Wednesday, June 20, 2018

ಕವಿತಾಲೋಕದಲ್ಲಿ ಬದಲಾಗುವ ರೂಪ, ಬದಲಾಗದ ರೂಹು!


ಸಾಕುಪ್ರಾಣಿಗಳ ದುಕಾನು.
ಖರೀದಿಗೆಂದು ಬಂದಿರುವ ಗ್ರಾಹಕನಿಗೆ
ಮೂರು ಕಾಲಿನ ನಾಯಿಯೊಂದು
ಎಂದಿನ ಕಸರತ್ತು ತೋರಿಸಲು 
ಎದ್ದು ನಿಲ್ಲುತ್ತಲಿದೆ..

ಕವಿತೆಯ ಮುಂದೆ ಹಾಗೆ ಎರಡು ಟಿಕ್ಕಿಗಳನ್ನು ಇಡುತ್ತ ಭಟ್ಟರು ಕವಿತೆ ನಿಲ್ಲಿಸಿದರು. ಎದುರಿಗೆ ಕುಳಿತಿದ್ದ ತ್ರಿಪಾಠಿಯನ್ನು ನೋಡಿ ಮುಗುಳ್ನಕ್ಕರು. ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ ಎರಡು ದಶಕಗಳೇ ಕಳೆದಿವೆ. ಆದರೂ ಭಟ್ಟರ ಉತ್ಸಾಹಕ್ಕೆ ಭಂಗ ಬಂದಂತಿಲ್ಲ. ವರ್ಷಕ್ಕೊಂದು ಫಾರಿನ್ ಟ್ರಿಪ್ ಹೊಡೆಯುತ್ತಾರೆ. ತಿಂಗಳಿಗೆರಡು ಅಂತ ಅವರಿವರ ಪುಸ್ತಕ ಬಿಡುಗಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎಳೆಯರೊಂದಿಗೆ ಎಳೆಯರಾಗಿಯೂ ವೃದ್ಧರೊಂದಿಗೆ ವೃದ್ಧರಾಗಿಯೂ ಗುರುತಿಸಿಕೊಳ್ಳುವ ಮಲ್ಹಾರಭಟ್ಟರ ಈ ಕಲೆಯನ್ನು ಬದುಕುವ ಕಲೆ ಅಂತ ಅವರನ್ನು ಮೆಚ್ಚುವವರು ಬಣ್ಣಿಸುತ್ತಾರೆ. ಅವರಿಗಾಗದವರು ಮಾತ್ರ ಒಂಚೂರೂ ಗಾಂಭೀರ್ಯವಿಲ್ಲ ಅಂತ ಭಟ್ಟರನ್ನು ಮನಸೋ ಇಚ್ಛೆಯಿಂದ ಬೈದಾಡಿಕೊಳ್ಳುತ್ತಾರೆ. 

   ನಾರಾಯಣ ತ್ರಿಪಾಠಿ. ಬಯೋಕೆಮಿಸ್ಟ್ ಹುಡುಗ. ವಯೋಸಹಜ ರೆಬೆಲ್ ಮನಸ್ಸು. ಅಂಥ ತ್ರಿಪಾಠಿಗೂ ಭಟ್ಟರಿಗೂ ಸಂಪರ್ಕ ಕುದುರಿಸಿದ್ದು ಯಕಶ್ಚಿತ್ ಕವಿತೆ. ಯಾರದೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಡ್ಡೆ ಹುಡುಗರ ಗುಂಪಿನಲ್ಲಿದ್ದ ಭಟ್ಟರ ಮಾತುಗಳನ್ನು ಗಮನಿಸಿ ಅವರ ಸಂಪರ್ಕಕ್ಕೆ ಬಂದಿದ್ದ. ಯಾವುದೋ ಕವಿಯತ್ರಿಯ ಸೌಂದರ್ಯದ ಬಗ್ಗೆ ಗುಂಪಿನಲ್ಲಿದ್ದ ಯುವಕವಿಯೊಬ್ಬ ಸಾಂಗೋಪಾಂಗವಾಗಿ ವರ್ಣಿಸುತ್ತಿದ್ದಾಗ ಭಟ್ಟರು ಎಲ್ಲೋ ನಿಂತಿದ್ದ ಸದರಿ ಕವಿಯತ್ರಿಯನ್ನು ಅಚಾನಕ್ಕಾಗಿ ಕೂಗಿ ಗುಂಪಿಗೆ ಕರೆಸಿಕೊಂಡು 'ಈಗ ಬೇಕಾದರೆ ಹೊಗಳಯ್ಯ, ಚೆಲುವೆಯೂ ಕೊಂಚ ಖುಷಿಪಡಲಿ!' ಅಂತ ಬಾಂಬ್ ಹಾಕಿದ್ದರು. ಹಾಗೆ ಛೇಡಿಸುತ್ತಲೇ ಇಡೀ ಗುಂಪಿಗೆ ನೇರವಂತಿಕೆಯನ್ನೂ ನಮ್ರನಿವೇದನೆಯನ್ನೂ ಏಕಕಾಲಕ್ಕೆ ಕಲಿಸಿದ್ದರು.  

   ಫಿದಾ ಆಗಿಬಿಟ್ಟಿದ್ದ ತ್ರಿಪಾಠಿ. ಭಟ್ಟರನ್ನು ಭೇಟಿಯಾಗುವ ಯಾವ ಸಂದರ್ಭಗಳನ್ನೂ ತಪ್ಪಿಸಿಕೊಳ್ಳಲಾಗದಷ್ಟು ಅವರನ್ನು ಹಚ್ಚಿಕೊಂಡಿದ್ದ. ಹಾಗೆ ಸುಮಾರು ಭೇಟಿಗಳ ನಂತರ ಇವತ್ತು ಸೀದಾ ಭಟ್ಟರ ಮನೆಗೇ ಬಂದಿದ್ದ. ಕವಿತೆಯನ್ನು ಯಾವಾಗ ನಿಲ್ಲಿಸಬೇಕು? ಕವಿತೆ ಹೇಗೆ ನಿಂತರೆ ಚೆಂದ? ಇವೇ ಮುಂತಾದ ಪ್ರಶ್ನೆಗಳನ್ನು ಹೊತ್ತುಕೊಂಡು ಬಂದಿದ್ದ. ತ್ರಿಪಾಠಿಯನ್ನು ಹಾಗೆ ಎದುರಿಗೆ ಕೂರಿಸಿಕೊಂಡ ಮಲ್ಹಾರಭಟ್ಟರು ಚಿಕ್ಕದೊಂದು ಹಾಯ್ಕು ಬರೆಯುತ್ತ ಬರೆಯುತ್ತ ಏಕಾಏಕಿ ನಿಲ್ಲಿಸಿದವರೇ ಎರಡು ಟಿಕ್ಕಿ ಇಟ್ಟು ಮುಗುಳ್ನಕ್ಕಿದ್ದರು. 

