Wednesday, September 26, 2018

ನಿಂತ ನೀರಲ್ಲಿ ನಿಂತಿಹನು ಪೂರ್ಣಚಂದಿರ!


ಳಚಿಬಿದ್ದ ಹೂವೊಂದು 
ರೆಂಬೆಗೆ ಹಿಂತಿರುಗುತ್ತಿದೆಯೇ?
ಆಹ್, ಚಿಟ್ಟೆ!

ಹಾಗಂತ ಮರುಳನಾಗಿ ಉದ್ಗರಿಸಿದವನು ಅರಕಿಡಾ ಮೊರಿತಾಕೆ. ನಾನು ಗಮನಿಸಿದಂತೆ ಸುಮಾರು ಕಡೆ ಈ ರಚನೆಯನ್ನು ಹಾಯ್ಕು ಮಾಸ್ಟರ್ ಗಳಾದ ಬಾಶೋ ಅಥವಾ ಶಿಕಿಯದೆಂದು ಬಿಂಬಿಸಲಾಗಿದೆ. ಆದರೆ ಮೂಲತಃ ಇದನ್ನು ಬರೆದವನು ಅರಕಿಡಾ ಮೊರಿತಾಕೆ. (Arakida Moritake 1473-1549) ಈತ ಬಾಶೋಗಿಂತ ಇನ್ನೂರು ವರ್ಷ ಮೊದಲೇ ಹುಟ್ಟಿದವನು. ಜಪಾನಿ ಕವಿ. ಅಲ್ಲಿನ ಕಾವ್ಯ ಪ್ರಾಕಾರವಾದ ಹೈಕಾಯ್ ಪದ್ಧತಿಯನ್ನು ಆಯ್ದುಕೊಂಡು ಅದರಲ್ಲೇ ಕಾವ್ಯ ಕೃಷಿ ಮಾಡಿದವನು. ಕೊನೆಗೊಮ್ಮೆ ಜೆನ್ ತತ್ವಕ್ಕೆ ಮನಸೋತು ಜಪಾನಿನ ದೇವಾಲಯವೊಂದಕ್ಕೆ ಮುಖ್ಯಸ್ಥನಾದವನು.

   ಇಷ್ಟಕ್ಕೂ ಜಪಾನಿನ ಸಾಹಿತ್ಯದ ಮೇಲೆ ಜೆನ್ ಪ್ರಭಾವ ಸಾಕಷ್ಟಿದೆಯಷ್ಟೇ. ಅದು ಅಲ್ಲಿನ ಪ್ರಾಕಾರಗಳಾದ ಹಾಯ್ಕು ಇರಬಹುದು, ಹೊಕ್ಕು ಇರಬಹುದು ಅಥವಾ ಹೈಕಾಯ್, ಹೈಬು, ಟಂಕಾ, ರೆಂಗಾ, ವಾಕಾ, ಸೆನ್ರ್ಯೂ ಇರಬಹುದು. ಎಲ್ಲದರಲ್ಲೂ ಜೆನ್ ಅಷ್ಟಿಷ್ಟು ಜಿನುಗುತ್ತಿರುತ್ತದೆ. ಅಂತೆಯೇ ಎಲ್ಲ ಗಂಭೀರತೆ ಮತ್ತು ಕಡುಕಷ್ಟಗಳ ನಡುವೆಯೂ ಒಂದು ನಿರಾಳತೆಯ ತುಂಟತನ ಚಿಮ್ಮುತ್ತಿರುತ್ತದೆ. 
*
   ಒಂದಾನೊಂದು ಕಾಲದಲ್ಲಿ ಜಪಾನಲ್ಲೊಬ್ಬ ಸೇನಾ ಮುಖ್ಯಸ್ಥನಿದ್ದ. ಜನರಲ್ ಎಂದು ಕರೆಯಲ್ಪಡುತ್ತಿದ್ದ ಆತನೋ ತನ್ನ ಕಾಲದ ಅನೇಕ ಯುದ್ಧಗಳಲ್ಲಿ ಅಪ್ರತಿಮ ಶೌರ್ಯವನ್ನು ಮೆರೆದಂಥವನು. ಹಲವಾರು ರೀತಿಯ ಯುದ್ಧಕಲೆಗಳಲ್ಲಿ ಪರಿಣತ. ಬದುಕಿನುದ್ದಕ್ಕೂ ಮುಖ ಗಂಟಿಕ್ಕಿಕೊಂಡು ಒಂದಿಲ್ಲ ಒಂದು ಕಡೆ ಯುದ್ಧರಂಗದಲ್ಲಿ ಭಾಗವಹಿಸುತ್ತಲೇ ಬಂದ ಈ ಜನರಲ್ ಗೆ ತನ್ನ ಶೌರ್ಯದ ಬಗ್ಗೆ ಹೆಮ್ಮೆ ಮತ್ತು ಕಂಡೂ ಕಾಣದ ಅಹಂಕಾರ. ನಿವೃತ್ತಿಯಾಗುತ್ತಿಯಾಗುವ ಘಳಿಗೆಯಲ್ಲಿ ಇಂಥ ಮಹಾನ್ ಯೋಧನಿಗೂ  ಒಂದು ಕೊರತೆ ಕಾಡತೊಡಗುತ್ತದೆ. 

