Wednesday, June 20, 2018

ಕವಿತಾಲೋಕದಲ್ಲಿ ಬದಲಾಗುವ ರೂಪ, ಬದಲಾಗದ ರೂಹು!


ಸಾಕುಪ್ರಾಣಿಗಳ ದುಕಾನು.
ಖರೀದಿಗೆಂದು ಬಂದಿರುವ ಗ್ರಾಹಕನಿಗೆ
ಮೂರು ಕಾಲಿನ ನಾಯಿಯೊಂದು
ಎಂದಿನ ಕಸರತ್ತು ತೋರಿಸಲು 
ಎದ್ದು ನಿಲ್ಲುತ್ತಲಿದೆ..

ಕವಿತೆಯ ಮುಂದೆ ಹಾಗೆ ಎರಡು ಟಿಕ್ಕಿಗಳನ್ನು ಇಡುತ್ತ ಭಟ್ಟರು ಕವಿತೆ ನಿಲ್ಲಿಸಿದರು. ಎದುರಿಗೆ ಕುಳಿತಿದ್ದ ತ್ರಿಪಾಠಿಯನ್ನು ನೋಡಿ ಮುಗುಳ್ನಕ್ಕರು. ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ ಎರಡು ದಶಕಗಳೇ ಕಳೆದಿವೆ. ಆದರೂ ಭಟ್ಟರ ಉತ್ಸಾಹಕ್ಕೆ ಭಂಗ ಬಂದಂತಿಲ್ಲ. ವರ್ಷಕ್ಕೊಂದು ಫಾರಿನ್ ಟ್ರಿಪ್ ಹೊಡೆಯುತ್ತಾರೆ. ತಿಂಗಳಿಗೆರಡು ಅಂತ ಅವರಿವರ ಪುಸ್ತಕ ಬಿಡುಗಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎಳೆಯರೊಂದಿಗೆ ಎಳೆಯರಾಗಿಯೂ ವೃದ್ಧರೊಂದಿಗೆ ವೃದ್ಧರಾಗಿಯೂ ಗುರುತಿಸಿಕೊಳ್ಳುವ ಮಲ್ಹಾರಭಟ್ಟರ ಈ ಕಲೆಯನ್ನು ಬದುಕುವ ಕಲೆ ಅಂತ ಅವರನ್ನು ಮೆಚ್ಚುವವರು ಬಣ್ಣಿಸುತ್ತಾರೆ. ಅವರಿಗಾಗದವರು ಮಾತ್ರ ಒಂಚೂರೂ ಗಾಂಭೀರ್ಯವಿಲ್ಲ ಅಂತ ಭಟ್ಟರನ್ನು ಮನಸೋ ಇಚ್ಛೆಯಿಂದ ಬೈದಾಡಿಕೊಳ್ಳುತ್ತಾರೆ. 

   ನಾರಾಯಣ ತ್ರಿಪಾಠಿ. ಬಯೋಕೆಮಿಸ್ಟ್ ಹುಡುಗ. ವಯೋಸಹಜ ರೆಬೆಲ್ ಮನಸ್ಸು. ಅಂಥ ತ್ರಿಪಾಠಿಗೂ ಭಟ್ಟರಿಗೂ ಸಂಪರ್ಕ ಕುದುರಿಸಿದ್ದು ಯಕಶ್ಚಿತ್ ಕವಿತೆ. ಯಾರದೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಡ್ಡೆ ಹುಡುಗರ ಗುಂಪಿನಲ್ಲಿದ್ದ ಭಟ್ಟರ ಮಾತುಗಳನ್ನು ಗಮನಿಸಿ ಅವರ ಸಂಪರ್ಕಕ್ಕೆ ಬಂದಿದ್ದ. ಯಾವುದೋ ಕವಿಯತ್ರಿಯ ಸೌಂದರ್ಯದ ಬಗ್ಗೆ ಗುಂಪಿನಲ್ಲಿದ್ದ ಯುವಕವಿಯೊಬ್ಬ ಸಾಂಗೋಪಾಂಗವಾಗಿ ವರ್ಣಿಸುತ್ತಿದ್ದಾಗ ಭಟ್ಟರು ಎಲ್ಲೋ ನಿಂತಿದ್ದ ಸದರಿ ಕವಿಯತ್ರಿಯನ್ನು ಅಚಾನಕ್ಕಾಗಿ ಕೂಗಿ ಗುಂಪಿಗೆ ಕರೆಸಿಕೊಂಡು 'ಈಗ ಬೇಕಾದರೆ ಹೊಗಳಯ್ಯ, ಚೆಲುವೆಯೂ ಕೊಂಚ ಖುಷಿಪಡಲಿ!' ಅಂತ ಬಾಂಬ್ ಹಾಕಿದ್ದರು. ಹಾಗೆ ಛೇಡಿಸುತ್ತಲೇ ಇಡೀ ಗುಂಪಿಗೆ ನೇರವಂತಿಕೆಯನ್ನೂ ನಮ್ರನಿವೇದನೆಯನ್ನೂ ಏಕಕಾಲಕ್ಕೆ ಕಲಿಸಿದ್ದರು.  