   "ನೋಡಯ್ಯ, ಕವಿತೆ ಯಾವಾಗಲೂ ನ್ಯಾಷನಲ್ ಹೈವೇ ಥರ. ಅಲ್ಲಿ ದಾರಿ ತೋರಲೆಂದು ಸೂಚನಾ ಫಲಕಗಳೂ ಇರಬೇಕು. ಪಯಣದ ಗುರಿ ಇನ್ನೂ ಎಷ್ಟು ದೂರವಿದೆ ಅಂತ ತೋರಿಸಬಲ್ಲ ಮೈಲುಗಲ್ಲುಗಳೂ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ನಿನ್ನ ಗಾಡಿಯಲ್ಲಿ ಇನ್ನೂ ಪೆಟ್ರೋಲಿದ್ದರೂ 'ಪಯಣ ಇಲ್ಲಿಗೇ ಮುಗಿಯಿತು' ಅಂತ ನಿನ್ನ ಕವಿತೆಯೇ ನಿನಗೆ ನಿರ್ಬಂಧ ಹೇರಿಬಿಡಬೇಕು. ಆದರೆ ಈ ಕಲೆಯೇ ಅಪಾಯದ್ದು. ಸೂಕ್ಷ್ಮದ್ದು. ಈ ನಿರ್ಬಂಧ ಅವಧಿಗೂ ಮುನ್ನವೇ ಬರಕೂಡದು. ಯಾಕೆಂದರೆ ಒಮ್ಮೊಮ್ಮೆ ಹೀಗೂ ಆಗುತ್ತಿರುತ್ತದೆ: ನಿನ್ನ ಗಾಡಿ ಹೈವೇನಲ್ಲಿ ಹೋಗುತ್ತಿರುವಾಗಲೇ ದಾರಿ ತಪ್ಪಿಸಿಕೊಳ್ಳುವ ಸಂಭವವಿರುತ್ತದೆ. ಯಾವುದೋ ಕಾಡಿನಲ್ಲಿ ಕಾಲುಜಾರುವ ಅಪಾಯವಿರುತ್ತದೆ. ಹಾಗೆ ಜಾರುತ್ತಜಾರುತ್ತ ಕೈಗೆ ಸಿಕ್ಕ ಮುಳ್ಳುಕಂಟಿಯನ್ನು ಆಸರೆಯಾಗಿ ಹಿಡಿಯುವಾಗಲೇ ಧುತ್ತೆಂದು ಜಲಪಾತ ಎದುರಾಗಿರುತ್ತದೆ. ಅದೃಷ್ಟವಿದ್ದರೆ ಯಾರೂ ಮುಟ್ಟದ ಬಂಡೆಗಲ್ಲನ್ನು ನೀನು ನೋಡಿರುತ್ತೀಯ. ಅದೃಷ್ಟ ಇನ್ನೂ ಜಾಸ್ತಿಯಿದ್ದಲ್ಲಿ ಬಂಡೆಯ ಮೇಲೆ ಚದುರಿರುವ ಚದುರೆಯ ವಸ್ತ್ರಗಳನ್ನೂ ನೋಡಿರುತ್ತೀಯ!"
  
   ಭಟ್ಟರು ನಗುತ್ತಲೇ ಇದ್ದರು. ತ್ರಿಪಾಠಿ ಹೈರಾಣಾದಂತಿದ್ದ. ಕವಿತೆಯಿಂದ ಶುರುವಾದ ಮಾತುಗಳು ಎಲ್ಲಿಂದೆಲ್ಲಿಗೋ ಹೋಗುತ್ತಿದ್ದವು. ಭಟ್ಟರು ಇರಾನಿ ಕವಿ ಅಬ್ಬಾಸ್ ಕಿರೊಸ್ತಾಮಿಯನ್ನು ಎಳೆದುತಂದರು. ಆತನ ಪುಟ್ಟ ಕವಿತೆಯಲ್ಲಿ ಎಲೆಯೊಂದು ಮರದಿಂದ ಕಳಚಿಕೊಂಡು ನೆಲದ ಮೇಲಿದ್ದ ತನ್ನದೇ ನೆರಳಿನ ಮೇಲೆ ಸ್ಥಾಪಿತವಾಗುವದನ್ನು ಚಿತ್ರಿಸಿದರು. ಜೀವಂತವಿರುವ ಯಾವ ಎಲೆಯೂ ಹೀಗೆ ನೆಲದ ಮೇಲಿನ ತನ್ನದೇ  ನೆರಳನ್ನು ಅಪ್ಪಿಕೊಳ್ಳುವ ಧೈರ್ಯ ತೋರುವದಿಲ್ಲ. ದೇಹ ಯಾವಾಗ ತನ್ನ ಆತ್ಮದೊಂದಿಗೆ ನಿಜದ ರೀತಿಯಲ್ಲಿ ಒಂದಾಗುತ್ತದೆಯೋ ಅದೇ ಮೋಕ್ಷದ ಸಮಯ ಅಂತೆಲ್ಲ ಕಿರೊಸ್ತಾಮಿಯನ್ನು ವಿವರಿಸಿದರು. ತ್ರಿಪಾಠಿಗೆ ಎಲ್ಲ ಅಯೋಮಯ. ಭಟ್ಟರು ಕವಿತಾ ಜಗತ್ತಿನ ಹೊಸ ಲೆಕ್ಕಾಚಾರ ಬಿಡಿಸತೊಡಗಿದ್ದರು. ಈ ಜಗತ್ತಿನ ಲೆಕ್ಕಾಚಾರ ಎಷ್ಟು ಕರಾರುವಾಕ್ಕಾಗಿದೆ ಅಂದರೆ ಇಲ್ಲಿ ಪ್ರತಿದಿನ ಯಾರೋ ಅದೆಲ್ಲವನ್ನೂ ಟ್ಯಾಲಿ ಮಾಡುತ್ತಲೇ ಇರುತ್ತಾರೆಂದೂ, ಹೀಗಾಗಿ ಯಾವುದೂ ಈ ಜಗತ್ತಿನ ಪೊರೆಯಿಂದ ಹೊರಹೋಗಲು ಸಾಧ್ಯವಿಲ್ಲವೆಂದೂ, ಹೆಚ್ಚೆಂದರೆ ಇವತ್ತಿನ ಮನುಷ್ಯ ಸತ್ತ ಮೇಲೆ ನಾಳೆ ಹುಣಸೇಮರವೋ ಅಥವಾ ಗೌಳಿಗನ ಎಮ್ಮೆಯೋ ಆಗಿ, ಆ ಮೂಲಕ ಕೇವಲ ರೂಪ ಮಾತ್ರ ಬದಲಾಗಿ ರೂಹು ಬದಲಾಗದೇ ಅಲ್ಲಲ್ಲೇ ಸ್ಥಾನಪಲ್ಲಟವಾಗಿ.. 

