Wednesday, October 24, 2018

ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 24.10.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, October 10, 2018

ಒಂದು ಮೊಟ್ಟೆಯೊಳಗಿನ ದಾರದ ಕತೆ!


ಕೆಲವೊಮ್ಮೆ ಹೀಗಾಗುತ್ತದೆ. ಅನೇಕ ಸಣ್ಣಸಣ್ಣ ಸಂಗತಿಗಳ ಬಗ್ಗೆ ಕೇಳಿರುತ್ತೇವೆ. ಅವುಗಳ ಪೈಕಿ ಬಹಳಷ್ಟು ನಮ್ಮೊಳಗೇ ರೂಢಿಗತವಾಗಿರುತ್ತವೆ. ಆದರೆ ಅದರ ಹಿನ್ನೆಲೆ ಬಗ್ಗೆ ನಾವು ಪ್ರಶ್ನೆಗಳ ಮೂಲಕ ತಡಕಾಡುವದಿಲ್ಲ. ಪರಿಣಾಮವಾಗಿ ಈ ಸಂಗತಿಗಳು ಒಂದೋ ಅಂಧಾನುಕರಣೆಯಾಗಿ ಅಥವಾ ಮೌಢ್ಯವಾಗಿ ಬಿಂಬಿತಗೊಳ್ಳುತ್ತ ಅದರಲ್ಲಿನ ಮೂಲತತ್ವವೇ ನಮಗೆ ಗೋಚರಿಸಲಿಕ್ಕಿಲ್ಲ. 

   ಹಿಂದೆ ನೆಲದಡಿಯಲ್ಲಿ ಗುಂಡಿಯಂಥದ್ದು ನಿರ್ಮಿಸಿ ಅದರೊಳಗೆ ದವಸಧಾನ್ಯ ಶೇಖರಿಸುತ್ತಿದ್ದುದು ನಮಗೆಲ್ಲ ಗೊತ್ತಷ್ಟೇ. ಮನುಷ್ಯನೊಬ್ಬ ನುಸುಳುವಷ್ಟು ಭೂಮಿಯ ಮೇಲೆ ಬಾಯಿ ತೆರೆದುಕೊಂಡು ನೆಲದಾಳದಲ್ಲಿ ವಿಸ್ತಾರವಾಗಿರುತ್ತಿದ್ದ ಈ ಉಗ್ರಾಣಗಳಲ್ಲಿ ಯಾರಾದರೂ ಇಳಿಯಬೇಕೆಂದಿದ್ದಲ್ಲಿ ಮೊದಲು ಕಂದೀಲನ್ನು ಇಳಿ ಬಿಡುತ್ತಿದ್ದರು. ಸಣ್ಣದೊಂದು ದೀಪ ಹೊತ್ತ ಈ ಕಂದೀಲನ್ನು ಗುಂಡಿಯೊಳಕ್ಕೆ ಕೆಲ ಹೊತ್ತು ಇಳಿಬಿಟ್ಟು ಹೊರ ತೆಗೆಯಲಾಗುತ್ತಿತ್ತು. ಹಾಗೆ ಹೊರತೆಗೆದ ಮೇಲೂ ದೀಪ ಉರಿಯುತ್ತಿದ್ದರೆ ಜನ ಗುಂಡಿಯೊಳಗೆ ಇಳಿಯುತ್ತಿದ್ದರು. ಉಗ್ರಾಣದಲ್ಲಿ ಉಸಿರಾಡಲು ಸಾಕಷ್ಟು ಆಮ್ಲಜನಕವಿದೆಯೋ ಇಲ್ಲವೋ ಅಂತನ್ನುವದಕ್ಕಾಗಿ ಇಂಥದೊಂದು ಪ್ರಯೋಗ ಆವತ್ತಿನ ಸಮುದಾಯ ಕಂಡುಕೊಂಡಿತ್ತು ಅಂತ ಗೊತ್ತಾಗಲು ನಮಗೆ ಅದೆಷ್ಟೋ ವರ್ಷ ಬೇಕಾದವು. 

