Wednesday, May 23, 2018

ಚುನಾವಣೆಯ ಗುಂಗು ಮರೆಸಿದ ಹಾಯ್ಕುಗಳು!


ಅಂತೂ ಇಂತೂ ಚುನಾವಣೆ ಮುಗಿಯಿತು. ಕಾಮೆಡಿ, ಫೈಟಿಂಗ್, ಸೆಂಟಿಮೆಂಟ್ ಒಳಗೊಂಡ ಥ್ರಿಲ್ಲರ್ ಸಿನಿಮಾವೊಂದರ ಎಲ್ಲ ರೋಚಕತೆಯನ್ನು ಬಿಂಬಿಸುವಂತಿದ್ದ ಈ ಚುನಾವಣೆಗೆ 'ಶುಭಂ' ಪರದೆ ಬಿತ್ತು. ಆದರೆ ಈ ಚುನಾವಣೋತ್ತರದ ಘಟನಾವಳಿಗಳು ನನಂಥವರ ಮನದಲ್ಲಿ ಹಲವಾರು ಪ್ರಶ್ನೆಗಳನ್ನೂ ಗೊಂದಲಗಳನ್ನೂ ಹುಟ್ಟುಹಾಕುತ್ತ ಹೋದವು. ಅಂಥ ಒಂದಿಷ್ಟು ಪ್ರಶ್ನೆ ಮತ್ತು ಗೊಂದಲಗಳನ್ನು ಸರಳವಾಗಿ ಅರ್ಥ ಮಾಡಿಸಲೆಂದು ನಿಮ್ಮೆದುರಿಗೆ ಒಂದೆರೆಡು ಚಿತ್ರಣ ಇಡುತ್ತಿದ್ದೇನೆ. 
    
ಚಿತ್ರಣ 1: ಇಲ್ಲೊಬ್ಬ ಯುವಕನಿದ್ದಾನೆ. ನಿನ್ನೆ ಮೊನ್ನೆಯವರೆಗೂ ತನ್ನೂರಿನ ಶಾಲಾ ಕಾಲೇಜುಗಳಲ್ಲಿ ವಿಧೇಯ ವಿದ್ಯಾರ್ಥಿಯೆಂದು ಗುರುತಿಸಿಕೊಂಡಂಥವನು. ಈಗಷ್ಟೇ ಬೆಂಗಳೂರಿನಲ್ಲಿ ನೌಕರಿ ಗಿಟ್ಟಿಸಿಕೊಂಡು ಸ್ವಂತದ ಬದುಕು ಕಟ್ಟಿಕೊಂಡಿರುವಂಥವನು. ಹೊಸ ಉತ್ಸಾಹ, ಹೊಸ ಧೈರ್ಯದ ಜೊತೆಗೆ ಏನೇನೋ ಕನಸುಗಳು. ಹೊಸ ಊರು ಈತನಿಗೆ ಸಿಗರೇಟು ಕಲಿಸಿದೆ. ಹೀಗಾಗಿ ಕೈಯಲ್ಲಿ ಸಿಗರೇಟಿದೆ. ಹಾಗೆ ಸಿಗರೇಟು ಹಿಡಿದು ನಡೆಯುತ್ತಿರುವ ಈ ಹುಡುಗ ಸೊಂಪು ಮಜದಲ್ಲಿರುವನು. ಈತನ ದುರಾದೃಷ್ಟಕ್ಕೋ ಏನೋ ಈ ಅಪರಿಚಿತ ಊರಿನಲ್ಲಿ ಎಲ್ಲಿಂದಲೋ ಅಕಸ್ಮತ್ತಾಗಿ ಪ್ರೈಮರಿ ಮೇಷ್ಟ್ರು ಎದುರಾಗಿಬಿಟ್ಟಿದ್ದಾರೆ. ವಿಚಲಿತನಾಗಿರುವ ಹುಡುಗ. ಸಿಗರೇಟನ್ನು ಬೆನ್ನ ಹಿಂದೆ ಮಡಚಿಕೊಂಡು ಮೇಷ್ಟ್ರನ್ನು ನೋಡಿದರೂ ನೋಡದವನಂತೆ ಅವಸರವಸರವಾಗಿ ಕಾಲ್ಕಿತ್ತಿದ್ದಾನೆ. ಶಿಷ್ಯನನ್ನು ಗುರುತಿಸಿದ ಮಾಸ್ತರರಿಗೆ ಬೇಸರವಿದ್ದಂತಿಲ್ಲ. ಅವರು ಮನದಲ್ಲೇ ಮುಗುಳ್ನಗುತ್ತಿದ್ದಾರೆ. ಆ ನಗುವಿನಲ್ಲಿ ಏನೆಲ್ಲ ಅಡಗಿರುವಂತಿದೆ. 

ಚಿತ್ರಣ 2: ಅದೇ ಹುಡುಗ. ಅದೇ ರಸ್ತೆ. ಧುತ್ತೆಂದು ಎದುರಾಗಿರುವ ಅದೇ ಮೇಷ್ಟ್ರು. ಈ ಹುಡುಗ ಸಿಗರೇಟನ್ನು ಬಚ್ಚಿಟ್ಟುಕೊಳ್ಳದೇ ಮಾಸ್ತರರ ಮುಂದೆಯೇ ಧೂಮದುಂಗುರ ಸೃಷ್ಟಿಸುತ್ತಿದ್ದಾನೆ. ಅಲ್ಲೊಂದು ಲೆಕ್ಕಾಚಾರವಿದೆ. ತಾನೀಗ ಮಾಸ್ತರರ ವಿದ್ಯಾರ್ಥಿಯಲ್ಲ. ಬದಲಾಗಿ ವಯಸ್ಕ. ಸಿಗರೇಟಿಗೆ ಕೊಟ್ಟ ಹಣವೂ ತನ್ನದೇ. ಇಷ್ಟಕ್ಕೂ ಸರ್ಕಾರವೇನೂ ಸಿಗರೇಟನ್ನು ಬ್ಯಾನ್ ಮಾಡಿಲ್ಲವಲ್ಲ? ಹೆಚ್ಚೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ಕಾನೂನಿದೆ ಅಷ್ಟೇ. ಹಾಗಂತ ಸರಕಾರ ಎಲ್ಲರ ಮೇಲೆ ಎಷ್ಟೂಂತ ಕಣ್ಣು ನೆಟ್ಟಿಕೊಂಡು ಕೂತಿರುತ್ತದೆ. ಚಲ್ತಾ ಹೈ ಭಾಯ್! ಅರೇ, ಮಾಸ್ತರರು ಯಾಕೆ ನನ್ನನ್ನು ಕಂಡೂ ಕಾಣದಂತೆ ಮುಜುಗರದಿಂದ ಓಡುತ್ತಿದ್ದಾರೆ? 

