Wednesday, September 27, 2017

ಗಾಂಧೀಯ ಸರಳತೆಯೂ ಹಾಯ್ಕುವಿನ ಭವ್ಯತೆಯೂ!

ಅಂತ್ಯದಲ್ಲಿ ಬರಹಕ್ಕೊಂದು ಮೆಸೇಜ್ ಇರಲೇಬೇಕಾ?  ನನಗಂತೂ ಯಾವತ್ತೂ ಹಾಗೆ ಅನಿಸಿಲ್ಲ. ಯಾಕೆಂದರೆ ಕನವರಿಸಿ ಹುಡುಕಿಕೊಂಡು ಹೋದ ಕಾಡಿನ ಮಧ್ಯೆ ಕಾಲುದಾರಿಗಾಗಿ ಹುಡುಕಾಟ ನಡೆಸುತ್ತಿರುವಾಗ ದಿಢೀರಂತ ಹೈವೇ ಕಂಡುಬಿಟ್ಟರೆ ಅದಕ್ಕಿಂತ ನಿರಾಸೆ ಮತ್ತೊಂದಿಲ್ಲ. ಅರೇ, ಇಷ್ಟೊತ್ತೂ ತಿರುಗಾಡಿದ್ದು, ಗಾಬರಿಯಾಗಿದ್ದು, ಪುಳಕಗೊಂಡಿದ್ದು, ಕಾಡಿನ ಘಮ, ಆ ನೀರವತೆ ಎಲ್ಲ ಸುಳ್ಳು ಅಂತನಿಸಿಬಿಡುತ್ತದೆ. ಅಲ್ಲಿಗೆ ಅದೊಂದು ವ್ಯರ್ಥ ಪಯಣ.  

   ಬರಹಗಳ ಅಂತ್ಯದಲ್ಲಿ ಪ್ರಯತ್ನಪೂರ್ವಕವಾಗಿ ಹೇರಲ್ಪಡುವ ಸಂದೇಶಗಳೂ ಹೀಗೆಯೇ. 'ರಾಮನು 
ಬಾಳೆಹಣ್ಣು ತಿಂದು ನಿದ್ದೆಹೋದನು..' ಅಂತ ಸರಳವಾಗಿ ಮುಕ್ತಾಯವಾಗುವ ಕತೆಯಲ್ಲಿ ಅಷ್ಟೇ 
ಸಹಜವಾಗಿ ಓದುಗನಿಗೆ ದೊರಕುವ unwritten ಸಂದೇಶ ಎಲ್ಲ ಪದಕಸರತ್ತಿಗಿಂತ ಮೀರಿದ್ದು. 
'ಆವತ್ತೊಂದು ದಿನ ಕುಡಿದು ಗಟಾರದಲ್ಲಿ ಬಿದ್ದಿದ್ದೆ' ಅಂತನ್ನುವ ಅನುಭವಾಮೃತ ದಯಪಾಲಿಸುವ ಲೇಖಕ, ಉದ್ದೇಶಪೂರ್ವಕವಾಗಿ ಸಂದೇಶ ಕೊಡದೇ ತನಗರಿವಿಲ್ಲದಂತೆ ಓದುಗರ ಗ್ಯಾಲರಿಗೆಂದು 
ಒಂದು ಸರಳ ಮೆಸೇಜ್ ಬಿಟ್ಟು ಹೋಗಿರುತ್ತಾನೆ. ಇವರ್ಯಾರಿಗೂ ಸಂದೇಶವಾಹಕರಾಗುವ ಹಂಗು ಇದ್ದಂತಿಲ್ಲ. ವ್ಯಾಸನಿಗೂ ಈ ವ್ಯಸನವಿದ್ದಂತಿಲ್ಲ. ಹೀಗಾಗಿ ಮೂರೂ ಮುಕ್ಕಾಲು ಪುಟಕ್ಕೊಂದು ಹಿಡನ್ ಸಂದೇಶ ರವಾನಿಸುತ್ತಲೇ ಹೋಗುವ ಮಹಾಭಾರತ, ಏನಾದರೂ ಮೆಸೇಜು ಕೊಡಲೇಬೇಕು ಅಂತ ಅವುಡುಗಚ್ಚಿ ಉಪಸಂಹಾರ ಮಾಡುವವರಿಗೆ ಒಂದು ಅತಿದೊಡ್ಡ ಬೈಬಲ್ ಅಂತ ಮಾತ್ರ ಹೇಳಬಹುದೇನೋ.         