   ಅಂಥದ್ದೇ ಇನ್ನೊಂದು ಸಂಗತಿ ನದಿಗಳಲ್ಲಿ ಎಸೆಯುವ ನಾಣ್ಯಗಳ ಕುರಿತದ್ದು. ಇವತ್ತಿಗೂ ನಮ್ಮಲ್ಲಿ ನದಿಗಳನ್ನು ಕಂಡರೆ ಸಾಕು, ಅಸಂಖ್ಯಾತರು ತಮ್ಮಲ್ಲಿದ್ದ ನಾಣ್ಯಗಳನ್ನು ನದಿಗೆ ಎಸೆಯುತ್ತಾರೆ. ತಮಾಷೆಯೆಂದರೆ, ರುಬಾಬಿನ ಜನರು ಹತ್ತು, ನೂರರ ನೋಟುಗಳನ್ನು ನದಿಯಲ್ಲಿ ತೇಲಿಬಿಟ್ಟಿದ್ದನ್ನೂ ನೋಡಿದ್ದೇನೆ! ಹಾಗಾದರೆ ನದಿಗಳಲ್ಲಿ ನಾಣ್ಯ ಎಸೆಯುವ ರೂಢಿ ಬಂದಿದ್ದಾದರೂ ಎಲ್ಲಿಂದ? ಅಸಲಿಗೆ ಇದೆಲ್ಲ ಶುರುವಾಗಿದ್ದು ಪುಣ್ಯಕ್ಷೇತ್ರಗಳಲ್ಲಿ. ಅಲ್ಲಿನ ನೀರಿನ ಮೂಲಗಳಲ್ಲಿ ಜನ ಸ್ನಾನ, ಪೂಜಾ ವಿಧಿವಿಧಾನಗಳನ್ನು ಪೂರೈಸುತ್ತಿದ್ದರು. ಆ ಮೂಲಕ ಅಲ್ಲಿ ಹರಿಯುತ್ತಿದ್ದ ನದಿಗಳು ಅಷ್ಟರಮಟ್ಟಿಗೆ ಕಲುಷಿತಗೊಳ್ಳುತ್ತಿದ್ದವು. ಹೀಗೆ ಕಲುಷಿತಗೊಂಡ ನೀರಿನ ಅಪಾಯವನ್ನು ಮನಗಂಡ ಆ ಕಾಲದ ಜನತೆ ತಕ್ಕಮಟ್ಟಿಗೆ ಒಂದು ಪರಿಹಾರವನ್ನೂ ಕಂಡುಕೊಂಡಿತು. ಅದು ಭಕ್ತಿಯ ಜೊತೆಜೊತೆಗೇ ಒಂದು ತಪ್ಪುದಂಡವನ್ನೂ ಕಟ್ಟಿಸುವ ಪ್ರಕ್ರಿಯೆ. ಹೀಗಾಗಿ ಆಗ ಚಲಾವಣೆಯಲ್ಲಿದ್ದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ನದಿಗೆ ಎಸೆಯುವದರ ಮೂಲಕ ಸಾಧ್ಯವಾದ ಮಟ್ಟಿಗೆ ನೀರನ್ನು ಶುದ್ಧೀಕರಿಸುವ ಕ್ರಿಯೆಗೆ ಚಾಲನೆ ಕೊಟ್ಟಿತು. ಶುದ್ಧೀಕರಣದ ಈ ಮೂಲತತ್ವ ಅರಿಯದೇ ನಾವು ಇವತ್ತು ಸ್ಟೇನ್ ಲೆಸ್ ಸ್ಟೀಲ್ ಅಥವಾ ನಿಕೆಲ್ ನಿಂದ ಮಾಡಿದ ನಾಣ್ಯಗಳನ್ನು ನದಿಗೆ ಎಸೆಯುತ್ತಿದ್ದೇವೆ! 