   ಯಾಕೋ ಭಟ್ಟರು ಭಯಾನಕವಾಗಿ ಕೆಮ್ಮತೊಡಗಿದರು. ಗಾಬರಿಗೊಂಡ ತ್ರಿಪಾಠಿ ಭಟ್ಟರ ಕೈಹಿಡಿದು ನೀರು ಕುಡಿಸಿ ಮನೆ ಸೇರಿಕೊಂಡಿದ್ದ. ಆವತ್ತಿಡೀ ರಾತ್ರಿ ಭಟ್ಟರ ಕವಿತಾಶಕ್ತಿಯ ಬಗ್ಗೆ ಗೌರವಭಾವ ಮೂಡಿಸಿಕೊಂಡ. ಹಾಗೆಯೇ ಅವರ ವೈಜ್ಞಾನಿಕ ಅರಿವಿನ ಬಗ್ಗೆ ಕರುಣೆಯನ್ನೂ! ಸ್ವತಃ ಬಯೋಕೆಮಿಸ್ಟ್ ಆಗಿದ್ದ ನಾರಾಯಣ ತ್ರಿಪಾಠಿಗೆ ಮನುಷ್ಯರೂ ಸೇರಿದಂತೆ ಕ್ರಿಮಿಕೀಟಗಳಲ್ಲಿನ ಜೀವತಂತುಗಳ ಬಗ್ಗೆ ಸಾಕಷ್ಟು ಅರಿವಿದ್ದೇ ಇದೆ. ಮರ ಹೇಗೆ ಹುಟ್ಟುತ್ತದೆ, ಮನುಷ್ಯ ಯಾವಾಗ ಸಾಯುತ್ತಾನೆ ಅಂತನ್ನುವ ಜೈವಿಕ ವಿಜ್ಞಾನದ ಬಗ್ಗೆ ತನಗಿರುವ ಅಥೆಂಟಿಸಿಟಿ ಭಟ್ಟರಿಗಿಲ್ಲ. ಆದರೆ ಹಿರಿಯ ಜೀವಕ್ಕೆ ಹೇಗೆ ತಿಳಿಹೇಳುವದು? ಬಹುಶಃ ಭಟ್ಟರಿಗೆ ವಯಸ್ಸು ಹಾಗೆಲ್ಲ ಯೋಚಿಸಲು ಪ್ರೇರೇಪಿಸುತ್ತದಾ? ತಲೆ ಕೊಡವಿದ ತ್ರಿಪಾಠಿ ಗ್ಲಾಸಿಗೆ ಬೀಯರ್ ಸುರುವಿ ಟೀವಿ ಹಚ್ಚಿ ಕುಳಿತ. ಇಡೀ ಜಗತ್ತಿಗೆ ಕುತೂಹಲ ಮೂಡಿಸಿದ್ದ ಡಾಕ್ಯೂಮೆಂಟರಿ ಆವತ್ತೇ ಟೀವಿಯಲ್ಲಿ ಬಿತ್ತರವಾಗುತ್ತಿತ್ತು. ಮಳೆ ಹೇಗೆ ಉಂಟಾಗುತ್ತದೆ? ಎಂಬುದೇ ಡಾಕ್ಯೂಮೆಂಟರಿ ವಿಷಯ. ಬೆಟ್ಟದ ಮರಗಳು ಮೋಡಗಳನ್ನು ತಡೆದು ಮಳೆ ಬರಿಸುತ್ತವೆ ಅಂತೆಲ್ಲ ಪ್ರೈಮರಿಯಲ್ಲಿ ಹೇಳಿದ್ದ ಮೇಸ್ಟ್ರು ತ್ರಿಪಾಠಿಗೆ ನೆನಪಾದರು. ಮಳೆಗಾಗಿ ಹೋಮ, ಹವನ, ಪರ್ಜನ್ಯ ಯಜ್ಞಗಳನ್ನು ಮಾಡುತ್ತಿದ್ದರೆಂದು ಹೇಳುತ್ತಿದ್ದ ನೀತಿಕತೆ ಮೇಸ್ಟ್ರು ನೆನಪಾದರು.

   ಅಷ್ಟರಲ್ಲಿ ಚಾನಲ್ ನ ನಿರೂಪಕ ಪರದೆಯಲ್ಲಿ ಮಳೆಯನ್ನು ನಿರೂಪಿಸತೊಡಗಿದ್ದ. ಆತನ ಪ್ರಕಾರ, ಭೂಮಿಯ ಮೇಲೆ ನೀರು ಕೋಟ್ಯಂತರ ವರ್ಷಗಳಿಂದ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸೈಕಲ್ ಹೊಡೆಯುತ್ತಲೇ ಇದೆ. ಆವತ್ತಿನಿಂದ ಇವತ್ತಿನವರೆಗೂ ಇಲ್ಲಿ ಒಂದೇ ಒಂದು ಹನಿ ಹೆಚ್ಚೂ ಆಗಿಲ್ಲ ಕಡಿಮೆಯೂ ಆಗಿಲ್ಲ. ಅಶೋಕನ ದೇಹದಲ್ಲಿದ್ದ ನೀರೇ ಅಕ್ಬರನ ದೇಹದಲ್ಲೂ ಇತ್ತು ಮತ್ತು ಅದು ಈಗ ನಮ್ಮ ದೇಹದಲ್ಲೂ ಇದೆ. ಇಂಥ ನೀರಿನ ಬಗ್ಗೆ, ಮಳೆಯ ಬಗ್ಗೆ ನಮಗೆಷ್ಟು ಗೊತ್ತು? ಭೂಮಿಯ ಮೇಲಿರುವ ನೀರಿನ ಒಂದು ಬಿಂದು ವಾತಾವರಣದಲ್ಲಿನ ಶಾಖದಿಂದ ಆವಿಯಾಗಿ ಆಕಾಶಕ್ಕೇನೋ ಹಾರುತ್ತದೆ. ಅಲ್ಲಿ ಶೂನ್ಯವಾತಾವರಣವಿದೆ. ನಮಗೆಲ್ಲ ಗೊತ್ತಿರುವಂತೆ ಅನಿಲರೂಪದ ಈ ನೀರಿನ ಬಿಂದು ಶೂನ್ಯವಾತಾವರಣಕ್ಕೆ ಸೇರುತ್ತಿದ್ದಂತೆಯೇ ಮಂಜುಗಡ್ಡೆಯ ರೂಪ ಪಡೆಯಬೇಕು. ಆದರೆ ಅಲ್ಲಿ ಹಾಗಾಗುವದಿಲ್ಲ. ಯಾಕೆಂದರೆ ಅಂತರಿಕ್ಷದಲ್ಲಿ ಯಾವುದೇ ಕಲ್ಮಶವಿಲ್ಲ. ಆದರೆ ನಿಸರ್ಗವೇ ಇದಕ್ಕೆ ಪರಿಹಾರ ಹುಡುಕಿಕೊಳ್ಳುತ್ತದೆ. 

