Wednesday, May 9, 2018

ಪೌರಾಣಿಕ ಸಾಹಿತ್ಯವೆಂಬುದು ಅನುಮಾನದ ಹುತ್ತವಾಗಬಾರದಲ್ಲ?


ಮೊನ್ನೆ ಬಹಳ ದಿನಗಳ ನಂತರ ಗೆಳೆಯರೆಲ್ಲ ಸೇರಿದ್ದೆವು. ಯಾವುದೋ ದೇವಸ್ಥಾನದಲ್ಲಿ ಬಾಳೆಹಣ್ಣಿನ ಪ್ರಸಾದ ಹಂಚುವ ಕಾರ್ಯಕ್ರಮ. ನಾವೆಲ್ಲ ಅಲ್ಲಿಗೆ ಹೋಗಬೇಕಿತ್ತು. ಬೆಂಗಳೂರಿನಲ್ಲೇ ಇದ್ದರೂ ಮೆಟ್ರೋ ರೈಲಿನಲ್ಲಿ ಒಮ್ಮೆಯೂ ಪ್ರಯಾಣಿಸದ ನಮ್ಮ ಬಗ್ಗೆ ನಾವೇ ಖೇದಪಟ್ಟುಕೊಂಡು ಮೆಟ್ರೋದಲ್ಲಿ ಪಯಣಿಸಿದ್ದೆವು. ದೇವಸ್ಥಾನಕ್ಕೆ ಬರುವವರಿಗೆಲ್ಲ ಪ್ರಸಾದ ಹಂಚಿ ಸುಸ್ತಾಗಿದ್ದ ನಾವೆಲ್ಲ ಪ್ರಾಂಗಣದಲ್ಲಿದ್ದ ಮರದಡಿಯಲ್ಲಿ ಕುಳಿತುಕೊಂಡಿದ್ದೆವು. ಕಳೆದ ಎರಡು ದಶಕಗಳಲ್ಲಿ ಬೆಟ್ಟ, ಕಾಡು, ರೆಸಾರ್ಟ್, ಕ್ಲಬ್ಬು, ಪಬ್ಬು, ಬೀಯರು ಅಂತೆಲ್ಲ ಲಿಸ್ಟು ಹಿಡಿದುಕೊಂಡು ಸುತ್ತಾಡಿದ ನಮಗೆ ಮುಂದೊಂದು ದಿನ ಯಾವುದೋ ದೇವಸ್ಥಾನದ ಪ್ರಾಂಗಣದಲ್ಲಿ ಹೀಗೆ ಪ್ರಸಾದವನ್ನೂ ಹಂಚುವ ಮನಸ್ಥಿತಿ ಬಂದೀತೆಂಬ ಕಲ್ಪನೆ ಯಾರಿಗಾದರೂ ಬಂದಿತ್ತೇ? ಅಂತ ನಮ್ಮಷ್ಟಕ್ಕೆ ನಾವೇ ನಗಾಡುತ್ತಿದ್ದೆವು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಗುಂಪಿನ ಮಧ್ಯೆ  ಪ್ರಶ್ನೆಯೊಂದು ತೂರಿಬಂತು.

 'ಆತ್ಮ ಅಂದರೇನು?'