   ಇಂಥದ್ದೇ ಒಂದು ಸಣ್ಣ ಸಂಗತಿ ಮೊನ್ನೆ ನನ್ನಲ್ಲಿ ಪ್ರಶ್ನೆ, ಗುಮಾನಿ ಮತ್ತು ಕುತೂಹಲಗಳನ್ನು ಹುಟ್ಟುಹಾಕಿ ಒಂದಿಷ್ಟು ಹೊಸತನ್ನು ಕಲಿಸಿತು. ಮನೆಯಲ್ಲಿದ್ದ ಸಾಂಪ್ರದಾಯಿಕ ಕಾರಣಗಳಿಂದಾಗಿ ನಾನು ಮೊಟ್ಟೆಯಿಂದ ಸಾಕಷ್ಟು ವರ್ಷ 
ದೂರವುಳಿಯಬೇಕಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮೊಟ್ಟೆ/ಆಮ್ಲೆಟ್ ನಂಥದ್ದನ್ನು ಸೇವಿಸುತ್ತಿದ್ದೇನೆ. ಹಾಗೆಯೇ ಕೆಲದಿನಗಳಿಂದ ಮನೆಯಲ್ಲಿಯೇ ಮೆಕ್ಸಿಕನ್ ಆಮ್ಲೆಟ್, ಜಾಪನೀಸ್ ಆಮ್ಲೆಟ್ ಅಂತೆಲ್ಲ ನಾನೇ ಹೊಸಹೊಸ ಪ್ರಯೋಗ ಮಾಡುವದುಂಟು. ಮೊನ್ನೆ ಅಂಥದೊಂದು ಹೊಸ ಬಗೆಯ ಆಮ್ಲೆಟ್ ಮಾಡುವದೆಂದು ನಿರ್ಧರಿಸಿ ಮೊಟ್ಟೆಯನ್ನು ಒಡೆದಿದ್ದೆ. ಹಾಗೆ ಒಡೆದ ಮೊಟ್ಟೆಯನ್ನು ಇನ್ನೇನು ಚಮಚದಿಂದ ಐದಾರು ಸಲ ಕಲೆಸಬೇಕು ಅಂತನ್ನುವ ಹೊತ್ತಿನಲ್ಲಿ ಮೊಟ್ಟೆಯ ರಸದಲ್ಲೇನೋ ಹೊಸತು ಕಂಡಂತಾಯಿತು. ಸಾಮಾನ್ಯವಾಗಿ ಒಡೆದ ಮೊಟ್ಟೆಯಲ್ಲಿ ಕಾಣಿಸುವದೇನು? ಒಂದು ಚೆಂಡಾಕಾರದ ಹಳದಿಭಾಗ ಮತ್ತು ಲೋಳೆಯಂತಿರುವ ಬಿಳಿ ದ್ರವ ಅಷ್ಟೇ . ಆದರೆ ಇದೆಲ್ಲದರ ಮಧ್ಯೆ ದಟ್ಟ ಬಿಳಿ ಬಣ್ಣದ ಚಿಕ್ಕದೊಂದು ದಾರದಂಥ ಎಳೆ ಎಲ್ಲಿಂದ ಬಂತು? ಎಲ್ಲೋ ಏನೋ ಎಡವಟ್ಟಾಗಿದೆ ಅಂತ ಇನ್ನೊಂದು ಮೊಟ್ಟೆಯನ್ನು ಸೀಳಿದೆ. ಅಲ್ಲೂ ಅದೇ ಪುನರಾವರ್ತನೆ. ಹಳದಿಚೆಂಡು, ಬಿಳಿಯಾದ ನೀರಿನಂತಿರುವ ಲೋಳೆ ಮತ್ತು ಹಳದಿ ಚೆಂಡಿನ ಎರಡೂ ಬದಿಗೆ ಅಂಟಿಕೊಂಡಿರುವ ದಟ್ಟ ಬಿಳಿ ಬಣ್ಣದ ದಾರ!

