Monday, December 23, 2019

ಮೊದಲ ರಾತ್ರಿಯ ಅನುಭವ!


'ಟ್ರಿಣ್.. ಟ್ರಿಣ್..'
ಜೇಬಿನಲ್ಲಿದ್ದ ನನ್ನ ಮೊಬೈಲ್ ರಿಂಗಾಗುತ್ತಿತ್ತು. ಆಗೆಲ್ಲ ಇವತ್ತಿನ ಹಾಗೆ ತರಹೇವಾರಿ ರಿಂಗ್ ಟೋನುಗಳು ಇರಲಿಲ್ಲ. ಅದು ಆಗಷ್ಟೇ ಪಾಲಿಫೋನಿಕ್ ಟೋನುಗಳು ಮೊಬೈಲಿಗೆ ಕಾಲಿಡುತ್ತಿದ್ದ ಕಾಲ. ನಾವಂತೂ ಬರಪೀಡಿತ ಪ್ರದೇಶದ ದನಗಳು ಹಸಿರಿನ ಹುಲ್ಲುಗಾವಲು ಪ್ರವೇಶಿಸುವಂತೆ ಶನಿವಾರದ ಸಂಜೆಯಾಗುತ್ತಿದ್ದಂತೆಯೇ ಎಂಜಿ ರೋಡಿನತ್ತ  ಧಾವಿಸುತ್ತಿದ್ದೆವು.
ಸುಳ್ಳುಸುಳ್ಳೇ ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಎಂಬಂತೆ ಬ್ರಿಗೇಡ್ ರೋಡಿನ ಇಕ್ಕಟ್ಟುಗಳಲ್ಲಿ ತಿರುಗಾಡುತ್ತಿದ್ದೆವು. ಹಾಗೆ ನಡೆಯುವಾಗ ಯಾವುದಾದರೂ ಕ್ಷಣದಲ್ಲಿ ಪಕ್ಕದಲ್ಲೇ ಲಲನೆಯೊಬ್ಬಳಿಂದ ಬಳುಕಿ ಬೀಳಬಹುದಾದ ದಿವ್ಯ ಪರಿಮಳದ ಪ್ರೋಕ್ಷಣೆಗಾಗಿ ಶತಪಥ ಹಾಕುತ್ತಲಿರುತ್ತಿದ್ದೆವು. ಆವತ್ತು ಸರಿಯಾದ ಅಂಥದೊಂದು ಸಂಜೆ ವೇಳೆಯಲ್ಲೇ ನನ್ನ ಮೊಬೈಲು ಕರ್ಕಶವಾಗಿ ರಿಂಗಾಗಿತ್ತು.

'ಟ್ರಿಣ್.. ಟ್ರಿಣ್..'

   ನೋಕಿಯಾ ಎಂಬ ಒಂಟಿಕೊಂಬಿನ ಮೊಬೈಲು ಹಿಡಿದುಕೊಂಡವನಿಗೆ ಪರದೆಯಲ್ಲಿ ಊರಿನ ಎಸ್ಟೀಡಿ 
ಕೋಡಿನ ಯಾವುದೋ ನಂಬರ್ ಗೋಚರಿಸಿತ್ತು. 'ಹಲೋ' ಅನ್ನುತ್ತಿದ್ದಂತೆಯೇ ಆ ಕಡೆಯ ವ್ಯಕ್ತಿ 
ಗಂಭೀರವಾಗಿ ಮಾತನಾಡತೊಡಗಿದ್ದ. ನನಗೋ ಆತನ ಬಗ್ಗೆ ಗೊತ್ತಿರಲಿಲ್ಲ. ಆತ ಮಾತ್ರ ಲಕ್ಷಣವಾಗಿ ನನ್ನ
ಹೆಸರು, ಕುಲ ಗೋತ್ರ ಹೇಳುತ್ತ, ಒಂದಿಷ್ಟು ಖಾಸಗಿ ವಿವರಗಳನ್ನು ಜಾಲಾಡಿ, ಅಸಲಿಗೆ 
ಮಾತನಾಡುತ್ತಿರುವದು ನಾನೇ ಹೌದೋ ಅಲ್ಲವೋ ಅಂತ ಖಾತ್ರಿ ಪಡಿಸಿಕೊಂಡಿದ್ದ. ಹಾಗೆ ಅಷ್ಟೊತ್ತೂ 
ಮಾತನಾಡಿದ್ದು ನಾನೇ ಅಂತ ಯಾವಾಗ ಆತನಿಗೆ ಖಾತ್ರಿಯಾಯಿತೋ, ಇದ್ದಕ್ಕಿದ್ದಂತೆ ಆಸಾಮಿಯ ವರಸೆಯೇ 
ಬದಲಾಗಿತ್ತು.

"ಲೇ.. ಯಾರು ಅಂತ ಗೊತ್ತಾತೇನಲೇ?"
'ಸಾರೀ, ಗೊತ್ತಾಗಲಿಲ್ಲ, ಯಾರು ಹೇಳಿ.'
"ಅಲೆಲೆಲೇ ಮಗನ, ಬೆಂಗಳೂರಿಗೆ ಹೋಗಿ ಭಾಷಾ ಜೊತಿ ನೀನೂ ಹಾಳಾಗಿಯಲ್ಲಲೇ.. ಅಲ್ಲಾ, 
ನನ್ನ ದನಿನೂ ಗೊತ್ತಾಗಿಲ್ಲೇನಲೇ, ನೋಡ ನೋಡ.. ಯಾನಮೂನಿ ಗೆಳೆತನಾ ಉಳಿಸಿಕೊಂಡೀ 
ನೋಡಲೇ.."  ಅಂತೆಲ್ಲ ನನ್ನನ್ನು ಹಿಗ್ಗಾಮುಗ್ಗಾ ಹಂಗಿಸತೊಡಗಿದ್ದ. 

   ಒಮ್ಮೊಮ್ಮೆ ಹೀಗೆಲ್ಲ ಆಗುವದುಂಟು. ಬಾಲ್ಯದ ಹೈಸ್ಕೂಲಿನ ಗೆಳೆಯನಿಗೆ ಹೇಗೋ ನಮ್ಮ ನಂಬರ್ ಸಿಕ್ಕಿರುತ್ತದೆ. ಅಲ್ಲಿಯವರೆಗೂ ಅವರ ಜೊತೆ ಫೋನಿನಲ್ಲಿ ಮಾತನಾಡುವದು ಹಾಗಿರಲಿ, ಮುಖ ಕೂಡ ನೋಡದೇ ಹದಿನೈದಿಪ್ಪತ್ತು ವರುಷಗಳಾಗಿರುತ್ತವೆ. ಇಲ್ಲಿ ಯಾವುದೋ ಕ್ಲೈಂಟ್ ಮೀಟಿಂಗ್ ನಲ್ಲಿರುವಾಗ ಫೋನ್ ರಿಂಗಾಗುತ್ತದೆ. 'ನಾನು ಯಾರು ಹೇಳಲೇ ನೋಡೂನು?' ಅಂತೆಲ್ಲ ಸವಾಲು ಹಾಕುತ್ತಾರೆ. ಅವರಿಗೇನೋ ಸರ್ಪ್ರೈಸ್ ಕೊಡುವ ಉಮೇದಿ. ಆದರೆ ಈ ಕಡೆ ಕೂತವರ ಪರಿಸ್ಥಿತಿ? ಅದು ದೇವರಿಗೇ ಪ್ರೀತಿ. ಹಾಗಾದಲೆಲ್ಲ ಆ ಕಡೆ ಇದ್ದವರು ಏನೇ ತಿದಿಯೊತ್ತಿದರೂ, ಅಬ್ಬರಿಸಿ ಬೊಬ್ಬಿಟ್ಟರೂ ಈ ಕಡೆ ಇದ್ದವರು ಪ್ಯಾಲಿಯಂತೆ 'ಹೂಂ, ಹೂಂ' ಅಂತಿರಬೇಕು. ಅದೇ ಚೆಂದ ಮತ್ತು ಅದೇ ನ್ಯಾಯ! 

   ಹಾಗಂತ ಆವತ್ತು ಮೀಟಿಂಗ್ ಅಂತೇನೂ ಇರಲಿಲ್ಲ. ಹೇಗೋ ಜಾಲಿಯಾಗಿ ತಿರುಗಾಡಿಕೊಂಡಿದ್ದ ಬ್ರಿಗೇಡ್ ರೋಡಿನಲ್ಲಿ ಹಾಗೆ ನನ್ನ ಮೊಬೈಲಿಗೆ ಕರೆಮಾಡಿ ತೊಡೆ ತಟ್ಟಿದವನ ಹೆಸರು ಮಾಡಿಮನಿ ಪಕ್ಯಾ ಅಲಿಯಾಸ್ ಮಹಡಿಮನೆ ಪ್ರಕಾಶ! ಒಂದು ಕಾಲದಲ್ಲಿ ಬಾಲ್ಯದ ಗೆಳೆಯ. ನಾವಿಬ್ಬರೂ ಒಂದರಿಂದ ಹತ್ತನೇ ಕ್ಲಾಸಿನವರೆಗೂ ಒಟ್ಟಿಗೇ ಓದಿದವರು. ಹೈಸ್ಕೂಲು ಮುಗಿಸಿದ ಮೇಲೆ ನಮ್ಮಿಬ್ಬರ ದಾರಿಗಳು ಬೇರೆಯಾಗಿದ್ದರಿಂದ ಕಾಲೇಜುಗಳು ಬೇರೆಯಾಗಿ, ಮುಂದೆ ಆತನ ತಂದೆಗೆ ದಾವಣಗೆರೆಗೆ ವರ್ಗವಾಗಿ ಕ್ರಮೇಣ ನಮ್ಮಿಬ್ಬರ ಭೇಟಿ ಕೂಡ ಅಪರೂಪವಾಗಿಬಿಟ್ಟಿತ್ತು. ನಾನು ಊರಲ್ಲಿರುವವರೆಗೂ ಆಗೊಮ್ಮೆ ಈಗೊಮ್ಮೆ ಆತನ ಸುದ್ದಿ ಗೊತ್ತಾಗುತ್ತಿತ್ತು. ಅದು ಬಿಟ್ಟರೆ ಅಸಾಮಿಯ ದರುಶನವೂ ಆಗಿದ್ದು ಕಾಣೆ.  

   ಇಂತಿಪ್ಪ ಪ್ರಕಾಶ ಅಲಿಯಾಸ್ ಪಕ್ಯಾ ದಿಢೀರ್ ಅಂತ ಬ್ರಿಗೇಡ್ ರೋಡಿನಲ್ಲಿ ಮೊಬೈಲ್ ಮೂಲಕ  ಉದ್ಭವವಾಗಿಬಿಟ್ಟಿದ್ದ. "ಮುಂದಿನ ಶನಿವಾರ ನನ್ನ ಮದುವಿಲೇಪಾ. ಅದ ಗದುಗಿನ್ಯಾ ಮಾಡ್ಕೋಳಾಕ ಹತ್ತೇನಿ. ಮಗನೇ, ನೀನಂತೂ ಬರಾಕ ಬೇಕು ನೋಡಪಾ.." ಅಂತ ಹಳೆಯ ಪ್ರೀತಿಯಿಂದ ಆಹ್ವಾನಿಸಿದ್ದ. ತಮಾಷೆಯೆಂದರೆ, ಈತನ ಮದುವೆ ದಿನವೇ ನಾನು ಗದುಗಿನಲ್ಲಿ ನನ್ನ ಇನ್ನೊಬ್ಬ ಗೆಳೆಯನ ತಂಗಿ ಮದುವೆಗೆ ಹೋಗಲೇಬೇಕಿತ್ತು. ಹೀಗಾಗಿ ಅದರೊಟ್ಟಿಗೇ ಈ ಪುಣ್ಯಾತ್ಮನ ಮದುವೆಗೂ ಹೋಗಿ ನಾಲ್ಕು ಅಕ್ಕಿಕಾಳು ಉದುರಿಸಿ ಬಂದರಾಯಿತು ಅಂದುಕೊಂಡೆ. 

