Wednesday, April 26, 2017

ಈ ನಾಯಿ ಏಕೆ ನಮ್ಮಂತೆ ಮುಖವಾಡ ಧರಿಸುತ್ತಿಲ್ಲ?


ಮೊನ್ನೆ ಇದ್ದಕ್ಕಿದ್ದಂತೆ ಒಂದು ವಿಚಿತ್ರ ಕಳವಳ ಶುರುವಾಗತೊಡಗಿತ್ತು. ತೀರ ಅಷ್ಟೇನೂ ಹಿಂದಿನ ಮಾತಲ್ಲ, ಹತ್ತು ಹದಿನೈದು ವರ್ಷಗಳ ಹಿಂದೆ ಒಂದಿಷ್ಟು ಯಾವ ಕಾರ್ಟುನು ನೋಡಿದರೂ ಅಲ್ಲೊಂದು ಚಿತ್ರಣ ಸರ್ವೇಸಾಮಾನ್ಯವಾಗಿರುತ್ತಿತ್ತು. ಅಲ್ಲಿ ಇಬ್ಬರು ಮನುಷ್ಯರು ರಾಜಕೀಯವನ್ನೋ, ಭ್ರಷ್ಟಾಚಾರವನ್ನೋ ವಿಡಂಬನೆ ಮಾಡುತ್ತಿದ್ದರೆ, ಪಕ್ಕದ ತಿಪ್ಪೆಗುಂಡಿ ಅಥವಾ ಲೈಟುಕಂಬದ ಕೆಳಗೆ ನಾಯಿಯೊಂದು ಮಜದಿಂದ ಜೊಲ್ಲು ಸುರಿಸಿಕೊಂಡು ನಿಂತಿರುತ್ತಿತ್ತು. ಜೊತೆಗೆ ಪಕ್ಕದಲ್ಲೊಂದು ಮೂಳೆ ಇದ್ದೇ ಇರುತ್ತಿತ್ತು. ಇವತ್ತು ಕಾರ್ಟುನುಗಳೇನೋ ಇವೆ. ಆದರೆ ಮೂಳೆ ಮೂಸಿಕೊಂಡು ನಿಂತಿರುತ್ತಿದ್ದ ನಾಯಿ ಮಾತ್ರ ಎಲ್ಲೋ ನಾಪತ್ತೆಯಾಗಿದೆ. ಹೀಗೆ ಎಲುಬಿಗಾಗಿ ಕಾತರಿಸುತ್ತಿದ್ದ ಈ ನಾಯಿಗಳು ತಮ್ಮ ಮೂಲಸ್ವಭಾವವನ್ನೇ ಬದಲಾಯಿಸಿಕೊಂಡವೇ? ಅಥವಾ ನಮ್ಮ ಕಾರ್ಟೂನಿಷ್ಟುಗಳು ಇಂಥ ಚಿತ್ರಣ ಕೊಡುವದನ್ನೇ ನಿಲ್ಲಿಸಿದರೆ? 

   ಸ್ನೇಹಿತರಲ್ಲಿ ಈ ಪ್ರಶ್ನೆಯನ್ನಿಟ್ಟಾಗ ಮಜಮಜ ಉತ್ತರಗಳು ಬಂದವು. ಚಿಕನ್ ರೇಟು ಜಾಸ್ತಿಯಾಗಿದೆ, ಹಾಗಾಗಿ ನಾಯಿಗಳು ಇವತ್ತು ಎಲುಬು ಮೂಸುತ್ತಿಲ್ಲ ಎನ್ನುವದರಿಂದ ಹಿಡಿದು, ಈಗವು 'ಪೆಡಿಗ್ರಿ' ತಿಂತವೆ ಕಣ್ರೀ ಅನ್ನುವಂಥ ಉತ್ತರಗಳೂ ಬಂದವು. ಒಂದಿಬ್ಬರಂತೂ 'ಯೋಗಿ ಮಹಾರಾಜ್ ಭಯ ಮಾರಾಯ!' ಅಂತನ್ನುವ ಬಾಂಬು ಕೂಡ ಸಿಡಿಸಿದರು! 

   ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು? 
  ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು? 
ಅನ್ನುತ್ತಾನೆ ಅಂಬಿಗರ ಚೌಡಯ್ಯ. ಶ್ರೀಗಂಧ, ದೇವದಾರು, ರಕ್ತಚಂದನದಂಥ ಮರಗಳೆಲ್ಲ ಹುಟ್ಟುತ್ತಲೇ ಸುಗಂಧವನ್ನು ಹೊತ್ತುಕೊಂಡು ಬರುವದಿಲ್ಲ. ಸಸಿಯೊಂದು ಬೆಳೆದುನಿಂತು ಮರವಾಗುವ ಯಾವುದೋ ಒಂದು ಹಂತದಲ್ಲಿ ಪರಿಮಳವನ್ನು ಸೂಸತೊಡಗುತ್ತವೆ. ಈ ಸಮಯದಲ್ಲಿ ಯಾರೋ ಹೊರಗಿನವರು ಸುಗಂಧವನ್ನು ತಂದು ಕಾಂಡಕ್ಕೆ ಹುಯ್ಯುವದಿಲ್ಲ. ಅದೆಲ್ಲ ಅವುಗಳ ಅಂಗಸ್ವಭಾವವೆಂದು ಚೌಡಯ್ಯ ಬಣ್ಣಿಸುತ್ತಾನೆ.  

ಗುಣ ಮತ್ತು ಸ್ವಭಾವ. ಇವಕ್ಕೆಲ್ಲ ನೂರಾರು ವರ್ಷಗಳ ಇತಿಹಾಸ ಇರುತ್ತದೆಂದು ಬಲ್ಲೆವು. ಇದಕ್ಕೆ ವರ್ಣತಂತುಗಳ ಬೆಂಬಲವೂ ಇರುತ್ತದೆಂದು ಬಲ್ಲೆವು. ಇಲ್ಲಿ ಕೆಲವೊಂದು ಗುಣಗಳು ಅಂತರಂಗದಲ್ಲಿ ಅಡಗಿದ್ದರೆ, ಕೆಲವು ಬಹಿರಂಗವಾಗಿಯೇ ಬಿತ್ತರಗೊಳ್ಳುತ್ತಿರುತ್ತವೆ. ಮೋಸ, ಕಳ್ಳತನ, ಹಿಂಸೆ, ತಂಟೆ ಮತ್ತು ಗಾಸಿಪ್ ಮನುಷ್ಯನ ಮೂಲ ಗುಣಗಳಾಗಿವೆ ಅಂತ ಓದಿದಾಗ ಗಾಬರಿಬಿದ್ದಿದ್ದೆ. ಇನ್ನು ಸುಳ್ಳಂತೂ ಸರಿಯೇ ಸರಿ. ತನ್ನ ಘನತೆಗೆ ಕುಂದು ಬರುತ್ತಿದೆ ಅಂತ ಗೊತ್ತಾಗುತ್ತಿದ್ದಂತೆಯೇ ಮನುಷ್ಯ ಸುಳ್ಳಿನ ಆಶ್ರಯ ಪಡೆಯುತ್ತಾನೆ. ಸತ್ಯವನ್ನು ಒಪ್ಪಿಕೊಳ್ಳುವದಕ್ಕಿಂತ ಒಂದು ಸುಳ್ಳಿಗಾಗಿ 30% ಹೆಚ್ಚಿನ ಶ್ರಮ ಮತ್ತು ಸಮಯವನ್ನು ವಿನಿಯೋಗಿಸಲೂ ನಾವು ತಯಾರಾಗಿರುತ್ತೇವೆಂದು ಪ್ರಾಕ್ಟಿಕಲ್ ವರದಿ ಹೇಳುತ್ತದೆ. 