   ಎಲಾ! ಕೆಟ್ಟು ಹೋದ ಹಳೆಯ ಮೊಟ್ಟೆ ಕೊಟ್ಟಿರುವೆ ಅಂತ ಅಂಗಡಿಯವನ ಹತ್ತಿರ ಅಸಮಾಧಾನ ವ್ಯಕ್ತಪಡಿಸಿದೆ. ಆ ಅಂಗಡಿಯವನು ಎಂಥಾ ಪುಣ್ಯಾತ್ಮ ಅಂದರೆ ಮೊಟ್ಟೆಯಲ್ಲಿನ ಸಮಸ್ಯೆ ಅರ್ಥಮಾಡಿಕೊಳ್ಳುವದಿರಲಿ, "ನಾನು ಮೊಟ್ಟೆಯನ್ನೇ ತಿನ್ನೋದಿಲ್ಲ ಸಾರ್" ಅಂತ ಕೈ ಎತ್ತಿಬಿಟ್ಟ! ಜೊತೆಗೆ ಇನ್ನೆರೆಡು ಹೊಸ ಮೊಟ್ಟೆ ಕೊಟ್ಟು ಕಳಿಸಿದ. ಅಷ್ಟೊತ್ತಿಗೆ ನನಗೂ ಸಾಕಾಗಿತ್ತು. ಮನೆಗೆ ಬಂದು ಫ್ರಿಡ್ಜ್ ತೆರೆದವನೇ ಮೊಟ್ಟೆಗಳನ್ನಿಟ್ಟೆ. ಮರುದಿನ ಹೊಸದಾಗಿ ತಂದ ಎರಡೂ ಮೊಟ್ಟೆ ಒಡೆದರೆ ಅಲ್ಲೂ ಅದೇ ಸಮಸ್ಯೆ. ಇಷ್ಟಕ್ಕೂ ನನ್ನಂಥವರಿಗೆ ಮೊಟ್ಟೆಯಲ್ಲಿ ಅದಿನ್ನೆಂಥ ರಾಕೆಟ್ ಸೈನ್ಸ್ ಅಡಗಿರಬಹುದೆಂಬ ಉಡಾಫೆ. ಹಾಗಾಗಿ ನಮ್ಮ ಪಾಲಿಗೆ ಇಲ್ಲಿರುವದು ಎರಡೇ ಎರಡು: ಹಳದಿಚೆಂಡು ಮತ್ತು ಲೋಳೆ. ಆದರೆ ಇದ್ದಕ್ಕಿದ್ದಂತೆ ಗೋಚರಿಸತೊಡಗಿದ್ದ ಈ ಹೊಸ ದಾರ ಕಿರಿಕಿರಿ ಮಾಡತೊಡಗಿತ್ತು. ನನಗೆ ಗೊತ್ತಿರುವ ಒಂದಿಷ್ಟು ಸ್ನೇಹಿತರಲ್ಲಿ ಇದರ ಬಗ್ಗೆ ವಿಚಾರಿಸಿದೆ. ಅವರೆಲ್ಲ ನನ್ನನ್ನು ವಿಚಿತ್ರವಾಗಿ ನೋಡಿ ನಕ್ಕಂತಾಯಿತು. ಯಾಕೆಂದರೆ ಮೊಟ್ಟೆಯ ಬಗ್ಗೆ ನನಗೆಷ್ಟು ಕಲ್ಪನೆ ಇತ್ತೋ ಅವರಿಗೂ ಅಷ್ಟೇ ಇದ್ದಿದ್ದು. 