   ಫಿದಾ ಆಗಿಬಿಟ್ಟಿದ್ದ ತ್ರಿಪಾಠಿ. ಭಟ್ಟರನ್ನು ಭೇಟಿಯಾಗುವ ಯಾವ ಸಂದರ್ಭಗಳನ್ನೂ ತಪ್ಪಿಸಿಕೊಳ್ಳಲಾಗದಷ್ಟು ಅವರನ್ನು ಹಚ್ಚಿಕೊಂಡಿದ್ದ. ಹಾಗೆ ಸುಮಾರು ಭೇಟಿಗಳ ನಂತರ ಇವತ್ತು ಸೀದಾ ಭಟ್ಟರ ಮನೆಗೇ ಬಂದಿದ್ದ. ಕವಿತೆಯನ್ನು ಯಾವಾಗ ನಿಲ್ಲಿಸಬೇಕು? ಕವಿತೆ ಹೇಗೆ ನಿಂತರೆ ಚೆಂದ? ಇವೇ ಮುಂತಾದ ಪ್ರಶ್ನೆಗಳನ್ನು ಹೊತ್ತುಕೊಂಡು ಬಂದಿದ್ದ. ತ್ರಿಪಾಠಿಯನ್ನು ಹಾಗೆ ಎದುರಿಗೆ ಕೂರಿಸಿಕೊಂಡ ಮಲ್ಹಾರಭಟ್ಟರು ಚಿಕ್ಕದೊಂದು ಹಾಯ್ಕು ಬರೆಯುತ್ತ ಬರೆಯುತ್ತ ಏಕಾಏಕಿ ನಿಲ್ಲಿಸಿದವರೇ ಎರಡು ಟಿಕ್ಕಿ ಇಟ್ಟು ಮುಗುಳ್ನಕ್ಕಿದ್ದರು. 

   "ನೋಡಯ್ಯ, ಕವಿತೆ ಯಾವಾಗಲೂ ನ್ಯಾಷನಲ್ ಹೈವೇ ಥರ. ಅಲ್ಲಿ ದಾರಿ ತೋರಲೆಂದು ಸೂಚನಾ ಫಲಕಗಳೂ ಇರಬೇಕು. ಪಯಣದ ಗುರಿ ಇನ್ನೂ ಎಷ್ಟು ದೂರವಿದೆ ಅಂತ ತೋರಿಸಬಲ್ಲ ಮೈಲುಗಲ್ಲುಗಳೂ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ನಿನ್ನ ಗಾಡಿಯಲ್ಲಿ ಇನ್ನೂ ಪೆಟ್ರೋಲಿದ್ದರೂ 'ಪಯಣ ಇಲ್ಲಿಗೇ ಮುಗಿಯಿತು' ಅಂತ ನಿನ್ನ ಕವಿತೆಯೇ ನಿನಗೆ ನಿರ್ಬಂಧ ಹೇರಿಬಿಡಬೇಕು. ಆದರೆ ಈ ಕಲೆಯೇ ಅಪಾಯದ್ದು. ಸೂಕ್ಷ್ಮದ್ದು. ಈ ನಿರ್ಬಂಧ ಅವಧಿಗೂ ಮುನ್ನವೇ ಬರಕೂಡದು. ಯಾಕೆಂದರೆ ಒಮ್ಮೊಮ್ಮೆ ಹೀಗೂ ಆಗುತ್ತಿರುತ್ತದೆ: ನಿನ್ನ ಗಾಡಿ ಹೈವೇನಲ್ಲಿ ಹೋಗುತ್ತಿರುವಾಗಲೇ ದಾರಿ ತಪ್ಪಿಸಿಕೊಳ್ಳುವ ಸಂಭವವಿರುತ್ತದೆ. ಯಾವುದೋ ಕಾಡಿನಲ್ಲಿ ಕಾಲುಜಾರುವ ಅಪಾಯವಿರುತ್ತದೆ. ಹಾಗೆ ಜಾರುತ್ತಜಾರುತ್ತ ಕೈಗೆ ಸಿಕ್ಕ ಮುಳ್ಳುಕಂಟಿಯನ್ನು ಆಸರೆಯಾಗಿ ಹಿಡಿಯುವಾಗಲೇ ಧುತ್ತೆಂದು ಜಲಪಾತ ಎದುರಾಗಿರುತ್ತದೆ. ಅದೃಷ್ಟವಿದ್ದರೆ ಯಾರೂ ಮುಟ್ಟದ ಬಂಡೆಗಲ್ಲನ್ನು ನೀನು ನೋಡಿರುತ್ತೀಯ. ಅದೃಷ್ಟ ಇನ್ನೂ ಜಾಸ್ತಿಯಿದ್ದಲ್ಲಿ ಬಂಡೆಯ ಮೇಲೆ ಚದುರಿರುವ ಚದುರೆಯ ವಸ್ತ್ರಗಳನ್ನೂ ನೋಡಿರುತ್ತೀಯ!"
  