   ಮೊನ್ನೆ ಆಗಿದ್ದೂ ಥೇಟ್ ಇದೇ. ಪೊಲಿಟಿಕಲಿ ಕರೆಕ್ಟ್ ಅನ್ನುವಂಥ ವಾಕ್ಯ ಬಳಸದೇ ನೇರಾನೇರ ಹೇಳಬಹುದಾದರೆ, ಅಲ್ಲಿ ಎಲ್ಲರ ಬಳಿಯೂ ಆಮಿಷಗಳಿದ್ದವು. ಅದಕ್ಕೆ ತಕ್ಕಂತೆ ಎದುರಾಳಿಗಳ ಬಳಿ ಅಂಕುಶಗಳಿದ್ದವು. ಅವುಗಳ ಪೈಕಿ ಕೆಲವಷ್ಟೇ ಹೊರಜಗತ್ತಿಗೆ ಗೋಚರಿಸಿದರೆ ಮಿಕ್ಕವು ಗೋಚರಿಸಲಿಲ್ಲ. ಅತಿ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರಕ್ಕಾಗಿ ಏನೆಲ್ಲ ಮಾಡಬಹುದಿತ್ತೋ ಅದೆಲ್ಲವನ್ನೂ ಮಾಡಿತು. ತನ್ನೆಲ್ಲ ತತ್ವ, ಸಿದ್ಧಾಂತಗಳನ್ನು ಮಣ್ಣುಪಾಲು ಮಾಡಿದ್ದಲ್ಲದೇ ನಿಯಮಾವಳಿಗಳನ್ನೆಲ್ಲ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿತು. ಇನ್ನು ಕಾಂಗ್ರೆಸ್ ಮತ್ತು ಜನತಾದಳ. ಕಣದಲ್ಲಿರುವಾಗ ರಾಜಕೀಯ ಸ್ಪರ್ಧಿಗಳಿಬ್ಬರು ಎದುರಾಳಿಗಳ ಪಾಲಸಿಗಳ ಬಗ್ಗೆ, ಆಡಳಿತದ ಬಗ್ಗೆ ಪರಸ್ಪರ ಟೀಕಿಸಬಹುದಷ್ಟೇ. ಆದರೆ ಇಲ್ಲಿ ಇವರಿಬ್ಬರೂ ವೈಯಕ್ತಿಕ ಮಟ್ಟದಲ್ಲಿ ಅಪ್ಪ, ಆಣೆ, ಪ್ರಮಾಣ ಅಂತೆಲ್ಲ ಬೀದಿಗಿಳಿದ್ದುಂಟು. ಈ ಸ್ಪರ್ಧಿಗಳನ್ನು ನಂಬಿಕೊಂಡು ಆಯಾ ಪಕ್ಷದ ಕಾರ್ಯಕರ್ತರೂ ವೈಯಕ್ತಿಕ ಜಿದ್ದಿಗೆ ಬಿದ್ದು ಚುನಾವಣೆಯಲ್ಲಿ ಹೊಡೆದಾಡಿರುತ್ತಾರೆ. ಈಗ ಪ್ರಹಸನವೊಂದು ಹೀಗೆ ದಿಢೀರನೇ ಬದಲಾಗಿರುವ ಪ್ರಸಂಗದಲ್ಲಿ ಈ ಎದುರಾಳಿಗಳೇ ಪರಸ್ಪರರ ಹೆಗಲ ಮೇಲೆ ಕೈಹಾಕಿಕೊಂಡಿರುವಾಗ ಈ ಎರಡೂ ಪಕ್ಷಗಳ ಕಾರ್ಯಕರ್ತರ ಗತಿಯೇನು?                                 

   ವಿಪರ್ಯಾಸವೆಂದರೆ, ಇದೆಲ್ಲ ನಡೆದಿದ್ದು ಸಂವಿಧಾನಕ್ಕೆ ಅನುಗುಣವಾಗಿಯೇ. ಅದು ಮೌಲ್ಯಯುತವೋ, ನೈತಿಕವಾದದ್ದೋ ಬೇರೆ ವಿಷಯ. ಆದರೆ ವಿಶ್ಲೇಷಕರ ಪ್ರಕಾರ ಸಾಂವಿಧಾನಿಕವಾಗಿ ಮತ್ತು ಶಾಸನಬದ್ಧವಾಗಿ ಸರಿ ಇರುವಂಥದ್ದು. ಎಲ್ಲಕ್ಕಿಂತ ಹೆಚ್ಚಾಗಿ ವ್ಯವಹಾರಿಕವಾಗಿ ಸರಿ ಇರುವಂಥದ್ದು. ಹೀಗಿರುವಾಗ ಆ ಸಿಗರೇಟಿನ ಹುಡುಗ ತನ್ನ ಹಳೆಯ ಮಾಸ್ತರರನ್ನು ಕಂಡಕೂಡಲೇ ಭಯದಿಂದಲೋ, ಗೌರವದಿಂದಲೋ ತನ್ನ ಮೌಲ್ಯಗಳನ್ನು ಪ್ರತಿಪಾದಿಸಬೇಕಿತ್ತೆಂದು ನಿರೀಕ್ಷಿಸುವದು ಹೇಗೆ ಸಾಧ್ಯ? ಹಾಗಾದರೆ ಸಾಮಾನ್ಯ ಜನತೆಗೆ ಇಂಥ ನಿರೀಕ್ಷೆಗಳು ಇರಲೇಬಾರದೆ? ಇಷ್ಟಕ್ಕೂ ನಮ್ಮಲ್ಲಿನ ವ್ಯವಸ್ಥೆಯೇ ವೈರುಧ್ಯಗಳಿಂದ ಕೂಡಿದೆ. ಅದು ನೈತಿಕತೆಯ ಬಗ್ಗೆ ಯಾವುದನ್ನೂ ನಿಖರವಾಗಿ ಹೇಳುವದಿಲ್ಲ. ಹೆಚ್ಚೆಂದರೆ ಅದು ಸಿಗರೇಟ್ ಪ್ಯಾಕಿನ ಮೇಲೆ ಧೂಮಪಾನದ ಅಪಾಯಗಳ ಬಗ್ಗೆ ಮಾತ್ರ ದೊಡ್ಡದಾಗಿ ಚಿತ್ರಿಸಿ ಕೈತೊಳೆದುಕೊಳ್ಳುತ್ತದಷ್ಟೇ!  