   ಅಷ್ಟಾದಮೇಲೆ ಅಂತರಜಾಲದಲ್ಲಿ ಹುಡುಕಾಡತೊಡಗಿದೆ. ಸಮಸ್ಯೆಯೆಂದರೆ, ಕಂಪ್ಯೂಟರ್ ಗಳು ಬರಿ ಉತ್ತರ ಮಾತ್ರ ಕೊಡುತ್ತವೆ. ಅವು ಪ್ರಶ್ನಿಸುವದನ್ನು ಹೇಳಿಕೊಡುವದಿಲ್ಲ. ನನಗೆ ಇಲ್ಲಿ ಉತ್ತರ ಸಿಗಬೇಕೆಂದರೆ ಸರಿಯಾಗಿ ಪ್ರಶ್ನೆ ಕೇಳಬೇಕು. ಆದರೆ ಏನಂತ ಕೇಳುವದು? ಹೀಗಾಗಿ ನನಗಿರುವ ಗೊಂದಲದ ಬಗ್ಗೆ ಏನೇನೋ 'ಶೋಧಕ ಪದ' (key words)ಗಳನ್ನು ಬರೆದು ಹುಡುಕತೊಡಗಿದೆ. ಎಂಟತ್ತು ಬೇರೆಬೇರೆ ಶೋಧಕ ಪದಗಳನ್ನು ಹೊಡೆದ ಮೇಲೆ ಕೋಳಿಮೊಟ್ಟೆಯಲ್ಲಿನ ನೈಸರ್ಗಿಕ 
ತಂತ್ರಜ್ಞಾನದ ಬಗ್ಗೆ ಮಜದ ವಿಷಯಗಳು ಗೊತ್ತಾದವು.

   ಸುಮ್ಮನೇ ನಮ್ಮಷ್ಟಕ್ಕೆ ನಾವೇ ಒಂದಿಷ್ಟು ಸಿಲ್ಲಿ ಪ್ರಶ್ನೆ ಕೇಳಿಕೊಳ್ಳೋಣ: ಹೊರಜಗತ್ತಿನಲ್ಲಿ ಸಣ್ಣಪುಟ್ಟ ಘರ್ಷಣೆಗೆ ಒಳಗಾದರೂ ಮೊಟ್ಟೆಯೊಳಗೆ ಅವಿತಿರುವ ಹಳದಿಚೆಂಡು (Yolk) ಯಾಕೆ ಒಡೆಯುವದಿಲ್ಲ? ಈ ಮೊಟ್ಟೆಯನ್ನು ಎಷ್ಟೇ ತಲೆಕೆಳಗು ಮಾಡಿದರೂ ಮೊಟ್ಟೆಯೊಳಗಿನ ಹಳದಿ ಚೆಂಡು ಚಿಪ್ಪಿನ ಮಧ್ಯದಲ್ಲೇ ಸ್ಥಾಪಿತವಾಗಿರುತ್ತದೆಯೇ ಹೊರತು ಮೊಟ್ಟೆಯ ಎರಡೂ ತುದಿಗಳಲ್ಲಿ ಯಾಕೆ ಬಂದು ಕುಳಿತುಕೊಳ್ಳುವದಿಲ್ಲ? ಅದು ಹೇಗೆ ಭೂಮಿಯ ಗುರುತ್ವಬಲವನ್ನು ಮೀರಿ ಈ ಚೆಂಡು ತ್ರಿಶಂಕು ಸ್ಥಿತಿಯಂತೆ ನಟ್ಟನಡುವೆ ಇರಬಲ್ಲದು?