   ಭಟ್ಟರು ನಗುತ್ತಲೇ ಇದ್ದರು. ತ್ರಿಪಾಠಿ ಹೈರಾಣಾದಂತಿದ್ದ. ಕವಿತೆಯಿಂದ ಶುರುವಾದ ಮಾತುಗಳು ಎಲ್ಲಿಂದೆಲ್ಲಿಗೋ ಹೋಗುತ್ತಿದ್ದವು. ಭಟ್ಟರು ಇರಾನಿ ಕವಿ ಅಬ್ಬಾಸ್ ಕಿರೊಸ್ತಾಮಿಯನ್ನು ಎಳೆದುತಂದರು. ಆತನ ಪುಟ್ಟ ಕವಿತೆಯಲ್ಲಿ ಎಲೆಯೊಂದು ಮರದಿಂದ ಕಳಚಿಕೊಂಡು ನೆಲದ ಮೇಲಿದ್ದ ತನ್ನದೇ ನೆರಳಿನ ಮೇಲೆ ಸ್ಥಾಪಿತವಾಗುವದನ್ನು ಚಿತ್ರಿಸಿದರು. ಜೀವಂತವಿರುವ ಯಾವ ಎಲೆಯೂ ಹೀಗೆ ನೆಲದ ಮೇಲಿನ ತನ್ನದೇ  ನೆರಳನ್ನು ಅಪ್ಪಿಕೊಳ್ಳುವ ಧೈರ್ಯ ತೋರುವದಿಲ್ಲ. ದೇಹ ಯಾವಾಗ ತನ್ನ ಆತ್ಮದೊಂದಿಗೆ ನಿಜದ ರೀತಿಯಲ್ಲಿ ಒಂದಾಗುತ್ತದೆಯೋ ಅದೇ ಮೋಕ್ಷದ ಸಮಯ ಅಂತೆಲ್ಲ ಕಿರೊಸ್ತಾಮಿಯನ್ನು ವಿವರಿಸಿದರು. ತ್ರಿಪಾಠಿಗೆ ಎಲ್ಲ ಅಯೋಮಯ. ಭಟ್ಟರು ಕವಿತಾ ಜಗತ್ತಿನ ಹೊಸ ಲೆಕ್ಕಾಚಾರ ಬಿಡಿಸತೊಡಗಿದ್ದರು. ಈ ಜಗತ್ತಿನ ಲೆಕ್ಕಾಚಾರ ಎಷ್ಟು ಕರಾರುವಾಕ್ಕಾಗಿದೆ ಅಂದರೆ ಇಲ್ಲಿ ಪ್ರತಿದಿನ ಯಾರೋ ಅದೆಲ್ಲವನ್ನೂ ಟ್ಯಾಲಿ ಮಾಡುತ್ತಲೇ ಇರುತ್ತಾರೆಂದೂ, ಹೀಗಾಗಿ ಯಾವುದೂ ಈ ಜಗತ್ತಿನ ಪೊರೆಯಿಂದ ಹೊರಹೋಗಲು ಸಾಧ್ಯವಿಲ್ಲವೆಂದೂ, ಹೆಚ್ಚೆಂದರೆ ಇವತ್ತಿನ ಮನುಷ್ಯ ಸತ್ತ ಮೇಲೆ ನಾಳೆ ಹುಣಸೇಮರವೋ ಅಥವಾ ಗೌಳಿಗನ ಎಮ್ಮೆಯೋ ಆಗಿ, ಆ ಮೂಲಕ ಕೇವಲ ರೂಪ ಮಾತ್ರ ಬದಲಾಗಿ ರೂಹು ಬದಲಾಗದೇ ಅಲ್ಲಲ್ಲೇ ಸ್ಥಾನಪಲ್ಲಟವಾಗಿ.. 