   ಸಮುದ್ರದಿಂದ, ಕಾಡಿನ ಕಾಳ್ಗಿಚ್ಚಿನಿಂದ, ಕಾರ್ಖಾನೆಯ ಚಿಮಣಿಗಳಿಂದ, ಮರುಭೂಮಿಯ ಬಿರುಗಾಳಿಗಳಿಂದ ಏಳುವ ಅಸಂಖ್ಯಾತ ಧೂಳಿನ ಕಣಗಳು ಆಕಾಶಕ್ಕೆ ಏರುತ್ತವೆ. ಹಾಗೆ ಏರುತ್ತಲೇ ಅಲ್ಲಿನ ವಾತಾವರಣದಲ್ಲಿ ಮಂಜುಗಡ್ಡೆಯಾಗಲು ತವಕಿಸುತ್ತಿರುವ ಅನಿಲ ಬಿಂದುವಿಗೆ ಆಧಾರವಾಗುತ್ತವೆ. ಆಗ ಅಲ್ಲೊಂದು ನೀರಿನ ಸ್ಪಟಿಕ ತಯಾರಾಗುತ್ತದೆ. ಹೀಗೆ ಧೂಳಿನ ಕಣವನ್ನು ಆಧಾರವಾಗಿಟ್ಟುಕೊಂಡು ಅದರ ಸುತ್ತಲೂ ಮಂಜುಗಡ್ಡೆಯಾಗಿ ಹರಳುಗಟ್ಟುವ ಅನಿಲದ ಬಿಂದು ತನ್ನ ಆಸುಪಾಸಿನಲ್ಲಿರುವ ಮತ್ತೊಂದಿಷ್ಟು ಅನಿಲದ ಬಿಂದುಗಳಿಗೆ ತಾನೇ ಆಧಾರವಾಗುತ್ತದೆ. ಹೀಗೆ ಒಂದಕ್ಕೊಂದು ಸೇರಿಕೊಂಡು ದೊಡ್ಡದಾದ ಮಂಜುಗಡ್ಡೆ ತನ್ನದೇ ಭಾರದಿಂದಾಗಿ ಕೆಳಗೆ ಜಾರತೊಡಗುತ್ತದೆ. ಭೂಮಿಗೆ ಹತ್ತಿರವಾಗುತ್ತಿದ್ದಂತೆಯೇ ವಾತಾವರಣದ ಉಷ್ಣತೆಯಿಂದಾಗಿ ಹರಳು ಕರಗಿ ನೀರಿನ ಹನಿಯಾಗಿ ಮಳೆ ಸುರಿಯುತ್ತದೆ. ಹೀಗೆ ಅನಿಲದ ಬಿಂದುವೊಂದು ಅಂತರಿಕ್ಷದಲ್ಲಿ ಮಂಜುಗಡ್ಡೆಯ ಹರಳಾಗಲು ಧೂಳಿನ ಕಣಗಳಷ್ಟೇ ಆಧಾರಸ್ತಂಭಗಳಾಗುವದಿಲ್ಲ. ಅನೇಕ ಸಲ ಇದೇ ಭೂಮಿಯಿಂದ ಹಾರಿಹೋದ ಕೋಟ್ಯಂತರ ಬ್ಯಾಕ್ಟೀರಿಯದಂಥ ಸೂಕ್ಷ್ಮಜೀವಿಗಳೂ ಮಂಜುಗಡ್ಡೆಯ ಸ್ವರೂಪ ತಾಳಲು ಹೆಗಲು ಕೊಡುತ್ತವೆ. ಹೀಗೆ ಈ ಲೋಕದ ಯಾವುದೇ ಜೀವಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಂಡು ಮತ್ತದೇ ಹಳೆಯ ತತ್ವದೊಂದಿಗೆ ಮಣ್ಣಿಗೆ ಹಿಂತಿರುಗುತ್ತದೆ.. 

   ನಾರಾಯಣ ತ್ರಿಪಾಠಿ ದಿಗ್ಗನೇ ಎದ್ದು ಕುಳಿತಿದ್ದ. ಟೀವಿ ನಿರೂಪಕನ ಕೊನೆಯ ಮಾತುಗಳು ಗುಯ್ ಗುಡತೊಡಗಿದ್ದವು. ಯಾಕೋ ಈಗಿಂದೀಗಲೇ ಭಟ್ಟರಿಗೆ ಫೋನು ಮಾಡೋಣ ಅಂದುಕೊಂಡ. ಆದರೆ ಗಡಿಯಾರ ನೋಡಿಕೊಂಡು ಸುಮ್ಮನೇ ಬಿದ್ದುಕೊಂಡ. ಮರುದಿನವೇ ಭಟ್ಟರ ಮರಣವಾರ್ತೆ ಬಂದಿತ್ತು. ಕನಲಿಹೋಗಿದ್ದ ತ್ರಿಪಾಠಿ. ಒಂದಿಡೀ ದಿನ ಯಾರೊಂದಿಗೂ ಮಾತನಾಡಲಿಲ್ಲ. ಕೆಲಸಕ್ಕೂ ಹೋಗಲಿಲ್ಲ. ಸಂಜೆಹೊತ್ತಿಗೆ ಏನೋ ಯೋಚಿಸಿದವನಂತೆ ಮನೆಯ ಮುಂದೆ ಇದ್ದಕ್ಕಿದ್ದಂತೆ ಗುಂಡಿ ತೋಡತೊಡಗಿದ. ಯಾವುದೋ ಬೀಜ ತಂದು ಮಣ್ಣಲ್ಲಿ ಹುಗಿದಿಟ್ಟ. ಇನ್ನೂ ಮೊಳಕೆಯೊಡೆಯದ ಸಸಿಯ ಮುಂದೆ ನಿಂತು 'ಮಲ್ಹಾರ ಮರ' ಅಂತ ಬರೆದಿಟ್ಟ ಬೋರ್ಡು ದಿಟ್ಟಿಸತೊಡಗಿದ!       .    
                                                                             -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 20.06.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, June 6, 2018