   ಹೀಗಿರುವಾಗ, ಮೊನ್ನೆ ಸಂಜೆ ಮನೆ ಟೆರೇಸಿನ ಮೇಲೆ ಹೀಗೆಯೇ ಖಾಲಿಪೀಲಿ ಮಾತುಕತೆ ನಡೆದಿತ್ತು. 
ಷೇರುಮಾರುಕಟ್ಟೆಯ ಚಂಚಲತೆ, ಯಾವುದೋ ಹಾಡಿನ ಗಿಟಾರ್ ನೋಟೇಷನ್, ಇಸ್ಪೀಟು ಎಲೆಯಲ್ಲಿನ 
ಟ್ರಿಕ್ಕುಗಳು, ಕಾಣದ ಗುಬ್ಬಿಹಿಂಡು- ಹೀಗೆ ಎಲ್ಲಿಂದ ಎಲ್ಲಿಗೋ ಓತಪ್ರೋತವಾಗಿ ಜಿಗಿಯುತ್ತಿದ್ದ ನಮ್ಮ 
ಗುಂಪಿನ ಮಾತುಕತೆಗೆ ಒಂದು ನಿಶ್ಚಿತ ಉದ್ದೇಶ ಇದ್ದಂತಿರಲಿಲ್ಲ. ಅಷ್ಟರಲ್ಲಿ ಈಗಷ್ಟೇ ಡಿಗ್ರಿ ಮುಗಿಸಿ ಕೆಲಸ 
ಹುಡುಕುತ್ತಿರುವ ಹುಡುಗನೊಬ್ಬ ಮಾತಿನ ಮಧ್ಯೆ ಸಟ್ಟಂತ ಹೇಳಿಬಿಟ್ಟ: 
'ಏನೇ ಹೇಳ್ರಿ, ಬದುಕಿನಲ್ಲಿ ದುಡ್ಡೇ ಎಲ್ಲ ಅಲ್ಲ.'

   ನಾವೆಲ್ಲ ಮುಸಿಮುಸಿ ನಕ್ಕಿದ್ದೆವು. ಹಾಗಾದರೆ ಯಾವುದು ಮುಖ್ಯ? ಪ್ರೀತಿಯಾ? ವಿಶ್ವಾಸವಾ? ಗೆಳೆತನವಾ? ಆರೋಗ್ಯವಾ? ವಿದ್ಯೆ? ಧಾಡಸೀತನ? ಚಾಲಾಕಿತನ? ಸೌಂದರ್ಯ? ಒಳ್ಳೆಯತನ? ಅರಿವು? ಯಾರಿಗೆ ಯಾವುದು ಮುಖ್ಯವೋ ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವವರ ಪೈಕಿ ಯಾರಾದರೂ 'ದುಡ್ಡೇ ಮುಖ್ಯ ಅಲ್ಲ' ಅಂದುಬಿಟ್ಟರೆ ನನಗ್ಯಾಕೋ ಅದು ನಗು ತರಿಸುತ್ತದೆ. ಯಾಕೆಂದರೆ ನನ್ನ ನಂಬಿಕೆಯಂತೆ, ಹಾಗೆ ಹೇಳಲು ಅರ್ಹತೆ ಇರುವದು ಕೇವಲ ಮೂರು ಜನರಿಗೆ ಮಾತ್ರ: ಒಂದೋ, ಆತ ಸಂತನಾಗಿರಬೇಕು. ಇಲ್ಲವಾದಲ್ಲಿ ಆತ ಈಗಾಗಲೇ ಸಿಕ್ಕಾಪಟ್ಟೆ ದುಡ್ಡು ಗಳಿಸಿರಬೇಕು. ಇವೆರೆಡೂ ಅಲ್ಲವಾದಲ್ಲಿ ಆತ ಮಾನಸಿಕವಾಗಿ ಅಸ್ವಸ್ಥನಾಗಿರಬೇಕು!
                                  
   ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ಹೋಗಿದ್ದೆ. ನನ್ನ ಟೆಕ್ಕಿ ಗೆಳೆಯರು ಅವರವರ ಇಷ್ಟಾನುಸಾರ ಪುಸ್ತಕ, ಸೀಡಿ, ಡಿವಿಡಿ ಖರೀದಿಯಲ್ಲಿ ತೊಡಗಿದ್ದರು. ಕೆಲವೊಂದು ಇಂಗ್ಲಿಷ್ ಪುಸ್ತಕಗಳ ಬೆಲೆಯಂತೂ ಗಾಬರಿಯಾಗುವ ರೀತಿಯಲ್ಲಿದ್ದವು. ಅಷ್ಟರಲ್ಲಿ ಗೆಳೆಯನೊಬ್ಬ ಒಂದು ಪುಸ್ತಕದ ಗಾತ್ರ ಮತ್ತು ಬೆಲೆಯನ್ನು ವಿಚಿತ್ರ ರೀತಿಯಲ್ಲಿ ನೋಡತೊಡಗಿದ್ದ. ಸದರಿ ಪುಸ್ತಕದ ಪುಟಗಳನ್ನು ಅವಸರದಿಂದ ತಿರುಗಿಸುತ್ತ 'ಇಷ್ಟೇನಾ? ಬರೀ ಇಷ್ಟೇನಾ?' ಅಂತ ಪದೇಪದೇ ಗೊಂದಲಕ್ಕೆ ಈಡಾಗುತ್ತಿದ್ದ. ಇನ್ನೂರಕ್ಕೂ ಹೆಚ್ಚಿನ ಪುಟಗಳಿದ್ದ ಸದರಿ ಪುಸ್ತಕದ ಹೆಸರು: 'ಸತ್ಯದೊಂದಿಗೆ ನನ್ನ ಪ್ರಯೋಗಗಳು' ಬೆಲೆ: ಇಪ್ಪತ್ತು ರೂಪಾಯಿಗಳು. ಹಾಗೆ ನೋಡಿದರೆ, ಸುಮಾರು ವರ್ಷಗಳ ಹಿಂದೆ ಕೇವಲ ಬೆಲೆ ಕಡಿಮೆ ಅಂತನ್ನುವ ಕಾರಣಕ್ಕೇ ನಾನು ಕೂಡ 'ಗಾಂಧೀ ಆತ್ಮಕತೆ' ಖರೀದಿಸಿದ್ದುಂಟು. ಆವತ್ತು ಈ ಪುಸ್ತಕದ ಬೆಲೆ ಕುರಿತಂತೆ ಗೆಳೆಯನ ಉದ್ಗಾರ ನೋಡಿದಾಗ ಸರಳತೆ ಎಂಬ phenomenon ಹೇಗೆ ನಮಗೆಲ್ಲ ಅಗ್ಗದ ವಸ್ತುವಿನಂತೆ ಭಾಸವಾಗುತ್ತಿದೆಯಲ್ಲ ಅಂತೆನಿಸಿ ನಾಚಿಕೆಯಾಯಿತು. 

   ಕವಿತೆಯೂ ಥೇಟ್ ಹೀಗೆಯೇ. ಅದರಲ್ಲೂ ಹಾಯ್ಕು ಪ್ರಾಕಾರದ ಕವಿತೆಗಳು. ಸರಳತೆ ಮತ್ತು ಭವ್ಯತೆ 
ಹಾಯ್ಕುವಿನ ಎರಡು ಮಜಲುಗಳು. ಬಹುತೇಕ ಹಾಯ್ಕುಗಳು ಸರಳಾತಿ ಸರಳ ಪದಗಳಲ್ಲಿ 
ಹುಟ್ಟಿಕೊಂಡಂಥವು. ಹೀಗೆ ಸರಳವಾಗಿ ಓದಿಸಿಕೊಂಡು ಹೋಗಬಲ್ಲ ಹಾಯ್ಕುವೊಂದು ತನ್ನ ಕೊನೆಯ 
ಪದವನ್ನು ಓದಿಸಿಕೊಳ್ಳುತ್ತಿದ್ದಂತೆಯೇ ಓದುಗನಲ್ಲಿ ಒಂದು ಭವ್ಯ ಹೊಳಹನ್ನು ಹುಟ್ಟುಹಾಕಿರುತ್ತದೆ. 
ನನಗೆ ಬಂದಂಥ ಪ್ರತಿಕ್ರಿಯೆಗಳನ್ನು ನಂಬುವದಾದರೆ, ನನ್ನಬಹುತೇಕ ಲೇಖನಗಳಲ್ಲಿ ಓದುಗರಿಗೆ ಅತಿ 
ಹೆಚ್ಚು ಪ್ರಿಯವಾಗಿರುವಂಥದ್ದು ಈ ಹಾಯ್ಕುಗಳೇ. 