   ಯಾಕೋ ಭಟ್ಟರು ಭಯಾನಕವಾಗಿ ಕೆಮ್ಮತೊಡಗಿದರು. ಗಾಬರಿಗೊಂಡ ತ್ರಿಪಾಠಿ ಭಟ್ಟರ ಕೈಹಿಡಿದು ನೀರು ಕುಡಿಸಿ ಮನೆ ಸೇರಿಕೊಂಡಿದ್ದ. ಆವತ್ತಿಡೀ ರಾತ್ರಿ ಭಟ್ಟರ ಕವಿತಾಶಕ್ತಿಯ ಬಗ್ಗೆ ಗೌರವಭಾವ ಮೂಡಿಸಿಕೊಂಡ. ಹಾಗೆಯೇ ಅವರ ವೈಜ್ಞಾನಿಕ ಅರಿವಿನ ಬಗ್ಗೆ ಕರುಣೆಯನ್ನೂ! ಸ್ವತಃ ಬಯೋಕೆಮಿಸ್ಟ್ ಆಗಿದ್ದ ನಾರಾಯಣ ತ್ರಿಪಾಠಿಗೆ ಮನುಷ್ಯರೂ ಸೇರಿದಂತೆ ಕ್ರಿಮಿಕೀಟಗಳಲ್ಲಿನ ಜೀವತಂತುಗಳ ಬಗ್ಗೆ ಸಾಕಷ್ಟು ಅರಿವಿದ್ದೇ ಇದೆ. ಮರ ಹೇಗೆ ಹುಟ್ಟುತ್ತದೆ, ಮನುಷ್ಯ ಯಾವಾಗ ಸಾಯುತ್ತಾನೆ ಅಂತನ್ನುವ ಜೈವಿಕ ವಿಜ್ಞಾನದ ಬಗ್ಗೆ ತನಗಿರುವ ಅಥೆಂಟಿಸಿಟಿ ಭಟ್ಟರಿಗಿಲ್ಲ. ಆದರೆ ಹಿರಿಯ ಜೀವಕ್ಕೆ ಹೇಗೆ ತಿಳಿಹೇಳುವದು? ಬಹುಶಃ ಭಟ್ಟರಿಗೆ ವಯಸ್ಸು ಹಾಗೆಲ್ಲ ಯೋಚಿಸಲು ಪ್ರೇರೇಪಿಸುತ್ತದಾ? ತಲೆ ಕೊಡವಿದ ತ್ರಿಪಾಠಿ ಗ್ಲಾಸಿಗೆ ಬೀಯರ್ ಸುರುವಿ ಟೀವಿ ಹಚ್ಚಿ ಕುಳಿತ. ಇಡೀ ಜಗತ್ತಿಗೆ ಕುತೂಹಲ ಮೂಡಿಸಿದ್ದ ಡಾಕ್ಯೂಮೆಂಟರಿ ಆವತ್ತೇ ಟೀವಿಯಲ್ಲಿ ಬಿತ್ತರವಾಗುತ್ತಿತ್ತು. ಮಳೆ ಹೇಗೆ ಉಂಟಾಗುತ್ತದೆ? ಎಂಬುದೇ ಡಾಕ್ಯೂಮೆಂಟರಿ ವಿಷಯ. ಬೆಟ್ಟದ ಮರಗಳು ಮೋಡಗಳನ್ನು ತಡೆದು ಮಳೆ ಬರಿಸುತ್ತವೆ ಅಂತೆಲ್ಲ ಪ್ರೈಮರಿಯಲ್ಲಿ ಹೇಳಿದ್ದ ಮೇಸ್ಟ್ರು ತ್ರಿಪಾಠಿಗೆ ನೆನಪಾದರು. ಮಳೆಗಾಗಿ ಹೋಮ, ಹವನ, ಪರ್ಜನ್ಯ ಯಜ್ಞಗಳನ್ನು ಮಾಡುತ್ತಿದ್ದರೆಂದು ಹೇಳುತ್ತಿದ್ದ ನೀತಿಕತೆ ಮೇಸ್ಟ್ರು ನೆನಪಾದರು.