   ನಗೆಯಾಡುತ್ತಿದ್ದ ಎಲ್ಲರೂ ಗಂಭೀರರಾಗಿಬಿಟ್ಟಿದ್ದರು. ತಲೆಗೊಂದರಂತೆ ಉತ್ತರ ಬಂದವು. ಇತ್ತೀಚೆಗೆ ಇಂಗ್ಲೀಷ್ ಲಿಟರೇಚರ್ ಮೂಲಕ ಪುರಾಣಗಳನ್ನು ಓದತೊಡಗಿದ್ದ ಒಬ್ಬನಂತೂ ಕೃಷ್ಣನ ಗೀತೆಯನ್ನು ಸಾದರ ಪಡಿಸತೊಡಗಿದ್ದರೆ, ಇನ್ನೊಬ್ಬರ್ಯಾರೋ ಆತ್ಮಕ್ಕೆ ಹೇಗೆ ಸಾವಿಲ್ಲವೆಂದು ಹೇಳುತ್ತಲೇ ಅದರ ಅಮರತ್ವವನ್ನು ಸಾರತೊಡಗಿದ್ದರು. ಹೀಗೆ ಒಬ್ಬೊಬ್ಬರ ಮೂಲಕ ಒಂದೊಂದು ರೀತಿಯಲ್ಲಿ ಆತ್ಮದ ಬಗ್ಗೆ ಪುಂಖಾನುಪುಂಖ ಚರ್ಚೆಗಳಾಗುತ್ತಿದ್ದಾಗ ನಾನು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದೆ. ಇಷ್ಟಕ್ಕೂ ಆತ್ಮದ ಬಗ್ಗೆ ಏನೇನೂ ಗೊತ್ತಿರದ ನಾನು ಏನು ಹೇಳಲಿ? ಬಾಲ್ಯದಲ್ಲಿ ನನ್ನ ಗೆಳೆಯನೊಬ್ಬನಿದ್ದ. ಆತ ರಾತ್ರಿ ಹಿತ್ತಿಲಲ್ಲಿ ಉಚ್ಛೆ ಹೊಯ್ಯಲು ಹೋದಾಗ ಬಿಳಿಸೀರೆ ಉಟ್ಟುಕೊಂಡು ತಲೆಕೆದರಿಕೊಂಡು ನಿಂತಿದ್ದ 'ಆತ್ಮ'ವನ್ನು ನೋಡಿ ಮೂರು ದಿನ ಚಳಿ ಜ್ವರ ಬಂದು ಮಲಗಿದ್ದನ್ನು ಗಂಭೀರವಾಗಿ ಹೇಳತೊಡಗಿದ್ದೆ. ಗೆಳೆಯರೆಲ್ಲ ಛೇಡಿಸುತ್ತಲೇ ನನ್ನನ್ನು ಸಮಾ ಬೈದಾಡಿಕೊಂಡಿದ್ದರು! 

   ಪರಮಾತ್ಮನ ಪ್ರಾಂಗಣದಲ್ಲಿ ಆತ್ಮದ ಬಗ್ಗೆ ನನ್ನ ವ್ಯಾಖ್ಯಾನ ಹೀನಾಯವಾಗಿ ಕೊನೆಯುಸಿರೆಳೆದಿದ್ದು ಹೀಗೆ. ತಮಾಷೆಯೆಂದರೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಪೈಕಿ ಇಂಥ ಸಾಲುಗಳನ್ನು ನೀವೂ ಕೇಳಿಯೇ ಇರುತ್ತೀರಿ. ಪೊಲೀಸರು ಆತ್ಮರಕ್ಷಣೆಗಾಗಿ ರೌಡಿಯೊಬ್ಬನ ಕಾಲಿಗೆ ಗುಂಡು ಹೊಡೆದರು ಅಂತನ್ನುವ ಸುದ್ದಿ ಬಂದಿರುತ್ತದೆ. ಭಾಷಾಬಳಕೆಯ ಬಗ್ಗೆ ಕುತೂಹಲ ಇಟ್ಟುಕೊಂಡವರಿಗೆ ಈ 'ಆತ್ಮರಕ್ಷಣೆ' ಎಂಬ ಪದ ಆಗೀಗ ಸತಾಯಿಸುವದುಂಟು. ಅರೇ, ಪೊಲೀಸರೇನೋ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಸಂದರ್ಭ ಉಂಟಾದಾಗ ಗುಂಡು ಹಾರಿಸಿರುತ್ತಾರೆ. ಅಂದರೆ ಅದು ದೇಹರಕ್ಷಣೆ. ಅದಕ್ಕೂ ಹೆಚ್ಚೆಂದರೆ ಪ್ರಾಣರಕ್ಷಣೆ. ದೇಹದ ರೀತಿ ಕಣ್ಣಿಗೆ ಕಾಣಿಸದ, ಪ್ರಾಣದ ರೀತಿ ಅನುಭವಕ್ಕೆ ತಾಗದ ಆತ್ಮವನ್ನು ನೋಡಿದವರು ಯಾರಿದ್ದಾರೆ? ಹಾಗಿರುವಾಗ 'ಆತ್ಮರಕ್ಷಣೆ' ಅನ್ನುವ ಪದ ಎಲ್ಲಿಂದ ಬಂತು? ಅದರ ಪ್ರಯೋಗ ಎಷ್ಟು ಸರಿ ಅಂತನ್ನುವ ಪ್ರಶ್ನೆ ಕಾಡತೊಡಗುತ್ತದೆ. 