   ತಂಟೆ, ತಕರಾರುಗಳೂ ಅಷ್ಟೇ. ಇದೊಂದು ಕತೆ ನೋಡಿ: ಒಬ್ಬ ಚಿತ್ರಕಲೆಯ ವಿದ್ಯಾರ್ಥಿ ಒಂದು ಸಲ ಚಿತ್ರವೊಂದನ್ನು ಬಿಡಿಸಿದಾಗ ತನ್ನಷ್ಟಕ್ಕೆ ತಾನೇ ಖುಷಿಪಟ್ಟನಂತೆ. ಅದ್ಬುತ ಚಿತ್ರವದು. ಸಹಜವಾಗಿ, ಆತನಿಗೆ ಅದನ್ನು ಎಲ್ಲರಿಗೂ ತೋರಿಸಿಕೊಳ್ಳಬೇಕೆಂಬ ಹಂಬಲ. ಹಾಗಾಗಿ ಹೆಮ್ಮೆಪಟ್ಟುಕೊಂಡು, 'ಇದರಲ್ಲೇನಾದರೂ ತಪ್ಪಿದ್ದರೆ ಮಾರ್ಕ್ ಮಾಡಿ' ಎಂಬ ಟ್ಯಾಗ್ ಲೈನ್ ಬರೆದು ಶಾಲೆಯ ನೋಟೀಸು ಬೋರ್ಡಿಗೆ ತಗಲುಹಾಕಿ ಹೋದನಂತೆ. ಮರುದಿನ ನೋಡಿದರೆ, ಪೇಂಟಿಂಗ್ ನಲ್ಲಿ ಛಪ್ಪನ್ನಾರು ಮಾರ್ಕುಗಳು! ಅದನ್ನೆಲ್ಲ ನೋಡಿದ ಹುಡುಗ ಅನ್ಯಮನಸ್ಕನಾಗಿ ಕುಳಿತಿದ್ದನ್ನು ಗಮನಿಸಿದ ಮೇಸ್ಟ್ರು ಒಂದು ಐಡಿಯಾ ಕೊಟ್ಟರಂತೆ. ಮರುದಿನ ಅದೇ ಚಿತ್ರವನ್ನು ಇನ್ನೊಮ್ಮೆ ಅಷ್ಟೇ ಅದ್ಭುತವಾಗಿ ಬಿಡಿಸಿದ ಹುಡುಗ ಮತ್ತದೇ ನೋಟೀಸು ಬೋರ್ಡಿಗೆ ತಗುಲಿಸಿ ಹೋದ. 
ಅಚ್ಚರಿಯೆಂಬಂತೆ ಮರುದಿನ ಪೇಂಟಿಂಗ್ ಗೆ ಸಂಬಂಧಿಸಿದಂತೆ ಯಾವ ತಕರಾರೂ ಇರಲಿಲ್ಲ. ಇಷ್ಟಕ್ಕೂ ಅಲ್ಲಿದ್ದ ಟ್ಯಾಗ್ ಲೈನ್: 'ಇದರಲ್ಲೇನಾದರೂ ತಪ್ಪಿದ್ದರೆ ನೀವೇ ಸರಿಪಡಿಸಿ!'   
