Wednesday, June 6, 2018

ಸೂರ್ಯ ಚಂದ್ರರನ್ನು ಕಾಪಾಡಿದ ದಂಪತಿಯ ಕತೆ


ಒಂದಾನೊಂದು ಕಾಲದಲ್ಲಿ ತೈವಾನಿನ ಮಧ್ಯಭಾಗದಲ್ಲಿ ಒಂದು ಸಮುದಾಯವಿತ್ತು. ಪರ್ವತದ ಅಡಿಯಲ್ಲಿ ಆಹಾರ ಬೆಳೆಯುತ್ತಿದ್ದ ಇವರನ್ನು ಶಾವೋ ಸಮುದಾಯದವರೆಂದು ಕರೆಯುತ್ತಿದ್ದರು. ದಿನವೆಲ್ಲ ಹೊಲಗದ್ದೆಗಳಲ್ಲಿ ಮೈಮುರಿದು ಕೆಲಸ ಮಾಡುತ್ತಿದ್ದ ಶಾವೋ ಜನರು ರಾತ್ರಿ ಕುಶಾಲಿಗೆಂದು ಹಾಡಿ ಕುಣಿದು ದಣಿವಾರಿಸಿಕೊಳ್ಳುತ್ತಿದ್ದರು. ಮನರಂಜನೆಗಾಗಿ ಆಗೀಗ ಮೀನು ಹಿಡಿಯುತ್ತಿದ್ದರು ಮತ್ತು ಕಾಡುಪ್ರಾಣಿಗಳ ಶಿಕಾರಿಯಾಡುತ್ತಿದ್ದರು. ಹೀಗೆ ಒಟ್ಟಿನಲ್ಲಿ ಯಾರ ಮುಲಾಜಿಗೂ ಬೀಳದೆ ಶಾವೋ ಜನಾಂಗ ಖುಷಿಯಾಗಿತ್ತು. 

   ಒಂದು ದಿನ ಹೀಗೆಯೇ ಬೆಟ್ಟದಡಿಯಲ್ಲಿ ಎಲ್ಲ ಶಾವೋಗಳು ಕೆಲಸ ಮಾಡುತ್ತಿರುವಾಗ 'ಢಂ' ಅಂತ ಭಾರೀ ಸದ್ದಾಗುತ್ತದೆ. ಮರುಕ್ಷಣವೇ ನಿಂತ ನೆಲವೆಲ್ಲ ಅಲ್ಲಾಡತೊಡಗುತ್ತದೆ. ಅಷ್ಟರಲ್ಲಿ ಒಬ್ಬರ್ಯಾರೋ ಆಕಾಶದತ್ತ ಕೈ ಮಾಡುತ್ತ ಜೋರಾಗಿ ಕಿರುಚುತ್ತಾರೆ: ಓಹ್, ನಮ್ಮ ಸೂರ್ಯನೇ ಕಾಣಿಸುತ್ತಿಲ್ಲ! ಜನರೆಲ್ಲ ದಿಕ್ಕಾಪಾಲಾಗಿ ಓಡಾಡತೊಡಗುತ್ತಾರೆ. ಕತ್ತಲಲ್ಲಿ ಎಡವಿಬೀಳುತ್ತಾರೆ. ಈಗಿದ್ದವನು ಈಗಿಲ್ಲ ಎಂಬಂತೆ ತಮ್ಮ ಕಣ್ಣ ಸೂರ್ಯ ಮುಂದೆಯೇ ಮಾಯವಾಗಿದ್ದು ಶಾವೋ ಜನರನ್ನು ತಲ್ಲಣ ಮಾಡುತ್ತದೆ. ಕತ್ತಲಲ್ಲಿ ಇವರೆಲ್ಲ ಅದು ಹೇಗೋ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು ಮನೆ ದಾರಿ ಹಿಡಿಯುತ್ತಾರೆ.