   ಹೀಗೆ ಪಾರಮಾರ್ಥಿಕ ತತ್ವವೊಂದು ಆಡುಭಾಷೆಯಾಗಿ ಕೊನೆಗೆ ರೂಢಿಗತ ಭಾಷೆಯಾಗಿ ಚಲಾವಣೆಯಾಗುತ್ತಿದ್ದಂತೆ ಈ ರೀತಿಯ ಗೊಂದಲಗಳು ಸಹಜ. ಇಂಥ ಗೊಂದಲಗಳಿಗೆ ಉತ್ತರವಾಗಿ ನಮ್ಮ ಮುಂದೆ ನಿಘಂಟುಗಳಿವೆ. ಅವುಗಳ ಸಹಾಯದಿಂದ 'ಆತ್ಮ'ದ ಸಹಜ ಅರ್ಥವನ್ನೂ ಅಲೌಕಿಕ ವಿವರಣೆಯನ್ನೂ ಗ್ರಹಿಸಬಹುದು. ಇದರ ಮುಂದುವರಿಕೆ ಎಂಬಂತೆ ಆತ್ಮಕತೆ, ಆತ್ಮಗೌರವ, ಆತ್ಮಗತ, ಆತ್ಮವಿಶ್ವಾಸ, ಆತ್ಮರತಿ, ಆತ್ಮಹತ್ಯೆ, ಆತ್ಮಪ್ರಶಂಸೆ ಮುಂತಾದ ಪದಗಳನ್ನು ಗಮನಿಸಿದಾಗ ಒಂದಂತೂ ಸ್ಪಷ್ಟವಾಗುತ್ತದೆ. ಆತ್ಮ ಅಂದರೆ ತಾನು, ತನ್ನದು ಎಂಬ ಸಹಜ ಅರ್ಥದೊಂದು ತನ್ನಿಂದ ತಾನೇ ಹೊರಬೀಳಬಲ್ಲದು. ಹೀಗೆ ನಿಜದ ಬದುಕಿನಲ್ಲಿ ಸಹಜವಾಗಿ ಬಳಸುವ ಪದಗಳೇ ಒಮ್ಮೊಮ್ಮೆ ಇಷ್ಟು ಕಠಿಣವಾಗಿಬಿಡುವಾಗ ಇನ್ನು ಪುರಾತನ ಸಾಹಿತ್ಯದಲ್ಲಿ ಬರುವ ಸಾರವನ್ನು ಎಷ್ಟರಮಟ್ಟಿಗೆ ನಾವು ಗ್ರಹಿಸಬಲ್ಲೆವು? ಪೌರಾಣಿಕ ಪಾತ್ರಗಳು, ಅವುಗಳ ಹೆಸರು, ಅದರ ವಿವರಣೆ, ಅಲ್ಲಿನ ದೃಷ್ಟಾಂತಗಳು, ನೀತಿಗಳು, ನಿಯಮಗಳ ಬಗ್ಗೆ ಸಾದ್ಯಂತವಾಗಿ ವಿವರಿಸಬಲ್ಲ ನಿಘಂಟೊಂದು ಇದ್ದಿದ್ದರೆ ಪುರಾತನ ಸಾಹಿತ್ಯವನ್ನು ಗ್ರಹಿಸಲು ಎಷ್ಟು ಅನುಕೂಲವಾಗುತ್ತಿತ್ತು ಅಂತ ನಿಮಗೆ ಅನಿಸಿಲ್ಲವಾ?