*
   ಹೀಗೆ ಎಲ್ಲಿಂದ ಎಲ್ಲಿಗೋ ಜಿಗಿಯುವದು ನನಗಿಷ್ಟ. ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್ (EVM) ಬಗ್ಗೆ ಸೋತ ಅಭ್ಯರ್ಥಿಗಳು ತಕರಾರು ತೆಗೆಯುವದು ಮಾಮೂಲಾಗುತ್ತಿದೆ. ಮೊನ್ನೆ ಮಾಯಾವತಿ, ಕೇಜ್ರಿವಾಲ್ ತಕರಾರು ತೆಗೆದಿದ್ದರು. ಈಗ ಅಖಿಲೇಶ್ ಯಾದವ್ ಕೂಡ. ಹೀಗಿರುವಾಗಲೇ, ಚುನಾವಣಾ ಆಯೋಗ ತನ್ನ EVMಗಳ ಬಗ್ಗೆ ಅಪರಿಮಿತ ಕಾನ್ಫಿಡೆನ್ಸ್ ತೋರಿಸುವ ನಿಟ್ಟಿನಲ್ಲಿ, "ಯಾರಾದರೂ ಈ ಮಶೀನುಗಳನ್ನು ಟ್ಯಾಂಪರ್ ಮಾಡುವದಿದ್ದಲ್ಲಿ ಪ್ರೂವ್ ಮಾಡಿ ತೋರಿಸಿ" ಅಂತ ಓಪನ್ ಚಾಲೆಂಜ್ ಹಾಕಿದೆ. ತಮಾಷೆಯೆಂದರೆ, ನಮ್ಮಲ್ಲಿ ತಂತ್ರಜ್ಞಾನದ ತಳಬುಡ ಗೊತ್ತಿಲ್ಲದವರೂ ತಾಂತ್ರಿಕತೆಯ ಬಗ್ಗೆ ಘಂಟಾಘೋಷದಿಂದ ಮಾತನಾಡುತ್ತಾರೆ. ಆದರೆ ಹೀಗೆ ಮಾತನಾಡುವವರ ಬಳಿ ಎಲ್ಲದಕ್ಕೂ ಜೈಕಾರ ಹಾಕುವವರ ಪಡೆಯೇ ಇರುತ್ತದಾದ್ದರಿಂದ ಸರಳವಾಗಿ ತಳ್ಳಿಹಾಕಬಹುದಾದ ಸಂಗತಿಗಳೂ ದೊಡ್ಡ ಕಿರಿಕಿರಿಯಾಗಿ ಕಾಡತೊಡಗುತ್ತವೆ.
   ಸುಮಾರು ವರ್ಷಗಳ ಹಿಂದಿನ ಮಾತು. ನನ್ನ ಪರಿಚಯದ ವ್ಯಕ್ತಿಯೊಬ್ಬರು ಚುನಾವಣೆಗೆ ನಿಂತಿದ್ದರು. ಆನಂತರ ಮೇಯರ್ ಕೂಡ ಆದರು. ಮತದಾನದ ದಿನ ಮತಗಟ್ಟೆಯಿಂದ ಅನತಿ ದೂರದಲ್ಲಿ ಕೆಲವೊಂದಿಷ್ಟು ಜನ ಟೇಬಲ್ ಹಾಕಿಕೊಂಡು ಕೂತಿರುತ್ತಾರಷ್ಟೇ. ಯಾರಾದರೂ ತಮ್ಮ ಮತಗಟ್ಟೆ ಎಲ್ಲಿದೆ? ಅಂತ ಕೇಳಿಕೊಂಡು ಬಂದಾಗ, ಇವರು ಆಯಾ ವಾರ್ಡಿನ ವಿವರಗಳುಳ್ಳ ದೊಡ್ಡದೊಂದು ಫೈಲಿನಲ್ಲಿ ಸದರಿ ವ್ಯಕ್ತಿಯ ಹೆಸರು, ವಿಳಾಸ, ಫೋಟೋ ಎಲ್ಲ ಹುಡುಕಾಟ ನಡೆಸಿ ಮತಗಟ್ಟೆ ಸಂಖ್ಯೆ/ವಿವರ ಹೇಳುತ್ತಿರುತ್ತಾರೆ. ಎಲ್ಲರಿಗೂ ಬೇಗ ವಿವರ ಒದಗಿಸಿ, ಆದಷ್ಟೂ ಎಲ್ಲರೂ ಮತದಾನದಂಥ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಎಲ್ಲ ಪಕ್ಷದವರೂ ಇದನ್ನೆಲ್ಲ ಮಾಡುವದುಂಟು. ಆದರೆ ಈ ಹುಡುಕಾಟದ ಕ್ರಿಯೆ ಸಾಕಷ್ಟು ಸಮಯ ತಿನ್ನುತ್ತದೆಂಬ ಕಾರಣಕ್ಕೆ ಆವತ್ತು ಒಂದು ಸಲಹೆ ಕೊಟ್ಟಿದ್ದೆ. ಅಭ್ಯರ್ಥಿಯ ಮಗ ನನ್ನನ್ನು ಭೇಟಿಯಾದಾಗಲೆಲ್ಲ ಹೊಸಹೊಸ ಟೆಕ್ನಾಲಜಿಗಳ ಬಗ್ಗೆ ಆಸಕ್ತಿಯಿಂದ ಮಾತನಾಡುವದರಿಂದ ಈ ನನ್ನ ಹೊಸ ಐಡಿಯಾ ಒಪ್ಪಿದರು. ಅಭ್ಯರ್ಥಿಯನ್ನೂ ಒಪ್ಪಿಸಿದರೆಂದು ಕಾಣುತ್ತದೆ. 