   ಅದು ಆತನ ಬಿಲ್ಲುಗಾರಿಕೆಗೆ ಸಂಬಂಧಿಸಿದ್ದು. ಈ ಜನರಲ್ ವಿಭಿನ್ನ ರೀತಿಯ ಆಯುಧಗಳಲ್ಲಿ ಪಳಗಿದ್ದನಾದರೂ ಬಿಲ್ವಿದ್ಯೆಯಲ್ಲಿ ಮಾತ್ರ ಅಷ್ಟಕ್ಕಷ್ಟೇ. ಆತ ಎಷ್ಟು ಪ್ರಯತ್ನಿಸಿದರೂ ಒಬ್ಬ ಅದ್ಭುತ ಬಿಲ್ಲುಗಾರನಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ  ತನ್ನ ಈ ಕೊರತೆಯನ್ನು ನೀಗಿಸಬಲ್ಲ ಶಾಲೆಯನ್ನು ಹುಡುಕಿಕೊಂಡು ಹೊರಟ. ಕೊನೆಗೊಮ್ಮೆ ಅಂಥದೊಂದು ಶಾಲೆ ಸಿಕ್ಕಾಗ ಅಲ್ಲಿನ ಗುರು ಈತನಿಗೆ ಧ್ಯಾನದ ಮಹತ್ವವನ್ನು ಹೇಳಿಕೊಡತೊಡಗಿದ. ಜನರಲ್ ತನ್ನ ಸಹಜ ಗತ್ತಿನಿಂದ, 'ಬಿಲ್ಲು ಬಾಣಗಳಿಗೂ, ಧ್ಯಾನಕ್ಕೂ ಏನು ಸಂಬಂಧ?' ಅಂತೆಲ್ಲ ಉಡಾಫೆಯಿಂದ ಕೆಣಕಿದ.

   ಗುರುವೇನೋ ತಣ್ಣಗಿದ್ದ. ತನ್ನ ಪಾಡಿಗೆ ತಾನು ಪಕ್ಕದಲ್ಲಿದ್ದ ದೊಡ್ಡದೊಂದು ಮಣ್ಣಿನ ಕೊಳಗದಲ್ಲಿ ಸುಮ್ಮನೇ ವರ್ತುಲಾಕಾರದಲ್ಲಿ ಬೆರಳಾಡಿಸುತ್ತ ಜನರಲ್ ಗೆ ಪ್ರಶ್ನಿಸತೊಡಗಿದ:
" ಪಾತ್ರೆಯಲ್ಲಿ ನಿನಗೇನು ಕಾಣಿಸುತ್ತಿದೆ?"     
'ಪಾತ್ರೆಯಲ್ಲಿ ನೀರಿದೆ'
"ಹೌದು, ಆದರೆ ನೀರಿನಲ್ಲೇನಿದೆ?"
'ನೀವು ಬೆರಳಾಡಿಸಿದ್ದರಿಂದ ಅಲೆಗಳ ಮಧ್ಯೆ ಬೆಳಕಿನ ಪ್ರತಿಫಲನವೊಂದು ಛಿದ್ರಛಿದ್ರವಾದಂತಿದೆ. ಅಷ್ಟು ಬಿಟ್ಟರೆ ಮತ್ತೇನೂ ಇಲ್ಲ..' 