   ದಿನಗಳು ಉರುಳುತ್ತಿದ್ದವು. ಮುಂದಿನ ಶನಿವಾರವೂ ಬಂತು. ನಿರ್ಧರಿಸಿದಂತೆ ಗದುಗಿಗೆ ಹೋದೆ. 
ಮೊತ್ತಮೊದಲಿಗೆ ಗೆಳೆಯನ ತಂಗಿ ಮದುವೆ ಮಾಡುವ ಅಂದುಕೊಂಡು ಅಲ್ಲಿನ ಕಲ್ಯಾಣಮಂಟಪಕ್ಕೆ 
ಕಾಲಿಟ್ಟಿದ್ದೆ. ಅಲ್ಲಿ ನೋಡಿದರೆ ನನ್ನ ಹಳೆಯ ಗೆಳೆಯ, ಗೆಳತಿಯರ ದಂಡೇ ಇದ್ದಂತಿತ್ತು. ಖುಷಿಯೆನಿಸಿತ್ತು. 
ಎಲ್ಲರಿಗೂ ಹಾಯ್-ಬಾಯ್ ವಿಶ್ ಮಾಡುತ್ತ ಹೋದವನಿಗೆ ಎದುರಿಗೆ ಕಂಡಿದ್ದು ಗೆಳೆಯನ ತಂಗಿ. ಅವಳ 
ಪಕ್ಕ ನಮ್ಮ ಪಕ್ಯಾ! ಹೊಗ್ಗೋ ಶಿವನೇ.. ಅನ್ನುತ್ತ ಇಬ್ಬರ ಮೇಲೂ ಅಕ್ಕಿಕಾಳು ಹಾಕುತ್ತ ಅಭ್ಯಾಸಬಲದಿಂದ 
ಕೈಮುಗಿದು ಬಿಟ್ಟಿದ್ದೆ! ಅದನ್ನು ನೋಡಿದ ನವ ವಧೂವರರು ಮುಸಿಮುಸಿ ನಕ್ಕಿದ್ದರು. 

   ಅಂತೂ ಇಂತೂ ನಮ್ಮ ಮಾಡಿಮನಿ ಪಕ್ಯಾ ಮದುವೆ ಆಗಿದ್ದ. ದಾವಣಗೆರೆಯಲ್ಲಿ ದೊಡ್ಡದೊಂದು ಬಟ್ಟೆ ಶೋರೂಮ್ ಇಟ್ಟಿದ್ದಾನಂತೆ. ಅಲ್ಲೂ ಒಂದು ಮಹಡಿಮನೆ ಕಟ್ಟಿಸಿದ್ದಾನಂತೆ. ಹಾಗಂತೆ ಹೀಗಂತೆ. ಇಂಥವೇ ವಿಷಯಗಳಿಂದ ಕೂಡಿದ ಸಂಜೆಹೊತ್ತಿನ ಮಾತುಕತೆ ನಮ್ಮ ಹಳೆಯ ನೆನಪುಗಳನ್ನೂ ಬಿತ್ತರಿಸುತ್ತಿತ್ತು. ಕಲ್ಯಾಣಮಂಟಪದ ಮಧ್ಯೆ ಬರೇ ಹಳೆಯ ಗೆಳೆಯರ ಮಧ್ಯೆ ಪಕ್ಯಾ ಕೂಡ ನವವಧುವಿನೊಂದಿಗೆ ಬಿಡುವು ಮಾಡಿಕೊಂಡು ಕೂತಿದ್ದ. ಈ ಜೋಡಿಗೆ ನಾವೆಲ್ಲ ಬಲು ಕಾಡಿದ್ದೆವು. ಎರಡು ಸ್ಟ್ರಾಗಳನ್ನು ಗಂಟು ಹಾಕಿ ಪೆಪ್ಸಿ ಕುಡಿಯಿರೆಂದು ಕಾಡಿದೆವು. ಅದು ಆಗದಿದ್ದಾಗ ಉಪ್ಪು ಸುರಿದಿದ್ದ
ಎಳೆನೀರು ಕುಡಿಸಿ ಕಾಡಿದೆವು. ಅದಾದ ಮೇಲೆ ಒಂದೇ ಜಿಲೇಬಿಯನ್ನು ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಗೆ ದಾಟಿಸಿದೆವು. ಅದೇ ಹುಮ್ಮಸ್ಸಿನಲ್ಲಿ ಸುತ್ತಮುತ್ತ ಹಿರಿಯರು ಯಾರೂ ಇಲ್ಲ ಅಂತ ಒಂದು ಏಲಕ್ಕಿಯನ್ನೂ ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಗೆ ದಾಟಿಸಿದೆವು! ವಧುವರರಿಬ್ಬರೂ ರೋಮಾಂಚನದಿಂದ ಆಟವಾಡಿದ್ದರು. ಇನ್ನೇನು ಮದುವೆ ಸಂಭ್ರಮದ ಹಂತ ಮುಗಿದು ಕಾಲವೆಂಬುದು ಇನ್ನೊಂದು ಮಜಲಿಗೆ ಹೊರಳುತ್ತಿತ್ತು.

   ಅಷ್ಟೊತ್ತಿಗೆ ಗಂಡಿನ ಕಡೆಯವರು ಕರೆಯುತ್ತಿದ್ದಾರೆ ಅಂತ ಮಾಡಿಮನಿ ಪಕ್ಯಾ ತನ್ನ ನವವಧುವಿನೊಂದಿಗೆ ತನ್ನ ಮದುವೆ ದಿರಿಸನ್ನೂ ಸಂಭಾಳಿಸುತ್ತ ಎದ್ದುಹೋದ. ಇದ್ದಕ್ಕಿದ್ದಂತೆ ನಮ್ಮ ಪಟಾಲಂ ಮಧ್ಯೆ ಸಣ್ಣದಾಗಿ ಗುಸುಗುಸು ಶುರುವಾಗತೊಡಗಿತು. ಅದು ಮದುವೆ ಮನೆಯಲ್ಲಿ  ಮಾಡಬಹುದಾದ ಅಸಲಿ ಛತ್ರಿ ಕೆಲಸದ ಬಗ್ಗೆ ನಡೆಯುತ್ತಿದ್ದ ಗುಸುಗುಸು. 'ಇದ್ದ ನಾಲ್ಕು ಜನರಲ್ಲಿ ಒಬ್ಬ ಹಾಳಾಗಿ ಊರು ಬಿಟ್ಟ' ಎಂಬಂತೆ ಗೆಳೆಯರ ಪೈಕಿ ಮೊದಲಿಗೆ ಊರು ಬಿಟ್ಟಿದ್ದು ನಾನೇ ಆಗಿದ್ದರಿಂದ ಇಂಥದೊಂದು ಛತ್ರಿ ಕೆಲಸಕ್ಕೆ ನಾನೇ ಅದ್ಭುತ ಐಡಿಯಾ ಕೊಡಬಹುದೆಂದು ಇಡೀ ಪಟಾಲಂ ನನ್ನ ಕಡೆ ನೋಡತೊಡಗಿತ್ತು.

   ಇಷ್ಟಕ್ಕೂ ಮದುವೆ ಗಂಡಿನ ಮೊದಲ ರಾತ್ರಿಗೆ ಆತನ ಗೆಳೆಯರು ಏನೇನೆಲ್ಲ ಭಾನಗಡಿ ಮಾಡಬಹುದು? ಪ್ರಸ್ತದ ಕೋಣೆಯ ಮಂಚದ ಹಾಸಿಗೆ ಕೆಳಗೆ ಸುಟ್ಟ ಹಪ್ಪಳಗಳನ್ನು ಇರಿಸುವದು ನಮ್ಮ ಪಾಲಿಗೆ ಹಳಿಸಿಹೋದ ಐಡಿಯಾ ಆಗಿತ್ತು. ಹಿಂದೊಮ್ಮೆ ಮತ್ತೊಬ್ಬ ಗೆಳೆಯನ ಮೊದಲರಾತ್ರಿಗೆ ಮಂಚದ ಮೇಲೆ ಮೈಗೆಲ್ಲ ಮೆತ್ತಿಕೊಳ್ಳುವ ಮಿಂಚು ಪೌಡರನ್ನು ಸಿಂಪಡಿಸಿ ಆತನ ಮನೆಯವರಿಂದ ಯದ್ವಾತದ್ವಾ ಬೈಸಿಕೊಂಡಿದ್ದೆವು. ಹೀಗಾಗಿ ಈ ಸಲ ಅಂಥ ಯಾವುದ್ಯಾವುದೋ ಅಸಡ್ಡಾಳ ಐಡಿಯಾಗಳನ್ನು ಉಪಯೋಗಿಸದೇ ಪಕ್ಯಾನ ಮೊದಲರಾತ್ರಿಯನ್ನು ಲಕ್ಷಣವಾಗಿ ಹಾಳುಮಾಡುವದೆಂದು  ನಿರ್ಧರಿಸಿದೆವು. ಆದರೆ ಏನು, ಹೇಗೆ, ಯಾವಾಗ ಪಕ್ಯಾನನ್ನು ಬಲಿಹಾಕುವದು ಅಂತೆಲ್ಲ ನಮ್ಮ ಟೀಮ್ ನನ್ನೆಡೆಗೆ ನೋಡತೊಡಗಿತ್ತು.            

   ದಿಢೀರಂತ ಐಡಿಯಾ ಬಂತು. ಯಾವತ್ತೋ ಏನೋ ಮಾಡಲು ಹೋಗಿ ಇನ್ನೇನೋ ಕಂಡುಕೊಂಡಿದ್ದ ಐಡಿಯಾ ಈಗ ಕೆಲಸಕ್ಕೆ ಬಂತು. ಥಟ್ಟಂತ ನನ್ನ ಮೊಬೈಲು ಹೊರಗೆಳೆದೆ. ಪಕ್ಕದಲ್ಲಿದ್ದ ಗೆಳೆಯನೊಬ್ಬನಿಗೆ ಯಾವುದಾದರೂ ಒಂದು ಸಾಲು ಹಾಡಲು ಹೇಳಿ ಆತನ ಹಾಡನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡತೊಡಗಿದೆ. ನಂತರ ರೆಕಾರ್ಡ್ ಮಾಡಿದ ಆ ಹಾಡಿನ ತುಣುಕನ್ನು ಆತನದೇ ಮೊಬೈಲ್ ನಂಬರಿಗೆ ರಿಂಗ್ ಟೋನ್ ಆಗುವಂತೆ ನನ್ನ ಮೊಬೈಲಿನಲ್ಲಿ assign ಮಾಡಿ, ಆತನಿಗೆ ನನ್ನ ಮೊಬೈಲಿಗೆ ಕರೆ ಮಾಡುವಂತೆ ಸೂಚಿಸಿದೆ. ಆತನ ಕರೆ ನನ್ನ ಮೊಬೈಲಿಗೆ ಬರುತ್ತಲೇ ನನ್ನ ಮೊಬೈಲಿನಿಂದ ಆತನ ಹಾಡೇ ರಿಂಗ್ ಟೋನ್ ಆಗಿ ಮೊಳಗತೊಡಗಿತ್ತು. 