   ಹೀಗಿರುವಾಗ, ಇಲ್ಲಿ ಇನ್ನೊಂದು ರೀತಿಯ ತಮಾಷೆ ನಡೆಯಿತು. ಈ ಸಲದ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ಜನತೆಯ ಕಿವಿಯಲ್ಲಿ ನೂರಾರು ಬಾರಿ ಒತ್ತಾಯವಾಗಿ ತೂರಿಸಲ್ಪಟ್ಟ ಒಂದು ಪದವೆಂದರೆ- ಅದು ಸೆಕ್ಯುಲರ್. ಅತ್ಯಂತ ಕ್ಲೀಷೆಯಿಂದ ಬಳಕೆಯಾಗುತ್ತಿರುವ ಈ ಸೆಕ್ಯುಲರ್ ಪದದ ಬಗ್ಗೆ ನಮ್ಮ ಸಂವಿಧಾನದಲ್ಲಿ ಏನು ಹೇಳಲಾಗಿದೆ ಅಂತ ಹುಡುಕುತ್ತಿದ್ದಾಗ ಕುತೂಹಲಕ್ಕೆಂದು ನಿಘಂಟಿನಲ್ಲೂ ಒಮ್ಮೆ ಹುಡುಕಾಡಿದೆ. ಮಜದ ಸಂಗತಿಯೆಂದರೆ, ಸೆಕ್ಯುಲರ್ ಎಂಬ ಪದಕ್ಕೆ ಡಿಕ್ಷನರಿಯಲ್ಲಿ 'ಜಾತ್ಯತೀತ' ಎಂಬ ಅರ್ಥದ ಜೊತೆಜೊತೆಗೆ 'ಐಹಿಕ, ಸಾಂಸಾರಿಕ, ಪಾರಮಾರ್ಥಿಕವಲ್ಲದ' ಎಂಬ ಇನ್ನಿತರ ಅರ್ಥಗಳೂ ಇವೆ ಅಂತ ಗೊತ್ತಾಗುತ್ತಿದ್ದಂತೆಯೇ ಬೇಸ್ತುಬಿದ್ದೆ!

   ಇದೆಲ್ಲದರ ಮಧ್ಯೆ ಚುನಾವಣೆ ಫಲಿತಾಂಶ ಏನಾಗಬಹುದು ಅಂತೆಲ್ಲ ಕ್ಷಣಕ್ಷಣಕ್ಕೂ ಬ್ರೇಕಿಂಗ್ ಸುದ್ದಿ ಬಿತ್ತರಿಸುತ್ತಿದ್ದ ವಾಹಿನಿಗಳು ಒಂದೆಡೆಯಿದ್ದರೆ, 'ಬಹುಮತ ಸಾಬೀತುಪಡಿಸಿಕೊಳ್ಳಲು ಯೆಡಿಯೂರಪ್ಪನವರು ಹೀಗೆಲ್ಲ ಮಾಡಬೇಕಾಗುತ್ತದೆ' ಅಂತನ್ನುವ ಚಿತ್ರವಿಚಿತ್ರವಾದ ಖತರನಾಕ್ ಐಡಿಯಾಗಳನ್ನು ಇನ್ಯಾರೋ ಪರದೆ ಮೇಲೆ ಪ್ರಚುರಪಡಿಸುತ್ತಿದ್ದರು. 
ಇದೆಲ್ಲದರಿಂದ ರೋಸೆದ್ದು ಹೋದ ನನಗೆ ಕೊಂಚ ತಂಪೆರೆದಿದ್ದು ಇಳಿಸಂಜೆಯ ಮಳೆಯ ಜೊತೆಗೆ ಒಂದಿಷ್ಟು ಹಾಯ್ಕುಗಳು. ಅವೆಲ್ಲ ಮಕ್ಕಳ ಮೇಲೆ ಕಟ್ಟಲಾದ ಹಾಯ್ಕು ಚಿತ್ರಣಗಳು. ಇಂಗ್ಲೀಷ್ ನಲ್ಲಿ ಚಿತ್ರಿಸಲಾದ ಇವೆಲ್ಲ ಕ್ಷಣಗಳನ್ನು ನಾನು ಹಾಯ್ಕುವಿನ ಕೋಮಲ ರೂಪದಲ್ಲಿ ಸೆರೆಹಿಡಿಯಲಾಗದೇ ಹೀಗೆ ಗದ್ಯದ ಮೊರೆಹೋಗುತ್ತಿದ್ದೇನೆ.

