶರಶ್ಚಂದ್ರ ಕಲ್ಮನೆ said...

ಚಂದ ಬರ್ದಿದೀರ ಜೋಶಿ... ಸೀಕ್ವೆನ್ಸ್ ಗಳನ್ನೂ ನೆನಸಿಕೊಂಡು ನಗು ಬಂತು... ಹೊಸ ವರುಷದ ಶುಭಾಶಯಗಳು :)

Ashok.V.Shetty, Kodlady said...

'ಡಬ್ಬಾ ಟಾಕೀಸು' ವಿವರ ಕೇಳಿ ನಮ್ ಮನೆ ಹತ್ತಿರ ಇದ್ದ 'ಶ್ರೀ ಸಿದ್ದಿವಿನಾಯಕ' ಅನ್ನೋ ಟಾಕೀಸ್ ನ ನೆನಪಾಯಿತು .....ಅದರ ಕಥೆನೂ ಹೆಚ್ಚು ಕಡಿಮೆ ಇದೇ ತರ ಇತ್ತು.....ಉತ್ತಮ ಬರಹ ಸರ್....ಧನ್ಯವಾದಗಳು ...

Gayatri said...

Thumba channagi Bardirii....nanage esta ayithu...avvaga cinema andre yestu hucchu ethhu namagella, adu ondu dodda smabrama, adu yako eega aa huchhe ella nodi. Keep writing...Its very refreshing...Happy New year...

ರಾಘವೇಂದ್ರ ಜೋಶಿ said...

ಬರಹ ಮೆಚ್ಚಿಕೊಂಡ,ಪ್ರತಿಕ್ರಿಯಿಸಿದ ಎಲ್ಲ ಮನಸುಗಳಿಗೆ..
ಧನ್ಯವಾದಗಳು.
:-)

Anonymous said...

’ನಮೋ ವೆ೦ಕಟೇಶ, ನಮೋ ತಿರುಮಲೇಶ...’ ಹಾಡು ಶುರುವಾದ ೧೦ ನಿಮಿಷದೊಳಗೆ ಅಜ್ಜಿ ಊರಿನ ಟೆ೦ಟ್ ನಲ್ಲಿ ಫ಼ಿಲ೦ ಶುರು ಆಗ್ತಾ ಇತ್ತು! ಮತ್ತೊಮ್ಮೆ ನೋಡಿ ಬ೦ದ ಹಾಗಾಯ್ತು!

ಸ೦ಧ್ಯಾ

Raghavendra said...

ಚೆಂದಗಿನ ಬರಹ ಸೂಪರ್್್್್್್್್್್್

suragi \ ushakattemane said...

ಹೌದು ಜೋಷಿಯವರೇ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ನಂಬಿಕೆಗಳು ಮೂಲ ಪ್ರತಿಮೆಗಳಾಗಿ-archetype-ನಮ್ಮ ಬಾಲ್ಯವನ್ನು ಆಳುತ್ತವೆ.

siddu said...

Joshi....I keep delaying reading you article and keep repenting for the same...Sorry to miss a call back to you over the weekend....in middle of some tension...Will call you soon.

channabasaveshwar said...

ಏನ್ ಜೋಷಿಯವರೇ, ನಿಮ್ಮ ಮೂಡ್ ಯಾವ ಘಳಿಗೆಯಲ್ಲಿ ಹೇಗೆ ಇರುತ್ತೆ ಅ೦ತ ಈ "ಡಬ್ಬಾ ಟಾಕೀಸ್" ನಿ೦ದ ಗೊತ್ತಾಯಿತು. ನಿಮ್ಮ ಲೇಖನಿಯಿ೦ದ ನಮ್ಮ ಗದಗಿನ ಮತ್ತು ಗದಗಿನ ಜನರ ಆಗಿನ ಕಾಲದ ನಿಜವಾಗ್ಲು ಮಲ್ಟಿಪ್ಲೆಕ್ಸ್ ಆದ "ಡಬ್ಬಾ ಟಾಕೀಸ್"ನ ನೆನಪುಗಳನ್ನು ಹರಿವಿಟ್ಟು, ನಮ್ಮನ್ನು ಬಾಲ್ಯದ ದಿನಗಳ ಕಡೆಗೆ ಕಳುಹಿಸಿದಿರಿ. ತು೦ಬಾ ಧನ್ಯವಾದಗಳು. ನಾವೂ ಕೂಡ ಮನೆಯಲ್ಲಿ ಆಗಾಗ ಈ ಚಿತ್ರಮ೦ದಿರದ ಬಗ್ಗೆ ಮಾತಾಡಿಕೊ೦ಡು memory refresh ಮಾಡಿಕೊಳ್ಳುತ್ತಿರುತ್ತೇವೆ.