   'ನಡೀರಲೇ ಕೆಲಸ ಆತು..' ಅಂತ ಕೆಟ್ಟ ಸಮಾಧಾನದಿಂದ ಕಿರುಚಿದೆ. ನಮ್ಮ ಹುಡುಗರಿಗೆ ತಳಬುಡ ಗೊತ್ತಾಗಿರಲಿಲ್ಲ. ನಿಧಾನಕ್ಕೆ ಎಲ್ಲರನ್ನೂ ಒಂದೆಡೆ ಮೂಲೆಗೆ ಕರೆತಂದೆ. ಅಲ್ಲಿದ್ದವರ ಪೈಕಿ ಹುಡುಗಿ ಅಣ್ಣನೂ ನನ್ನ ಚೆಡ್ಡಿದೋಸ್ತನೇ. ಆತನ ಮೊಬೈಲಿನಲ್ಲಿ ಅಲ್ಲಿದ್ದ ನಾಲ್ಕೈದು ಗೆಳೆಯರಿಗೆ ಅವರವರ ಧ್ವನಿಯಲ್ಲೇ ಒಂದೊಂದು ಸಾಲಿನ ನಾಲ್ಕೈದು ಹಾಡುಗಳನ್ನು ಹಾಡಿಸಿ ಚೆಡ್ಡಿದೋಸ್ತನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದೆ. ಅವೆಲ್ಲ ಹಾಡಿನ ತುಣುಕುಗಳಿಗೆ ನಮ್ಮೆಲ್ಲರ ಮೊಬೈಲ್ ನಂಬರಿಗೆ ಹೊಂದುವಂತೆ assign ಮಾಡಿಟ್ಟೆ. ಅಂದರೆ, ಅಲ್ಲಿದ್ದ ಹುಡುಗಿ ಅಣ್ಣನ ಮೊಬೈಲಿಗೆ ನಮ್ಮೆಲ್ಲರ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದಾಗ ಒಬ್ಬೊಬ್ಬರ ಕರೆಗೂ ಒಂದೊಂದು ಹಾಡು ಹುಡುಗಿ ಅಣ್ಣನ ಮೊಬೈಲಿನಲ್ಲಿ ರಿಂಗ್ ಟೋನಿನಂತೆ ಮೊಳಗಬೇಕಿತ್ತು! 

   ಇಷ್ಟಾದರೂ ನಮ್ಮ ಪಟಾಲಮ್ಮಿಗೆ ನನ್ನ ತರಲೆ ಐಡಿಯಾ ಗೊತ್ತಾಗಿರಲಿಲ್ಲ. ಕಾಲ ತಿರುಗುತ್ತಲೇ ಇತ್ತು. ನಾವೀಗ ಪ್ರಸ್ತದ ವ್ಯವಸ್ಥೆ ಮಾಡಿದ್ದ ಹುಡುಗಿ ಮನೆಯಲ್ಲಿದ್ದೆವು. ಅಂದಚೆಂದವಾಗಿ ಇನ್ನಿಲ್ಲದ ಪ್ರೀತಿಯಿಂದ ಅಲಂಕರಿಸಿದ್ದ ಕೋಣೆ. ಈಗಷ್ಟೇ ಹೊಸ ಕನಸೊಂದರ ನನಸಿಗೆ ಸಾಕ್ಷಿಯಾಗಲಿರುವ ಕೋಣೆ. ನಾವು ತಡ ಮಾಡಲಿಲ್ಲ. ಲಗುಬಗೆಯಿಂದ ಹುಡುಗಿ ಅಣ್ಣನ ಮೊಬೈಲನ್ನು ಒಂದು ಸೂಟ್ ಕೇಸಿನಲ್ಲಿ ಹಾಕಿ, ಮುಚ್ಚುವಾಗ ಅಡ್ಡವಾಗಿ ಒಂದು ಬಟ್ಟೆಯನ್ನಿಟ್ಟು ಸೂಟ್ ಕೇಸಿನ ಒಂದು ಬದಿ ಮಾತ್ರ  ಲಾಕ್ ಮಾಡಿದೆವು. ಅದರರ್ಥ: ಯಾರಾದರೂ ಅದರಲ್ಲಿರುವ ಮೊಬೈಲಿಗೆ ಕರೆ ಮಾಡಿದಾಗ ಸೂಟ್ ಕೇಸಿನಿಂದ ರಿಂಗ್ ಟೋನಿನ ಸದ್ದು ಮೊಳಗುವಂತಿರಬೇಕು.  ಆದರೆ ಸದ್ದು ಎಲ್ಲಿಂದ ಬರುತ್ತಿದೆ ಅಂತ ತಕ್ಷಣಕ್ಕೆ ಯಾರಿಗೂ ಗೊತ್ತಾಗುವಂತಿರಬಾರದು! ಅಷ್ಟಾಯಿತಲ್ಲ? ತಡ ಮಾಡದೇ ಸೂಟ್ ಕೇಸ್ ಪ್ರಸ್ತದ ಕೋಣೆಯಲ್ಲಿದ್ದ ಅಟ್ಟಕ್ಕೇರಿಸಿದೆವು. ಆಮೇಲೆ ಏನೂ ಗೊತ್ತಿಲ್ಲದ ಗಾಂಪರಂತೆ ಅಲ್ಲಿಂದ ಹೊರಬಿದ್ದೆವು ಮತ್ತು ಸೀದಾ ಅಲ್ಲೇ ಹತ್ತಿರವಿದ್ದ ನಮ್ಮ ಪಟಾಲಂ ಪೈಕಿಯೊಬ್ಬನ ಮನೆ ಹೊಕ್ಕು ಕುಳಿತೆವು. 

   ತ್ತ ಹುಡುಗಿ ಮನೆಯಲ್ಲಿ ತಡರಾತ್ರಿಯ ಚಟುವಟಿಕೆಗಳು ಶುರುವಾಗಿದ್ದವು. ಯಾವುದ್ಯಾವುದೋ ಆಚರಣೆಗಳು, ಪಾರಂಪರಿಕ ವಿಧಿವಿಧಾನಗಳು ಜರುಗುತ್ತಿದ್ದವು. ಇವೆಲ್ಲ ಸುದ್ದಿಗಳೂ ಅಲ್ಲಿದ್ದ ನಮ್ಮ ಶಿಷ್ಯನೊಬ್ಬನ ಮೂಲಕ ನಮಗೆ ರವಾನೆಯಾಗುತ್ತಲಿದ್ದವು. ಮುಂದಾಗಬಹುದಾದ ಪ್ರಳಯದ ನಿರೀಕ್ಷೆಯಲ್ಲಿದ್ದ ನಾವೆಲ್ಲ ಯಾವುದ್ಯಾವುದೋ ತಲೆಕೆಟ್ಟ ಜೋಕುಗಳನ್ನು ಹಾರಿಸುತ್ತ ಒಬ್ಬರನ್ನೊಬ್ಬರನ್ನು ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳುತ್ತಲಿದ್ದೆವು. ಹುಡುಗಿ ಅಣ್ಣನ ಮೊಬೈಲು ಪ್ರಸ್ತದ ಕೋಣೆಯಲ್ಲಿ ಇನ್ನಿಲ್ಲದ ಕಾತುರದಿಂದ ಉಸಿರಾಡುತ್ತಿತ್ತು. ರಾತ್ರಿ ಹನ್ನೊಂದೂವರೆಯ ಹೊತ್ತಿಗೆ ಹುಡುಗಿ ಮನೆಯವರೆಲ್ಲ ಕೆಳಗಿನ ಪಡಸಾಲೆಯಲ್ಲಿ ಮಲಗಲು ತಯಾರಿ ನಡೆಸುತ್ತಿದ್ದಾರೆಂದೂ, ಮನೆಯೀಗ ಶಾಂತವಾಗುತ್ತಿದೆಯೆಂದೂ ಅಲ್ಲಿದ್ದ ನಮ್ಮ ಶಿಷ್ಯ ವರ್ತಮಾನ ಬಿತ್ತರಿಸಿದ್ದ. ಅದಾದ ಹದಿನೈದು ನಿಮಿಷಕ್ಕೇ ನನ್ನ ಮೊಬೈಲಿಗೆ ಶಿಷ್ಯನ ಮೆಸೇಜೂ ಬಂತು: "ಪಕ್ಯಾ ಒಳಗ ಹೊಂಟಾನಾ. ಏನು ಮಾಡ್ತೀರೋ ನೋಡ್ರಿ!"
                                            
   ನಾವು ದಿಗ್ಗನೇ ಎದ್ದು ಕುಳಿತಿದ್ದೆವು. ಮುಂದಿನ ಹದಿನೈದು ನಿಮಿಷಗಳು ಯುಗಗಳಂತೆ ಭಾಸವಾಗತೊಡಗಿದ್ದವು. ಅಷ್ಟರಲ್ಲಿ ಶಿಷ್ಯನಿಂದ ಮತ್ತೊಂದು ಮೆಸೇಜು ಬಂತು: "ಪ್ರಸ್ತದ ರೂಮಿನ ಕಿಡಿಕ್ಯಾಗ ಲೈಟ್ ಕಾಣವಲ್ತು. ಪಕ್ಯಾ ಲೈಟ್ ಆಫ್ ಮಾಡ್ಯಾನ ಅಂತ ಅನಸತ್ತ.." 

   ಸರಿಯಾಗಿ ಅಷ್ಟೊತ್ತಿಗೆ ನನ್ನ ಕಡೆಯಿಂದ ಮೊದಲ ಪ್ರಹಾರ ನಡೆದಿತ್ತು. ಲಗುಬಗೆಯಿಂದ ಸೂಟ್ ಕೇಸಿನಲ್ಲಿದ್ದ ಗೆಳೆಯನ ಮೊಬೈಲಿಗೆ ಕರೆ ಮಾಡಿದ್ದೆ. ತಗಳ್ರಪ, ಸೂಟ್ ಕೇಸ್ ನೊಳಗಿನಿಂದ ನನ್ನದೇ ಧ್ವನಿಯಲ್ಲಿ ರೆಕಾರ್ಡ್ ಮಾಡಿ ನನ್ನದೇ ನಂಬರಿಗೆ assign ಮಾಡಿಟ್ಟಿದ್ದ ಹಾಡೊಂದು ರಿಂಗ್ ಟೋನಾಗಿ ಉಲಿಯತೊಡಗಿತ್ತು. 

'ಬಿದ್ದೆ ಬಿದ್ದೆ ಬಾತರೂಮಲ್ಲಿ.. ಲವ್ವಲ್ಲಿ ಬಿದ್ದೆ!'