   ಅಷ್ಟಾದಮೇಲೆ ಸದರಿ ವಾರ್ಡಿನ ಎಲ್ಲ ವಿವರಗಳನ್ನೂ ಹತ್ತಾರು ಲ್ಯಾಪಟಾಪಿನಲ್ಲಿ ಹಾಕಿ, ಅದಕ್ಕೊಂದು ಸಾಫ್ಟೇರನ್ನೂ ಹಾಕಿ, ಯಾರಾದರೂ ತಮ್ಮ ವಿವರ ಕೇಳಿಕೊಂಡು ಬಂದಾಗ ಆಯಾ ವ್ಯಕ್ತಿಯ ಹೆಸರು ಟೈಪಿಸಿದ ಕೂಡಲೇ ಬೂತಿನ ಸಂಖ್ಯೆ/ವಿಳಾಸ ತೋರಿಸುವ ಹಾಗೆ ವ್ಯವಸ್ಥೆ ಮಾಡಲಾಯಿತು. ಚುನಾವಣೆಯ ದಿನ ಒಂದು ಮತಗಟ್ಟೆಯಿಂದ ಸಾಕಷ್ಟು ದೂರದಲ್ಲಿ ಹೀಗೆ ಲ್ಯಾಪಟಾಪನ್ನು ಇಟ್ಟುಕೊಂಡು 'ನನ್ನ ಮತಗಟ್ಟೆ ಎಲ್ಲಿದೆ' ಅಂತ ವಿವರ ಕೇಳಿಕೊಂಡು ಬಂದವರಿಗೆ ಕ್ಷಣಾರ್ಧದಲ್ಲೇ ಎಲ್ಲ ವಿವರ ಒದಗಿಸಲಾಗುತ್ತಿತ್ತು. ಅರ್ಧ ಮುಕ್ಕಾಲು ಗಂಟೆ ಆಗಿತ್ತೋ ಇಲ್ಲವೋ, ಅಲ್ಲಿಗೆ ಧಾವಿಸಿದ ಇನ್ನೊಂದು ಪಕ್ಷದ ಗುಂಪು, 'ನೀವು ಇಲ್ಲಿ ಕುಳಿತುಕೊಂಡೇ ಮತಗಟ್ಟೆಯಲ್ಲಿರುವ ಯಂತ್ರವನ್ನು ಕಂಟ್ರೋಲ್ ಮಾಡುತ್ತಿದ್ದೀರಿ' ಅಂತ ಆರೋಪ ಮಾಡತೊಡಗಿದರು. ಜಗಳಿಕ್ಕಿಳಿದರು. ಅಷ್ಟೇ ಅಲ್ಲ, ಅಲ್ಲಿದ್ದವರೆಲ್ಲ ತಮ್ಮ ಲ್ಯಾಪಟಾಪ್ ಗಳೊಂದಿಗೆ ಜಾಗ ಖಾಲಿ ಮಾಡದೇ ಹೋಗಿರದಿದ್ದರೆ, ಅವೆಲ್ಲವೂ ಪುಡಿಪುಡಿಯಾಗುವ ಎಲ್ಲ ಸಾಧ್ಯತೆಗಳೂ ಇದ್ದವೆಂದು ನನಗೆ ಆಮೇಲೆ ಕತೆ ಮಾಡಿ ಹೇಳಿದ್ದರು.