   ಒಂದು ಚಿತ್ರಣ ಹೀಗಿದೆ. ಅದೊಂದು ಮಕ್ಕಳ ಕ್ಲಿನಿಕ್. ಅಲ್ಲಿರುವ ವೇಟಿಂಗ್ ರೂಮಿನಲ್ಲಿ ಐದಾರು ಮಕ್ಕಳು ಅವರವರ ಪಾಲಕರೊಂದಿಗೆ ತಮ್ಮ ಪಾಳಿಗಾಗಿ ಕಾಯುತ್ತಲಿವೆ. ಅಲ್ಲಿನ E.N.T ತಜ್ಞ ಇನ್ನೂ ಕ್ಲಿನಿಕ್ಕಿಗೆ ಬಂದಂತಿಲ್ಲ. ವೇಟಿಂಗ್ ರೂಮಿನ ಒಂದು ಮಗು. ಅದರ ಅಪ್ಪನಿಗೆ ಮಗುವಿನ ದೃಷ್ಟಿದೋಷದ ಬಗ್ಗೆ ಗುಮಾನಿ ಬಂದಿದೆ. ಆದರೆ ‘ಎಲ್ಲ ಸರಿಯಿದೆ'  ಅಂತ ಆತನಿಗೆ ತಿಳಿಹೇಳುವವರ್ಯಾರು? ಮಗು ಚಿಕ್ಕದು. ಮಾತು ಬಾರದು. ಹೀಗಾಗಿ ಇಲ್ಲಿಗೆ ದೌಡಾಯಿಸಿದ್ದಾನೆ. ಪಾಳಿಗಾಗಿ ಚಡಪಡಿಸುತ್ತಿದ್ದಾನೆ. ಅಷ್ಟರಲ್ಲೇ ಅಪ್ಪನ ಕಣ್ಣಳತೆಯಿಂದ ಜಾರಿರುವ ಮಗು ತೆವಳುತ್ತ ಹೋಗಿ ಏನು ಮಾಡುತ್ತಲಿದೆ? ಮೂಲೆಯಲ್ಲಿರುವ ಕಣ್ಣು ಪರೀಕ್ಷಿಸುವ ಪುಟ್ಟಯಂತ್ರದ ರಾವುಗಾಜಿನ ಮೇಲೆ ಪೆನ್ಸಿಲ್ ನಿಂದ ಚಿತ್ತುಕಾಟು ಹಾಕುತ್ತಲಿದೆ.                 

   ಅದೇ ಕೋಣೆಯ ಇನ್ನೊಂದು ಮಗು. ಅದರ ಅಪ್ಪನಿಗೆ ಇನ್ನೆಂಥದ್ದೋ ಗುಮಾನಿ. ಹಾಗಾಗಿ ಕ್ಲಿನಿಕ್ಕಿಗೆ ಬಂದಿರುವರು. ಕುಶಾಲಿಗೆಂದು ಗೋಡೆಯ ಮೇಲೆ ತೂಗು ಹಾಕಿರುವ ಗಿಟಾರ್. ಮಗುವಿನ ಗಮನ ಸೆಳೆಯಲೆಂದು ಗಿಟಾರ್ ಹಿಡಿದಿರುವ ಅಪ್ಪ ಒಂದೊಂದಾಗಿ ಸ್ವರ ಮೀಟುತ್ತಿದ್ದಾನೆ. ಮೂರನೇ ತಂತಿಯಲ್ಲಿನ ಸ್ವರ ಹೊರಬರುತ್ತಿದ್ದಂತೆಯೇ ಮಗುವಿನ ಹಸ್ತ ನಿಧಾನವಾಗಿ ತಂತಿಯನ್ನು ಮುಟ್ಟುತ್ತ ಗಿಟಾರಿನ ಸದ್ದನ್ನಡಗಿಸುತ್ತಿದೆ. ಆ ಮೂಲಕ ಅಪ್ಪನ ಸಂದೇಹವನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದೆ. ಸಮಾಧಾನದ ಈ ಹೊತ್ತಿನಲ್ಲಿ ಅಪ್ಪನ ಬೆರಳುಗಳು ತಂತಿಗಳನ್ನು ಅವಿರತವಾಗಿ ಇನ್ನೂ 
ಮೀಟುತ್ತಲೇ ಇವೆ; ಶಬ್ದವೇಧಿ ಮಗು ಹಸ್ತದಿಂದ ಸ್ವರಸ್ತಂಭನ ಮಾಡುತ್ತಲೇ ಇದೆ. 

   ಅಸಲಿ ಮಜ ಇಲ್ಲಿದೆ ನೋಡಿ. ಕ್ಲಿನಿಕ್ಕಿನಿಂದ ಅನತಿ ದೂರದಲ್ಲೇ ಮಸಣವೊಂದು ಇದ್ದಂತಿದೆ. ಅಲ್ಲೀಗ ಯಾವುದೋ ಅಂತ್ಯಕ್ರಿಯೆ ನಡೆಯುತ್ತಿದೆ. ಅಲ್ಲಿರುವ ದೊಡ್ಡವರು ಗಂಭೀರವಾಗಿಯೋ ಶೋಕತಪ್ತರಾಗಿಯೋ ಅಂತ್ಯಕ್ರಿಯೆಯ ಚಟುವಟಿಕೆಯಲ್ಲಿ ವ್ಯಸ್ತರಾಗಿರುವಾಗ ಮಕ್ಕಳ ದಂಡೊಂದು ಅಕ್ಕಪಕ್ಕದ ಗೋರಿಗಳನ್ನು ಬಳಸಿಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಆಹ್! ಇಲ್ಲಿ ಯಾವುದು ಅರ್ಥಪೂರ್ಣ? ಯಾವುದು ಅರ್ಥಹೀನ?

ಯಾಕೆಂದರೆ ಇಲ್ಲಿ ಈಗ ತಾನೇ ಕಂಡಿದ್ದ ಮುಖ ನಾಳೆ ಮತ್ತೇ ಕಾಣಬಹುದೆನ್ನುವ ಖಾತ್ರಿ ಯಾರಿಗಿದೆ?                 
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 23.05.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


Wednesday, May 9, 2018

ಪೌರಾಣಿಕ ಸಾಹಿತ್ಯವೆಂಬುದು ಅನುಮಾನದ ಹುತ್ತವಾಗಬಾರದಲ್ಲ?