   ಪಕ್ಯಾ ಟಣ್ಣನೇ ಮಂಚದ ಮೇಲೆ ಎದ್ದು ಕುಳಿತಿದ್ದ! ಪ್ರಸ್ತದ ಕೋಣೆಯಲ್ಲಿ ಎಲ್ಲಿಂದಲೋ ನನ್ನ ಹಾಡಿನ ಧ್ವನಿ ಕೇಳಿಬರುತ್ತಲೇ ಅರೇ,ಯಾರಿದು? ಯಾರ ಧ್ವನಿ? ಎಲ್ಲೋ ಕೇಳಿದಂತಿದೆಯಲ್ಲ ಅಂತೆಲ್ಲ ಗರಬಡಿದವನಿಗೆ, ಅದು ನನ್ನದೇ ಧ್ವನಿ ಅಂತ ಗೊತ್ತಾಗುವಷ್ಟರಲ್ಲೇ, ಇಲ್ಲಿಂದ ಮತ್ತೊಂದು ಪ್ರಹಾರ ನಡೆದಿತ್ತು. ನಾನು ನನ್ನ ಕರೆ ಕತ್ತರಿಸುತ್ತಲೇ ಇನ್ನೊಬ್ಬ ಗೆಳೆಯ ಸೂಟ್ ಕೇಸಿನಲ್ಲಿದ್ದ ಜಂಗಮವಾಣಿಗೆ ಕರೆಮಾಡಿದ್ದ. ಅದಕ್ಕೂ ಈ ಜಂಗಮವಾಣಿ ತನ್ನದೇ ಆದ ರೀತಿಯಲ್ಲಿ ಸ್ಪಂದಿಸಿತ್ತು. ಪರಿಣಾಮವಾಗಿ, ಕರೆ ಮಾಡಿದ್ದ ಗೆಳೆಯನ ಧ್ವನಿಯಲ್ಲಿದ್ದ ಮತ್ತೊಂದು ಹಾಡು ರಿಂಗ್ ಟೋನಾಗಿ ಪ್ರಸ್ತದ ಕೋಣೆಯ ಅಟ್ಟದಿಂದ ತೇಲಿ ಬಂದಿತ್ತು. 

'ಯಮ್ಮಾ ಯಮಾ, ಯಮ್ಮಾ ಯಮಾ, ಯೇ ಖೂಬಸೂರತ್ ಸಮಾ..' 

   ಹಾಡು ಕೇಳಿದ ಪಕ್ಯಾ ಗಾಬರಿಯಾಗಿದ್ದ. ನಮ್ಮೆಲ್ಲರ ಹಿಂದಿನ ಹುಡುಗಾಟಗಳು ಆತನ ಕಿವಿಗೂ ಬಿದ್ದಿದ್ದರಿಂದ ಈ ನನ್ನ ಮಕ್ಕಳು ಇಲ್ಲೇ ಎಲ್ಲೋ ಪ್ರಸ್ತದ ಕೋಣೆಯ ಕಿಡಕಿಯಾಚೆ ನಿಂತುಕೊಂಡಿರಬಹುದೇ? ಅಂತೆಲ್ಲ ಯೋಚಿಸತೊಡಗಿದ್ದ. ಅಷ್ಟರಲ್ಲಿ ನಮ್ಮ ಕಡೆಯಿಂದ ಮೂರನೇ ಬಾಣ ಚಲಾಯಿಸಿದ್ದೆವು. ಪ್ರಸ್ತದ ಕೋಣೆಯ ನಿಶ್ಶಬ್ದ ಪರಿಸರದಲ್ಲೂ ಸಣ್ಣದಾದ ದನಿಯೊಂದು ಅಬ್ಬರಿಸಿದಂತಿತ್ತು: 

'ಏನಲೇ ಪಕ್ಯಾ! ರಾತ್ರಿ ಹೊತ್ತು ಏನು ನಡಸೀಲೇ? ಎಲ್ಲಾ ಆರಾಮನಲೇ..'
                                                    
   ಈ ಸಲವಂತೂ ಪಕ್ಯಾ ಅಕ್ಷರಶಃ ಕುದ್ದು ಹೋಗಿದ್ದ ಅಂತ ಕಾಣುತ್ತದೆ. ಪ್ರಸ್ತದ ಕೋಣೆಯ ಲೈಟು ಹೊತ್ತಿ ಉರಿಯುತ್ತಿರುವದಾಗಿ ಅಲ್ಲಿದ್ದ ಶಿಷ್ಯ ವರ್ತಮಾನ ಕೊಟ್ಟ. ನಾವು ಬಿಡಲಿಲ್ಲ. ನಮ್ಮ ಅಂತಿಮ ಬ್ರಹ್ಮಾಸ್ತ್ರ ಬಿಟ್ಟೆವು. ಕೊನೆಯದಾಗಿ ಉಳಿದಿದ್ದ ಮೊಬೈಲೊಂದರಿಂದ ಕರೆ ಮಾಡಿದೆವು. ಈ ಸಲ ಯಾವನೋ ಒಬ್ಬ ನೆಟ್ಟಗೇ ಹಾಡು ಹಾಡದೇ ಪ್ರೈಮರಿಯ ಪಾಠವೊಂದನ್ನು ಸಾಂಗೋಪಾಂಗವಾಗಿ ಮೊಬೈಲಿನ ಮುಂದೆ ಓದಿದ್ದ. ಅಂತೆಯೇ ನಮ್ಮ ಕರೆಗೆ ಓಗೊಟ್ಟ ಸೂಟ್ ಕೇಸು ಸದರಿ ಪಾಠವನ್ನು ಯಥಾವತ್ತಾಗಿ ತೆರೆದಿಟ್ಟಿತ್ತು:

'ಢಣಢಣ ಗಂಟೆ ಬಾರಿಸಿತು. ನಮ್ಮಯ ಶಾಲೆ ತೆರೆಯಿತು. ಪಾಠ ಒಂದು: ಈತ ಗಣಪ. ಆತ ಈಶ. ಕಮಲಳ ಲಂಗ ಥಳಥಳ!’

ಎಂಬ ಓತಪ್ರೋತದ ಗೆಳೆಯನ ಪಾಠದ ಸಾಲುಗಳಿಗೆ ತಲೆಕೆಡಿಸಿಕೊಂಡ ಪಕ್ಯಾ ಯಾವುದಕ್ಕೂ ಇರಲಿ ಅಂತ ಸೀದಾ ಪ್ರಸ್ತದ ಕೋಣೆಯ ಬಾಗಿಲು ತೆರೆದು ಅಪರಾತ್ರಿಯಲ್ಲೇ ಬಾಲ್ಕನಿಗೆ ಬಂದು ನಿಂತಿದ್ದು, ಸುತ್ತೆಲ್ಲ ನಮಗಾಗಿ ಕಣ್ಣಾಡಿಸುತ್ತಿರುವದು
ನಮಗೆಲ್ಲ ಮುಸುಕುಮುಸುಕಾಗಿ ಕಾಣಿಸುತ್ತಿತ್ತು. ಅಷ್ಟಾದರೂ ನಾವು ಬಿಟ್ಟೂಬಿಡದೇ ರಾತ್ರಿ ಮೂರು ಗಂಟೆಯವರೆಗೂ ಒಂದರ ಮೇಲೊಂದು ತಿರುಗಿಸಿ ತಿರುಗಿಸಿ ಬಾಣ ಹೂಡುತ್ತಲೇ ಇದ್ದೆವು: ದನಿಗಳು ಸೂಟ್ ಕೇಸಿನೊಳಗಿಂದ ಉದ್ಭವಿಸುತ್ತಿವೆ ಅಂತ ಮದುವೆ ಗಂಡಿಗೆ ಗೊತ್ತಾಗುವವರೆಗೂ..  
*
   ಬೆಳಗಿನ ಒಂಭತ್ತಕ್ಕೆ ನಾವೆಲ್ಲ ಕಣ್ಣುಜ್ಜಿಕೊಂಡು ಚಹಾ ಕುಡಿಯುತ್ತಿದ್ದೆವು. ಹುಡುಗಿ ಮನೆಯಲ್ಲಿದ್ದ ಶಿಷ್ಯ ನಮ್ಮೆಲ್ಲರನ್ನೂ ತಿಂಡಿಗೆಂದು ಕರೆಯಲು ಬಂದಿದ್ದ. ನಾವು ಸ್ನಾನ ಕೂಡ ಮಾಡದೇ ಮುಖ ತೊಳೆದುಕೊಂಡು ತಿಂಡಿಗೆಂದು ಅಲ್ಲಿಗೆ ಹೋದಾಗ ಪಕ್ಯಾ ನಮ್ಮನ್ನೆಲ್ಲ ದುರುಗುಟ್ಟುತ್ತ ಅಟ್ಟಿಸಿಕೊಂಡು ಬಂದಿದ್ದ. ರಾತ್ರಿ ಸರಹೊತ್ತಿನವರೆಗೂ ನಾವು ಆತನನ್ನು ಬಿಡದೇ ಸತಾಯಿಸಿದ್ದೆವು. ಮೇಲಾಗಿ, ಮನೆಯವರು ಬೆಳಗಿನ ಆರಕ್ಕೇ ಪ್ರಸ್ತದ ಕೋಣೆಯ ಬಾಗಿಲು ತಟ್ಟಿದ್ದರು. ಹೀಗಾಗಿ ಆತನ ಕಣ್ಣುಗಳು ನಿದ್ದೆಯಿಲ್ಲದೇ ಕೆಂಡದುಂಡೆಗಳಾಗಿದ್ದವು. ನಮ್ಮೆಲ್ಲರನ್ನೂ ಒಂದೇಟಿಗೆ ಗಬಕ್ಕೆಂದು ಹಿಡಿದುಕೊಂಡು ಅಕ್ಷರಶಃ ಹೊರಗೆ ಅಟ್ಟುತ್ತಲೇ ಅರ್ಧ ಸಿಟ್ಟಿನಿಂದ, ಅರ್ಧ ಹತಾಶೆಯಿಂದ ಬಡಬಡಿಸಿದ:
"ಲೇ.. ಏನು ಹೊಲಸು ಅದೀರಲೇ.. ನೀವು ಮನಷ್ಯಾರ ಪೈಕಿ ಅಲ್ಲಲೇ.."       
*
   ಆವತ್ತಿನಿಂದ ಇವತ್ತಿನವರೆಗೂ ಪಕ್ಯಾ ಎಂಬ ಪ್ರಕಾಶ ನನ್ನೊಂದಿಗೆ ಮಾತನಾಡುವಾಗ ಮೊದಲಿಗೆ ಆತ ಶುರು ಮಾಡುವದೂ ಮತ್ತು ಕೊನೆಗೊಳಿಸುವದೂ ಒಂದೇ ಮಾತಿನೊಂದಿಗೆ,

'ಲೇ, ನೀನು ಮನಷ್ಯಾರ ಪೈಕಿ ಅಲ್ಲಲೇ..'                           

                                                                               -
ವಿಜಯ ಕರ್ನಾಟಕದ 'ಯುಗಾದಿ ವಿಶೇಷಾಂಕ- 2019' ರಲ್ಲಿ ಪ್ರಕಟಿತ. 


Wednesday, October 24, 2018

ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 24.10.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, October 10, 2018

ಒಂದು ಮೊಟ್ಟೆಯೊಳಗಿನ ದಾರದ ಕತೆ!