   ಸಮಯ ಸರಿಯುತ್ತದೆ. ಯಥಾಪ್ರಕಾರ ಚಂದ್ರ ಆಗಸದಲ್ಲಿ ಕಾಣಿಸಿಕೊಳ್ಳುತ್ತಾನೆ. ತಕ್ಕಮಟ್ಟಿಗೆ ಬೆಳಕನ್ನೂ ತರುತ್ತಾನೆ. ಭಯದಿಂದ ಮನೆ ಸೇರಿಕೊಂಡಿದ್ದವರೆಲ್ಲ ಒಬ್ಬೊಬ್ಬರಾಗಿ ಚಂದಿರನ ಬೆಳಕಿನಲ್ಲಿ ಹೊರಗೆ ಬರುತ್ತಾರೆ. ಒಂದೆಡೆ ಸೇರಿಕೊಂಡು ಸೂರ್ಯನಿಗೇನಾಯಿತು ಅಂತ ಚರ್ಚಿಸುತ್ತಿರುವಾಗಲೇ ಮತ್ತೊಮ್ಮೆ 'ಢಂ' ಅಂತನ್ನುವ ಭಾರೀ ಸದ್ದು. ಆ ಸದ್ದಿಗೆ ಶಾವೋ ಜನರ ಮನೆಗಳೆಲ್ಲ ಅಲ್ಲಾಡುತ್ತವೆ. ತಲೆಯೆತ್ತಿ ನೋಡಿದರೆ ಈ ಸಲ ಚಂದಿರನೂ ಮಾಯ! ಆವತ್ತಿನಿಂದ ಇಡೀ ಜಗತ್ತೇ ಕತ್ತಲುಕತ್ತಲು. ಸೂರ್ಯನ ಬೆಳಕಿಲ್ಲದೇ ಹಲಗದ್ದೆಗಳಲ್ಲಿದ್ದ ಪೈರುಗಳೆಲ್ಲ ಒಣಗತೊಡಗುತ್ತವೆ. ಮೀನುಗಳೆಲ್ಲ ನೀರಿನಾಳಕ್ಕೆ ಹೊರಟುಹೋಗುತ್ತವೆ. ಜನ ಕಂಗಾಲಾಗುತ್ತಾರೆ. ಸೂರ್ಯನಿಲ್ಲದೇ, ಆತನ ಬೆಳಕಿಲ್ಲದೇ ತಾವಿನ್ನು ಮೆಕ್ಕೆಜೋಳ ಮತ್ತು ಅಕ್ಕಿ ಹೇಗೆ ಬೆಳೆಯಬಲ್ಲೆವು ಅಂತ  ರೋದಿಸತೊಡಗುತ್ತಾರೆ.   

   ಇಂತಿಪ್ಪ ಇದೇ ಊರಿನಲ್ಲಿ ಒಂದು ಶಾವೋ ಯುವಜೋಡಿಯಿತ್ತು. ಈ ದಂಪತಿಗಳಿಬ್ಬರೂ ಜೀವನೋಪಾಯಕ್ಕಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದರು. ಈಗ ಸೂರ್ಯ ಚಂದ್ರರಿಲ್ಲದೇ ಎಲ್ಲ ಕತ್ತಲಾಗಿರುವಾಗ ಈ ಜೋಡಿಯ ಮನೆಯಲ್ಲಿದ್ದ ಆಹಾರ ಸಾಮಗ್ರಿಗಳೆಲ್ಲ ಮುಗಿಯುತ್ತ ಬಂದಿತ್ತು. ಹೀಗಿರುವಾಗ ಒಂದು ದಿನ ಹೆಂಡತಿ ತನ್ನ ಗಂಡನಲ್ಲಿ ಉತ್ಸಾಹ ತುಂಬತೊಡಗುತ್ತಾಳೆ. ಸೂರ್ಯ ಬೇಗ ಕಾಣಿಸಿಕೊಳ್ಳದಿದ್ದಲ್ಲಿ ಇಡೀ ಊರಿಗೆ ಊರೇ ಸತ್ತುಹೋಗುತ್ತದೆಂದೂ, ಆದಷ್ಟು ಬೇಗ ನಾವು ಸೂರ್ಯ-ಚಂದಿರರನ್ನು ಹುಡುಕುವ ಪ್ರಯತ್ನ ಮಾಡಬೇಕೆಂದೂ ಗಂಡನಲ್ಲಿ ಕೇಳಿಕೊಳ್ಳುತ್ತಾಳೆ. ಇಬ್ಬರೂ ಸುದೀರ್ಘ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಸೂರ್ಯಚಂದಿರರು ಯಾವುದೋ ಆಳದ ಪ್ರಪಾತದಲ್ಲಿ ಬಿದ್ದಿರಬಹುದೆಂದೂ, ತಾವಿಬ್ಬರೂ ಈಗಿಂದೀಗಲೇ ಅವರನ್ನು ಹುಡುಕುವದೆಂದೂ ನಿರ್ಧರಿಸುತ್ತಾರೆ. 