ಸೂರ್ಯ ಚಂದ್ರರನ್ನು ಕಾಪಾಡಿದ ದಂಪತಿಯ ಕತೆ


ಒಂದಾನೊಂದು ಕಾಲದಲ್ಲಿ ತೈವಾನಿನ ಮಧ್ಯಭಾಗದಲ್ಲಿ ಒಂದು ಸಮುದಾಯವಿತ್ತು. ಪರ್ವತದ ಅಡಿಯಲ್ಲಿ ಆಹಾರ ಬೆಳೆಯುತ್ತಿದ್ದ ಇವರನ್ನು ಶಾವೋ ಸಮುದಾಯದವರೆಂದು ಕರೆಯುತ್ತಿದ್ದರು. ದಿನವೆಲ್ಲ ಹೊಲಗದ್ದೆಗಳಲ್ಲಿ ಮೈಮುರಿದು ಕೆಲಸ ಮಾಡುತ್ತಿದ್ದ ಶಾವೋ ಜನರು ರಾತ್ರಿ ಕುಶಾಲಿಗೆಂದು ಹಾಡಿ ಕುಣಿದು ದಣಿವಾರಿಸಿಕೊಳ್ಳುತ್ತಿದ್ದರು. ಮನರಂಜನೆಗಾಗಿ ಆಗೀಗ ಮೀನು ಹಿಡಿಯುತ್ತಿದ್ದರು ಮತ್ತು ಕಾಡುಪ್ರಾಣಿಗಳ ಶಿಕಾರಿಯಾಡುತ್ತಿದ್ದರು. ಹೀಗೆ ಒಟ್ಟಿನಲ್ಲಿ ಯಾರ ಮುಲಾಜಿಗೂ ಬೀಳದೆ ಶಾವೋ ಜನಾಂಗ ಖುಷಿಯಾಗಿತ್ತು. 

   ಒಂದು ದಿನ ಹೀಗೆಯೇ ಬೆಟ್ಟದಡಿಯಲ್ಲಿ ಎಲ್ಲ ಶಾವೋಗಳು ಕೆಲಸ ಮಾಡುತ್ತಿರುವಾಗ 'ಢಂ' ಅಂತ ಭಾರೀ ಸದ್ದಾಗುತ್ತದೆ. ಮರುಕ್ಷಣವೇ ನಿಂತ ನೆಲವೆಲ್ಲ ಅಲ್ಲಾಡತೊಡಗುತ್ತದೆ. ಅಷ್ಟರಲ್ಲಿ ಒಬ್ಬರ್ಯಾರೋ ಆಕಾಶದತ್ತ ಕೈ ಮಾಡುತ್ತ ಜೋರಾಗಿ ಕಿರುಚುತ್ತಾರೆ: ಓಹ್, ನಮ್ಮ ಸೂರ್ಯನೇ ಕಾಣಿಸುತ್ತಿಲ್ಲ! ಜನರೆಲ್ಲ ದಿಕ್ಕಾಪಾಲಾಗಿ ಓಡಾಡತೊಡಗುತ್ತಾರೆ. ಕತ್ತಲಲ್ಲಿ ಎಡವಿಬೀಳುತ್ತಾರೆ. ಈಗಿದ್ದವನು ಈಗಿಲ್ಲ ಎಂಬಂತೆ ತಮ್ಮ ಕಣ್ಣ ಸೂರ್ಯ ಮುಂದೆಯೇ ಮಾಯವಾಗಿದ್ದು ಶಾವೋ ಜನರನ್ನು ತಲ್ಲಣ ಮಾಡುತ್ತದೆ. ಕತ್ತಲಲ್ಲಿ ಇವರೆಲ್ಲ ಅದು ಹೇಗೋ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು ಮನೆ ದಾರಿ ಹಿಡಿಯುತ್ತಾರೆ.

   ಸಮಯ ಸರಿಯುತ್ತದೆ. ಯಥಾಪ್ರಕಾರ ಚಂದ್ರ ಆಗಸದಲ್ಲಿ ಕಾಣಿಸಿಕೊಳ್ಳುತ್ತಾನೆ. ತಕ್ಕಮಟ್ಟಿಗೆ ಬೆಳಕನ್ನೂ ತರುತ್ತಾನೆ. ಭಯದಿಂದ ಮನೆ ಸೇರಿಕೊಂಡಿದ್ದವರೆಲ್ಲ ಒಬ್ಬೊಬ್ಬರಾಗಿ ಚಂದಿರನ ಬೆಳಕಿನಲ್ಲಿ ಹೊರಗೆ ಬರುತ್ತಾರೆ. ಒಂದೆಡೆ ಸೇರಿಕೊಂಡು ಸೂರ್ಯನಿಗೇನಾಯಿತು ಅಂತ ಚರ್ಚಿಸುತ್ತಿರುವಾಗಲೇ ಮತ್ತೊಮ್ಮೆ 'ಢಂ' ಅಂತನ್ನುವ ಭಾರೀ ಸದ್ದು. ಆ ಸದ್ದಿಗೆ ಶಾವೋ ಜನರ ಮನೆಗಳೆಲ್ಲ ಅಲ್ಲಾಡುತ್ತವೆ. ತಲೆಯೆತ್ತಿ ನೋಡಿದರೆ ಈ ಸಲ ಚಂದಿರನೂ ಮಾಯ! ಆವತ್ತಿನಿಂದ ಇಡೀ ಜಗತ್ತೇ ಕತ್ತಲುಕತ್ತಲು. ಸೂರ್ಯನ ಬೆಳಕಿಲ್ಲದೇ ಹಲಗದ್ದೆಗಳಲ್ಲಿದ್ದ ಪೈರುಗಳೆಲ್ಲ ಒಣಗತೊಡಗುತ್ತವೆ. ಮೀನುಗಳೆಲ್ಲ ನೀರಿನಾಳಕ್ಕೆ ಹೊರಟುಹೋಗುತ್ತವೆ. ಜನ ಕಂಗಾಲಾಗುತ್ತಾರೆ. ಸೂರ್ಯನಿಲ್ಲದೇ, ಆತನ ಬೆಳಕಿಲ್ಲದೇ ತಾವಿನ್ನು ಮೆಕ್ಕೆಜೋಳ ಮತ್ತು ಅಕ್ಕಿ ಹೇಗೆ ಬೆಳೆಯಬಲ್ಲೆವು ಅಂತ  ರೋದಿಸತೊಡಗುತ್ತಾರೆ.   