ಕೆಲವೊಮ್ಮೆ ಹೀಗಾಗುತ್ತದೆ. ಅನೇಕ ಸಣ್ಣಸಣ್ಣ ಸಂಗತಿಗಳ ಬಗ್ಗೆ ಕೇಳಿರುತ್ತೇವೆ. ಅವುಗಳ ಪೈಕಿ ಬಹಳಷ್ಟು ನಮ್ಮೊಳಗೇ ರೂಢಿಗತವಾಗಿರುತ್ತವೆ. ಆದರೆ ಅದರ ಹಿನ್ನೆಲೆ ಬಗ್ಗೆ ನಾವು ಪ್ರಶ್ನೆಗಳ ಮೂಲಕ ತಡಕಾಡುವದಿಲ್ಲ. ಪರಿಣಾಮವಾಗಿ ಈ ಸಂಗತಿಗಳು ಒಂದೋ ಅಂಧಾನುಕರಣೆಯಾಗಿ ಅಥವಾ ಮೌಢ್ಯವಾಗಿ ಬಿಂಬಿತಗೊಳ್ಳುತ್ತ ಅದರಲ್ಲಿನ ಮೂಲತತ್ವವೇ ನಮಗೆ ಗೋಚರಿಸಲಿಕ್ಕಿಲ್ಲ. 

   ಹಿಂದೆ ನೆಲದಡಿಯಲ್ಲಿ ಗುಂಡಿಯಂಥದ್ದು ನಿರ್ಮಿಸಿ ಅದರೊಳಗೆ ದವಸಧಾನ್ಯ ಶೇಖರಿಸುತ್ತಿದ್ದುದು ನಮಗೆಲ್ಲ ಗೊತ್ತಷ್ಟೇ. ಮನುಷ್ಯನೊಬ್ಬ ನುಸುಳುವಷ್ಟು ಭೂಮಿಯ ಮೇಲೆ ಬಾಯಿ ತೆರೆದುಕೊಂಡು ನೆಲದಾಳದಲ್ಲಿ ವಿಸ್ತಾರವಾಗಿರುತ್ತಿದ್ದ ಈ ಉಗ್ರಾಣಗಳಲ್ಲಿ ಯಾರಾದರೂ ಇಳಿಯಬೇಕೆಂದಿದ್ದಲ್ಲಿ ಮೊದಲು ಕಂದೀಲನ್ನು ಇಳಿ ಬಿಡುತ್ತಿದ್ದರು. ಸಣ್ಣದೊಂದು ದೀಪ ಹೊತ್ತ ಈ ಕಂದೀಲನ್ನು ಗುಂಡಿಯೊಳಕ್ಕೆ ಕೆಲ ಹೊತ್ತು ಇಳಿಬಿಟ್ಟು ಹೊರ ತೆಗೆಯಲಾಗುತ್ತಿತ್ತು. ಹಾಗೆ ಹೊರತೆಗೆದ ಮೇಲೂ ದೀಪ ಉರಿಯುತ್ತಿದ್ದರೆ ಜನ ಗುಂಡಿಯೊಳಗೆ ಇಳಿಯುತ್ತಿದ್ದರು. ಉಗ್ರಾಣದಲ್ಲಿ ಉಸಿರಾಡಲು ಸಾಕಷ್ಟು ಆಮ್ಲಜನಕವಿದೆಯೋ ಇಲ್ಲವೋ ಅಂತನ್ನುವದಕ್ಕಾಗಿ ಇಂಥದೊಂದು ಪ್ರಯೋಗ ಆವತ್ತಿನ ಸಮುದಾಯ ಕಂಡುಕೊಂಡಿತ್ತು ಅಂತ ಗೊತ್ತಾಗಲು ನಮಗೆ ಅದೆಷ್ಟೋ ವರ್ಷ ಬೇಕಾದವು. 

   ಅಂಥದ್ದೇ ಇನ್ನೊಂದು ಸಂಗತಿ ನದಿಗಳಲ್ಲಿ ಎಸೆಯುವ ನಾಣ್ಯಗಳ ಕುರಿತದ್ದು. ಇವತ್ತಿಗೂ ನಮ್ಮಲ್ಲಿ ನದಿಗಳನ್ನು ಕಂಡರೆ ಸಾಕು, ಅಸಂಖ್ಯಾತರು ತಮ್ಮಲ್ಲಿದ್ದ ನಾಣ್ಯಗಳನ್ನು ನದಿಗೆ ಎಸೆಯುತ್ತಾರೆ. ತಮಾಷೆಯೆಂದರೆ, ರುಬಾಬಿನ ಜನರು ಹತ್ತು, ನೂರರ ನೋಟುಗಳನ್ನು ನದಿಯಲ್ಲಿ ತೇಲಿಬಿಟ್ಟಿದ್ದನ್ನೂ ನೋಡಿದ್ದೇನೆ! ಹಾಗಾದರೆ ನದಿಗಳಲ್ಲಿ ನಾಣ್ಯ ಎಸೆಯುವ ರೂಢಿ ಬಂದಿದ್ದಾದರೂ ಎಲ್ಲಿಂದ? ಅಸಲಿಗೆ ಇದೆಲ್ಲ ಶುರುವಾಗಿದ್ದು ಪುಣ್ಯಕ್ಷೇತ್ರಗಳಲ್ಲಿ. ಅಲ್ಲಿನ ನೀರಿನ ಮೂಲಗಳಲ್ಲಿ ಜನ ಸ್ನಾನ, ಪೂಜಾ ವಿಧಿವಿಧಾನಗಳನ್ನು ಪೂರೈಸುತ್ತಿದ್ದರು. ಆ ಮೂಲಕ ಅಲ್ಲಿ ಹರಿಯುತ್ತಿದ್ದ ನದಿಗಳು ಅಷ್ಟರಮಟ್ಟಿಗೆ ಕಲುಷಿತಗೊಳ್ಳುತ್ತಿದ್ದವು. ಹೀಗೆ ಕಲುಷಿತಗೊಂಡ ನೀರಿನ ಅಪಾಯವನ್ನು ಮನಗಂಡ ಆ ಕಾಲದ ಜನತೆ ತಕ್ಕಮಟ್ಟಿಗೆ ಒಂದು ಪರಿಹಾರವನ್ನೂ ಕಂಡುಕೊಂಡಿತು. ಅದು ಭಕ್ತಿಯ ಜೊತೆಜೊತೆಗೇ ಒಂದು ತಪ್ಪುದಂಡವನ್ನೂ ಕಟ್ಟಿಸುವ ಪ್ರಕ್ರಿಯೆ. ಹೀಗಾಗಿ ಆಗ ಚಲಾವಣೆಯಲ್ಲಿದ್ದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ನದಿಗೆ ಎಸೆಯುವದರ ಮೂಲಕ ಸಾಧ್ಯವಾದ ಮಟ್ಟಿಗೆ ನೀರನ್ನು ಶುದ್ಧೀಕರಿಸುವ ಕ್ರಿಯೆಗೆ ಚಾಲನೆ ಕೊಟ್ಟಿತು. ಶುದ್ಧೀಕರಣದ ಈ ಮೂಲತತ್ವ ಅರಿಯದೇ ನಾವು ಇವತ್ತು ಸ್ಟೇನ್ ಲೆಸ್ ಸ್ಟೀಲ್ ಅಥವಾ ನಿಕೆಲ್ ನಿಂದ ಮಾಡಿದ ನಾಣ್ಯಗಳನ್ನು ನದಿಗೆ ಎಸೆಯುತ್ತಿದ್ದೇವೆ! 

   ಇಂಥದ್ದೇ ಒಂದು ಸಣ್ಣ ಸಂಗತಿ ಮೊನ್ನೆ ನನ್ನಲ್ಲಿ ಪ್ರಶ್ನೆ, ಗುಮಾನಿ ಮತ್ತು ಕುತೂಹಲಗಳನ್ನು ಹುಟ್ಟುಹಾಕಿ ಒಂದಿಷ್ಟು ಹೊಸತನ್ನು ಕಲಿಸಿತು. ಮನೆಯಲ್ಲಿದ್ದ ಸಾಂಪ್ರದಾಯಿಕ ಕಾರಣಗಳಿಂದಾಗಿ ನಾನು ಮೊಟ್ಟೆಯಿಂದ ಸಾಕಷ್ಟು ವರ್ಷ 
ದೂರವುಳಿಯಬೇಕಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮೊಟ್ಟೆ/ಆಮ್ಲೆಟ್ ನಂಥದ್ದನ್ನು ಸೇವಿಸುತ್ತಿದ್ದೇನೆ. ಹಾಗೆಯೇ ಕೆಲದಿನಗಳಿಂದ ಮನೆಯಲ್ಲಿಯೇ ಮೆಕ್ಸಿಕನ್ ಆಮ್ಲೆಟ್, ಜಾಪನೀಸ್ ಆಮ್ಲೆಟ್ ಅಂತೆಲ್ಲ ನಾನೇ ಹೊಸಹೊಸ ಪ್ರಯೋಗ ಮಾಡುವದುಂಟು. ಮೊನ್ನೆ ಅಂಥದೊಂದು ಹೊಸ ಬಗೆಯ ಆಮ್ಲೆಟ್ ಮಾಡುವದೆಂದು ನಿರ್ಧರಿಸಿ ಮೊಟ್ಟೆಯನ್ನು ಒಡೆದಿದ್ದೆ. ಹಾಗೆ ಒಡೆದ ಮೊಟ್ಟೆಯನ್ನು ಇನ್ನೇನು ಚಮಚದಿಂದ ಐದಾರು ಸಲ ಕಲೆಸಬೇಕು ಅಂತನ್ನುವ ಹೊತ್ತಿನಲ್ಲಿ ಮೊಟ್ಟೆಯ ರಸದಲ್ಲೇನೋ ಹೊಸತು ಕಂಡಂತಾಯಿತು. ಸಾಮಾನ್ಯವಾಗಿ ಒಡೆದ ಮೊಟ್ಟೆಯಲ್ಲಿ ಕಾಣಿಸುವದೇನು? ಒಂದು ಚೆಂಡಾಕಾರದ ಹಳದಿಭಾಗ ಮತ್ತು ಲೋಳೆಯಂತಿರುವ ಬಿಳಿ ದ್ರವ ಅಷ್ಟೇ . ಆದರೆ ಇದೆಲ್ಲದರ ಮಧ್ಯೆ ದಟ್ಟ ಬಿಳಿ ಬಣ್ಣದ ಚಿಕ್ಕದೊಂದು ದಾರದಂಥ ಎಳೆ ಎಲ್ಲಿಂದ ಬಂತು? ಎಲ್ಲೋ ಏನೋ ಎಡವಟ್ಟಾಗಿದೆ ಅಂತ ಇನ್ನೊಂದು ಮೊಟ್ಟೆಯನ್ನು ಸೀಳಿದೆ. ಅಲ್ಲೂ ಅದೇ ಪುನರಾವರ್ತನೆ. ಹಳದಿಚೆಂಡು, ಬಿಳಿಯಾದ ನೀರಿನಂತಿರುವ ಲೋಳೆ ಮತ್ತು ಹಳದಿ ಚೆಂಡಿನ ಎರಡೂ ಬದಿಗೆ ಅಂಟಿಕೊಂಡಿರುವ ದಟ್ಟ ಬಿಳಿ ಬಣ್ಣದ ದಾರ!