   ಇಂಥದೊಂದು ಕಾವ್ಯಜಗತ್ತಿಗೆ ಹೊಸದಾಗಿ ಕಾಲಿಟ್ಟ ಬಹುತೇಕರು ಕೇಳುವ ಮೊದಲ ಪ್ರಶ್ನೆಯೆಂದರೆ, 
ಹಾಯ್ಕು ಹೇಗೆ ಬರೆಯುವದು? ಈ ಆಟದ ನಿಯಮಗಳೇನು? ಈಗಾಗಲೇ ಇದೇ ಅಂಕಣದಲ್ಲಿ ಅನೇಕ ಸಲ 
ಹಾಯ್ಕುಗಳ ವಿವಿಧ ನಿಯಮಾವಳಿಗಳ ಬಗ್ಗೆ ಹೇಳಿರುವದರಿಂದ ಮತ್ತೇ ಅವುಗಳ ಬಗ್ಗೆ ಹೇಳದೇ 
ಹೊಸದಾದ ಮತ್ತು ಸರಳವಾಗಿ ಅಳವಡಿಸಕೊಳ್ಳಬಹುದಾದ ನಿಯಮಗಳ ಬಗ್ಗೆ ಯೋಚಿಸುತ್ತಿದ್ದಾಗ 
ಡೇವಿಡ್ ಎಂಬ ಹಾಯ್ಕು ಕವಿಯ ಒಂದಿಷ್ಟು ಮಾತುಗಳು ಆಸಕ್ತಿಕರ ಅಂತನಿಸಿದವು. 

   ಆತನ ಪ್ರಕಾರ, ಮೊಟ್ಟಮೊದಲನೆಯದಾಗಿ ಹಾಯ್ಕು ಕವಿತೆ ಅತ್ಯಂತ ಚಿಕ್ಕದಾಗಿರಬೇಕು. ಅಂದರೆ, 
ಒಂದು ಉಚ್ವಾಸ ಮತ್ತು ನಿಶ್ವಾಸಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದೋ, ಇಷ್ಟೇ ಅವಧಿಯಲ್ಲಿ 
ಓದಿ ಮುಗಿಸುವಷ್ಟು ಹಾಯ್ಕು ಚಿಕ್ಕದಿರಬೇಕು. ಎರಡನೆಯದಾಗಿ, ಭೂತವಲ್ಲದ ಭವಿಷ್ಯವಲ್ಲದ ಈ 
ನಮ್ಮ ಹಾಯ್ಕು ಯಾವಾಗಲೂ ವರ್ತಮಾನದಲ್ಲಿ ನಡೆಯುತ್ತಿರುವಂತೆ ಬಿಂಬಿತಗೊಂಡು ಒಂದು 
ನಿಶ್ಚಿತ ಘಟನೆಯ ಚಿತ್ರವನ್ನು ಕಟ್ಟಿಕೊಡುತ್ತಿರಬೇಕು. ಕೊನೆಯದಾಗಿ, ಈ ಚಿತ್ರ ಯಾವುದೋ ಅತ್ಯಂತ 
ಸಾಮಾನ್ಯ ಘಟನೆಯನ್ನು ಬಿಂಬಿಸುತ್ತಿದ್ದರೂ ಅದು ಒಂದು ಒಳನೋಟವನ್ನು ಬೆರಗಿನಿಂದ 
ಬಿಂಬಿಸುತ್ತಿರಬೇಕು ಮತ್ತು ಆ ಬೆರಗು ಗೌರವದಿಂದ ಕೂಡಿರಬೇಕು.