ಮೊನ್ನೆ ಬಹಳ ದಿನಗಳ ನಂತರ ಗೆಳೆಯರೆಲ್ಲ ಸೇರಿದ್ದೆವು. ಯಾವುದೋ ದೇವಸ್ಥಾನದಲ್ಲಿ ಬಾಳೆಹಣ್ಣಿನ ಪ್ರಸಾದ ಹಂಚುವ ಕಾರ್ಯಕ್ರಮ. ನಾವೆಲ್ಲ ಅಲ್ಲಿಗೆ ಹೋಗಬೇಕಿತ್ತು. ಬೆಂಗಳೂರಿನಲ್ಲೇ ಇದ್ದರೂ ಮೆಟ್ರೋ ರೈಲಿನಲ್ಲಿ ಒಮ್ಮೆಯೂ ಪ್ರಯಾಣಿಸದ ನಮ್ಮ ಬಗ್ಗೆ ನಾವೇ ಖೇದಪಟ್ಟುಕೊಂಡು ಮೆಟ್ರೋದಲ್ಲಿ ಪಯಣಿಸಿದ್ದೆವು. ದೇವಸ್ಥಾನಕ್ಕೆ ಬರುವವರಿಗೆಲ್ಲ ಪ್ರಸಾದ ಹಂಚಿ ಸುಸ್ತಾಗಿದ್ದ ನಾವೆಲ್ಲ ಪ್ರಾಂಗಣದಲ್ಲಿದ್ದ ಮರದಡಿಯಲ್ಲಿ ಕುಳಿತುಕೊಂಡಿದ್ದೆವು. ಕಳೆದ ಎರಡು ದಶಕಗಳಲ್ಲಿ ಬೆಟ್ಟ, ಕಾಡು, ರೆಸಾರ್ಟ್, ಕ್ಲಬ್ಬು, ಪಬ್ಬು, ಬೀಯರು ಅಂತೆಲ್ಲ ಲಿಸ್ಟು ಹಿಡಿದುಕೊಂಡು ಸುತ್ತಾಡಿದ ನಮಗೆ ಮುಂದೊಂದು ದಿನ ಯಾವುದೋ ದೇವಸ್ಥಾನದ ಪ್ರಾಂಗಣದಲ್ಲಿ ಹೀಗೆ ಪ್ರಸಾದವನ್ನೂ ಹಂಚುವ ಮನಸ್ಥಿತಿ ಬಂದೀತೆಂಬ ಕಲ್ಪನೆ ಯಾರಿಗಾದರೂ ಬಂದಿತ್ತೇ? ಅಂತ ನಮ್ಮಷ್ಟಕ್ಕೆ ನಾವೇ ನಗಾಡುತ್ತಿದ್ದೆವು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಗುಂಪಿನ ಮಧ್ಯೆ  ಪ್ರಶ್ನೆಯೊಂದು ತೂರಿಬಂತು.

 'ಆತ್ಮ ಅಂದರೇನು?'

   ನಗೆಯಾಡುತ್ತಿದ್ದ ಎಲ್ಲರೂ ಗಂಭೀರರಾಗಿಬಿಟ್ಟಿದ್ದರು. ತಲೆಗೊಂದರಂತೆ ಉತ್ತರ ಬಂದವು. ಇತ್ತೀಚೆಗೆ ಇಂಗ್ಲೀಷ್ ಲಿಟರೇಚರ್ ಮೂಲಕ ಪುರಾಣಗಳನ್ನು ಓದತೊಡಗಿದ್ದ ಒಬ್ಬನಂತೂ ಕೃಷ್ಣನ ಗೀತೆಯನ್ನು ಸಾದರ ಪಡಿಸತೊಡಗಿದ್ದರೆ, ಇನ್ನೊಬ್ಬರ್ಯಾರೋ ಆತ್ಮಕ್ಕೆ ಹೇಗೆ ಸಾವಿಲ್ಲವೆಂದು ಹೇಳುತ್ತಲೇ ಅದರ ಅಮರತ್ವವನ್ನು ಸಾರತೊಡಗಿದ್ದರು. ಹೀಗೆ ಒಬ್ಬೊಬ್ಬರ ಮೂಲಕ ಒಂದೊಂದು ರೀತಿಯಲ್ಲಿ ಆತ್ಮದ ಬಗ್ಗೆ ಪುಂಖಾನುಪುಂಖ ಚರ್ಚೆಗಳಾಗುತ್ತಿದ್ದಾಗ ನಾನು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದೆ. ಇಷ್ಟಕ್ಕೂ ಆತ್ಮದ ಬಗ್ಗೆ ಏನೇನೂ ಗೊತ್ತಿರದ ನಾನು ಏನು ಹೇಳಲಿ? ಬಾಲ್ಯದಲ್ಲಿ ನನ್ನ ಗೆಳೆಯನೊಬ್ಬನಿದ್ದ. ಆತ ರಾತ್ರಿ ಹಿತ್ತಿಲಲ್ಲಿ ಉಚ್ಛೆ ಹೊಯ್ಯಲು ಹೋದಾಗ ಬಿಳಿಸೀರೆ ಉಟ್ಟುಕೊಂಡು ತಲೆಕೆದರಿಕೊಂಡು ನಿಂತಿದ್ದ 'ಆತ್ಮ'ವನ್ನು ನೋಡಿ ಮೂರು ದಿನ ಚಳಿ ಜ್ವರ ಬಂದು ಮಲಗಿದ್ದನ್ನು ಗಂಭೀರವಾಗಿ ಹೇಳತೊಡಗಿದ್ದೆ. ಗೆಳೆಯರೆಲ್ಲ ಛೇಡಿಸುತ್ತಲೇ ನನ್ನನ್ನು ಸಮಾ ಬೈದಾಡಿಕೊಂಡಿದ್ದರು! 

   ಪರಮಾತ್ಮನ ಪ್ರಾಂಗಣದಲ್ಲಿ ಆತ್ಮದ ಬಗ್ಗೆ ನನ್ನ ವ್ಯಾಖ್ಯಾನ ಹೀನಾಯವಾಗಿ ಕೊನೆಯುಸಿರೆಳೆದಿದ್ದು ಹೀಗೆ. ತಮಾಷೆಯೆಂದರೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಪೈಕಿ ಇಂಥ ಸಾಲುಗಳನ್ನು ನೀವೂ ಕೇಳಿಯೇ ಇರುತ್ತೀರಿ. ಪೊಲೀಸರು ಆತ್ಮರಕ್ಷಣೆಗಾಗಿ ರೌಡಿಯೊಬ್ಬನ ಕಾಲಿಗೆ ಗುಂಡು ಹೊಡೆದರು ಅಂತನ್ನುವ ಸುದ್ದಿ ಬಂದಿರುತ್ತದೆ. ಭಾಷಾಬಳಕೆಯ ಬಗ್ಗೆ ಕುತೂಹಲ ಇಟ್ಟುಕೊಂಡವರಿಗೆ ಈ 'ಆತ್ಮರಕ್ಷಣೆ' ಎಂಬ ಪದ ಆಗೀಗ ಸತಾಯಿಸುವದುಂಟು. ಅರೇ, ಪೊಲೀಸರೇನೋ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಸಂದರ್ಭ ಉಂಟಾದಾಗ ಗುಂಡು ಹಾರಿಸಿರುತ್ತಾರೆ. ಅಂದರೆ ಅದು ದೇಹರಕ್ಷಣೆ. ಅದಕ್ಕೂ ಹೆಚ್ಚೆಂದರೆ ಪ್ರಾಣರಕ್ಷಣೆ. ದೇಹದ ರೀತಿ ಕಣ್ಣಿಗೆ ಕಾಣಿಸದ, ಪ್ರಾಣದ ರೀತಿ ಅನುಭವಕ್ಕೆ ತಾಗದ ಆತ್ಮವನ್ನು ನೋಡಿದವರು ಯಾರಿದ್ದಾರೆ? ಹಾಗಿರುವಾಗ 'ಆತ್ಮರಕ್ಷಣೆ' ಅನ್ನುವ ಪದ ಎಲ್ಲಿಂದ ಬಂತು? ಅದರ ಪ್ರಯೋಗ ಎಷ್ಟು ಸರಿ ಅಂತನ್ನುವ ಪ್ರಶ್ನೆ ಕಾಡತೊಡಗುತ್ತದೆ. 