   ನಿಜ, ಇವತ್ತು ನಾನು ಮಾತನಾಡಬಯಸಿದ್ದು ಇಂಥದ್ದೇ ಒಂದು ನಿಘಂಟಿನ ಬಗ್ಗೆ. ಹೆಸರು: ಪುರಾಣನಾಮ ಚೂಡಾಮಣಿ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಪ್ರಕಟವಾಗಿರುವ ಈ ಗ್ರಂಥ ಸಾಮಾನ್ಯ ಅರ್ಥದಲ್ಲಿ ಡಿಕ್ಷನರಿಯೊಂದು ಮಾಡಬಹುದಾದ ಕೆಲಸಕ್ಕಿಂತಲೂ ಹೆಚ್ಚಿನ ಕಾರ್ಯ ಮಾಡುತ್ತದೆ. ಹದಿನೈದು ವರ್ಷಗಳ ಹಿಂದೆ ನಾನು ಖರೀದಿಸಿದ 650 ಪುಟಗಳಷ್ಟಿರುವ ಈ ಬೃಹತ್ ಗ್ರಂಥದ ಮೊದಲ ಆವೃತ್ತಿ ಪ್ರಕಟವಾಗಿದ್ದು 1941ರಲ್ಲಿ. ಇಷ್ಟಕ್ಕೂ ನಮ್ಮ ಪುರಾತನ ಸಾಹಿತ್ಯ ಸೃಷ್ಟಿಯಾಗಿದ್ದು ಸಂಸ್ಕೃತಲ್ಲಿ. ಅದರಲ್ಲಿ ಬರುವ ದೇವತೆಗಳು ನಮ್ಮ ಇತಿಹಾಸದಲ್ಲೂ ಬರುತ್ತವೆ. ಹೀಗೆ ಸಾಹಿತ್ಯ ಮತ್ತು ಇತಿಹಾಸ ಎರಡರಲ್ಲೂ ಗೋಚರಿಸುವ ದೇವರುಗಳು, ಋಷಿಗಳು, ಪುಣ್ಯಕ್ಷೇತ್ರಗಳು, ನದಿ-ಪರ್ವತಗಳು, ನಾನಾ ದೇಶಗಳು, ಅವುಗಳ ರಾಜರುಗಳು, ಅವರವರ ಕಾಲದ ವೈಚಿತ್ರ್ಯಗಳು, ದೃಷ್ಟಾಂತಗಳು, ಮಹತ್ವಗಳ ಬಗ್ಗೆ ಒಂದು ರೀತಿಯ ಅಕಾಡೆಮಿಕ್ ಅಭ್ಯಾಸಕ್ಕಾಗಿ 'ಪುರಾಣನಾಮ ಚೂಡಾಮಣಿ'ಯನ್ನು ರಚಿಸಬೇಕಾಯಿತು ಅಂತ ಲೇಖಕರಾದ ಬೆನಗಲ್ ರಾಮರಾವ್ ಮತ್ತು ಪಾನ್ಯಂ ಸುಂದರಶಾಸ್ತ್ರಿಗಳು ಗ್ರಂಥದ ಆರಂಭದಲ್ಲೇ ಅರಿಕೆ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಅವರುಗಳು ಶ್ರಮವಹಿಸಿದ್ದು ಹನ್ನೆರೆಡು ವರ್ಷಗಳು. 