*
   ಹೀಗೆ ಅಂತರಂಗದಲ್ಲಿ ಅಡಗಿರುವ ಗುಣ, ಸ್ವಭಾವಗಳ ಬಗ್ಗೆ ಯೋಚಿಸುತ್ತಿರುವಾಗ ತುಂಬ ಹಿಂದೆ ನೋಡಿದ್ದ TED ಸಮೂಹದ ವಿಡಿಯೋವೊಂದು ನೆನಪಾಗುತ್ತಿದೆ: ಇವರು ಕೀಸ್ ಮೋಯ್ಲಿಕರ್(Kees Moeliker). ಸತ್ತ ಪ್ರಾಣಿಗಳನ್ನು ಸಂಗ್ರಹಿಸುವ ವೃತ್ತಿಯಲ್ಲಿರುತ್ತಾರೆ. ನೆದರ್ ಲ್ಯಾಂಡಿನ 'ರೊಟ್ಟರ್ ಡ್ಯಾಮ್' ನಲ್ಲಿ ಕೆಲಸ. ಒಂದು ದಿನ ತಮ್ಮ ಕೆಲಸದ ಮಧ್ಯೆ ಅಚ್ಚರಿಗೊಳಗಾಗುವ ಘಟನೆಯೊಂದಕ್ಕೆ ಸಾಕ್ಷಿಯಾಗುತ್ತಾರೆ. ಸುತ್ತಲೂ ಗಾಜಿನ ಗೋಡೆಯನ್ನಾವರಿಸಿದ ಅವರ ಕಚೇರಿಯ ಗೋಡೆಗೆ ಅದು ಗಾಜು ಅಂತ ತಿಳಿಯದೇ ಒಂದು ಬಾತುಕೋಳಿ ಅಪ್ಪಳಿಸಿ ಸತ್ತುಹೋಗುತ್ತದೆ. ಇದನ್ನು ಗಮನಿಸಿದ ಕೀಸ್ ಮೋಯ್ಲಿಕರ್ ಬಾತುಕೋಳಿಯನ್ನು ನೋಡಲು ಹೊರಗೆ ಬರುತ್ತಿದ್ದಂತೆ ಇನ್ನೊಂದು ಆಶ್ಚರ್ಯಕರ ಘಟನೆಗೆ ಸಾಕ್ಷಿಯಾಗುತ್ತಾರೆ. ಅಲ್ಲಿ ಸತ್ತು ಮಲಗಿದ್ದ ಕೋಳಿಯ ಮೇಲೆ ಇನ್ನೊಂದು ಜೀವಂತ ಕೋಳಿಯು ರತಿಕ್ರೀಡೆಯಾಡುವ ಪ್ರಯತ್ನ ಮಾಡುತ್ತಿರುತ್ತದೆ!

   ಹಾಗೆ ಕುತೂಹಲದಿಂದ 75 ನಿಮಿಷ(!)ದವರೆಗೂ ಗಮನಿಸುತ್ತಿದ್ದ ಮೋಯ್ಲಿಕರ್ ಇನ್ನಷ್ಟು ಹತ್ತಿರಕ್ಕೆ ಹೋಗಿ ನೋಡಿದಾಗ ಎರಡೂ ಕೋಳಿಗಳು ಸಲಿಂಗಿಗಳೆಂಬ ವಿಷಯ ಗೊತ್ತಾಗುತ್ತದೆ. ಅಷ್ಟೇ, ಸದರಿ ಘಟನೆಯನ್ನು ಅವರು 
Necrophilia ಅಂತ ಗುರುತಿಸುತ್ತಾರೆ. (ಸತ್ತ ವ್ಯಕ್ತಿಯ ಮೇಲಿನ ಮೋಹದಿಂದಾಗಿ ಶವದ ಜೊತೆಗೂ ರತಿಕ್ರೀಡೆಯಾಡ ಬಯಸುವ ವಾಂಛೆಗೆ ‘ನೆಕ್ರೋಫಿಲಿಯ’ ಅಂತ ಕರೆಯಲಾಗುತ್ತದೆ.) ಆದರೆ ಕೀಸ್ ಮೋಯ್ಲಿಕರ್ ರಿಗೆ ಭಯ. ಜಗತ್ತು ಇದನ್ನು ಒಪ್ಪಿಕೊಳ್ಳಬಹುದೇ ಅಂತನ್ನುವ ಭಯ. ಹಾಗಾಗಿ ಅಳೆದೂ ಸುರಿದೂ ಅಭ್ಯಾಸ ಮಾಡುತ್ತ ಸದರಿ ಘಟನೆಯಾದ ಆರು ವರ್ಷಗಳ ಬಳಿಕ ತಮ್ಮ ಪ್ರಬಂಧವನ್ನು ಪ್ರಕಟಿಸುತ್ತಾರೆ. ಹಾಗೆ ಜಗತ್ತಿನ ಮೊಟ್ಟಮೊದಲ ಪಕ್ಷಿಗಳ ನೆಕ್ರೋಫಿಲಿಯ ಪ್ರಬಂಧಕ್ಕೆ Ignobel ಪಾರಿತೋಷಕ ಕೂಡ ಲಭಿಸಿಬಿಡುತ್ತದೆ. ಕಪ್ಪೆ, ಹಾವು, ಕೋಣ ಸೇರಿದಂತೆ ಜಗತ್ತಿನ ಬಹುತೇಕ ಪ್ರಾಣಿ-ಪಕ್ಷಿಗಳ ವಿಚಿತ್ರ ನಡುವಳಿಕೆಗಳ ಬಗ್ಗೆ ಇರಬಹುದಾದ ಎಲ್ಲ ಫೋಟೋ/ವಿಡಿಯೋಗಳು ಮೋಹ್ಲಿಕರ್ ಬಳಿ ಬಂದು ಬೀಳುತ್ತವೆ. ಅವರು ಕುತೂಹಲದ ಸಂಶೋಧನೆಗೆ ಇಳಿಯುತ್ತಾರೆ. ಪ್ರಾಣಿ-ಪಕ್ಷಿಗಳಲ್ಲೂ ಕೂಡ ಸಲಿಂಗಕಾಮ, ಕಾಮ ವೈಪರಿತ್ಯ ಮತ್ತು Necrophilia ಉದ್ಭವಿಸಬಲ್ಲದು ಅಂತ ಕೀಸ್ ಮೋಯ್ಲಿಕರ್ ತಮ್ಮ ಮುಂದಿನ ಸಂಶೋಧನೆಗಳಲ್ಲಿ ಹಂತ ಹಂತವಾಗಿ ಕಂಡುಕೊಳ್ಳುತ್ತಾರೆ.
*
   ಮೊನ್ನೆ ಹೀಗೆ ಚಿತ್ರವಿಚಿತ್ರ ಸಂಗತಿಗಳ ಬಗ್ಗೆ ಯೋಚಿಸುತ್ತ ಆಫೀಸಿಗೆ ಹೊರಟಿದ್ದೆ. ದಾರಿಯಲ್ಲಿ ಯಾರೋ ತಮ್ಮ ಕಸದಬುಟ್ಟಿಯನ್ನು ತಮ್ಮದೇ ಮನೆಯ ಅಂಗಳದಲ್ಲಿಟ್ಟು ಹೋಗಿದ್ದರು. ಡಬ್ಬಿಯ ಕೆಳಅಂಚಿನಲ್ಲಿ ಹಲಗೆಯಾಕಾರದ ಭಾಗವನ್ನು ಕಾಲಿನಿಂದ ಒತ್ತಿದಾಗ ತಂತಾನೇ ಮುಚ್ಚಳ ತೆರೆಯುವಂಥ ಡಬ್ಬಿಯದು. ಮೈತುಂಬ ಕೇಶರಾಶಿ ಹೊಂದಿದ್ದ ಸ್ಟೈಲಿಶ್ ಆದ ಕರಿನಾಯಿಯೊಂದು ಈ ಡಬ್ಬಿ ಮುಚ್ಚಳವನ್ನು ತೆರೆಯುವ ಸಾಹಸ ಮಾಡುತ್ತಿತ್ತು. ಸುಮಾರು ಹೊತ್ತು ಹಾಗೆ ಗುದ್ದಾಡಿದ ಬಳಿಕ ಪ್ಲಾಸ್ಟಿಕ್ ಮುಚ್ಚಳವೇ ಮುರಿದು ಹೋಯಿತು. ಸಡಗರದಿಂದ ಇನ್ನೇನು ಬಾಯಿ ಹಾಕಬೇಕು ಅನ್ನುವಷ್ಟರಲ್ಲಿ ಎಲ್ಲಿಂದಲೋ ನಾಯಿಯ ಮಾಲೀಕ ಸ್ಕೂಟರ್ ನಲ್ಲಿ ಅಲ್ಲಿಗೆ ಬಂದಿಳಿದ. ತನ್ನ ಸ್ಟೈಲಿಶ್ ನಾಯಿ ಹೀಗೆ ಯಾರದೋ ಮನೆಯ ಡಸ್ಟ್ ಬಿನ್ ಮೂಸುವದೆಂದರೇನು? 