   ಗುರು ಬೆರಳನ್ನು ನೀರಿನಿಂದ ಹೊರತೆಗೆದ. ಕೆಲಹೊತ್ತಿನಲ್ಲೇ ಪಾತ್ರೆಯಲ್ಲಿನ ಅಲ್ಲೋಲಕಲ್ಲೋಲ ನಿಂತು ನೀರು ಸ್ತಬ್ದವಾಗತೊಡಗಿತ್ತು. ಗುರು ಸುಮ್ಮನೇ ಕಣ್ಣುಮುಚ್ಚಿಕೊಂಡು ನಿಂತಿದ್ದ. ಎಷ್ಟೋ ಕ್ಷಣಗಳು ಉರುಳಿಹೋದವು. ಅಲ್ಲೊಂದು ನಿಶ್ಶಬ್ಧತೆ ಆವರಿಸತೊಡಗಿತ್ತು. ಇತ್ತ ಜನರಲ್ ಅಸಹನೆಯಿಂದ ನಿಂತಲ್ಲಿ ನಿಲ್ಲಲಾಗದೇ ಚಡಪಡಿಸತೊಡಗಿದ್ದ. ಗುರು ಮಾತ್ರ ಕಣ್ಣು ತೆರೆಯದೇ ನಿಧಾನವಾಗಿ, 'ನೀರಿನ ಪಾತ್ರೆಯಲ್ಲಿ ಈಗೇನು ಕಾಣಿಸುತ್ತಿದೆ?' ಅಂದ. ಜನರಲ್ ಗೆ ಪಾತ್ರೆಯಲ್ಲಿ ವರ್ತುಲಾಕಾರದ ಅಲೆಗಳು  ಕಾಣಿಸಲಿಲ್ಲ. ಛಿದ್ರಗೊಂಡ ಬೆಳಕೂ ಕಾಣಿಸಲಿಲ್ಲ. ಅಲ್ಲಿದ್ದಿದ್ದು ಒಂದೇ: ಪೂರ್ಣಚಂದ್ರ!

   ಹಾಗೆ ಧ್ಯಾನದ ಮಹತ್ವವನ್ನು ಅರಿತ ಜನರಲ್ ಬಿಲ್ಲುಗಾರಿಕೆಯಲ್ಲಿ ಅದ್ಭುತ ಹಿಡಿತವನ್ನು ಸಾಧಿಸುತ್ತಾನೆ. ಅದಕ್ಕಾಗಿ ಆತ ಆ ಶಾಲೆಯಲ್ಲಿ ಸತತ ಹತ್ತು ವರ್ಷಗಳ ಕಾಲ ಅಭ್ಯಾಸ ಮಾಡುತ್ತಾನೆ. ಕೊನೆಗೊಮ್ಮೆ ತಾನು ಬಿಲ್ವಿದ್ಯೆಯಲ್ಲಿ ಕಲಿಯುವದೇನೂ ಉಳಿದಿಲ್ಲ ಅಂತ ಅನಿಸಿದಾಗ ಹೊರಡಲೆಂದು ಗುರುವಿನ ಬಳಿ ಅಪ್ಪಣೆ ಕೇಳುತ್ತಾನೆ. ಆಗ ಗುರು ಯಾವುದೋ ಒಂದು ಊರಿನ ಹೆಸರು ಹೇಳುತ್ತ, ಅಲ್ಲೊಬ್ಬ ಮಹಾನ್ ಬಿಲ್ಲುಗಾರನಿರುವನೆಂದೂ, ಸಾಧ್ಯವಾದರೆ ಆತನನ್ನೊಮ್ಮೆ ಭೇಟಿಯಾಗಿ ಬಿಲ್ಲುಗಾರಿಕೆಯ ಬಗ್ಗೆ ಸಮಾಲೋಚನೆ ಮಾಡಬೇಕೆಂದೂ ಹೇಳಿ ಜನರಲ್ ನನ್ನು ಬೀಳ್ಕೊಡುತ್ತಾನೆ. 