   ಇಷ್ಟು ಹೇಳಿದರೆ 'ಚೂಡಾಮಣಿ'ಯ ಅಗಾಧತೆಗೆ ಮೋಸ ಮಾಡಿದಂತೆ. ಇಂಥದೊಂದು ಪುಸ್ತಕವನ್ನು ಸೃಷ್ಟಿಸುವದು ಮಹಾನ್ ಜಟಿಲಕಾರ್ಯ. ಅದು ಅಗಾಧ ಪ್ರಮಾಣದ ಪರಿಶ್ರಮ ಮತ್ತು ಓದುವಿಕೆಯನ್ನು ಬೇಡುತ್ತದೆ. ಯಾಕೆಂದರೆ ಒಂದು ಪುರಾಣದ ಪಾತ್ರವೊಂದು ಇನ್ಯಾವುದೋ ಪುರಾಣದ ಭಾಗದಲ್ಲಿ ದಿಢೀರಂತ ಪ್ರತ್ಯಕ್ಷವಾಗುತ್ತದೆ. ಯಾವುದೋ ಪುರಾಣದ ಪಾತ್ರವೊಂದು ಇನ್ಯಾವುದೋ ಪುರಾಣದಲ್ಲಿನ ಪಾತ್ರದ ಸಾವಿಗೆ ಕಾರಣವಾಗುತ್ತದೆ. ಯಾವುದೋ ಕಾಲದ ಹೆಸರೊಂದು ಏಕಮೇವಾದ್ವಿತೀಯ ಎಂಬಂತೆ ಮೆರೆಯುತ್ತಿದ್ದಾಗ ಅದೇ ಹೆಸರಿನ ಬೇರೆ ಬೇರೆ ಪಾತ್ರಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಎಲೆಮರೆಯ ಕಾಯಿಯಾಗಿ ಹೋಗಿಬಿಡುವ ಸಂಭವ ಇರುತ್ತದೆ. 

   ಈ ಪುಸ್ತಕವು ಅದೆಲ್ಲವನ್ನೂ ಸಮಗ್ರವಾಗಿ ಬೇರೆಬೇರೆಯಾಗಿ ಓದುಗರಿಗೆ ಕಟ್ಟಿಕೊಡುತ್ತದೆ. ಹಾಗೆ ಪ್ರತಿಯೊಂದಕ್ಕೂ ವಿವರಣೆಯನ್ನು ಕೊಡುವಾಗ ಅದು ಯಾವ ಪುರಾಣದ ಎಷ್ಟನೇ ಭಾಗದ ಎಷ್ಟನೇ ಅಧ್ಯಾಯದಲ್ಲಿ ಬರುತ್ತದೆ ಅಂತನ್ನುವ ಪುರಾವೆಯನ್ನೂ ಕೊಡುತ್ತದೆ. ಇದು ಎಷ್ಟು ಶ್ರಮದಾಯಕ ಕೆಲಸವೆಂದರೆ, ಸೀತೆಯನ್ನು ಹೊತ್ತೊಯ್ಯುವ ರಾವಣ ಅವಳನ್ನು ಯಾಕೆ ಬಲಾತ್ಕರಿಸಲಿಲ್ಲ ಅಂತ ವಿವರಿಸುವದಕ್ಕಾಗಿ ಲೇಖಕರು ಇನ್ಯಾವುದೋ ಪುರಾಣದಲ್ಲಿನ ಅಂಶಕ್ಕಾಗಿ ತಡಕಾಡಬೇಕಾಗುತ್ತದೆ. ಅಲ್ಲಿ ಕುಬೇರನ ಮಗನಾದ ನಳಕೂಬರ ಎಂಬ ಯಕ್ಷನನ್ನು ಶೋಧಿಸಬೇಕಾಗುತ್ತದೆ. ಆತನ ಶಾಪವನ್ನು ತೋರಿಸಬೇಕಾಗುತ್ತದೆ. ಅದಕ್ಕಾಗಿ ಲೇಖಕರು ಇನ್ಯಾವುದೋ ಕಾಲಘಟ್ಟಕ್ಕೆ ಹೋಗಬೇಕು. ಅಲ್ಲಿ ರಾವಣ ಪರಮಶಕ್ತಿಶಾಲಿಯಾಗಿ ಮೆರೆಯುತ್ತಿರುವಾಗ ರಂಭೆ ರಾವಣನ ಕಣ್ಣಿಗೆ ಬಿದ್ದಿದ್ದು, ಆತ ಆಕೆಯನ್ನು ಬಲಾತ್ಕರಿಸಿದ್ದು, ಅದರಿಂದ ರಂಭೆಯ ಪ್ರಿಯಕರನಾದ ನಳಕೂಬರ ಕೋಪಗೊಂಡಿದ್ದು, 'ಪರಸ್ತ್ರೀಯನ್ನು ಇನ್ನೊಮ್ಮೆ ಬಲಾತ್ಕರಿಸಿದಲ್ಲಿ ಅದೇ ನಿನಗೆ ಮೃತ್ಯು' ಎಂಬುದಾಗಿ ಆತ ರಾವಣನಿಗೆ ಶಾಪ ಕೊಟ್ಟಿದ್ದು-ಎಲ್ಲವನ್ನೂ ಶೋಧಿಸಿ ವಿವರಿಸಬೇಕಾಗುತ್ತದೆ. ಇದೆಲ್ಲವನ್ನೂ ಲೇಖಕರು ಆಯಾ ಪುರಾಣದ ಆಯಾ ಅಧ್ಯಾಯದ ಭಾಗಗಳನ್ನು ಉಲ್ಲೇಖದಂತೆ ಕಂಸದಲ್ಲಿ ಕೊಡುತ್ತ ಹೋಗಿದ್ದಾರೆ. 