   ಅಷ್ಟರಲ್ಲಿ ಚಾನಲ್ ನ ನಿರೂಪಕ ಪರದೆಯಲ್ಲಿ ಮಳೆಯನ್ನು ನಿರೂಪಿಸತೊಡಗಿದ್ದ. ಆತನ ಪ್ರಕಾರ, ಭೂಮಿಯ ಮೇಲೆ ನೀರು ಕೋಟ್ಯಂತರ ವರ್ಷಗಳಿಂದ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸೈಕಲ್ ಹೊಡೆಯುತ್ತಲೇ ಇದೆ. ಆವತ್ತಿನಿಂದ ಇವತ್ತಿನವರೆಗೂ ಇಲ್ಲಿ ಒಂದೇ ಒಂದು ಹನಿ ಹೆಚ್ಚೂ ಆಗಿಲ್ಲ ಕಡಿಮೆಯೂ ಆಗಿಲ್ಲ. ಅಶೋಕನ ದೇಹದಲ್ಲಿದ್ದ ನೀರೇ ಅಕ್ಬರನ ದೇಹದಲ್ಲೂ ಇತ್ತು ಮತ್ತು ಅದು ಈಗ ನಮ್ಮ ದೇಹದಲ್ಲೂ ಇದೆ. ಇಂಥ ನೀರಿನ ಬಗ್ಗೆ, ಮಳೆಯ ಬಗ್ಗೆ ನಮಗೆಷ್ಟು ಗೊತ್ತು? ಭೂಮಿಯ ಮೇಲಿರುವ ನೀರಿನ ಒಂದು ಬಿಂದು ವಾತಾವರಣದಲ್ಲಿನ ಶಾಖದಿಂದ ಆವಿಯಾಗಿ ಆಕಾಶಕ್ಕೇನೋ ಹಾರುತ್ತದೆ. ಅಲ್ಲಿ ಶೂನ್ಯವಾತಾವರಣವಿದೆ. ನಮಗೆಲ್ಲ ಗೊತ್ತಿರುವಂತೆ ಅನಿಲರೂಪದ ಈ ನೀರಿನ ಬಿಂದು ಶೂನ್ಯವಾತಾವರಣಕ್ಕೆ ಸೇರುತ್ತಿದ್ದಂತೆಯೇ ಮಂಜುಗಡ್ಡೆಯ ರೂಪ ಪಡೆಯಬೇಕು. ಆದರೆ ಅಲ್ಲಿ ಹಾಗಾಗುವದಿಲ್ಲ. ಯಾಕೆಂದರೆ ಅಂತರಿಕ್ಷದಲ್ಲಿ ಯಾವುದೇ ಕಲ್ಮಶವಿಲ್ಲ. ಆದರೆ ನಿಸರ್ಗವೇ ಇದಕ್ಕೆ ಪರಿಹಾರ ಹುಡುಕಿಕೊಳ್ಳುತ್ತದೆ. 