   ಅಷ್ಟೊತ್ತೂ ತನ್ನ ಬಾಣದ ಕೌಶಲ್ಯದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದ ಜನರಲ್ ಗೆ ತನ್ನ ಗುರು ಸೂಚಿಸಿದ ಊರನ್ನು ನೆನೆದು ಕುತೂಹಲ ಮೂಡುತ್ತದೆ. ಯಾಕೆಂದರೆ ಅದು ತಾನೇ ಹುಟ್ಟಿದ ಊರು. ದಟ್ಟ ಕಾಡಿನ ಅಂಚಿನಲ್ಲಿದ್ದ ನದಿದಡದ ಪುಟ್ಟ ಹಳ್ಳಿ. ಅಂಥ ಕುಗ್ರಾಮದಲ್ಲಿ ಇನ್ನೆಂಥ ಬಿಲ್ವಿದ್ಯಾ ಪರಿಣತನಿರಬಹುದೆಂಬ ಉಡಾಫೆಯಲ್ಲಿತನ್ನೂರನ್ನು ಹುಡುಕುತ್ತ ಬಂದ ಜನರಲ್ ಗೆ ಊರಿಗೆ ಕಾಲಿಡುತ್ತಿದ್ದಂತೆ ವಿಚಿತ್ರ ಅನುಭವವಾಗತೊಡಗುತ್ತದೆ.  ಯಾಕೆಂದರೆ ಅಲ್ಲಿ ಇದ್ದಿದ್ದೇ ಒಂದೈವತ್ತು ಮಣ್ಣಿನ ಗುಡಿಸಲು. ಎಲ್ಲ ಗುಡಿಸಲುಗಳ ಗೋಡೆ, ಕಿಟಕಿಗಳ ಮೇಲೆ ಬಣ್ಣಬಣ್ಣದ ಒಂದೊಂದು ವರ್ತುಲಾಕಾರದ ಟಾರ್ಗೆಟ್. ಅದರ ನಟ್ಟನಡುವೆ ಇರುವಂಥ 'ಬುಲ್ಸ್ ಐ'ಯನ್ನು ಛೇದಿಸಿರುವ ಒಂದು ಬಾಣ! ಅಷ್ಟೇ ಯಾಕೆ, ಅಲ್ಲಿರುವ ನೂರಾರು ಮರದ ಬೊಡ್ಡೆಗಳ ಮೇಲೂ ಇಂಥದ್ದೇ ಚಿತ್ರಣ. ಎಲ್ಲ ಕಡೆಗಳಲ್ಲೂ ಬಣ್ಣಬಣ್ಣದ ಟಾರ್ಗೆಟ್ ಮತ್ತು ನಟ್ಟನಡುವೆ ಒಂದು ಬಾಣ ಅಥವಾ ಬಾಣದ ತೂತು.