   ಇಲ್ಲೊಂದು ಮಜ ನೋಡಿ: ಮನುಷ್ಯನೊಬ್ಬನನ್ನು ಬಿಟ್ಟು ಮತ್ಯಾರಿಂದಲೂ ಸಾವು ಬರಕೂಡದೆಂಬ ವರವನ್ನು ಬ್ರಹ್ಮನಿಂದ ಗಳಿಸಿರುವ ರಾವಣನಿಗೆ ಯಃಕಶ್ಚಿತ ಮನುಷ್ಯನ ಬಗ್ಗೆ ತಾತ್ಸಾರವಿದ್ದಂತಿದೆ. ಹೀಗಿರುವಾಗ ಸೀತೆಯ ಮೇಲೆ ವಾಂಛೆಯಿದ್ದರೂ ಆಕೆಯನ್ನು ಮುಟ್ಟದೇ ಹೋದ ರಾವಣನ ಪರಾಕ್ರಮದ ಬಗ್ಗೆ ಅನುಮಾನಿಸುವದು ನಮ್ಮದೇ ಚಪಲದಂತೆ ತೋರಿದರೆ, 
ರಾವಣನಿಗೆ ಸೀತೆಯ ಮೇಲೆ ಆಸಕ್ತಿಯೇ ಇರಲಿಲ್ಲವೆಂದೂ ಆತ ಅಪಹರಿಸಿದ್ದು ಶೂರ್ಪನಖಿಯ ಮೇಲಿನ ಮಮತೆಯಿಂದಾಗಿಯೆಂದೂ ಸಮಜಾಯಿಷಿ ಕೊಟ್ಟಿದ್ದು ಕವಿಯ ಹಂಬಲದಂತೆ ತೋರುತ್ತದೆ.  

   ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪುರಾಣಪಾತ್ರಗಳನ್ನು ವಿಶ್ಲೇಷಿಸುತ್ತಿದ್ದಂತೆ ಸಾಮಾನ್ಯ ಓದುಗನಿಗೆ ಪೌರಾಣಿಕ ಸಾಹಿತ್ಯವೆಂಬುದು ಒಂದು ಅಸಂಬದ್ಧ ಮತ್ತು ಅನುಮಾನಾಸ್ಪದ ವಿನ್ಯಾಸದಂತೆ ಗೋಚರಿಸುವ ಅಪಾಯವಿದ್ದೇ ಇದೆ. ಪುರಾಣಗಳನ್ನು ಮೌಲ್ಯಗಳ ಮೂಟೆ ಎಂಬಂತೆ ನೋಡುವದರ ಜೊತೆಜೊತೆಗೆ ಅವನ್ನೆಲ್ಲ ಒಂದು ಸಾಹಿತ್ಯವನ್ನಾಗಿಯೂ ನೋಡಬಯಸುವ ನನ್ನಂಥವರಿಗೆ ಈ ಎಲ್ಲ ಕಥನಗಳು ಯಾವುದೋ ತಲೆಕೆಟ್ಟ ಗಾಸಿಪ್ಪುಗಳ ಕಂತೆಯಂತೆ ಭಾಸವಾಗಕೂಡದು. ಯಾಕೆಂದರೆ ಗಾಸಿಪ್ಪುಗಳಲ್ಲಿ ಕೇವಲ ಅನುಮಾನ ಮತ್ತು ಗುಮಾನಿಗಳಿರುತ್ತವೆ. ವಾಸ್ತವ ಚಿತ್ರಣದಲ್ಲಿ ಮಾತ್ರ ಎಲ್ಲ ತಿಳಿಯಪಡಿಸಬಲ್ಲ ಒಂದು ಪೂರ್ಣವಿರಾಮವಿರುತ್ತದೆ. 

   ಬಹುಶಃ ಇಂಥ ನೂರಾರು ಅನುಮಾನ ಮತ್ತು ಗುಮಾನಿಗಳಿಗೆ who's who ಎಂಬಂತೆ ಒಂದು ಕ್ರಮಬದ್ಧ ರೀತಿಯಲ್ಲಿ ಈ ಪುಸ್ತಕ ಉತ್ತರಿಸುತ್ತ ಹೋಗುತ್ತದೆ. ನಮಗೆ ಗೊತ್ತೇ ಇರದ ಹಲವಾರು ದೃಷ್ಟಾಂತಗಳನ್ನು ಧಾತುಗಳೊಂದಿಗೆ 'ಹೈಪರ್ ಲಿಂಕ್'ನಂತೆ ಸಂಯೋಜಿಸುತ್ತ ಹೋಗುವ 'ಪುರಾಣನಾಮ ಚೂಡಾಮಣಿ'ಯು ಭಾರತೀಯ ಪುರಾತನ ಸಾಹಿತ್ಯವನ್ನು ಗ್ರಹಿಸಲು ಪ್ರಚೋದಿಸಬಲ್ಲ ಮಾರ್ಗಸೂಚಿಯಾಗಿದೆ. 
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 09.05.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


2 comments:

sunaath said...

ಪುರಾಣನಾಮಚೂಡಾಮಣಿಯಂತಹ ಕೃತಿಗಳು ನಮ್ಮ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದುಗರಿಗೆ ಸುಲಭವಾಗಿ ಓದಲು ದೊರೆಯುವಂತಾಗಬೇಕು. ಹಾಗಿದ್ದಾಗ ಮಾತ್ರ, ಪುರಾಣಸಾಹಿತ್ಯವು ಅನುಮಾನದ ಹುತ್ತವಾಗಲಿಕ್ಕಿಲ್ಲ!

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಮಾತು ನಿಜ. 'ಪುರಾಣನಾಮ'ದಂಥ ಆಕರಗ್ರಂಥಗಳು ನಮ್ಮ ಎಲ್ಲ ಗ್ರಂಥಾಲಯಗಳಲ್ಲಿ ದೊರೆಯುವಂತಾಗಬೇಕು. ಸಾರ್ವಜನಿಕರ ಕೈಗೆ ಸುಲಭವಾಗಿ ಸಿಗುವಂತಾಗಬೇಕು. ಇದರಿಂದ ಓದುಗರಿಗೆ ಪುರಾಣದ 'ವಸ್ತು'ಗಳ ಬಗ್ಗೆ ಒಳನೋಟದ ಗ್ರಹಿಕೆ ದಕ್ಕಬಹುದು ಅಂತನಿಸುತ್ತದೆ. ಧನ್ಯವಾದಗಳು.