   ತೀರಾ ವೈಜ್ಞಾನಿಕ ಪರಿಭಾಷೆಯನ್ನು ಪ್ರಯೋಗಿಸದೇ ಸರಳವಾಗಿ ತಿಳಿದುಕೊಳ್ಳಬಹುದಾದರೆ, ಕೋಳಿ ಪ್ರತಿದಿನ ಒಂದು ಮೊಟ್ಟೆ ಇಡಬಲ್ಲದು. ಆದರೆ ಈ ಪ್ರಕ್ರಿಯೆ ಮಾತ್ರ ಅದ್ಭುತವಾದದ್ದು. ಮೊಟ್ಟ ಮೊದಲಿಗೆ ಕೋಳಿಯ ಅಂಡಾಶಯದಲ್ಲಿ ಸಾಸುವೆಕಾಳು ಗಾತ್ರದ ಹಳದಿಚೆಂಡು ಮಾತ್ರ ಉತ್ಪತ್ತಿಯಾಗುತ್ತದೆ. ಹಾಗೆ ನೋಡಿದರೆ ಕೋಳಿಯ ದೇಹದೊಳಗೆ ಈ ಹಳದಿ ಮುತ್ತುಗಳ ಒಂದು ಸರವೇ ಸಿದ್ಧವಾಗಿರುತ್ತದೆ. ಈ ಮುತ್ತಿನ ಸರದ ಪೈಕಿ ಯಾವದು ಮರುದಿನ ಮೊಟ್ಟೆಯಾಗುವ ಸರದಿಯಲ್ಲಿದೆಯೋ ಆ ಹಳದಿಮುತ್ತು ತನ್ನ ಗಾತ್ರ ಹಿಗ್ಗಿಸಿಕೊಳ್ಳುತ್ತ ಅಂಡಾಶಯದಿಂದ ಬಿಡುಗಡೆಗೊಂಡು ಅಂಡನಾಳವನ್ನು ಪ್ರವೇಶಿಸುತ್ತದೆ. 

   ಅಷ್ಟು ಚಿಕ್ಕ ಗಾತ್ರದ ಕೋಳಿಯ ಹೊಟ್ಟೆಯಲ್ಲಿರುವ ಅಂಡನಾಳವೆಂಬ ಪೈಪಿನ ಉದ್ದ ಇಪ್ಪತ್ತಾರು ಇಂಚುಗಳು. ಈ ಪೈಪಿನಲ್ಲಿ ಗಾತ್ರ ಹಿಗ್ಗಿಸಿಕೊಂಡ ಹಳದಿಚೆಂಡು ತನ್ನ 24 ಗಂಟೆಗಳ  ಪಯಣ ಮುಂದುವರೆಸುತ್ತದೆ. ಪೈಪಿನಲ್ಲಿ ಸೇರಿಕೊಂಡ ಮೂರು ಗಂಟೆಯ ಅವಧಿಯಲ್ಲಿ ಚೆಂಡಿನ ಸುತ್ತಲೂ ಬಿಳಿ ಲೋಳೆಯಂಥ ದ್ರವ (Albumen) ಆವರಿಸಿಕೊಳ್ಳುತ್ತದೆ. ಯಾವಾಗ ಈ ಬಿಳಿ ಲೋಳೆಯ ಸುರಕ್ಷಾ ಕವಚ ಹಳದಿಚೆಂಡಿಗೆ ದಕ್ಕುತ್ತದೆಯೋ, ಆಗ ಬಂದೂಕಿನ ನಳಿಕೆಯಲ್ಲಿ ತನ್ನಷ್ಟಕ್ಕೆ ತಾನು ತಿರುಗುತ್ತ ಚಲಿಸುವ ಬುಲೆಟ್ ನಂತೆ ಈ ಹಳದಿಚೆಂಡು ಕೂಡ ತನ್ನಷ್ಟಕ್ಕೆ ತಾನೇ ತಿರುಗುತ್ತ ಅಂಡನಾಳದ ಪೈಪಿನಲ್ಲಿ ಮುನ್ನುಗ್ಗತೊಡಗುತ್ತದೆ. ಈ ಪ್ರಕ್ರಿಯೆಯಿಂದ ಚೆಂಡಿನ ಎರಡೂ ಬದಿಗೆ ದಟ್ಟ ಬಿಳಿ ಬಣ್ಣದ ಲೋಳೆಯಂಥ ದಾರವೊಂದು ಸಿದ್ಧವಾಗುತ್ತದೆ. ಷಲಾಜೆ ಅಥವಾ ಖಲಾಜೆ (Chalazae) ಅಂತ ಕರೆಯಲ್ಪಡುವ ಈ ದಾರ ಹಳದಿಚೆಂಡನ್ನು ಮೊಟ್ಟೆಯಾಕಾರದ ಸುರಕ್ಷಾಕವಚದ ಮಧ್ಯಭಾಗದಲ್ಲಿರುವಂತೆ ಎಳೆದುಕಟ್ಟುತ್ತದೆ.
(ಉದಾ: ನಿಮ್ಮ ಕೈಯಲ್ಲಿರುವ ವಾಚ್ ನ ವೃತ್ತ ಹಳದಿಚೆಂಡಾದರೆ, ವಾಚಿನ ಎರಡೂ ತುದಿಯ ಬೆಲ್ಟ್ ಮೊಟ್ಟೆಯಲ್ಲಿನ ದಾರದಂತೆ!) 