   ಇಂತಿಪ್ಪ ಇದೇ ಊರಿನಲ್ಲಿ ಒಂದು ಶಾವೋ ಯುವಜೋಡಿಯಿತ್ತು. ಈ ದಂಪತಿಗಳಿಬ್ಬರೂ ಜೀವನೋಪಾಯಕ್ಕಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದರು. ಈಗ ಸೂರ್ಯ ಚಂದ್ರರಿಲ್ಲದೇ ಎಲ್ಲ ಕತ್ತಲಾಗಿರುವಾಗ ಈ ಜೋಡಿಯ ಮನೆಯಲ್ಲಿದ್ದ ಆಹಾರ ಸಾಮಗ್ರಿಗಳೆಲ್ಲ ಮುಗಿಯುತ್ತ ಬಂದಿತ್ತು. ಹೀಗಿರುವಾಗ ಒಂದು ದಿನ ಹೆಂಡತಿ ತನ್ನ ಗಂಡನಲ್ಲಿ ಉತ್ಸಾಹ ತುಂಬತೊಡಗುತ್ತಾಳೆ. ಸೂರ್ಯ ಬೇಗ ಕಾಣಿಸಿಕೊಳ್ಳದಿದ್ದಲ್ಲಿ ಇಡೀ ಊರಿಗೆ ಊರೇ ಸತ್ತುಹೋಗುತ್ತದೆಂದೂ, ಆದಷ್ಟು ಬೇಗ ನಾವು ಸೂರ್ಯ-ಚಂದಿರರನ್ನು ಹುಡುಕುವ ಪ್ರಯತ್ನ ಮಾಡಬೇಕೆಂದೂ ಗಂಡನಲ್ಲಿ ಕೇಳಿಕೊಳ್ಳುತ್ತಾಳೆ. ಇಬ್ಬರೂ ಸುದೀರ್ಘ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಸೂರ್ಯಚಂದಿರರು ಯಾವುದೋ ಆಳದ ಪ್ರಪಾತದಲ್ಲಿ ಬಿದ್ದಿರಬಹುದೆಂದೂ, ತಾವಿಬ್ಬರೂ ಈಗಿಂದೀಗಲೇ ಅವರನ್ನು ಹುಡುಕುವದೆಂದೂ ನಿರ್ಧರಿಸುತ್ತಾರೆ. 

   ಅಲ್ಲಿಂದ ಶುರುವಾಗುತ್ತದೆ ಗಂಡ ಹೆಂಡತಿಯರ ಸುದೀರ್ಘ ಪಯಣ. ಅವರ ಈ ಕಠಿಣ ಹಾದಿಯಲ್ಲಿ ಅನೇಕ ಪರ್ವತ, ನದಿ, ಕೊಳ್ಳಗಳೂ ಬಂದುಹೋಗುತ್ತವೆ. ಆದರೂ ದಂಪತಿಗಳು ಧೃತಿಗೆಡುವದಿಲ್ಲ. ನೂರಾರು ಪಂಜುಗಳು ಅವರ ಹಾದಿಯಲ್ಲಿ ಸುಟ್ಟುಬೂದಿಯಾಗುತ್ತವೆ. ಕೊನೆಗೊಮ್ಮೆ ಅವರು ಅತ್ಯಂತ ಎತ್ತರದ ಬೆಟ್ಟದ ಮೇಲೆ ನಿಂತಾಗ ದೂರದಲ್ಲೆಲ್ಲೋ ಮಿಣುಕುಮಿಣುಕಾದ ಬೆಳಕು ಗೋಚರಿಸುತ್ತದೆ. ಹೆಂಡತಿ ಇದ್ದಕ್ಕಿದ್ದಂತೆ ರೋಮಾಂಚನದಿಂದ ಗಂಡನ ಕೈಹಿಡಿದು ಬೆಳಕು ಸುರಿಸುತ್ತಿದ್ದ ಸರೋವರದತ್ತ ಬೆರಳು ತೋರಿಸುತ್ತಾಳೆ. "ಓಹ್, ನಮ್ಮ ಸೂರ್ಯ ನೀರಿನಲ್ಲಿ ಬಿದ್ದಿದ್ದಾನೆ!" ಅಂತ ಗಂಡ ಉದ್ಗರಿಸುತ್ತಾನೆ. ಎರಡು ದಿನಗಳ ಪ್ರಯಾಣದ ಬಳಿಕ ಅವರಿಬ್ಬರೂ ತೈವಾನಿನ ಅತಿದೊಡ್ಡ ಸರೋವರದ ಮುಂದೆ ನಿಂತಿರುತ್ತಾರೆ. ಅಲ್ಲಿನ ದೃಶ್ಯ ನೋಡಿ ಬೆಚ್ಚಿಬೀಳುತ್ತಾರೆ. 

   ಸರೋವರದಲ್ಲಿ ಎರಡು ರಾಕ್ಷಸಾಕಾರದ ಡ್ರ್ಯಾಗನ್ ಗಳು ಎರಡು ಬೆಂಕಿನುಂಡೆಗಳೊಂದಿಗೆ ಆಟ ಆಡುತ್ತಿವೆ! ಅಯ್ಯಯ್ಯಪ, ನಮ್ಮ ಸೂರ್ಯ ಚಂದಿರರಿಗೆ ಏನು ಗತಿ ಬಂತಪ್ಪ, ಈ ಡ್ರ್ಯಾಗನ್ ಗಳು ಇವರಿಬ್ಬರನ್ನೂ ತಮ್ಮ ಆಟದ ಸಾಮಾನುಗಳನ್ನಾಗಿ ಮಾರ್ಪಡಿಸಿಕೊಂಡಿದ್ದಾರಲ್ಲ ಅಂತ ಗಂಡಹೆಂಡತಿಯರಿಬ್ಬರೂ ನಡುಗತೊಡಗುತ್ತಾರೆ. ಆದರೆ ಊರಿನಲ್ಲಿದ್ದ ಶಾವೋ ಜನತೆಯ ಹಸಿವು ದಂಪತಿಗಳಿಬ್ಬರನ್ನೂ ಕಂಗೆಡಿಸುತ್ತದೆ. ಹೇಗಾದರೂ ಮಾಡಿ ಸೂರ್ಯಚಂದ್ರರನ್ನು ಈ ಡ್ರ್ಯಾಗನ್ ಗಳಿಂದ ಬಿಡಿಸಿಕೊಂಡು ಹೋಗಲೇಬೇಕು ಅಂತ ಅಲ್ಲೇ ಹತ್ತಿರದಲ್ಲಿದ್ದ ಬಂಡೆಯ ಮೇಲೆ ಕುಳಿತು ಯೋಚಿಸತೊಡಗುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಅವರು ಕುಳಿದ ಬಂಡೆಗಲ್ಲಿನ ಕೆಳಗಿನಿಂದ ಹೊಗೆ ಏಳತೊಡಗುತ್ತದೆ. ಅಚ್ಚರಿಗೊಂಡ ಗಂಡ ತನ್ನ ಶಕ್ತಿಯೆಲ್ಲ ಒಟ್ಟುಗೂಡಿಸಿ ಬಂಡೆಯನ್ನು ಬದಿಗೆ ಸರಿಸುತ್ತಾನೆ. ಅಷ್ಟೇ, ಅಲ್ಲೊಂದು ಸುರಂಗಮಾರ್ಗವಿರುವದನ್ನು ದಂಪತಿಗಳು ಕಂಡುಕೊಳ್ಳುತ್ತಾರೆ. ಒಳಗಡೆ ಏನಿರಬಹುದು ಅಂತ ಸುರಂಗದಲ್ಲಿ ನಡೆಯುತ್ತ ಹೋಗುತ್ತಾರೆ. ಕೊನೆಗೊಮ್ಮೆ  ತುದಿಯನ್ನು ಮುಟ್ಟಿ ಸೋಜಿಗಪಡುತ್ತಾರೆ.   