   ಅಲ್ಲಿಂದ ಶುರುವಾಗುತ್ತದೆ ಗಂಡ ಹೆಂಡತಿಯರ ಸುದೀರ್ಘ ಪಯಣ. ಅವರ ಈ ಕಠಿಣ ಹಾದಿಯಲ್ಲಿ ಅನೇಕ ಪರ್ವತ, ನದಿ, ಕೊಳ್ಳಗಳೂ ಬಂದುಹೋಗುತ್ತವೆ. ಆದರೂ ದಂಪತಿಗಳು ಧೃತಿಗೆಡುವದಿಲ್ಲ. ನೂರಾರು ಪಂಜುಗಳು ಅವರ ಹಾದಿಯಲ್ಲಿ ಸುಟ್ಟುಬೂದಿಯಾಗುತ್ತವೆ. ಕೊನೆಗೊಮ್ಮೆ ಅವರು ಅತ್ಯಂತ ಎತ್ತರದ ಬೆಟ್ಟದ ಮೇಲೆ ನಿಂತಾಗ ದೂರದಲ್ಲೆಲ್ಲೋ ಮಿಣುಕುಮಿಣುಕಾದ ಬೆಳಕು ಗೋಚರಿಸುತ್ತದೆ. ಹೆಂಡತಿ ಇದ್ದಕ್ಕಿದ್ದಂತೆ ರೋಮಾಂಚನದಿಂದ ಗಂಡನ ಕೈಹಿಡಿದು ಬೆಳಕು ಸುರಿಸುತ್ತಿದ್ದ ಸರೋವರದತ್ತ ಬೆರಳು ತೋರಿಸುತ್ತಾಳೆ. "ಓಹ್, ನಮ್ಮ ಸೂರ್ಯ ನೀರಿನಲ್ಲಿ ಬಿದ್ದಿದ್ದಾನೆ!" ಅಂತ ಗಂಡ ಉದ್ಗರಿಸುತ್ತಾನೆ. ಎರಡು ದಿನಗಳ ಪ್ರಯಾಣದ ಬಳಿಕ ಅವರಿಬ್ಬರೂ ತೈವಾನಿನ ಅತಿದೊಡ್ಡ ಸರೋವರದ ಮುಂದೆ ನಿಂತಿರುತ್ತಾರೆ. ಅಲ್ಲಿನ ದೃಶ್ಯ ನೋಡಿ ಬೆಚ್ಚಿಬೀಳುತ್ತಾರೆ. 