ಇಲ್ಲಿ ಒಂದಿಷ್ಟು ಅಂಥ ಚಿತ್ರಣಗಳಿವೆ. ಸಾಮಾನ್ಯವಾಗಿ ಹಾಯ್ಕುಗಳನ್ನು ವಿವರಿಸಲು ಹೋಗಬಾರದು. ಅದು ಹಾಯ್ಕು ಪರಂಪರೆಯಲ್ಲಿ ನಿಷಿದ್ಧ. ಆದರೆ ನಮ್ಮದಲ್ಲದ ಒಂದು ಹೊಸತನ್ನು ನಮ್ಮದಾಗಿಸಿಕೊಳ್ಳುವಾಗ ಒಂದಿಷ್ಟು ಸಣ್ಣ ಅಪರಾಧಗಳನ್ನು ಮಾಡಿದರೆ ತಪ್ಪಿಲ್ಲವಂತೆ!

   ಈ ಚಿತ್ರಣ ಗಮನಿಸಿ. ಇಲ್ಲಿಬ್ಬರು ಹೊಲದ ಕೆಲಸಕ್ಕೆಂದು ಹೊರಟಿರುವರು. ಮಧ್ಯವಯಸ್ಕ ತಾಯಿ 
ಮತ್ತು ಆಕೆಯ ಜವ್ವನ ಮಗಳು. ಗುಳೇ ಎದ್ದು ಈ ಊರಿಗೆ ಹೊಸದಾಗಿ ಬಂದಿರುವ ಈ ಜೋಡಿಗೆ 
ಇದು ಪರಿಚಿತ ದಾರಿಯಲ್ಲ. ಹೀಗಿರುವಾಗ, ಆಕಸ್ಮಿಕವಾಗಿ ಗುಲಾಬಿ ತೋಟವೊಂದು ಎದುರಿಗೆ 
ಸಿಕ್ಕುಬಿಡುತ್ತದೆ. ಸ್ವಂತ ಊರು ತೊರೆದು ಕಾಣದ ಭಾಗ್ಯವನ್ನರಿಸಿ ಹೊರಟಿರುವ ಈ ಜೋಡಿ ತಮ್ಮ 
ಅಂಥದೊಂದು ಅನಿಶ್ಚಿತ ಘಳಿಗೆಯಲ್ಲೂ ಹಾಯ್ಕು ಹುಟ್ಟಿಗೆ ಕಾರಣರಾಗುತ್ತಾರೆ. ಗುಲಾಬಿ ತೋಟ 
ಕಾಣುತ್ತಲೇ ಮಗಳ ಕೆದರಿದ ಕೂದಲನ್ನು ಒಟ್ಟುಗೂಡಿಸಿ ಲಗುಬಗೆಯಲ್ಲಿ ಜಡೆ ಹೆಣೆಯುತ್ತಿರುವ 
ತಾಯಿಯ ಚಿತ್ರವನ್ನು ಕವಿ ಕಟ್ಟಿಕೊಡುತ್ತಾನೆ.   

   ಮುಂದೊಮ್ಮೆ ಈ ಜೋಡಿ ಹೊಲ ತಲುಪುತ್ತದೆ. ಇಳಿಸಂಜೆಯವರೆಗೂ ಕೆಲಸ ಮಾಡುತ್ತ ಹೈರಾಣಾಗಿರುವ ಅಮ್ಮ ಒಂದೆಡೆ ಕೂತು ಸುಧಾರಿಸಿಕೊಳ್ಳುತ್ತಿದ್ದರೆ, ಜಾಲರಿ ಬಲೆಯಂಥ ರವಿಕೆ ತೊಟ್ಟಿರುವ ಮಗಳು ಉತ್ಸಾಹದಲ್ಲೇ ಮುಂದುವರೆಯುತ್ತಿದ್ದಾಳೆ. ಇಳಿಸಂಜೆಯ ಹೊತ್ತಿನಲ್ಲಿ ಅವಧಿಗೂ ಮುನ್ನವೇ ಮೂಡಿರುವ ಪೂರ್ಣಚಂದಿರ. ಅವನಿಗೂ ಈ ಜಾಲರಿ ರವಿಕೆಯ ಜವ್ವನೆ ಬಗ್ಗೆ ಕುತೂಹಲ. ಬೆವರಿನಿಂದ ಜ್ವಲಿಸುತ್ತಿರುವ ಈ ಶ್ವೇತವರ್ಣೆಯನ್ನು ತಂಪಾಗಿಸಲು ಸ್ವತಃ ತಾನೇ ಕೆಳಗಿಳಿಯುತ್ತಿದ್ದಾನೆ. ಸಾಂತ್ವನಗೈದ ಪೂರ್ಣಚಂದಿರ ಬಲೆಯಿಂದ ಹೊರಬರಲಾಗದೇ ಕೊನೆಗೊಮ್ಮೆ ಜಾಲರಿಯಲ್ಲೇ ಸ್ಥಾಪಿತನಾಗಿ ಹೋದನೆಂಬ ಕತೆ ನಂಬಲು ಬಲು ಮಜವಾಗಿದೆ! 