   ಸಮುದ್ರದಿಂದ, ಕಾಡಿನ ಕಾಳ್ಗಿಚ್ಚಿನಿಂದ, ಕಾರ್ಖಾನೆಯ ಚಿಮಣಿಗಳಿಂದ, ಮರುಭೂಮಿಯ ಬಿರುಗಾಳಿಗಳಿಂದ ಏಳುವ ಅಸಂಖ್ಯಾತ ಧೂಳಿನ ಕಣಗಳು ಆಕಾಶಕ್ಕೆ ಏರುತ್ತವೆ. ಹಾಗೆ ಏರುತ್ತಲೇ ಅಲ್ಲಿನ ವಾತಾವರಣದಲ್ಲಿ ಮಂಜುಗಡ್ಡೆಯಾಗಲು ತವಕಿಸುತ್ತಿರುವ ಅನಿಲ ಬಿಂದುವಿಗೆ ಆಧಾರವಾಗುತ್ತವೆ. ಆಗ ಅಲ್ಲೊಂದು ನೀರಿನ ಸ್ಪಟಿಕ ತಯಾರಾಗುತ್ತದೆ. ಹೀಗೆ ಧೂಳಿನ ಕಣವನ್ನು ಆಧಾರವಾಗಿಟ್ಟುಕೊಂಡು ಅದರ ಸುತ್ತಲೂ ಮಂಜುಗಡ್ಡೆಯಾಗಿ ಹರಳುಗಟ್ಟುವ ಅನಿಲದ ಬಿಂದು ತನ್ನ ಆಸುಪಾಸಿನಲ್ಲಿರುವ ಮತ್ತೊಂದಿಷ್ಟು ಅನಿಲದ ಬಿಂದುಗಳಿಗೆ ತಾನೇ ಆಧಾರವಾಗುತ್ತದೆ. ಹೀಗೆ ಒಂದಕ್ಕೊಂದು ಸೇರಿಕೊಂಡು ದೊಡ್ಡದಾದ ಮಂಜುಗಡ್ಡೆ ತನ್ನದೇ ಭಾರದಿಂದಾಗಿ ಕೆಳಗೆ ಜಾರತೊಡಗುತ್ತದೆ. ಭೂಮಿಗೆ ಹತ್ತಿರವಾಗುತ್ತಿದ್ದಂತೆಯೇ ವಾತಾವರಣದ ಉಷ್ಣತೆಯಿಂದಾಗಿ ಹರಳು ಕರಗಿ ನೀರಿನ ಹನಿಯಾಗಿ ಮಳೆ ಸುರಿಯುತ್ತದೆ. ಹೀಗೆ ಅನಿಲದ ಬಿಂದುವೊಂದು ಅಂತರಿಕ್ಷದಲ್ಲಿ ಮಂಜುಗಡ್ಡೆಯ ಹರಳಾಗಲು ಧೂಳಿನ ಕಣಗಳಷ್ಟೇ ಆಧಾರಸ್ತಂಭಗಳಾಗುವದಿಲ್ಲ. ಅನೇಕ ಸಲ ಇದೇ ಭೂಮಿಯಿಂದ ಹಾರಿಹೋದ ಕೋಟ್ಯಂತರ ಬ್ಯಾಕ್ಟೀರಿಯದಂಥ ಸೂಕ್ಷ್ಮಜೀವಿಗಳೂ ಮಂಜುಗಡ್ಡೆಯ ಸ್ವರೂಪ ತಾಳಲು ಹೆಗಲು ಕೊಡುತ್ತವೆ. ಹೀಗೆ ಈ ಲೋಕದ ಯಾವುದೇ ಜೀವಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಂಡು ಮತ್ತದೇ ಹಳೆಯ ತತ್ವದೊಂದಿಗೆ ಮಣ್ಣಿಗೆ ಹಿಂತಿರುಗುತ್ತದೆ.. 

   ನಾರಾಯಣ ತ್ರಿಪಾಠಿ ದಿಗ್ಗನೇ ಎದ್ದು ಕುಳಿತಿದ್ದ. ಟೀವಿ ನಿರೂಪಕನ ಕೊನೆಯ ಮಾತುಗಳು ಗುಯ್ ಗುಡತೊಡಗಿದ್ದವು. ಯಾಕೋ ಈಗಿಂದೀಗಲೇ ಭಟ್ಟರಿಗೆ ಫೋನು ಮಾಡೋಣ ಅಂದುಕೊಂಡ. ಆದರೆ ಗಡಿಯಾರ ನೋಡಿಕೊಂಡು ಸುಮ್ಮನೇ ಬಿದ್ದುಕೊಂಡ. ಮರುದಿನವೇ ಭಟ್ಟರ ಮರಣವಾರ್ತೆ ಬಂದಿತ್ತು. ಕನಲಿಹೋಗಿದ್ದ ತ್ರಿಪಾಠಿ. ಒಂದಿಡೀ ದಿನ ಯಾರೊಂದಿಗೂ ಮಾತನಾಡಲಿಲ್ಲ. ಕೆಲಸಕ್ಕೂ ಹೋಗಲಿಲ್ಲ. ಸಂಜೆಹೊತ್ತಿಗೆ ಏನೋ ಯೋಚಿಸಿದವನಂತೆ ಮನೆಯ ಮುಂದೆ ಇದ್ದಕ್ಕಿದ್ದಂತೆ ಗುಂಡಿ ತೋಡತೊಡಗಿದ. ಯಾವುದೋ ಬೀಜ ತಂದು ಮಣ್ಣಲ್ಲಿ ಹುಗಿದಿಟ್ಟ. ಇನ್ನೂ ಮೊಳಕೆಯೊಡೆಯದ ಸಸಿಯ ಮುಂದೆ ನಿಂತು 'ಮಲ್ಹಾರ ಮರ' ಅಂತ ಬರೆದಿಟ್ಟ ಬೋರ್ಡು ದಿಟ್ಟಿಸತೊಡಗಿದ!       .    
                                                                             -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 20.06.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

sunaath said...