   ಅಲ್ಲೊಂದು ಅಡುಗೆ ಮನೆ. ಬಿಳಿಕೂದಲಿನ ಅಜ್ಜಿಯೊಬ್ಬಳು ಹೊಗೆ ಎಬ್ಬಿಸಿಕೊಂಡು ಅಡುಗೆ ಮಾಡುತ್ತಿರುತ್ತಾಳೆ. ಅದೆಷ್ಟೋ ವರ್ಷಗಳಿಂದ ಮನುಷ್ಯರ ಮುಖವನ್ನೇ ನೋಡಿರದ ಅಜ್ಜಿಗೆ ಈ ಯುವದಂಪತಿಗಳನ್ನು ನೋಡಿ ಸಿಕ್ಕಾಪಟ್ಟೆ ಅಚ್ಚರಿ. ಜೊತೆಗೆ ಖುಷಿ. ಅಜ್ಜಿ ದಂಪತಿಗಳ ಕತೆ ಕೇಳುತ್ತಾಳೆ. ಸೂರ್ಯ ಚಂದ್ರರ ಕತೆ ಕೇಳುತ್ತಾಳೆ. ಅದೆಷ್ಟೋ ವರ್ಷಗಳ ಹಿಂದೆ ಈ ಡ್ರ್ಯಾಗನ್ ಗಳು ತನ್ನ ಊರಿಗೆ ಕ್ರೂರವಾಗಿ ದಾಳಿಯಿಟ್ಟು ಹೇಗೆ ತನ್ನೂರನ್ನು ಹಾಳು ಮಾಡಿದವು ಮತ್ತು ಕೇವಲ ಡ್ರ್ಯಾಗನ್ ಗಳಿಗೆ ಊಟ ತಯಾರಿಸುವದಕ್ಕಾಗಿ ಹೇಗೆ ತನ್ನನ್ನು ಅಪಹರಿಸಿ ತಂದು ಇಲ್ಲಿ ಇಟ್ಟವು ಅಂತೆಲ್ಲ ಹೇಳಿಕೊಂಡು ಅಳುತ್ತಾಳೆ. ಆದರೆ ದಂಪತಿಗಳ ಧೈರ್ಯ ಮೆಚ್ಚಿ ತನಗೆ ಗೊತ್ತಿರುವ ರಹಸ್ಯವೊಂದನ್ನು ಬಿಚ್ಚಿಡುತ್ತಾಳೆ. ಈ ಸರೋವರದ ಹತ್ತಿರದಲ್ಲಿರುವ ಬೆಟ್ಟದ ಕೆಳಗೆ ಬಂಗಾರದ ಒಂದು ಕತ್ತರಿ ಮತ್ತು ಕೊಡಲಿ ಇರುವದೆಂದೂ, ಅವೆರಡರಿಂದ ಮಾತ್ರ ಈ ಡ್ರ್ಯಾಗನ್ ಗಳನ್ನು ಕೊಲ್ಲಲು ಸಾಧ್ಯವೆಂದೂ ಹೇಳುತ್ತಾಳೆ.

   ಅಲ್ಲಿಗೆ ದಂಪತಿಗಳ ಪಯಣ ಮತ್ತೆ ಮುಂದುವರೆಯುತ್ತದೆ. ಅವರು ಪಂಜು ಹಿಡಿದು ಸರೋವರದ ಹತ್ತಿರದಲ್ಲಿರುವ ಬೆಟ್ಟ ಹುಡುಕತೊಡಗುತ್ತಾರೆ. ಸಿಕ್ಕ ಮೇಲೆ ಬೆಟ್ಟವನ್ನು ಅಗೆಯತೊಡಗುತ್ತಾರೆ. ಅದೆಷ್ಟೋ ದಿನಗಳು ಬಳಿಕ ಅಲ್ಲೊಂದು ಬೃಹದಾಕಾರದ ಕೊಳ್ಳ ನಿರ್ಮಾಣವಾಗಿರುತ್ತದೆ. ಅಲ್ಲೊಂದೆಡೆ ಬಂಗಾರದ ಕತ್ತರಿ ಮತ್ತು ಕೊಡಲಿಗಳು ಮಿಂಚುತ್ತಿರುತ್ತವೆ. ಗಂಡ ಅವುಗಳನ್ನು ಡ್ರ್ಯಾಗನ್ ಗಳಿದ್ದ ಸರೋವರಕ್ಕೆ ತಂದು ಜೋರಾಗಿ ಎಸೆಯುತ್ತಾನೆ. ಕೊಡಲಿ ಒಂದು  ಡ್ರ್ಯಾಗನ್ನಿನ ತಲೆ ಕತ್ತರಿಸಿದರೆ, ಕತ್ತರಿ ಇನ್ನೊಂದು ಡ್ರ್ಯಾಗನ್ನಿನ ದೇಹವನ್ನು ತುಂಡುತುಂಡು ಮಾಡುತ್ತದೆ. ಅಲ್ಲಿಗೆ ಸೂರ್ಯ ಚಂದ್ರರು ಬಂಧಮುಕ್ತರಾಗುತ್ತಾರೆ. ಆದರೆ ಈ ಸೂರ್ಯಚಂದ್ರರನ್ನು ಅವರವರ ಜಾಗದಲ್ಲಿ ಹೇಗೆ ಕೂರಿಸುವದು?   