   ಸಮಾಧಾನದ ಸಂಗತಿ ಏನೆಂದರೆ, ಜಗತ್ತಿನ ಯಾವ ಹಾಯ್ಕು ಕೂಡ ಅಂತ್ಯದಲ್ಲಿ ನಮ್ಮನ್ನು ನಿರಾಸೆಗೊಳಿಸುವದಿಲ್ಲ. ಇವಳನ್ನು ನೋಡಿ: ಇವಳೊಬ್ಬಳು ವಿವಾಹಿತ ಕನ್ಯೆ! ಕನ್ಯೆ ಹೇಗೆಂದರೆ, ಮದುವೆಯಾದ ದಿನವೇ ಆಕೆಯ ಧೀರನಿಗೆ ಸೇನೆಯಿಂದ ಕರೆಬಂದು ಯುದ್ಧಕ್ಕೆ ತೆರಳಿದ್ದಾನೆ. ಇಲ್ಲೀಗ ಚಳಿಗಾಲ. ದೂರದಲ್ಲೆಲ್ಲೋ ಧೀರ ತನ್ನ ಶತ್ರುಗಳೊಂದಿಗೆ ಯುದ್ಧ ತಲ್ಲೀನನಾಗಿದ್ದರೆ ಈಕೆ ಇಲ್ಲಿ ನಡುಗುವ ಋತುಮಾನದೊಂದಿಗೆ ಕಾದಾಡುತ್ತಿದ್ದಾಳೆ. ಬೇಸಿಗೆ ಕಳೆದ ಮೇಲೆ ಬಂದೇ ಬರುವೆನೆಂದು ಹೇಳಿಹೋಗಿರುವ ಗಂಡ. ಇಲ್ಲಿಯವರೆಗೂ ಆತನಿಂದ ಒಂದು ಸುದ್ದಿಯಿಲ್ಲ. ಒಂದು ಪತ್ರವಿಲ್ಲ. ವಿರಹದಲ್ಲಿರುವ ಚೆಲುವೆಗೋ ಕಾಲಮಾನದ ಅರಿವೇ ಇದ್ದಂತಿಲ್ಲ. ಪ್ರತಿದಿನ ತನ್ನ ಮನೆಯ ಗೇಟಿಗೆ ಅಳವಡಿಸಲಾದ ಅಂಚೆಡಬ್ಬದಲ್ಲಿ ಪತ್ರಕ್ಕಾಗಿ ತಡಕಾಡುವದು. ಅನ್ಯಮನಸ್ಕಳಾಗಿ ಹಿಂತಿರುಗುವದು. ಇಂತಿಪ್ಪ ಸನ್ನಿವೇಶದಲ್ಲಿ ರೊಮೇನಿಯಾದ ದಾನಾ ಮಾರಿಯಾ ಎಂಬ ಕವಿಯತ್ರಿ ಹೇಗೆ ಅಲ್ಲಿನ ಋತುಮಾನದ ಜೊತೆಗೆ ಅಲ್ಲಿನ ಇಡೀ ಸನ್ನಿವೇಶವನ್ನೂ ಚಕ್ಕಂತ ಬದಲಾಯಿಸುತ್ತಾಳೆ ನೋಡಿರಿ. ಎಂದಿನಂತೆ ಅಂಚೆ ಹುಡುಕಲು ಹೋದ ಕನ್ಯೆಗೆ ಅಲ್ಲೇನು ಕಾಣಿಸುತ್ತಲಿದೆ ನೋಡಿರಿ: 