   ಹುಟ್ಟಿದೂರಿಗೆ ಬಂದ ಜನರಲ್ ಗೆ ಇದ್ಯಾರಪ್ಪ ಪುಣ್ಯಾತ್ಮ ಅಂತೆನಿಸಿಬಿಡುತ್ತದೆ. ಸೈನ್ಯಾಧಿಕಾರಿಯ ಗತ್ತಿನಲ್ಲಿ ಆತ ಊರ ಜನರನ್ನೆಲ್ಲ ನದಿ ದಡದಲ್ಲಿ ಒಂದೆಡೆ ಸೇರಿಸುತ್ತಾನೆ. ಅಲ್ಲಿದ್ದ ಟಾರ್ಗೆಟ್ಟಿನ ಬಾಣಗಳನ್ನು ತೋರಿಸುತ್ತ, ಯಾರು ಈ ಗುರಿಕಾರ? ಅಂತೆಲ್ಲ ವಿಚಾರಿಸುತ್ತಾನೆ. ವಿಚಿತ್ರವೆಂದರೆ ಊರಿನವರಿಗೂ ಈ ವಿಷಯ ಗೊತ್ತಿಲ್ಲ. ಅಸಲಿಗೆ ದೈನಂದಿನ ಕೆಲಸಗಳಲ್ಲಿ ಅವರೆಷ್ಟು ವ್ಯಸ್ತರು ಅಂದರೆ, ಈ ಟಾರ್ಗೆಟ್ ಮತ್ತು ಬಾಣದಂಥ ವಿಷಯವನ್ನೇ ಅವರು ಗಮನಿಸಿರುವದಿಲ್ಲ. ಆದರೆ ಜನರಲ್ ಊರಿನವರ ಮಾತು ನಂಬುವದಿಲ್ಲ. ಅವರೇನೋ ಮುಚ್ಚಿಡುತ್ತಿದ್ದಾರೆ ಎಂಬಂತೆ ಭಾವಿಸುತ್ತಾನೆ.  ಸಂಜೆಯೊಳಗಾಗಿ ಆ ಬಿಲ್ಲುಗಾರನನ್ನು ತನ್ನೆದುರು ಹಾಜರು ಮಾಡಿಸುವಂತೆ ಆರ್ಭಟಿಸಿ ಅಲ್ಲಿದ್ದವರನ್ನೆಲ್ಲ ಕಳಿಸುತ್ತಾನೆ. 

   ಬೆಳಗಿನಿಂದ ಕಂಗೆಟ್ಟಿರುವ ಜನರಲ್. ಜೊತೆಗೆ ಚಿಂತಾಕ್ರಾಂತ ಕೂಡ. ಹೊಸ ಬಿಲ್ವಿದ್ಯಾ ಚತುರನಿಗಾಗಿ ನದಿ ದಡದ ಕಲ್ಲೊಂದರ ಮೇಲೆ ಕೂತು ಕೂತು ಸಂಜೆಯಾಗುತ್ತಲಿದೆ. ಯಾರೊಬ್ಬರ ಸುಳಿವಿಲ್ಲ. ಅಷ್ಟೊತ್ತಿಗೆ ಎಲ್ಲಿಂದಲೋ ದನಿಯೊಂದು ಕೇಳಿಬರುತ್ತಲಿದೆ: 
'ನೀವು ಯಾರಿಗೋ ಕಾಯುತ್ತಲಿದ್ದೀರಿ ಅಂತ ಕಾಣಿಸುತ್ತದೆ.'

   ದನಿ ಬಂದ ದಿಕ್ಕಿನಲ್ಲಿ ತಲೆಯೆತ್ತಿ ನೋಡುತ್ತಾನೆ. ಎದುರಿಗೆ ಎಂಟರ ಪೋರ! ಅಸಡ್ಡೆಯಿಂದ 'ಹೋಗಾಚೆ' ಎನ್ನುವಂತೆ ದೂರದಿಂದಲೇ ಕೈ ಜಾಡಿಸುತ್ತಿರುವ ಜನರಲ್ ನ ಆಂಗಿಕಭಾಷೆಯನ್ನು ಅರ್ಥಮಾಡಿಕೊಳ್ಳದ ಈ ಪೋರ ಸೀದಾ ಎದುರಿಗೇ ಬಂದು ನಿಂತಿದ್ದಾನೆ ಮತ್ತು ವಿನಮ್ರನಾಗಿ ಹೇಳುತ್ತಿದ್ದಾನೆ:
“ಊರಿನ ಗೋಡೆಗಳ ಮೇಲೆ ಬಾಣ ಹೊಡೆದವರಿಗಾಗಿ ನೀವು ಕಾಯುತ್ತಿದ್ದೀರಂತೆ. ಹಾಗಾಗಿ ನಿಮ್ಮನ್ನು ಕಾಣಬೇಕೆಂದು ನಮ್ಮಪ್ಪ ನನ್ನನ್ನು ಇಲ್ಲಿಗೆ ಕಳಿಸಿದ..”