   ಸರೋವರದಲ್ಲಿ ಎರಡು ರಾಕ್ಷಸಾಕಾರದ ಡ್ರ್ಯಾಗನ್ ಗಳು ಎರಡು ಬೆಂಕಿನುಂಡೆಗಳೊಂದಿಗೆ ಆಟ ಆಡುತ್ತಿವೆ! ಅಯ್ಯಯ್ಯಪ, ನಮ್ಮ ಸೂರ್ಯ ಚಂದಿರರಿಗೆ ಏನು ಗತಿ ಬಂತಪ್ಪ, ಈ ಡ್ರ್ಯಾಗನ್ ಗಳು ಇವರಿಬ್ಬರನ್ನೂ ತಮ್ಮ ಆಟದ ಸಾಮಾನುಗಳನ್ನಾಗಿ ಮಾರ್ಪಡಿಸಿಕೊಂಡಿದ್ದಾರಲ್ಲ ಅಂತ ಗಂಡಹೆಂಡತಿಯರಿಬ್ಬರೂ ನಡುಗತೊಡಗುತ್ತಾರೆ. ಆದರೆ ಊರಿನಲ್ಲಿದ್ದ ಶಾವೋ ಜನತೆಯ ಹಸಿವು ದಂಪತಿಗಳಿಬ್ಬರನ್ನೂ ಕಂಗೆಡಿಸುತ್ತದೆ. ಹೇಗಾದರೂ ಮಾಡಿ ಸೂರ್ಯಚಂದ್ರರನ್ನು ಈ ಡ್ರ್ಯಾಗನ್ ಗಳಿಂದ ಬಿಡಿಸಿಕೊಂಡು ಹೋಗಲೇಬೇಕು ಅಂತ ಅಲ್ಲೇ ಹತ್ತಿರದಲ್ಲಿದ್ದ ಬಂಡೆಯ ಮೇಲೆ ಕುಳಿತು ಯೋಚಿಸತೊಡಗುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಅವರು ಕುಳಿದ ಬಂಡೆಗಲ್ಲಿನ ಕೆಳಗಿನಿಂದ ಹೊಗೆ ಏಳತೊಡಗುತ್ತದೆ. ಅಚ್ಚರಿಗೊಂಡ ಗಂಡ ತನ್ನ ಶಕ್ತಿಯೆಲ್ಲ ಒಟ್ಟುಗೂಡಿಸಿ ಬಂಡೆಯನ್ನು ಬದಿಗೆ ಸರಿಸುತ್ತಾನೆ. ಅಷ್ಟೇ, ಅಲ್ಲೊಂದು ಸುರಂಗಮಾರ್ಗವಿರುವದನ್ನು ದಂಪತಿಗಳು ಕಂಡುಕೊಳ್ಳುತ್ತಾರೆ. ಒಳಗಡೆ ಏನಿರಬಹುದು ಅಂತ ಸುರಂಗದಲ್ಲಿ ನಡೆಯುತ್ತ ಹೋಗುತ್ತಾರೆ. ಕೊನೆಗೊಮ್ಮೆ  ತುದಿಯನ್ನು ಮುಟ್ಟಿ ಸೋಜಿಗಪಡುತ್ತಾರೆ.   

   ಅಲ್ಲೊಂದು ಅಡುಗೆ ಮನೆ. ಬಿಳಿಕೂದಲಿನ ಅಜ್ಜಿಯೊಬ್ಬಳು ಹೊಗೆ ಎಬ್ಬಿಸಿಕೊಂಡು ಅಡುಗೆ ಮಾಡುತ್ತಿರುತ್ತಾಳೆ. ಅದೆಷ್ಟೋ ವರ್ಷಗಳಿಂದ ಮನುಷ್ಯರ ಮುಖವನ್ನೇ ನೋಡಿರದ ಅಜ್ಜಿಗೆ ಈ ಯುವದಂಪತಿಗಳನ್ನು ನೋಡಿ ಸಿಕ್ಕಾಪಟ್ಟೆ ಅಚ್ಚರಿ. ಜೊತೆಗೆ ಖುಷಿ. ಅಜ್ಜಿ ದಂಪತಿಗಳ ಕತೆ ಕೇಳುತ್ತಾಳೆ. ಸೂರ್ಯ ಚಂದ್ರರ ಕತೆ ಕೇಳುತ್ತಾಳೆ. ಅದೆಷ್ಟೋ ವರ್ಷಗಳ ಹಿಂದೆ ಈ ಡ್ರ್ಯಾಗನ್ ಗಳು ತನ್ನ ಊರಿಗೆ ಕ್ರೂರವಾಗಿ ದಾಳಿಯಿಟ್ಟು ಹೇಗೆ ತನ್ನೂರನ್ನು ಹಾಳು ಮಾಡಿದವು ಮತ್ತು ಕೇವಲ ಡ್ರ್ಯಾಗನ್ ಗಳಿಗೆ ಊಟ ತಯಾರಿಸುವದಕ್ಕಾಗಿ ಹೇಗೆ ತನ್ನನ್ನು ಅಪಹರಿಸಿ ತಂದು ಇಲ್ಲಿ ಇಟ್ಟವು ಅಂತೆಲ್ಲ ಹೇಳಿಕೊಂಡು ಅಳುತ್ತಾಳೆ. ಆದರೆ ದಂಪತಿಗಳ ಧೈರ್ಯ ಮೆಚ್ಚಿ ತನಗೆ ಗೊತ್ತಿರುವ ರಹಸ್ಯವೊಂದನ್ನು ಬಿಚ್ಚಿಡುತ್ತಾಳೆ. ಈ ಸರೋವರದ ಹತ್ತಿರದಲ್ಲಿರುವ ಬೆಟ್ಟದ ಕೆಳಗೆ ಬಂಗಾರದ ಒಂದು ಕತ್ತರಿ ಮತ್ತು ಕೊಡಲಿ ಇರುವದೆಂದೂ, ಅವೆರಡರಿಂದ ಮಾತ್ರ ಈ ಡ್ರ್ಯಾಗನ್ ಗಳನ್ನು ಕೊಲ್ಲಲು ಸಾಧ್ಯವೆಂದೂ ಹೇಳುತ್ತಾಳೆ.