   ಹೀಗೆ ಒಂದೆಡೆ ಎಡಬಲದಲ್ಲಿ ದಾರದಿಂದ ನಿಯಂತ್ರಣಕ್ಕೊಳಗಾಗುತ್ತ ನಟ್ಟನಡುವೆ ಸ್ಥಾಪಿತವಾಗುವ ಹಳದಿಚೆಂಡು ಎಷ್ಟೇ ಸಣ್ಣಪುಟ್ಟ ಘರ್ಷಣೆಗೆ ಒಳಪಟ್ಟರೂ ಒಡೆಯುವದಿಲ್ಲ. ಯಾಕೆಂದರೆ ಅದರ ಸುತ್ತಲಿನ ಲೋಳೆ ದ್ರವ ಶಾಕ್ ಆಬ್ಸರ್ವರ್ ನಂತೆ ಅಭಯ ನೀಡುತ್ತಿರುತ್ತದೆ. ಹೀಗೆ ಅಂಡನಾಳದಲ್ಲಿ ತನ್ನಷ್ಟಕ್ಕೆ ತಾನೇ ಪಕ್ವವಾಗುತ್ತ ಸಾಗುವ ಚೆಂಡಿನ  ಸುತ್ತ ಮುಂದಿನ ಇಪ್ಪತ್ತು ಗಂಟೆಗಳ ಅವಧಿಯಲ್ಲಿ ಅಸಂಖ್ಯಾತ ತ್ರಿಕೋನಾಕಾರದ ಚಿಪ್ಪುಗಳು ಒಂದಕ್ಕೊಂದು ಸೇರಿಕೊಂಡು ಒಂದು ಗಟ್ಟಿಯಾದ ಕವಚವನ್ನು ಕಟ್ಟಿಕೊಡುತ್ತವೆ. ಇದಿಷ್ಟು ಮೊಟ್ಟೆಯ ಇಪ್ಪತ್ನಾಲ್ಕು ಗಂಟೆಗಳ ಪರಿಭ್ರಮಣ. ಇಂಥ ಮೊಟ್ಟೆಯನ್ನು ಒಡೆದಾಗ ಹಳದಿಚೆಂಡನ್ನು ಹಿಡಿದುಕಟ್ಟಿರುವ ಗಟ್ಟಿಬಿಳಿ ದ್ರವದ ದಾರವೇ ನನಗೆ ಗೋಚರಿಸಿದ್ದು. ವಿಶೇಷವೆಂದರೆ, ಅದು ಮೊಟ್ಟೆಯ ತಾಜಾತನವನ್ನೂ ನಿರೂಪಿಸುತ್ತದೆ. ಅಂದರೆ ಮೊಟ್ಟೆ ತಾಜಾ ಅಥವಾ ಆರೋಗ್ಯಯುತವಾಗಿರುವಾಗ ಈ ದಾರ ಸ್ಪಷ್ಟವಾಗಿ ಕಾಣಿಸುತ್ತದೆ. 

ಇದ್ಯಾವುದೂ ಗೊತ್ತಿಲ್ಲದೇ ನಾನು ಕೆಟ್ಟ ಮೊಟ್ಟೆಯ ಬಗ್ಗೆ ಅಂಗಡಿಯವನಲ್ಲಿ ಜಗಳ ಮಾಡಿದ್ದೆ.. 
                                                                                -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 10.10.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)