ರಾಘವೇಂದ್ರ ಜೋಶಿ said...

@ಸಂಧ್ಯಾರಾಣಿಯವರೇ,ನಿಜ ಕಣ್ರೀ..ನಮ್ಮಲ್ಲೂ ಇದೇ ಹಾಡು ಬರೋದು.. :-)
@ರಾಘವೇಂದ್ರರೇ,ಧ್ಯನ್ಯವಾದಗಳು ನಿಮ್ಮ ಅನಿಸಿಕೆಗೆ.
@ಉಷಾ ಕಟ್ಟೆಮನೆಯವರೇ,ಎಂಥಾ ಮಾತು ಹೇಳಿದಿರಿ.Liked it.thanks.
@ಸಿದ್ದು ಅವರೇ,ನೋ ಪ್ರಾಬ್ಲಮ್..ಬಂದ್ರಲ್ಲ?ಬಂದು ಮೆಚ್ಚಿಕೊಂಡ್ರಲ್ಲ? ಹಹಹ.. ಥ್ಯಾಂಕ್ಸ್. :-)
@ಚನ್ನು ಅವರೇ,ಡಬ್ಬಾ ಟಾಕೀಸು ಮತ್ತು ಅಲ್ಲಿನ ವಗ್ಗರಣೆ ಗಿರ್ಮಿಟ್-ಆಹಾ ಓಹೋ..ಎಂಥಾ ಮಸ್ತಿತ್ತು ಕಣ್ರೀ.. :-)

ಈಶ್ವರ said...

ತುಂಬಾ ಮಜವಾಗಿದೆ ಬರಹ. ಓದಿಸಿಕೊಂಡು ಹೋಗುತ್ತೆ.. ಹೊಸವರ್ಷದ ಶುಭಾಶಯಗಳು ಈಗಲೂ ಹೇಳಬಹುದಲ್ವೇ ?

ಶುಭಾಶಯಗಳು.

Swarna said...

ಚೆನ್ನಾಗಿದೆ ಸರ್.
ನಾನು ಗಾಂಧೀ ಕ್ಲಾಸಿನ ಬಗ್ಗೆ ನಿಮ್ ಥರಾನೆ ಅಂದ್ಕೊಂಡಿದ್ದೆ :)
ಸ್ವರ್ಣಾ

ರಾಘವೇಂದ್ರ ಜೋಶಿ said...

@ಕಿರಣ್ ಭಟ್ರೇ,Thanks,but ಇದು ಜನವರಿ ಮೊದಲ ದಿನವೇ ಪೋಸ್ಟ್ ಆಗಿದ್ದು.ಹಾಗಾಗಿ New year wish. :-)

@ಸ್ವರ್ಣ ಅವರೇ, ನಿಜ.ಆದರೆ ನಾಟಕ ನೋಡುವಾಗ ಈ ಮಾತು ಅನ್ವಯವಾಗುವದಿಲ್ಲ.ಎಷ್ಟು confusions ನೋಡಿ! :-)

ಸಂಜು . . said...