   ಅಲ್ಲಿಗೆ ದಂಪತಿಗಳ ಪಯಣ ಮತ್ತೆ ಮುಂದುವರೆಯುತ್ತದೆ. ಅವರು ಪಂಜು ಹಿಡಿದು ಸರೋವರದ ಹತ್ತಿರದಲ್ಲಿರುವ ಬೆಟ್ಟ ಹುಡುಕತೊಡಗುತ್ತಾರೆ. ಸಿಕ್ಕ ಮೇಲೆ ಬೆಟ್ಟವನ್ನು ಅಗೆಯತೊಡಗುತ್ತಾರೆ. ಅದೆಷ್ಟೋ ದಿನಗಳು ಬಳಿಕ ಅಲ್ಲೊಂದು ಬೃಹದಾಕಾರದ ಕೊಳ್ಳ ನಿರ್ಮಾಣವಾಗಿರುತ್ತದೆ. ಅಲ್ಲೊಂದೆಡೆ ಬಂಗಾರದ ಕತ್ತರಿ ಮತ್ತು ಕೊಡಲಿಗಳು ಮಿಂಚುತ್ತಿರುತ್ತವೆ. ಗಂಡ ಅವುಗಳನ್ನು ಡ್ರ್ಯಾಗನ್ ಗಳಿದ್ದ ಸರೋವರಕ್ಕೆ ತಂದು ಜೋರಾಗಿ ಎಸೆಯುತ್ತಾನೆ. ಕೊಡಲಿ ಒಂದು  ಡ್ರ್ಯಾಗನ್ನಿನ ತಲೆ ಕತ್ತರಿಸಿದರೆ, ಕತ್ತರಿ ಇನ್ನೊಂದು ಡ್ರ್ಯಾಗನ್ನಿನ ದೇಹವನ್ನು ತುಂಡುತುಂಡು ಮಾಡುತ್ತದೆ. ಅಲ್ಲಿಗೆ ಸೂರ್ಯ ಚಂದ್ರರು ಬಂಧಮುಕ್ತರಾಗುತ್ತಾರೆ. ಆದರೆ ಈ ಸೂರ್ಯಚಂದ್ರರನ್ನು ಅವರವರ ಜಾಗದಲ್ಲಿ ಹೇಗೆ ಕೂರಿಸುವದು?   