ರಾಜೋ, ಒಂದು ಪುಟ್ಟ ಲೇಖನದಲ್ಲಿ ಎಷ್ಟೆಲ್ಲ ಜ್ಞಾನ, ವಿಜ್ಞಾನಗಳನ್ನು ನಿರೂಪಿಸಿದ್ದೀರಲ್ಲ! ತುಂಬ ಇಷ್ಟವಾಯಿತು ಈ ನಿಮ್ಮ ಲೇಖನ. ಮೊದಲಿಗೆ ನಿಮ್ಮ ಪ್ರೀತಿಯ ಹಾಯ್ಕು! ಬಳಿಕ ಮಲ್ಹಾರ ಭಟ್ಟರ ಜೀವನ ದೃಷ್ಟಿ. ತ್ರಿಪಾಠಿಗೆ ಅವರು ಲೋಕ-ಪರಲೋಕದ ಬಗೆಗೆ(ಅಥವಾ ರೂಪ ಹಾಗು ರೂಹುಗಳ ಬಗೆಗೆ) ನೀಡಿದ ದರ್ಶನ, ಇವೆಲ್ಲ ಮನವನ್ನು ತುಂಬುವಂತಿವೆ. ತನ್ನಂತರ ತ್ರಿಪಾಠಿಗೆ ಸಿಗುವ ವೈಜ್ಞಾನಿಕ ವಿವರಣೆ ಹಾಗು ಆತನ ಕೊನೆಯ ಕ್ರಿಯೆ ಅದ್ಭುತವಾಗಿವೆ. ರಾಜೋ, ಈ ಲೇಖನ ನಿಮ್ಮ ಅತ್ಯುತ್ತಮ ಲೇಖನಗಳಲ್ಲಿ ಒಂದು. ಅಭಿನಂದನೆಗಳು.

ದೀಪಾ ಜೋಶಿ said...

ಸುಂದರವಾದ ಹಾಯ್ಕುವಿನಿಂದ ಆರಂಭಗೊಂಡ ಲೇಖನದಲ್ಲಿ ಎರಡು ಪೀಳಿಗೆಗಳ ಸಂವಾದ ಹರಿದ ಪರಿ ಅದ್ಭುತ. ಮಲ್ಹಾರಭಟ್ಟರಂತಹ ವೇದಾಂತಿಯ ಮಾತುಗಳಲ್ಲಿ ತತ್ತ್ವಜ್ಞಾನವನ್ಹು ತುಂಬಿ ಬಿಸಿರಕ್ತದ ಹುಡುಗನ ಅಂತಃಸತ್ವವನ್ನು ತಟ್ಟುವಂತೆ ಹೇಳಿಸುವ ಪರಿ ಸೋಜಿಗ. ಯಾವುದೇ ಜೀವಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಂಡು ಮತ್ತದೇ ಹಳೆಯ ತತ್ವದೊಂದಿಗೆ ಮಣ್ಣಿಗೆ ಹಿಂತಿರುಗುತ್ತದೆ...ಮನಸ್ಸಿಗೆ ತುಂಬಾ ನಾಟಿದ ಸಾಲು ಅತ್ಯುತ್ತಮ ಲೇಖನಕ್ಕಾಗಿ ಅಭಿನಂದನೆಗಳು

ರಾಘವೇಂದ್ರ ಜೋಶಿ said...

ಸುನಾಥ ಸರ್,
ಎಷ್ಟು ಪ್ರೀತಿಯಿಂದ ಕಮೆಂಟಿಸಿದ್ದೀರಿ!
ನಿಮಗೆ ಈ ಲೇಖನ ಹಿಡಿಸಿದ್ದು ನೋಡಿ ಸಂತಸವಾಯಿತು.
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ದೀಪಾ ಮ್ಯಾಡಂ,
ನಿಮ್ಮ ಅಭಿಪ್ರಾಯಕ್ಕೂ ಧನ್ಯವಾದಗಳು.