   ಹೀಗೆ ಪಾರಮಾರ್ಥಿಕ ತತ್ವವೊಂದು ಆಡುಭಾಷೆಯಾಗಿ ಕೊನೆಗೆ ರೂಢಿಗತ ಭಾಷೆಯಾಗಿ ಚಲಾವಣೆಯಾಗುತ್ತಿದ್ದಂತೆ ಈ ರೀತಿಯ ಗೊಂದಲಗಳು ಸಹಜ. ಇಂಥ ಗೊಂದಲಗಳಿಗೆ ಉತ್ತರವಾಗಿ ನಮ್ಮ ಮುಂದೆ ನಿಘಂಟುಗಳಿವೆ. ಅವುಗಳ ಸಹಾಯದಿಂದ 'ಆತ್ಮ'ದ ಸಹಜ ಅರ್ಥವನ್ನೂ ಅಲೌಕಿಕ ವಿವರಣೆಯನ್ನೂ ಗ್ರಹಿಸಬಹುದು. ಇದರ ಮುಂದುವರಿಕೆ ಎಂಬಂತೆ ಆತ್ಮಕತೆ, ಆತ್ಮಗೌರವ, ಆತ್ಮಗತ, ಆತ್ಮವಿಶ್ವಾಸ, ಆತ್ಮರತಿ, ಆತ್ಮಹತ್ಯೆ, ಆತ್ಮಪ್ರಶಂಸೆ ಮುಂತಾದ ಪದಗಳನ್ನು ಗಮನಿಸಿದಾಗ ಒಂದಂತೂ ಸ್ಪಷ್ಟವಾಗುತ್ತದೆ. ಆತ್ಮ ಅಂದರೆ ತಾನು, ತನ್ನದು ಎಂಬ ಸಹಜ ಅರ್ಥದೊಂದು ತನ್ನಿಂದ ತಾನೇ ಹೊರಬೀಳಬಲ್ಲದು. ಹೀಗೆ ನಿಜದ ಬದುಕಿನಲ್ಲಿ ಸಹಜವಾಗಿ ಬಳಸುವ ಪದಗಳೇ ಒಮ್ಮೊಮ್ಮೆ ಇಷ್ಟು ಕಠಿಣವಾಗಿಬಿಡುವಾಗ ಇನ್ನು ಪುರಾತನ ಸಾಹಿತ್ಯದಲ್ಲಿ ಬರುವ ಸಾರವನ್ನು ಎಷ್ಟರಮಟ್ಟಿಗೆ ನಾವು ಗ್ರಹಿಸಬಲ್ಲೆವು? ಪೌರಾಣಿಕ ಪಾತ್ರಗಳು, ಅವುಗಳ ಹೆಸರು, ಅದರ ವಿವರಣೆ, ಅಲ್ಲಿನ ದೃಷ್ಟಾಂತಗಳು, ನೀತಿಗಳು, ನಿಯಮಗಳ ಬಗ್ಗೆ ಸಾದ್ಯಂತವಾಗಿ ವಿವರಿಸಬಲ್ಲ ನಿಘಂಟೊಂದು ಇದ್ದಿದ್ದರೆ ಪುರಾತನ ಸಾಹಿತ್ಯವನ್ನು ಗ್ರಹಿಸಲು ಎಷ್ಟು ಅನುಕೂಲವಾಗುತ್ತಿತ್ತು ಅಂತ ನಿಮಗೆ ಅನಿಸಿಲ್ಲವಾ?