   ಬಿಳಿ ಕೂದಲಿನ ಅಜ್ಜಿ ಇಲ್ಲಿ ಮತ್ತೊಂದು ರಹಸ್ಯ ಬಿಚ್ಚಿಡುತ್ತಾಳೆ. ಸತ್ತುಹೋದ ಡ್ರ್ಯಾಗನ್ ಗಳ ಕಣ್ಣುಗಳನ್ನು ತಿಂದರೆ ನೀವಿಬ್ಬರೂ ಶಕ್ತಿಶಾಲಿಗಳಾಗಿ ಆಕಾಶದಷ್ಟು ಎತ್ತರಕ್ಕೆ ಬೆಳೆಯುವಿರಿ ಅಂತ ದಂಪತಿಗಳಿಗೆ ಸೂಚನೆ ಕೊಡುತ್ತಾಳೆ. ಸರೋವರಕ್ಕಿಳಿಯುವ ದಂಪತಿಗಳು ಡ್ರ್ಯಾಗನ್ ಕಣ್ಣುಗಳನ್ನು ಹುಡುಕಿ ತಿನ್ನತೊಡಗುತ್ತಾರೆ. ತಿಂದ ಮರುಕ್ಷಣವೇ ಮರಗಳಂತೆ ಉದ್ದುದ್ದಕ್ಕೆ ಬೆಳೆಯತೊಡಗುತ್ತಾರೆ. ಒಂದು ಹಂತಕ್ಕೆ ಬೆಳೆದು ನಿಂತ ಮೇಲೆ ದಂಪತಿಗಳಿಬ್ಬರೂ ಸೂರ್ಯಚಂದ್ರರನ್ನು ಆಕಾಶಕ್ಕೆ ಎಸೆಯುತ್ತಾರೆ. ಆದರೆ ನಿರೀಕ್ಷಿತ ಗುರಿ ತಲುಪದೇ ಬೆಂಕಿಯುಂಡೆಗಳು ಪದೇಪದೇ ನೆಲಕ್ಕುರುಳುತ್ತವೆ. ಪಕ್ಕದ ಬೃಹದಾಕಾರದ ಮರವನ್ನು ಕಿತ್ತು ಅದರ ಮೇಲೆ ಉಂಡೆ ಇಟ್ಟು ನಿರೀಕ್ಷಿತ ಎತ್ತರಕ್ಕೆ ಜಿಗಿಸುವಂತೆ ಅಜ್ಜಿ ಆ ದಂಪತಿಗಳಿಗೆ ಸೂಚಿಸುತ್ತಾಳೆ. ಹಲವಾರು ಪ್ರಯತ್ನಗಳ ಬಳಿಕ ಸೂರ್ಯಚಂದ್ರರು ತಮ್ಮತಮ್ಮ ಸ್ಥಳಗಳನ್ನು ಸೇರಿಕೊಂಡು ಬೆಳಕು ಸೂಸತೊಡಗುತ್ತಾರೆ. ಆದರೆ ಇದೆಲ್ಲದರ ನಡುವೆ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ಶಾವೋ ದಂಪತಿಗಳು ಮತ್ತೇ ತಮ್ಮ ಮೊದಲಿನ ರೂಪಕ್ಕೆ ಬರಲಾಗದೇ ಸರೋವರದುದ್ದಕ್ಕೂ ಪರ್ವತದಂತೆ ಹಬ್ಬತೊಡಗುತ್ತಾರೆ. ಕೊನೆಗೊಮ್ಮೆ ಜೋಡಿ ಪರ್ವತವಾಗಿ ಅಲ್ಲೇ ನೆಲೆನಿಲ್ಲುತ್ತಾರೆ. ಅಲ್ಲಿಗೆ ಜಗತ್ತು ಮತ್ತೊಮ್ಮೆ ಕ್ರಿಯಾಶೀಲವಾಗತೊಡಗುತ್ತದೆ ಎಂಬಲ್ಲಿಗೆ..    .               
                                                                             *
   ಇದು ತೈವಾನಿನ ಜಾನಪದ ಕತೆ. ಅಪಾರ ಕಲ್ಪನಾಚಾತುರ್ಯ ಮತ್ತು ಜೀವನ್ಮುಖಿ ಭಾವದ ಕತೆ. ಕನ್ನಡದಲ್ಲಿ ಮೂಡಿಸುವಾಗ ಇದನ್ನು ಇನ್ನಷ್ಟು ರೋಮಾಂಚಕಾರಿಯಾಗಿಸುವ, ಮುದಗೊಳಿಸುವ ಎಲ್ಲ ಸಾಧ್ಯತೆಗಳಿದ್ದವು. ಆದರೆ ಬೇರೆ ಭಾಷೆಯ ಬೇರೆ ಪ್ರಾಂತ್ಯದ ಹಾಯ್ಕುಗಳನ್ನು ಅನುವಾದ ಮಾಡುವಾಗ ನಮ್ಮದೇ ದೇಸೀ ಸೊಗಡಿನ ಪರಿಕರಗಳನ್ನು ಬಳಸುವ, ಆ ಮೂಲಕ ಓದುಗರಿಗೆ ಪರಿಚಿತ ವಾತಾವರಣ ಕಲ್ಪಿಸಿಕೊಡುವಲ್ಲಿ ಒಲವು ತೋರುವ ನಾನು ಈ ಕತೆಯನ್ನು ಆದಷ್ಟೂ ಮೂಲವಾತಾವರಣದಲ್ಲೇ ಕಟ್ಟಲು ಪ್ರಯತ್ನಿಸಿದ್ದೇನೆ. ಯಾಕೆಂದರೆ ಈ ಕತೆಗೆ ಅಲ್ಲಿನ ಪಾರಂಪರಿಕ ಮತ್ತು ಸಾಂಸ್ಕೃತಿಕ  ಹಿನ್ನೆಲೆಯಿದೆ. ಡ್ರ್ಯಾಗನ್ ಗಳಿದ್ದ ಆ ಪುರಾತನ ಸರೋವರ ಇವತ್ತಿಗೂ ತೈವಾನಿನ ಅತಿದೊಡ್ಡ ಸರೋವರ. ಸೂರ್ಯ ಚಂದ್ರರನ್ನು ಬಂಧಮುಕ್ತರನ್ನಾಗಿಸಲು ಬಂದ ಆ ಯುವದಂಪತಿಗಳನ್ನು ಅಲ್ಲಿನ ಸಮುದಾಯ ಇನ್ನೂ ತಮ್ಮ ಹಬ್ಬಗಳಲ್ಲಿ ನೆನಪಿಸಿಕೊಳ್ಳತ್ತದೆ. ಪ್ರತಿವರ್ಷ 'ಸನ್ ಮೂನ್ ಲೇಕ್'ನ ದಡದಲ್ಲಿ ಸಾವಿರಾರು ಜನ ಸೇರಿ ಬಣ್ಣಬಣ್ಣದ ಚೆಂಡುಗಳನ್ನು ಗಾಳಿಯಲ್ಲಿ ಚಿಮ್ಮಿಸುತ್ತ, ಉದ್ದಾನುದ್ದ ಬಿದಿರುಗಳ ಮೇಲೆ ಚೆಂಡನ್ನು ನಿಯಂತ್ರಿಸುವ ಆಟವಾಡುತ್ತಾರೆ. ಆ ಮೂಲಕ ಆ ದಂಪತಿಗಳ ಜೀವನಪ್ರೀತಿ, ಧೈರ್ಯ ಮತ್ತು ಅದಮ್ಯ ಉತ್ಸಾಹಗಳನ್ನು ಸಾಂಕೇತಿಕವಾಗಿ ಬಿಂಬಿಸುತ್ತಾರೆ.                                         
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 06.06.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