   ಎಲಾ! ಕೆಟ್ಟು ಹೋದ ಹಳೆಯ ಮೊಟ್ಟೆ ಕೊಟ್ಟಿರುವೆ ಅಂತ ಅಂಗಡಿಯವನ ಹತ್ತಿರ ಅಸಮಾಧಾನ ವ್ಯಕ್ತಪಡಿಸಿದೆ. ಆ ಅಂಗಡಿಯವನು ಎಂಥಾ ಪುಣ್ಯಾತ್ಮ ಅಂದರೆ ಮೊಟ್ಟೆಯಲ್ಲಿನ ಸಮಸ್ಯೆ ಅರ್ಥಮಾಡಿಕೊಳ್ಳುವದಿರಲಿ, "ನಾನು ಮೊಟ್ಟೆಯನ್ನೇ ತಿನ್ನೋದಿಲ್ಲ ಸಾರ್" ಅಂತ ಕೈ ಎತ್ತಿಬಿಟ್ಟ! ಜೊತೆಗೆ ಇನ್ನೆರೆಡು ಹೊಸ ಮೊಟ್ಟೆ ಕೊಟ್ಟು ಕಳಿಸಿದ. ಅಷ್ಟೊತ್ತಿಗೆ ನನಗೂ ಸಾಕಾಗಿತ್ತು. ಮನೆಗೆ ಬಂದು ಫ್ರಿಡ್ಜ್ ತೆರೆದವನೇ ಮೊಟ್ಟೆಗಳನ್ನಿಟ್ಟೆ. ಮರುದಿನ ಹೊಸದಾಗಿ ತಂದ ಎರಡೂ ಮೊಟ್ಟೆ ಒಡೆದರೆ ಅಲ್ಲೂ ಅದೇ ಸಮಸ್ಯೆ. ಇಷ್ಟಕ್ಕೂ ನನ್ನಂಥವರಿಗೆ ಮೊಟ್ಟೆಯಲ್ಲಿ ಅದಿನ್ನೆಂಥ ರಾಕೆಟ್ ಸೈನ್ಸ್ ಅಡಗಿರಬಹುದೆಂಬ ಉಡಾಫೆ. ಹಾಗಾಗಿ ನಮ್ಮ ಪಾಲಿಗೆ ಇಲ್ಲಿರುವದು ಎರಡೇ ಎರಡು: ಹಳದಿಚೆಂಡು ಮತ್ತು ಲೋಳೆ. ಆದರೆ ಇದ್ದಕ್ಕಿದ್ದಂತೆ ಗೋಚರಿಸತೊಡಗಿದ್ದ ಈ ಹೊಸ ದಾರ ಕಿರಿಕಿರಿ ಮಾಡತೊಡಗಿತ್ತು. ನನಗೆ ಗೊತ್ತಿರುವ ಒಂದಿಷ್ಟು ಸ್ನೇಹಿತರಲ್ಲಿ ಇದರ ಬಗ್ಗೆ ವಿಚಾರಿಸಿದೆ. ಅವರೆಲ್ಲ ನನ್ನನ್ನು ವಿಚಿತ್ರವಾಗಿ ನೋಡಿ ನಕ್ಕಂತಾಯಿತು. ಯಾಕೆಂದರೆ ಮೊಟ್ಟೆಯ ಬಗ್ಗೆ ನನಗೆಷ್ಟು ಕಲ್ಪನೆ ಇತ್ತೋ ಅವರಿಗೂ ಅಷ್ಟೇ ಇದ್ದಿದ್ದು. 

   ಅಷ್ಟಾದಮೇಲೆ ಅಂತರಜಾಲದಲ್ಲಿ ಹುಡುಕಾಡತೊಡಗಿದೆ. ಸಮಸ್ಯೆಯೆಂದರೆ, ಕಂಪ್ಯೂಟರ್ ಗಳು ಬರಿ ಉತ್ತರ ಮಾತ್ರ ಕೊಡುತ್ತವೆ. ಅವು ಪ್ರಶ್ನಿಸುವದನ್ನು ಹೇಳಿಕೊಡುವದಿಲ್ಲ. ನನಗೆ ಇಲ್ಲಿ ಉತ್ತರ ಸಿಗಬೇಕೆಂದರೆ ಸರಿಯಾಗಿ ಪ್ರಶ್ನೆ ಕೇಳಬೇಕು. ಆದರೆ ಏನಂತ ಕೇಳುವದು? ಹೀಗಾಗಿ ನನಗಿರುವ ಗೊಂದಲದ ಬಗ್ಗೆ ಏನೇನೋ 'ಶೋಧಕ ಪದ' (key words)ಗಳನ್ನು ಬರೆದು ಹುಡುಕತೊಡಗಿದೆ. ಎಂಟತ್ತು ಬೇರೆಬೇರೆ ಶೋಧಕ ಪದಗಳನ್ನು ಹೊಡೆದ ಮೇಲೆ ಕೋಳಿಮೊಟ್ಟೆಯಲ್ಲಿನ ನೈಸರ್ಗಿಕ 
ತಂತ್ರಜ್ಞಾನದ ಬಗ್ಗೆ ಮಜದ ವಿಷಯಗಳು ಗೊತ್ತಾದವು.

   ಸುಮ್ಮನೇ ನಮ್ಮಷ್ಟಕ್ಕೆ ನಾವೇ ಒಂದಿಷ್ಟು ಸಿಲ್ಲಿ ಪ್ರಶ್ನೆ ಕೇಳಿಕೊಳ್ಳೋಣ: ಹೊರಜಗತ್ತಿನಲ್ಲಿ ಸಣ್ಣಪುಟ್ಟ ಘರ್ಷಣೆಗೆ ಒಳಗಾದರೂ ಮೊಟ್ಟೆಯೊಳಗೆ ಅವಿತಿರುವ ಹಳದಿಚೆಂಡು (Yolk) ಯಾಕೆ ಒಡೆಯುವದಿಲ್ಲ? ಈ ಮೊಟ್ಟೆಯನ್ನು ಎಷ್ಟೇ ತಲೆಕೆಳಗು ಮಾಡಿದರೂ ಮೊಟ್ಟೆಯೊಳಗಿನ ಹಳದಿ ಚೆಂಡು ಚಿಪ್ಪಿನ ಮಧ್ಯದಲ್ಲೇ ಸ್ಥಾಪಿತವಾಗಿರುತ್ತದೆಯೇ ಹೊರತು ಮೊಟ್ಟೆಯ ಎರಡೂ ತುದಿಗಳಲ್ಲಿ ಯಾಕೆ ಬಂದು ಕುಳಿತುಕೊಳ್ಳುವದಿಲ್ಲ? ಅದು ಹೇಗೆ ಭೂಮಿಯ ಗುರುತ್ವಬಲವನ್ನು ಮೀರಿ ಈ ಚೆಂಡು ತ್ರಿಶಂಕು ಸ್ಥಿತಿಯಂತೆ ನಟ್ಟನಡುವೆ ಇರಬಲ್ಲದು?

   ತೀರಾ ವೈಜ್ಞಾನಿಕ ಪರಿಭಾಷೆಯನ್ನು ಪ್ರಯೋಗಿಸದೇ ಸರಳವಾಗಿ ತಿಳಿದುಕೊಳ್ಳಬಹುದಾದರೆ, ಕೋಳಿ ಪ್ರತಿದಿನ ಒಂದು ಮೊಟ್ಟೆ ಇಡಬಲ್ಲದು. ಆದರೆ ಈ ಪ್ರಕ್ರಿಯೆ ಮಾತ್ರ ಅದ್ಭುತವಾದದ್ದು. ಮೊಟ್ಟ ಮೊದಲಿಗೆ ಕೋಳಿಯ ಅಂಡಾಶಯದಲ್ಲಿ ಸಾಸುವೆಕಾಳು ಗಾತ್ರದ ಹಳದಿಚೆಂಡು ಮಾತ್ರ ಉತ್ಪತ್ತಿಯಾಗುತ್ತದೆ. ಹಾಗೆ ನೋಡಿದರೆ ಕೋಳಿಯ ದೇಹದೊಳಗೆ ಈ ಹಳದಿ ಮುತ್ತುಗಳ ಒಂದು ಸರವೇ ಸಿದ್ಧವಾಗಿರುತ್ತದೆ. ಈ ಮುತ್ತಿನ ಸರದ ಪೈಕಿ ಯಾವದು ಮರುದಿನ ಮೊಟ್ಟೆಯಾಗುವ ಸರದಿಯಲ್ಲಿದೆಯೋ ಆ ಹಳದಿಮುತ್ತು ತನ್ನ ಗಾತ್ರ ಹಿಗ್ಗಿಸಿಕೊಳ್ಳುತ್ತ ಅಂಡಾಶಯದಿಂದ ಬಿಡುಗಡೆಗೊಂಡು ಅಂಡನಾಳವನ್ನು ಪ್ರವೇಶಿಸುತ್ತದೆ. 

   ಅಷ್ಟು ಚಿಕ್ಕ ಗಾತ್ರದ ಕೋಳಿಯ ಹೊಟ್ಟೆಯಲ್ಲಿರುವ ಅಂಡನಾಳವೆಂಬ ಪೈಪಿನ ಉದ್ದ ಇಪ್ಪತ್ತಾರು ಇಂಚುಗಳು. ಈ ಪೈಪಿನಲ್ಲಿ ಗಾತ್ರ ಹಿಗ್ಗಿಸಿಕೊಂಡ ಹಳದಿಚೆಂಡು ತನ್ನ 24 ಗಂಟೆಗಳ  ಪಯಣ ಮುಂದುವರೆಸುತ್ತದೆ. ಪೈಪಿನಲ್ಲಿ ಸೇರಿಕೊಂಡ ಮೂರು ಗಂಟೆಯ ಅವಧಿಯಲ್ಲಿ ಚೆಂಡಿನ ಸುತ್ತಲೂ ಬಿಳಿ ಲೋಳೆಯಂಥ ದ್ರವ (Albumen) ಆವರಿಸಿಕೊಳ್ಳುತ್ತದೆ. ಯಾವಾಗ ಈ ಬಿಳಿ ಲೋಳೆಯ ಸುರಕ್ಷಾ ಕವಚ ಹಳದಿಚೆಂಡಿಗೆ ದಕ್ಕುತ್ತದೆಯೋ, ಆಗ ಬಂದೂಕಿನ ನಳಿಕೆಯಲ್ಲಿ ತನ್ನಷ್ಟಕ್ಕೆ ತಾನು ತಿರುಗುತ್ತ ಚಲಿಸುವ ಬುಲೆಟ್ ನಂತೆ ಈ ಹಳದಿಚೆಂಡು ಕೂಡ ತನ್ನಷ್ಟಕ್ಕೆ ತಾನೇ ತಿರುಗುತ್ತ ಅಂಡನಾಳದ ಪೈಪಿನಲ್ಲಿ ಮುನ್ನುಗ್ಗತೊಡಗುತ್ತದೆ. ಈ ಪ್ರಕ್ರಿಯೆಯಿಂದ ಚೆಂಡಿನ ಎರಡೂ ಬದಿಗೆ ದಟ್ಟ ಬಿಳಿ ಬಣ್ಣದ ಲೋಳೆಯಂಥ ದಾರವೊಂದು ಸಿದ್ಧವಾಗುತ್ತದೆ. ಷಲಾಜೆ ಅಥವಾ ಖಲಾಜೆ (Chalazae) ಅಂತ ಕರೆಯಲ್ಪಡುವ ಈ ದಾರ ಹಳದಿಚೆಂಡನ್ನು ಮೊಟ್ಟೆಯಾಕಾರದ ಸುರಕ್ಷಾಕವಚದ ಮಧ್ಯಭಾಗದಲ್ಲಿರುವಂತೆ ಎಳೆದುಕಟ್ಟುತ್ತದೆ.
(ಉದಾ: ನಿಮ್ಮ ಕೈಯಲ್ಲಿರುವ ವಾಚ್ ನ ವೃತ್ತ ಹಳದಿಚೆಂಡಾದರೆ, ವಾಚಿನ ಎರಡೂ ತುದಿಯ ಬೆಲ್ಟ್ ಮೊಟ್ಟೆಯಲ್ಲಿನ ದಾರದಂತೆ!) 