   ನಿಜ, ಇವತ್ತು ನಾನು ಮಾತನಾಡಬಯಸಿದ್ದು ಇಂಥದ್ದೇ ಒಂದು ನಿಘಂಟಿನ ಬಗ್ಗೆ. ಹೆಸರು: ಪುರಾಣನಾಮ ಚೂಡಾಮಣಿ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಪ್ರಕಟವಾಗಿರುವ ಈ ಗ್ರಂಥ ಸಾಮಾನ್ಯ ಅರ್ಥದಲ್ಲಿ ಡಿಕ್ಷನರಿಯೊಂದು ಮಾಡಬಹುದಾದ ಕೆಲಸಕ್ಕಿಂತಲೂ ಹೆಚ್ಚಿನ ಕಾರ್ಯ ಮಾಡುತ್ತದೆ. ಹದಿನೈದು ವರ್ಷಗಳ ಹಿಂದೆ ನಾನು ಖರೀದಿಸಿದ 650 ಪುಟಗಳಷ್ಟಿರುವ ಈ ಬೃಹತ್ ಗ್ರಂಥದ ಮೊದಲ ಆವೃತ್ತಿ ಪ್ರಕಟವಾಗಿದ್ದು 1941ರಲ್ಲಿ. ಇಷ್ಟಕ್ಕೂ ನಮ್ಮ ಪುರಾತನ ಸಾಹಿತ್ಯ ಸೃಷ್ಟಿಯಾಗಿದ್ದು ಸಂಸ್ಕೃತಲ್ಲಿ. ಅದರಲ್ಲಿ ಬರುವ ದೇವತೆಗಳು ನಮ್ಮ ಇತಿಹಾಸದಲ್ಲೂ ಬರುತ್ತವೆ. ಹೀಗೆ ಸಾಹಿತ್ಯ ಮತ್ತು ಇತಿಹಾಸ ಎರಡರಲ್ಲೂ ಗೋಚರಿಸುವ ದೇವರುಗಳು, ಋಷಿಗಳು, ಪುಣ್ಯಕ್ಷೇತ್ರಗಳು, ನದಿ-ಪರ್ವತಗಳು, ನಾನಾ ದೇಶಗಳು, ಅವುಗಳ ರಾಜರುಗಳು, ಅವರವರ ಕಾಲದ ವೈಚಿತ್ರ್ಯಗಳು, ದೃಷ್ಟಾಂತಗಳು, ಮಹತ್ವಗಳ ಬಗ್ಗೆ ಒಂದು ರೀತಿಯ ಅಕಾಡೆಮಿಕ್ ಅಭ್ಯಾಸಕ್ಕಾಗಿ 'ಪುರಾಣನಾಮ ಚೂಡಾಮಣಿ'ಯನ್ನು ರಚಿಸಬೇಕಾಯಿತು ಅಂತ ಲೇಖಕರಾದ ಬೆನಗಲ್ ರಾಮರಾವ್ ಮತ್ತು ಪಾನ್ಯಂ ಸುಂದರಶಾಸ್ತ್ರಿಗಳು ಗ್ರಂಥದ ಆರಂಭದಲ್ಲೇ ಅರಿಕೆ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಅವರುಗಳು ಶ್ರಮವಹಿಸಿದ್ದು ಹನ್ನೆರೆಡು ವರ್ಷಗಳು. 

   ಇಷ್ಟು ಹೇಳಿದರೆ 'ಚೂಡಾಮಣಿ'ಯ ಅಗಾಧತೆಗೆ ಮೋಸ ಮಾಡಿದಂತೆ. ಇಂಥದೊಂದು ಪುಸ್ತಕವನ್ನು ಸೃಷ್ಟಿಸುವದು ಮಹಾನ್ ಜಟಿಲಕಾರ್ಯ. ಅದು ಅಗಾಧ ಪ್ರಮಾಣದ ಪರಿಶ್ರಮ ಮತ್ತು ಓದುವಿಕೆಯನ್ನು ಬೇಡುತ್ತದೆ. ಯಾಕೆಂದರೆ ಒಂದು ಪುರಾಣದ ಪಾತ್ರವೊಂದು ಇನ್ಯಾವುದೋ ಪುರಾಣದ ಭಾಗದಲ್ಲಿ ದಿಢೀರಂತ ಪ್ರತ್ಯಕ್ಷವಾಗುತ್ತದೆ. ಯಾವುದೋ ಪುರಾಣದ ಪಾತ್ರವೊಂದು ಇನ್ಯಾವುದೋ ಪುರಾಣದಲ್ಲಿನ ಪಾತ್ರದ ಸಾವಿಗೆ ಕಾರಣವಾಗುತ್ತದೆ. ಯಾವುದೋ ಕಾಲದ ಹೆಸರೊಂದು ಏಕಮೇವಾದ್ವಿತೀಯ ಎಂಬಂತೆ ಮೆರೆಯುತ್ತಿದ್ದಾಗ ಅದೇ ಹೆಸರಿನ ಬೇರೆ ಬೇರೆ ಪಾತ್ರಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಎಲೆಮರೆಯ ಕಾಯಿಯಾಗಿ ಹೋಗಿಬಿಡುವ ಸಂಭವ ಇರುತ್ತದೆ. 

   ಈ ಪುಸ್ತಕವು ಅದೆಲ್ಲವನ್ನೂ ಸಮಗ್ರವಾಗಿ ಬೇರೆಬೇರೆಯಾಗಿ ಓದುಗರಿಗೆ ಕಟ್ಟಿಕೊಡುತ್ತದೆ. ಹಾಗೆ ಪ್ರತಿಯೊಂದಕ್ಕೂ ವಿವರಣೆಯನ್ನು ಕೊಡುವಾಗ ಅದು ಯಾವ ಪುರಾಣದ ಎಷ್ಟನೇ ಭಾಗದ ಎಷ್ಟನೇ ಅಧ್ಯಾಯದಲ್ಲಿ ಬರುತ್ತದೆ ಅಂತನ್ನುವ ಪುರಾವೆಯನ್ನೂ ಕೊಡುತ್ತದೆ. ಇದು ಎಷ್ಟು ಶ್ರಮದಾಯಕ ಕೆಲಸವೆಂದರೆ, ಸೀತೆಯನ್ನು ಹೊತ್ತೊಯ್ಯುವ ರಾವಣ ಅವಳನ್ನು ಯಾಕೆ ಬಲಾತ್ಕರಿಸಲಿಲ್ಲ ಅಂತ ವಿವರಿಸುವದಕ್ಕಾಗಿ ಲೇಖಕರು ಇನ್ಯಾವುದೋ ಪುರಾಣದಲ್ಲಿನ ಅಂಶಕ್ಕಾಗಿ ತಡಕಾಡಬೇಕಾಗುತ್ತದೆ. ಅಲ್ಲಿ ಕುಬೇರನ ಮಗನಾದ ನಳಕೂಬರ ಎಂಬ ಯಕ್ಷನನ್ನು ಶೋಧಿಸಬೇಕಾಗುತ್ತದೆ. ಆತನ ಶಾಪವನ್ನು ತೋರಿಸಬೇಕಾಗುತ್ತದೆ. ಅದಕ್ಕಾಗಿ ಲೇಖಕರು ಇನ್ಯಾವುದೋ ಕಾಲಘಟ್ಟಕ್ಕೆ ಹೋಗಬೇಕು. ಅಲ್ಲಿ ರಾವಣ ಪರಮಶಕ್ತಿಶಾಲಿಯಾಗಿ ಮೆರೆಯುತ್ತಿರುವಾಗ ರಂಭೆ ರಾವಣನ ಕಣ್ಣಿಗೆ ಬಿದ್ದಿದ್ದು, ಆತ ಆಕೆಯನ್ನು ಬಲಾತ್ಕರಿಸಿದ್ದು, ಅದರಿಂದ ರಂಭೆಯ ಪ್ರಿಯಕರನಾದ ನಳಕೂಬರ ಕೋಪಗೊಂಡಿದ್ದು, 'ಪರಸ್ತ್ರೀಯನ್ನು ಇನ್ನೊಮ್ಮೆ ಬಲಾತ್ಕರಿಸಿದಲ್ಲಿ ಅದೇ ನಿನಗೆ ಮೃತ್ಯು' ಎಂಬುದಾಗಿ ಆತ ರಾವಣನಿಗೆ ಶಾಪ ಕೊಟ್ಟಿದ್ದು-ಎಲ್ಲವನ್ನೂ ಶೋಧಿಸಿ ವಿವರಿಸಬೇಕಾಗುತ್ತದೆ. ಇದೆಲ್ಲವನ್ನೂ ಲೇಖಕರು ಆಯಾ ಪುರಾಣದ ಆಯಾ ಅಧ್ಯಾಯದ ಭಾಗಗಳನ್ನು ಉಲ್ಲೇಖದಂತೆ ಕಂಸದಲ್ಲಿ ಕೊಡುತ್ತ ಹೋಗಿದ್ದಾರೆ. 

   ಇಲ್ಲೊಂದು ಮಜ ನೋಡಿ: ಮನುಷ್ಯನೊಬ್ಬನನ್ನು ಬಿಟ್ಟು ಮತ್ಯಾರಿಂದಲೂ ಸಾವು ಬರಕೂಡದೆಂಬ ವರವನ್ನು ಬ್ರಹ್ಮನಿಂದ ಗಳಿಸಿರುವ ರಾವಣನಿಗೆ ಯಃಕಶ್ಚಿತ ಮನುಷ್ಯನ ಬಗ್ಗೆ ತಾತ್ಸಾರವಿದ್ದಂತಿದೆ. ಹೀಗಿರುವಾಗ ಸೀತೆಯ ಮೇಲೆ ವಾಂಛೆಯಿದ್ದರೂ ಆಕೆಯನ್ನು ಮುಟ್ಟದೇ ಹೋದ ರಾವಣನ ಪರಾಕ್ರಮದ ಬಗ್ಗೆ ಅನುಮಾನಿಸುವದು ನಮ್ಮದೇ ಚಪಲದಂತೆ ತೋರಿದರೆ, 
ರಾವಣನಿಗೆ ಸೀತೆಯ ಮೇಲೆ ಆಸಕ್ತಿಯೇ ಇರಲಿಲ್ಲವೆಂದೂ ಆತ ಅಪಹರಿಸಿದ್ದು ಶೂರ್ಪನಖಿಯ ಮೇಲಿನ ಮಮತೆಯಿಂದಾಗಿಯೆಂದೂ ಸಮಜಾಯಿಷಿ ಕೊಟ್ಟಿದ್ದು ಕವಿಯ ಹಂಬಲದಂತೆ ತೋರುತ್ತದೆ.  

   ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪುರಾಣಪಾತ್ರಗಳನ್ನು ವಿಶ್ಲೇಷಿಸುತ್ತಿದ್ದಂತೆ ಸಾಮಾನ್ಯ ಓದುಗನಿಗೆ ಪೌರಾಣಿಕ ಸಾಹಿತ್ಯವೆಂಬುದು ಒಂದು ಅಸಂಬದ್ಧ ಮತ್ತು ಅನುಮಾನಾಸ್ಪದ ವಿನ್ಯಾಸದಂತೆ ಗೋಚರಿಸುವ ಅಪಾಯವಿದ್ದೇ ಇದೆ. ಪುರಾಣಗಳನ್ನು ಮೌಲ್ಯಗಳ ಮೂಟೆ ಎಂಬಂತೆ ನೋಡುವದರ ಜೊತೆಜೊತೆಗೆ ಅವನ್ನೆಲ್ಲ ಒಂದು ಸಾಹಿತ್ಯವನ್ನಾಗಿಯೂ ನೋಡಬಯಸುವ ನನ್ನಂಥವರಿಗೆ ಈ ಎಲ್ಲ ಕಥನಗಳು ಯಾವುದೋ ತಲೆಕೆಟ್ಟ ಗಾಸಿಪ್ಪುಗಳ ಕಂತೆಯಂತೆ ಭಾಸವಾಗಕೂಡದು. ಯಾಕೆಂದರೆ ಗಾಸಿಪ್ಪುಗಳಲ್ಲಿ ಕೇವಲ ಅನುಮಾನ ಮತ್ತು ಗುಮಾನಿಗಳಿರುತ್ತವೆ. ವಾಸ್ತವ ಚಿತ್ರಣದಲ್ಲಿ ಮಾತ್ರ ಎಲ್ಲ ತಿಳಿಯಪಡಿಸಬಲ್ಲ ಒಂದು ಪೂರ್ಣವಿರಾಮವಿರುತ್ತದೆ. 

   ಬಹುಶಃ ಇಂಥ ನೂರಾರು ಅನುಮಾನ ಮತ್ತು ಗುಮಾನಿಗಳಿಗೆ who's who ಎಂಬಂತೆ ಒಂದು ಕ್ರಮಬದ್ಧ ರೀತಿಯಲ್ಲಿ ಈ ಪುಸ್ತಕ ಉತ್ತರಿಸುತ್ತ ಹೋಗುತ್ತದೆ. ನಮಗೆ ಗೊತ್ತೇ ಇರದ ಹಲವಾರು ದೃಷ್ಟಾಂತಗಳನ್ನು ಧಾತುಗಳೊಂದಿಗೆ 'ಹೈಪರ್ ಲಿಂಕ್'ನಂತೆ ಸಂಯೋಜಿಸುತ್ತ ಹೋಗುವ 'ಪುರಾಣನಾಮ ಚೂಡಾಮಣಿ'ಯು ಭಾರತೀಯ ಪುರಾತನ ಸಾಹಿತ್ಯವನ್ನು ಗ್ರಹಿಸಲು ಪ್ರಚೋದಿಸಬಲ್ಲ ಮಾರ್ಗಸೂಚಿಯಾಗಿದೆ. 
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 09.05.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)