2 comments:

sunaath said...

ರಾಜೋ, ತುಂಬ ರಂಜಕವಾದ ಹಾಗು ಬೋಧಕವಾದ ಕಥೆ. ಇಂತಹ ಜಾನಪದ ಕಥೆಗಳು ನಮ್ಮ ಮನದ ಮೇಲೆ ಮೋಡಿ ಮಾಡುತ್ತವೆ; ನಮ್ಮನ್ನು ನಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತವೆ.(ಬಾಲ್ಯದಲ್ಲಿಯೇ ನಿಲ್ಲಿಸುವುದಿಲ್ಲ. ಈಗಲೂ ಸಹ ಸತ್ಪರಿಣಾಮಕಾರಿಯಾಗಿಯೇ ಇವೆ.) ಕಥೆಯನ್ನು ಸುಂದರವಾಗಿ ನಿರೂಪಿಸಿದ್ದೀರಿ.ಅಭಿನಂದನೆಗಳು ಹಾಗು ಧನ್ಯವಾದಗಳು.)

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಮಾತು ನಿಜ. ಇವು ರಂಜನೀಯವೂ ಹೌದು, ಬೋಧಕವೂ ಹೌದು.
ಯಾಕೆಂದರೆ ನಾನು ಗಮನಿಸಿದಂತೆ ನವಸಾಹಿತ್ಯದಲ್ಲಿ ಬರುವಂಥ ಒಲ್ಲದ ತಿರುವುಗಳು ಮತ್ತು ಅತಿರಂಜಕವಾದವಾಗಿರುವಂಥ ಋಣಾತ್ಮಕ ಮುಕ್ತಾಯಗಳನ್ನು ಈ ಜಾನಪದೀಯ ಕತೆಗಳಲ್ಲಿ ಕಾಣಸಿಗುವದಿಲ್ಲ. ಅಷ್ಟರಮಟ್ಟಿಗೆ ಇವು ಧನಾತ್ಮಕವಾಗಿರುವಂಥವುಗಳು.
ಧನ್ಯವಾದಗಳು