   ಬಿಳಿ ಕೂದಲಿನ ಅಜ್ಜಿ ಇಲ್ಲಿ ಮತ್ತೊಂದು ರಹಸ್ಯ ಬಿಚ್ಚಿಡುತ್ತಾಳೆ. ಸತ್ತುಹೋದ ಡ್ರ್ಯಾಗನ್ ಗಳ ಕಣ್ಣುಗಳನ್ನು ತಿಂದರೆ ನೀವಿಬ್ಬರೂ ಶಕ್ತಿಶಾಲಿಗಳಾಗಿ ಆಕಾಶದಷ್ಟು ಎತ್ತರಕ್ಕೆ ಬೆಳೆಯುವಿರಿ ಅಂತ ದಂಪತಿಗಳಿಗೆ ಸೂಚನೆ ಕೊಡುತ್ತಾಳೆ. ಸರೋವರಕ್ಕಿಳಿಯುವ ದಂಪತಿಗಳು ಡ್ರ್ಯಾಗನ್ ಕಣ್ಣುಗಳನ್ನು ಹುಡುಕಿ ತಿನ್ನತೊಡಗುತ್ತಾರೆ. ತಿಂದ ಮರುಕ್ಷಣವೇ ಮರಗಳಂತೆ ಉದ್ದುದ್ದಕ್ಕೆ ಬೆಳೆಯತೊಡಗುತ್ತಾರೆ. ಒಂದು ಹಂತಕ್ಕೆ ಬೆಳೆದು ನಿಂತ ಮೇಲೆ ದಂಪತಿಗಳಿಬ್ಬರೂ ಸೂರ್ಯಚಂದ್ರರನ್ನು ಆಕಾಶಕ್ಕೆ ಎಸೆಯುತ್ತಾರೆ. ಆದರೆ ನಿರೀಕ್ಷಿತ ಗುರಿ ತಲುಪದೇ ಬೆಂಕಿಯುಂಡೆಗಳು ಪದೇಪದೇ ನೆಲಕ್ಕುರುಳುತ್ತವೆ. ಪಕ್ಕದ ಬೃಹದಾಕಾರದ ಮರವನ್ನು ಕಿತ್ತು ಅದರ ಮೇಲೆ ಉಂಡೆ ಇಟ್ಟು ನಿರೀಕ್ಷಿತ ಎತ್ತರಕ್ಕೆ ಜಿಗಿಸುವಂತೆ ಅಜ್ಜಿ ಆ ದಂಪತಿಗಳಿಗೆ ಸೂಚಿಸುತ್ತಾಳೆ. ಹಲವಾರು ಪ್ರಯತ್ನಗಳ ಬಳಿಕ ಸೂರ್ಯಚಂದ್ರರು ತಮ್ಮತಮ್ಮ ಸ್ಥಳಗಳನ್ನು ಸೇರಿಕೊಂಡು ಬೆಳಕು ಸೂಸತೊಡಗುತ್ತಾರೆ. ಆದರೆ ಇದೆಲ್ಲದರ ನಡುವೆ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ಶಾವೋ ದಂಪತಿಗಳು ಮತ್ತೇ ತಮ್ಮ ಮೊದಲಿನ ರೂಪಕ್ಕೆ ಬರಲಾಗದೇ ಸರೋವರದುದ್ದಕ್ಕೂ ಪರ್ವತದಂತೆ ಹಬ್ಬತೊಡಗುತ್ತಾರೆ. ಕೊನೆಗೊಮ್ಮೆ ಜೋಡಿ ಪರ್ವತವಾಗಿ ಅಲ್ಲೇ ನೆಲೆನಿಲ್ಲುತ್ತಾರೆ. ಅಲ್ಲಿಗೆ ಜಗತ್ತು ಮತ್ತೊಮ್ಮೆ ಕ್ರಿಯಾಶೀಲವಾಗತೊಡಗುತ್ತದೆ ಎಂಬಲ್ಲಿಗೆ..    .               
                                                                             *
   ಇದು ತೈವಾನಿನ ಜಾನಪದ ಕತೆ. ಅಪಾರ ಕಲ್ಪನಾಚಾತುರ್ಯ ಮತ್ತು ಜೀವನ್ಮುಖಿ ಭಾವದ ಕತೆ. ಕನ್ನಡದಲ್ಲಿ ಮೂಡಿಸುವಾಗ ಇದನ್ನು ಇನ್ನಷ್ಟು ರೋಮಾಂಚಕಾರಿಯಾಗಿಸುವ, ಮುದಗೊಳಿಸುವ ಎಲ್ಲ ಸಾಧ್ಯತೆಗಳಿದ್ದವು. ಆದರೆ ಬೇರೆ ಭಾಷೆಯ ಬೇರೆ ಪ್ರಾಂತ್ಯದ ಹಾಯ್ಕುಗಳನ್ನು ಅನುವಾದ ಮಾಡುವಾಗ ನಮ್ಮದೇ ದೇಸೀ ಸೊಗಡಿನ ಪರಿಕರಗಳನ್ನು ಬಳಸುವ, ಆ ಮೂಲಕ ಓದುಗರಿಗೆ ಪರಿಚಿತ ವಾತಾವರಣ ಕಲ್ಪಿಸಿಕೊಡುವಲ್ಲಿ ಒಲವು ತೋರುವ ನಾನು ಈ ಕತೆಯನ್ನು ಆದಷ್ಟೂ ಮೂಲವಾತಾವರಣದಲ್ಲೇ ಕಟ್ಟಲು ಪ್ರಯತ್ನಿಸಿದ್ದೇನೆ. ಯಾಕೆಂದರೆ ಈ ಕತೆಗೆ ಅಲ್ಲಿನ ಪಾರಂಪರಿಕ ಮತ್ತು ಸಾಂಸ್ಕೃತಿಕ  ಹಿನ್ನೆಲೆಯಿದೆ. ಡ್ರ್ಯಾಗನ್ ಗಳಿದ್ದ ಆ ಪುರಾತನ ಸರೋವರ ಇವತ್ತಿಗೂ ತೈವಾನಿನ ಅತಿದೊಡ್ಡ ಸರೋವರ. ಸೂರ್ಯ ಚಂದ್ರರನ್ನು ಬಂಧಮುಕ್ತರನ್ನಾಗಿಸಲು ಬಂದ ಆ ಯುವದಂಪತಿಗಳನ್ನು ಅಲ್ಲಿನ ಸಮುದಾಯ ಇನ್ನೂ ತಮ್ಮ ಹಬ್ಬಗಳಲ್ಲಿ ನೆನಪಿಸಿಕೊಳ್ಳತ್ತದೆ. ಪ್ರತಿವರ್ಷ 'ಸನ್ ಮೂನ್ ಲೇಕ್'ನ ದಡದಲ್ಲಿ ಸಾವಿರಾರು ಜನ ಸೇರಿ ಬಣ್ಣಬಣ್ಣದ ಚೆಂಡುಗಳನ್ನು ಗಾಳಿಯಲ್ಲಿ ಚಿಮ್ಮಿಸುತ್ತ, ಉದ್ದಾನುದ್ದ ಬಿದಿರುಗಳ ಮೇಲೆ ಚೆಂಡನ್ನು ನಿಯಂತ್ರಿಸುವ ಆಟವಾಡುತ್ತಾರೆ. ಆ ಮೂಲಕ ಆ ದಂಪತಿಗಳ ಜೀವನಪ್ರೀತಿ, ಧೈರ್ಯ ಮತ್ತು ಅದಮ್ಯ ಉತ್ಸಾಹಗಳನ್ನು ಸಾಂಕೇತಿಕವಾಗಿ ಬಿಂಬಿಸುತ್ತಾರೆ.                                         
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 06.06.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)