   ಹೀಗೆ ಒಂದೆಡೆ ಎಡಬಲದಲ್ಲಿ ದಾರದಿಂದ ನಿಯಂತ್ರಣಕ್ಕೊಳಗಾಗುತ್ತ ನಟ್ಟನಡುವೆ ಸ್ಥಾಪಿತವಾಗುವ ಹಳದಿಚೆಂಡು ಎಷ್ಟೇ ಸಣ್ಣಪುಟ್ಟ ಘರ್ಷಣೆಗೆ ಒಳಪಟ್ಟರೂ ಒಡೆಯುವದಿಲ್ಲ. ಯಾಕೆಂದರೆ ಅದರ ಸುತ್ತಲಿನ ಲೋಳೆ ದ್ರವ ಶಾಕ್ ಆಬ್ಸರ್ವರ್ ನಂತೆ ಅಭಯ ನೀಡುತ್ತಿರುತ್ತದೆ. ಹೀಗೆ ಅಂಡನಾಳದಲ್ಲಿ ತನ್ನಷ್ಟಕ್ಕೆ ತಾನೇ ಪಕ್ವವಾಗುತ್ತ ಸಾಗುವ ಚೆಂಡಿನ  ಸುತ್ತ ಮುಂದಿನ ಇಪ್ಪತ್ತು ಗಂಟೆಗಳ ಅವಧಿಯಲ್ಲಿ ಅಸಂಖ್ಯಾತ ತ್ರಿಕೋನಾಕಾರದ ಚಿಪ್ಪುಗಳು ಒಂದಕ್ಕೊಂದು ಸೇರಿಕೊಂಡು ಒಂದು ಗಟ್ಟಿಯಾದ ಕವಚವನ್ನು ಕಟ್ಟಿಕೊಡುತ್ತವೆ. ಇದಿಷ್ಟು ಮೊಟ್ಟೆಯ ಇಪ್ಪತ್ನಾಲ್ಕು ಗಂಟೆಗಳ ಪರಿಭ್ರಮಣ. ಇಂಥ ಮೊಟ್ಟೆಯನ್ನು ಒಡೆದಾಗ ಹಳದಿಚೆಂಡನ್ನು ಹಿಡಿದುಕಟ್ಟಿರುವ ಗಟ್ಟಿಬಿಳಿ ದ್ರವದ ದಾರವೇ ನನಗೆ ಗೋಚರಿಸಿದ್ದು. ವಿಶೇಷವೆಂದರೆ, ಅದು ಮೊಟ್ಟೆಯ ತಾಜಾತನವನ್ನೂ ನಿರೂಪಿಸುತ್ತದೆ. ಅಂದರೆ ಮೊಟ್ಟೆ ತಾಜಾ ಅಥವಾ ಆರೋಗ್ಯಯುತವಾಗಿರುವಾಗ ಈ ದಾರ ಸ್ಪಷ್ಟವಾಗಿ ಕಾಣಿಸುತ್ತದೆ. 

ಇದ್ಯಾವುದೂ ಗೊತ್ತಿಲ್ಲದೇ ನಾನು ಕೆಟ್ಟ ಮೊಟ್ಟೆಯ ಬಗ್ಗೆ ಅಂಗಡಿಯವನಲ್ಲಿ ಜಗಳ ಮಾಡಿದ್ದೆ.. 
                                                                                -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 10.10.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, September 26, 2018

ನಿಂತ ನೀರಲ್ಲಿ ನಿಂತಿಹನು ಪೂರ್ಣಚಂದಿರ!


ಳಚಿಬಿದ್ದ ಹೂವೊಂದು 
ರೆಂಬೆಗೆ ಹಿಂತಿರುಗುತ್ತಿದೆಯೇ?
ಆಹ್, ಚಿಟ್ಟೆ!

ಹಾಗಂತ ಮರುಳನಾಗಿ ಉದ್ಗರಿಸಿದವನು ಅರಕಿಡಾ ಮೊರಿತಾಕೆ. ನಾನು ಗಮನಿಸಿದಂತೆ ಸುಮಾರು ಕಡೆ ಈ ರಚನೆಯನ್ನು ಹಾಯ್ಕು ಮಾಸ್ಟರ್ ಗಳಾದ ಬಾಶೋ ಅಥವಾ ಶಿಕಿಯದೆಂದು ಬಿಂಬಿಸಲಾಗಿದೆ. ಆದರೆ ಮೂಲತಃ ಇದನ್ನು ಬರೆದವನು ಅರಕಿಡಾ ಮೊರಿತಾಕೆ. (Arakida Moritake 1473-1549) ಈತ ಬಾಶೋಗಿಂತ ಇನ್ನೂರು ವರ್ಷ ಮೊದಲೇ ಹುಟ್ಟಿದವನು. ಜಪಾನಿ ಕವಿ. ಅಲ್ಲಿನ ಕಾವ್ಯ ಪ್ರಾಕಾರವಾದ ಹೈಕಾಯ್ ಪದ್ಧತಿಯನ್ನು ಆಯ್ದುಕೊಂಡು ಅದರಲ್ಲೇ ಕಾವ್ಯ ಕೃಷಿ ಮಾಡಿದವನು. ಕೊನೆಗೊಮ್ಮೆ ಜೆನ್ ತತ್ವಕ್ಕೆ ಮನಸೋತು ಜಪಾನಿನ ದೇವಾಲಯವೊಂದಕ್ಕೆ ಮುಖ್ಯಸ್ಥನಾದವನು.

   ಇಷ್ಟಕ್ಕೂ ಜಪಾನಿನ ಸಾಹಿತ್ಯದ ಮೇಲೆ ಜೆನ್ ಪ್ರಭಾವ ಸಾಕಷ್ಟಿದೆಯಷ್ಟೇ. ಅದು ಅಲ್ಲಿನ ಪ್ರಾಕಾರಗಳಾದ ಹಾಯ್ಕು ಇರಬಹುದು, ಹೊಕ್ಕು ಇರಬಹುದು ಅಥವಾ ಹೈಕಾಯ್, ಹೈಬು, ಟಂಕಾ, ರೆಂಗಾ, ವಾಕಾ, ಸೆನ್ರ್ಯೂ ಇರಬಹುದು. ಎಲ್ಲದರಲ್ಲೂ ಜೆನ್ ಅಷ್ಟಿಷ್ಟು ಜಿನುಗುತ್ತಿರುತ್ತದೆ. ಅಂತೆಯೇ ಎಲ್ಲ ಗಂಭೀರತೆ ಮತ್ತು ಕಡುಕಷ್ಟಗಳ ನಡುವೆಯೂ ಒಂದು ನಿರಾಳತೆಯ ತುಂಟತನ ಚಿಮ್ಮುತ್ತಿರುತ್ತದೆ. 
*
   ಒಂದಾನೊಂದು ಕಾಲದಲ್ಲಿ ಜಪಾನಲ್ಲೊಬ್ಬ ಸೇನಾ ಮುಖ್ಯಸ್ಥನಿದ್ದ. ಜನರಲ್ ಎಂದು ಕರೆಯಲ್ಪಡುತ್ತಿದ್ದ ಆತನೋ ತನ್ನ ಕಾಲದ ಅನೇಕ ಯುದ್ಧಗಳಲ್ಲಿ ಅಪ್ರತಿಮ ಶೌರ್ಯವನ್ನು ಮೆರೆದಂಥವನು. ಹಲವಾರು ರೀತಿಯ ಯುದ್ಧಕಲೆಗಳಲ್ಲಿ ಪರಿಣತ. ಬದುಕಿನುದ್ದಕ್ಕೂ ಮುಖ ಗಂಟಿಕ್ಕಿಕೊಂಡು ಒಂದಿಲ್ಲ ಒಂದು ಕಡೆ ಯುದ್ಧರಂಗದಲ್ಲಿ ಭಾಗವಹಿಸುತ್ತಲೇ ಬಂದ ಈ ಜನರಲ್ ಗೆ ತನ್ನ ಶೌರ್ಯದ ಬಗ್ಗೆ ಹೆಮ್ಮೆ ಮತ್ತು ಕಂಡೂ ಕಾಣದ ಅಹಂಕಾರ. ನಿವೃತ್ತಿಯಾಗುತ್ತಿಯಾಗುವ ಘಳಿಗೆಯಲ್ಲಿ ಇಂಥ ಮಹಾನ್ ಯೋಧನಿಗೂ  ಒಂದು ಕೊರತೆ ಕಾಡತೊಡಗುತ್ತದೆ. 

   ಅದು ಆತನ ಬಿಲ್ಲುಗಾರಿಕೆಗೆ ಸಂಬಂಧಿಸಿದ್ದು. ಈ ಜನರಲ್ ವಿಭಿನ್ನ ರೀತಿಯ ಆಯುಧಗಳಲ್ಲಿ ಪಳಗಿದ್ದನಾದರೂ ಬಿಲ್ವಿದ್ಯೆಯಲ್ಲಿ ಮಾತ್ರ ಅಷ್ಟಕ್ಕಷ್ಟೇ. ಆತ ಎಷ್ಟು ಪ್ರಯತ್ನಿಸಿದರೂ ಒಬ್ಬ ಅದ್ಭುತ ಬಿಲ್ಲುಗಾರನಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ  ತನ್ನ ಈ ಕೊರತೆಯನ್ನು ನೀಗಿಸಬಲ್ಲ ಶಾಲೆಯನ್ನು ಹುಡುಕಿಕೊಂಡು ಹೊರಟ. ಕೊನೆಗೊಮ್ಮೆ ಅಂಥದೊಂದು ಶಾಲೆ ಸಿಕ್ಕಾಗ ಅಲ್ಲಿನ ಗುರು ಈತನಿಗೆ ಧ್ಯಾನದ ಮಹತ್ವವನ್ನು ಹೇಳಿಕೊಡತೊಡಗಿದ. ಜನರಲ್ ತನ್ನ ಸಹಜ ಗತ್ತಿನಿಂದ, 'ಬಿಲ್ಲು ಬಾಣಗಳಿಗೂ, ಧ್ಯಾನಕ್ಕೂ ಏನು ಸಂಬಂಧ?' ಅಂತೆಲ್ಲ ಉಡಾಫೆಯಿಂದ ಕೆಣಕಿದ.