   ಗಾಬರಿ ಬೀಳುವ ಸರದಿ ಈಗ ಜನರಲ್ ದು. ಎಲಾ! ಅಷ್ಟೂ ಟಾರ್ಗೆಟ್ಟುಗಳ ಮಧ್ಯೆ ಬಾಣ ಹೊಡೆದಿದ್ದು ಈ ಪೋರನೇ?  ಮೊದಮೊದಲಿಗೆ ಅಸಡ್ಡೆಯಿಂದ ಜಬರಿಸುವ ಜನರಲ್ ನಂತರ ಸಾವರಿಸಿಕೊಂಡು ಪೋರನಿಗೆ ದುಂಬಾಲು ಬೀಳುತ್ತಾನೆ. ಹೇಗೆ ಇದೆಲ್ಲ ಸಾಧ್ಯ ಅಂತೆಲ್ಲ ಅವನನ್ನು ರಮಿಸತೊಡಗುತ್ತಾನೆ. ಜನರಲ್ ನಿತ್ರಾಣನಾಗಿದ್ದನ್ನು ನೋಡಿ ಪೋರ ನಿಧಾನಕ್ಕೆ ತನ್ನ ಚಿಪ್ಪಿನಿಂದ ಹೊರಬಂದು ಅರಳುತ್ತಿದ್ದಾನೆ. ಇಲ್ಲೀಗ ಪವಾಡ ಘಟಿಸುತ್ತಲಿದೆ. ಲೋಕದಲ್ಲಿ ಯಾರಿಗೂ ಗೊತ್ತಿರದ ತನ್ನ ಬಿಲ್ವಿದ್ಯಾ ಚತುರತೆಯನ್ನು ಪೋರ ತನ್ನ ಅಬೋಧ ನಗುವಿನೊಂದಿಗೆ ವಿವರಿಸುತ್ತಿರುವನು:

"ಇಕೋ ಇಲ್ಲಿ ನೋಡಿ, ಬಿಲ್ಲಿನಲ್ಲಿ ಹೀಗೆ ಬಾಣ ಇರಿಸಬೇಕು. ಹೀಗೆ ಬಿಲ್ಲಿನ ದಾರ ಬಿಗಿಯಾಗುವವರೆಗೆ ಎಳೆದು ಒಂದೇಟಿಗೆ ಬಾಣ ಚಿಮ್ಮಿಸಬೇಕು. ಆಮೇಲೆ ಬಾಣ ಎಲ್ಲಿ ಹೋಗಿ ನಾಟುತ್ತದೆಯೋ ಅಲ್ಲಿ ಹೋಗಿ ಟಾರ್ಗೆಟ್ಟಿನ ಚಿತ್ರ ಬಿಡಿಸಬೇಕು!"

ಮತ್ತೀಗ, ಜನರಲ್ ಮತ್ತೇ ತನ್ನ ಶಾಲೆಗೆ ಹಿಂದಿರುಗಿ ನಿಜದ ಧ್ಯಾನ ಕಲಿಯತೊಡಗಿದ
*
   ಅರಕಿಡಾ ಮೊರಿತಾಕೆ ಕಂಡಿದ್ದು ಬರೀ ಚಿಟ್ಟೆಯನ್ನು ಮಾತ್ರ. ಅಸಲಿಗೆ ಹೂವು ಅಲ್ಲಿರಲೇ ಇಲ್ಲ. ಕಳಚಿದ್ದು ಆತನ ಮನದಲ್ಲಿ ಮಾತ್ರ. ಇಷ್ಟಕ್ಕೂ ಪವಾಡ ಜರಗುವದು ಇಲ್ಲೇ: ಕಳಚಿದ ಹೂವೊಂದು ಮರಳಿ ರೆಂಬೆಯನ್ನೇರಲು ಎಷ್ಟು ಹಗುರಾಗಬೇಕು ಮತ್ತು ಎಷ್ಟು ಖಾಲಿಯಾಗಬೇಕು?                                                                                    
                                                                               -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 26.09.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


Wednesday, September 12, 2018

ಕಲೆ, ಕಲಾವಿದ ಮತ್ತು ಗೋಡೆಯಾಚೆಯ ಜಗತ್ತು!


ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 12.09.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)