   ಆಸಾಮಿ ಸಿಡಿಮಿಡಿ ಮಾಡಿಕೊಂಡ. ಕೋಪದಿಂದ ಎಂಥದೋ ಹೆಸರು ಆರೋಪಿಸುತ್ತ ತೋರುಬೆರಳನ್ನೆತ್ತಿ     ಗಾಡಿಯೇರುವಂತೆ ಆಜ್ಞಾಪಿಸಿದ. ನಾಯಿ ವಿಧೇಯವಾಗಿ ಹತ್ತಿಕುಳಿತ ಮೇಲೆ ಈತ ಗಾಡಿಬಿಟ್ಟ. ಆದರೆ ಮಾರ್ಗದ ಮಧ್ಯೆ ಪರಿಚಿತರ್ಯಾರೋ ಸಿಕ್ಕ ಕಾರಣಕ್ಕೆ ಈತ ಗಾಡಿ ನಿಲ್ಲಿಸಿ ಒಂಚೂರು ಮಾತಿಗಿಳಿದಿದ್ದನೋ ಇಲ್ಲವೋ, ಕಾತರಿಸುತ್ತಿದ್ದ ಕರಿನಾಯಿ ಟಣ್ಣನೇ ಜಿಗಿಯಿತು. ಓಡೋಡಿ ಕಸದಡಬ್ಬಿಯತ್ತ ಬಂದು ಅವಸರದಿಂದ ವಜ್ರಕ್ಕಾಗಿ ತಡಕಾಡಿತು. ನೋಡನೋಡುತ್ತಿದ್ದಂತೆಯೇ ಬಾಯಲ್ಲಿ ಮೂಳೆ ಕಚ್ಚಿಕೊಂಡು ಗಾಡಿಯ ವಿರುದ್ಧ ದಿಕ್ಕಿನೆಡೆ ಓಟ ಕಿತ್ತಿತು.
ಓಹ್ ದೇವರೇ, ಇದೆಂಥ ಕೆಟ್ಟ ನಾಯಿ. ಇದ್ಯಾಕೆ ನಮ್ಮಂತೆ ಮುಖವಾಡ ಧರಿಸುತ್ತಿಲ್ಲ..    
-  
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 26.04.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)
ಸ್ಥಳಾವಕಾಶದ ಕೊರತೆಯಿಂದಾಗಿ ಲೇಖನ ಕೊಂಚ ಎಡಿಟ್ ಆದ ಕಾರಣಕ್ಕಾಗಿ ಮೂಲ ಬರಹ ಇಲ್ಲಿ ಪ್ರಕಟಿಸಿರುವೆ. 

Saturday, April 8, 2017

ಟೇಬಲ್ ಮೇಲಿದ್ದ ಟೆಲಿಫೋನು ರಿಂಗಾದಾಗ..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 08.04.2017 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)