ರಾಘವೇಂದ್ರ ಸರ ಇಗ್ಲೂ ನಮ್ಮ ಮಹಾಲಕ್ಷ್ಮೀ ಟಾಕೀಜ್ ಹಂಗ ಅದರೀ .. ಏನೇನು ಬದ್ಲಾಗಿಲ್ಲಾ ಇವತ್ತಿಗೂ ಅದನ್ನ ಡಬ್ಬಾ ಟಾಕೀಸ್! ಅಂತಾನ ಕರೀತಾರ್ರ.. ಮರೆತು ಹೋದ ನಾವು ಗಮನಿಸದೆ ಇರದ ಸಂಗತಿ ಕಣ್ಮುಂದೆ ತರಲು ಸಹಾಯ ಮಾಡಿದ ನಿಮಗೆ ಥ್ಯಾಂಕ್ಸ .. ತುಂಬಾ ಚೆನ್ನಾಗಿದೆ ಬರಹ.!

ಸಂಜು . . said...

ರಾಘವೇಂದ್ರ ಸರ ಇಗ್ಲೂ ನಮ್ಮ ಮಹಾಲಕ್ಷ್ಮೀ ಟಾಕೀಜ್ ಹಂಗ ಅದರೀ .. ಏನೇನು ಬದ್ಲಾಗಿಲ್ಲಾ ಇವತ್ತಿಗೂ ಅದನ್ನ ಡಬ್ಬಾ ಟಾಕೀಸ್! ಅಂತಾನ ಕರೀತಾರ್ರ.. ಮರೆತು ಹೋದ ನಾವು ಗಮನಿಸದೆ ಇರದ ಸಂಗತಿ ಕಣ್ಮುಂದೆ ತರಲು ಸಹಾಯ ಮಾಡಿದ ನಿಮಗೆ ಥ್ಯಾಂಕ್ಸ .. ತುಂಬಾ ಚೆನ್ನಾಗಿದೆ ಬರಹ.!

ರಾಘವೇಂದ್ರ ಜೋಶಿ said...

@ಸಂಜು, ಬಹುಶಃ ನೀವು ಹೇಳುತ್ತಿರುವದು ಗದುಗಿನ ಹಳೇ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಟಾಕೀಸ್ ಬಗ್ಗೆ.ಆದರೆ ನಾನು ಹೇಳಿದ್ದು ಇಪ್ಪತೈದು ವರ್ಷದ ಹಿಂದಿನ ಡಬ್ಬಾ ಟಾಕೀಸ್ (ಅದರ ಹೆಸರೂ ಇದೇ ಇತ್ತು) ಬಗ್ಗೆ! ಈ ಡಬ್ಬ ಟಾಕೀಸು ತೋಂಟದಾರ್ಯ ಕಲ್ಯಾಣಮಂಟಪ ಮತ್ತು ಮಠದ ಮಧ್ಯದಲ್ಲೇ ಇತ್ತು..ಬಹುಶಃ ಈಗಲ್ಲಿ ಎಂಥದೋ ಬ್ಯಾಂಕ್ ಕಟ್ಟಡ ಬಂದಿದೆ.ಮಠದ ಜಾತ್ರೆ ಸಮಯದಲ್ಲಿ ದೊಡ್ಡ ದೊಡ್ಡ ತಿರುಗೋ ಜೋಕಾಲಿಗಳು ಸ್ಥಾಪಿತವಾಗುವ ಬಯಲು ಜಾಗದಲ್ಲೇ ನಾನು ಹೇಳಿದ ಟಾಕೀಸು ಇತ್ತು. :-)

Unknown said...

ಜೋಶಿಗಳೇ, ನಿಮ್ಮ ಲೇಖನಿಯ ರೀತಿ ಓದುಗನಿಗೆ ತೀರಾ ಹತ್ತಿರವಾದಂತೆ ಅನ್ನಿಸುತ್ತದೆ. ತನ್ನನ್ನು ತಾನೇ Protagonist ಅಂದುಕೊಂಡು ಬಿಡುತ್ತೇವೆ. ತುಂಬಾ ಇಷ್ಟವಾಯ್ತು.

ದೀಪಾ ಜೋಶಿ said...

ಬಹಳ ಆಪ್ತವೆನಿಸುವ ಬರವಣಿಗೆ.