ಇದ್ಯಾವುದರ ಸೂಚನೆ
ಬಿಸಿಲ ನಿರ್ಗಮನದ್ದೋ?
ಶರತ್ಕಾಲ ಆಗಮನದ್ದೋ?
ಬೇಲಿ ಬಾಗಿಲಕ್ಕೆ ತೂಗುಹಾಕಿದ
ಅಂಚೆಡಬ್ಬದಲ್ಲಿ ಎಲೆಯೊಂದು ಪತ್ರವಾಗಿದೆ.
                                                                                        -             
 
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 27.09.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

8 comments:

ಶ್ರೀವತ್ಸ ಕಂಚೀಮನೆ. said...

ಆಹಾ...❣️

VidyaShankar Harapanahalli said...

:-) Lovely

Ahalya Ballal said...

Beauty!

sunaath said...

ಹಾಯ್ಕುಗೆ ಪುಟ್ಟ ಎನ್ನುವ ವಿಶೇಷಣವನ್ನು ಹಚ್ಚುವಂತಿಲ್ಲ. ಆದರೂ ಹೇಳುತ್ತೇನೆ: ಈ ಪುಟ್ಟ ಹಾಯ್ಕು ನನ್ನ ಮನಸ್ಸನ್ನು ಅಲ್ಲಾಡಿಸಿಬಿಟ್ಟಿತು. ಇನ್ನೊಂದು ವಿಚಾರ ನನ್ನ ಮನದಲ್ಲಿ ಮೂಡಿತು: ನಿಮ್ಮ ಅಂಕಣಗಳೂ ಸಹ ಒಂದು ರೀತಿಯಲ್ಲಿ ಹಾಯ್ಕುಗಳೇ. ಏಕೆಂದರೆ, ಪದಮಿತಿಗೆ ಒಳಪಟ್ಟಿರುವದರಿಂದ ಅವು ಚಿಕ್ಕವಾಗಿರುತ್ತವೆ. ಆದರೆ ಕೆಲವೊಮ್ಮೆ ಉಲ್ಲಾಸವನ್ನು ಬೀರುತ್ತ, ಕೆಲವೊಮ್ಮೆ ಮನವನ್ನು ಕಲಕುತ್ತ ಈ ಲೇಖನಗಳು ಹಾಯುವ ಹಾಯ್‍-ಕುಗಳೇ ಆಗಿವೆ.

ರಾಘವೇಂದ್ರ ಜೋಶಿ said...

ಶ್ರೀವತ್ಸ ಕಂಚೀಮನೆ, ವಿದ್ಯಾಶಂಕರ್ ಮತ್ತು ಅಹಲ್ಯಾ ಮ್ಯಾಡಂ,

ನಿಮ್ಮ ಪ್ರೀತಿಯ ಉದ್ಗಾರಕ್ಕೆ ಧನ್ಯವಾದಗಳು. :-)

ರಾಘವೇಂದ್ರ ಜೋಶಿ said...

ಸುನಾಥ ಸಾರ್,
ನಿಜ. ಈ ಪುಟ್ಟ ಹಾಯ್ಕುವನ್ನು ಮರುಸೃಷ್ಟಿ ಮಾಡುವಾಗ ನಿಮ್ಮಂತೆ ನಾನು ಕೂಡ ರೋಮಾಂಚನದ ಖುಷಿ ಅನುಭವಿಸಿದ್ದೆ. ಅಷ್ಟು ಮುದ್ದಾಗಿತ್ತು ಈ ಹಾಯ್ಕು. ಮಿಕ್ಕಂತೆ, ನನ್ನ ಬರಹಗಳಿಗೆ ಕುರಿತಂತೆ ನೀವು ಕೊಡುವ ಪ್ರೀತಿಯ ಪ್ರೋತ್ಸಾಹವನ್ನು ಮರೆಯಲಾದೀತೆ? ಧನ್ಯವಾದಗಳು.

ರಾಘವೇಂದ್ರ ಜೋಶಿ said...

ವಸಂತ ಕುಮಾರ್ ಆರ್, ಕೋಡಿಹಳ್ಳಿ ಅವರಿಗೆ ಧನ್ಯವಾದಗಳು.

ದೀಪಾ ಜೋಶಿ said...

ವಾಹ್..