   ಗುರುವೇನೋ ತಣ್ಣಗಿದ್ದ. ತನ್ನ ಪಾಡಿಗೆ ತಾನು ಪಕ್ಕದಲ್ಲಿದ್ದ ದೊಡ್ಡದೊಂದು ಮಣ್ಣಿನ ಕೊಳಗದಲ್ಲಿ ಸುಮ್ಮನೇ ವರ್ತುಲಾಕಾರದಲ್ಲಿ ಬೆರಳಾಡಿಸುತ್ತ ಜನರಲ್ ಗೆ ಪ್ರಶ್ನಿಸತೊಡಗಿದ:
" ಪಾತ್ರೆಯಲ್ಲಿ ನಿನಗೇನು ಕಾಣಿಸುತ್ತಿದೆ?"     
'ಪಾತ್ರೆಯಲ್ಲಿ ನೀರಿದೆ'
"ಹೌದು, ಆದರೆ ನೀರಿನಲ್ಲೇನಿದೆ?"
'ನೀವು ಬೆರಳಾಡಿಸಿದ್ದರಿಂದ ಅಲೆಗಳ ಮಧ್ಯೆ ಬೆಳಕಿನ ಪ್ರತಿಫಲನವೊಂದು ಛಿದ್ರಛಿದ್ರವಾದಂತಿದೆ. ಅಷ್ಟು ಬಿಟ್ಟರೆ ಮತ್ತೇನೂ ಇಲ್ಲ..' 

   ಗುರು ಬೆರಳನ್ನು ನೀರಿನಿಂದ ಹೊರತೆಗೆದ. ಕೆಲಹೊತ್ತಿನಲ್ಲೇ ಪಾತ್ರೆಯಲ್ಲಿನ ಅಲ್ಲೋಲಕಲ್ಲೋಲ ನಿಂತು ನೀರು ಸ್ತಬ್ದವಾಗತೊಡಗಿತ್ತು. ಗುರು ಸುಮ್ಮನೇ ಕಣ್ಣುಮುಚ್ಚಿಕೊಂಡು ನಿಂತಿದ್ದ. ಎಷ್ಟೋ ಕ್ಷಣಗಳು ಉರುಳಿಹೋದವು. ಅಲ್ಲೊಂದು ನಿಶ್ಶಬ್ಧತೆ ಆವರಿಸತೊಡಗಿತ್ತು. ಇತ್ತ ಜನರಲ್ ಅಸಹನೆಯಿಂದ ನಿಂತಲ್ಲಿ ನಿಲ್ಲಲಾಗದೇ ಚಡಪಡಿಸತೊಡಗಿದ್ದ. ಗುರು ಮಾತ್ರ ಕಣ್ಣು ತೆರೆಯದೇ ನಿಧಾನವಾಗಿ, 'ನೀರಿನ ಪಾತ್ರೆಯಲ್ಲಿ ಈಗೇನು ಕಾಣಿಸುತ್ತಿದೆ?' ಅಂದ. ಜನರಲ್ ಗೆ ಪಾತ್ರೆಯಲ್ಲಿ ವರ್ತುಲಾಕಾರದ ಅಲೆಗಳು  ಕಾಣಿಸಲಿಲ್ಲ. ಛಿದ್ರಗೊಂಡ ಬೆಳಕೂ ಕಾಣಿಸಲಿಲ್ಲ. ಅಲ್ಲಿದ್ದಿದ್ದು ಒಂದೇ: ಪೂರ್ಣಚಂದ್ರ!

   ಹಾಗೆ ಧ್ಯಾನದ ಮಹತ್ವವನ್ನು ಅರಿತ ಜನರಲ್ ಬಿಲ್ಲುಗಾರಿಕೆಯಲ್ಲಿ ಅದ್ಭುತ ಹಿಡಿತವನ್ನು ಸಾಧಿಸುತ್ತಾನೆ. ಅದಕ್ಕಾಗಿ ಆತ ಆ ಶಾಲೆಯಲ್ಲಿ ಸತತ ಹತ್ತು ವರ್ಷಗಳ ಕಾಲ ಅಭ್ಯಾಸ ಮಾಡುತ್ತಾನೆ. ಕೊನೆಗೊಮ್ಮೆ ತಾನು ಬಿಲ್ವಿದ್ಯೆಯಲ್ಲಿ ಕಲಿಯುವದೇನೂ ಉಳಿದಿಲ್ಲ ಅಂತ ಅನಿಸಿದಾಗ ಹೊರಡಲೆಂದು ಗುರುವಿನ ಬಳಿ ಅಪ್ಪಣೆ ಕೇಳುತ್ತಾನೆ. ಆಗ ಗುರು ಯಾವುದೋ ಒಂದು ಊರಿನ ಹೆಸರು ಹೇಳುತ್ತ, ಅಲ್ಲೊಬ್ಬ ಮಹಾನ್ ಬಿಲ್ಲುಗಾರನಿರುವನೆಂದೂ, ಸಾಧ್ಯವಾದರೆ ಆತನನ್ನೊಮ್ಮೆ ಭೇಟಿಯಾಗಿ ಬಿಲ್ಲುಗಾರಿಕೆಯ ಬಗ್ಗೆ ಸಮಾಲೋಚನೆ ಮಾಡಬೇಕೆಂದೂ ಹೇಳಿ ಜನರಲ್ ನನ್ನು ಬೀಳ್ಕೊಡುತ್ತಾನೆ. 

   ಅಷ್ಟೊತ್ತೂ ತನ್ನ ಬಾಣದ ಕೌಶಲ್ಯದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದ ಜನರಲ್ ಗೆ ತನ್ನ ಗುರು ಸೂಚಿಸಿದ ಊರನ್ನು ನೆನೆದು ಕುತೂಹಲ ಮೂಡುತ್ತದೆ. ಯಾಕೆಂದರೆ ಅದು ತಾನೇ ಹುಟ್ಟಿದ ಊರು. ದಟ್ಟ ಕಾಡಿನ ಅಂಚಿನಲ್ಲಿದ್ದ ನದಿದಡದ ಪುಟ್ಟ ಹಳ್ಳಿ. ಅಂಥ ಕುಗ್ರಾಮದಲ್ಲಿ ಇನ್ನೆಂಥ ಬಿಲ್ವಿದ್ಯಾ ಪರಿಣತನಿರಬಹುದೆಂಬ ಉಡಾಫೆಯಲ್ಲಿತನ್ನೂರನ್ನು ಹುಡುಕುತ್ತ ಬಂದ ಜನರಲ್ ಗೆ ಊರಿಗೆ ಕಾಲಿಡುತ್ತಿದ್ದಂತೆ ವಿಚಿತ್ರ ಅನುಭವವಾಗತೊಡಗುತ್ತದೆ.  ಯಾಕೆಂದರೆ ಅಲ್ಲಿ ಇದ್ದಿದ್ದೇ ಒಂದೈವತ್ತು ಮಣ್ಣಿನ ಗುಡಿಸಲು. ಎಲ್ಲ ಗುಡಿಸಲುಗಳ ಗೋಡೆ, ಕಿಟಕಿಗಳ ಮೇಲೆ ಬಣ್ಣಬಣ್ಣದ ಒಂದೊಂದು ವರ್ತುಲಾಕಾರದ ಟಾರ್ಗೆಟ್. ಅದರ ನಟ್ಟನಡುವೆ ಇರುವಂಥ 'ಬುಲ್ಸ್ ಐ'ಯನ್ನು ಛೇದಿಸಿರುವ ಒಂದು ಬಾಣ! ಅಷ್ಟೇ ಯಾಕೆ, ಅಲ್ಲಿರುವ ನೂರಾರು ಮರದ ಬೊಡ್ಡೆಗಳ ಮೇಲೂ ಇಂಥದ್ದೇ ಚಿತ್ರಣ. ಎಲ್ಲ ಕಡೆಗಳಲ್ಲೂ ಬಣ್ಣಬಣ್ಣದ ಟಾರ್ಗೆಟ್ ಮತ್ತು ನಟ್ಟನಡುವೆ ಒಂದು ಬಾಣ ಅಥವಾ ಬಾಣದ ತೂತು.

   ಹುಟ್ಟಿದೂರಿಗೆ ಬಂದ ಜನರಲ್ ಗೆ ಇದ್ಯಾರಪ್ಪ ಪುಣ್ಯಾತ್ಮ ಅಂತೆನಿಸಿಬಿಡುತ್ತದೆ. ಸೈನ್ಯಾಧಿಕಾರಿಯ ಗತ್ತಿನಲ್ಲಿ ಆತ ಊರ ಜನರನ್ನೆಲ್ಲ ನದಿ ದಡದಲ್ಲಿ ಒಂದೆಡೆ ಸೇರಿಸುತ್ತಾನೆ. ಅಲ್ಲಿದ್ದ ಟಾರ್ಗೆಟ್ಟಿನ ಬಾಣಗಳನ್ನು ತೋರಿಸುತ್ತ, ಯಾರು ಈ ಗುರಿಕಾರ? ಅಂತೆಲ್ಲ ವಿಚಾರಿಸುತ್ತಾನೆ. ವಿಚಿತ್ರವೆಂದರೆ ಊರಿನವರಿಗೂ ಈ ವಿಷಯ ಗೊತ್ತಿಲ್ಲ. ಅಸಲಿಗೆ ದೈನಂದಿನ ಕೆಲಸಗಳಲ್ಲಿ ಅವರೆಷ್ಟು ವ್ಯಸ್ತರು ಅಂದರೆ, ಈ ಟಾರ್ಗೆಟ್ ಮತ್ತು ಬಾಣದಂಥ ವಿಷಯವನ್ನೇ ಅವರು ಗಮನಿಸಿರುವದಿಲ್ಲ. ಆದರೆ ಜನರಲ್ ಊರಿನವರ ಮಾತು ನಂಬುವದಿಲ್ಲ. ಅವರೇನೋ ಮುಚ್ಚಿಡುತ್ತಿದ್ದಾರೆ ಎಂಬಂತೆ ಭಾವಿಸುತ್ತಾನೆ.  ಸಂಜೆಯೊಳಗಾಗಿ ಆ ಬಿಲ್ಲುಗಾರನನ್ನು ತನ್ನೆದುರು ಹಾಜರು ಮಾಡಿಸುವಂತೆ ಆರ್ಭಟಿಸಿ ಅಲ್ಲಿದ್ದವರನ್ನೆಲ್ಲ ಕಳಿಸುತ್ತಾನೆ. 

   ಬೆಳಗಿನಿಂದ ಕಂಗೆಟ್ಟಿರುವ ಜನರಲ್. ಜೊತೆಗೆ ಚಿಂತಾಕ್ರಾಂತ ಕೂಡ. ಹೊಸ ಬಿಲ್ವಿದ್ಯಾ ಚತುರನಿಗಾಗಿ ನದಿ ದಡದ ಕಲ್ಲೊಂದರ ಮೇಲೆ ಕೂತು ಕೂತು ಸಂಜೆಯಾಗುತ್ತಲಿದೆ. ಯಾರೊಬ್ಬರ ಸುಳಿವಿಲ್ಲ. ಅಷ್ಟೊತ್ತಿಗೆ ಎಲ್ಲಿಂದಲೋ ದನಿಯೊಂದು ಕೇಳಿಬರುತ್ತಲಿದೆ: 
'ನೀವು ಯಾರಿಗೋ ಕಾಯುತ್ತಲಿದ್ದೀರಿ ಅಂತ ಕಾಣಿಸುತ್ತದೆ.'

   ದನಿ ಬಂದ ದಿಕ್ಕಿನಲ್ಲಿ ತಲೆಯೆತ್ತಿ ನೋಡುತ್ತಾನೆ. ಎದುರಿಗೆ ಎಂಟರ ಪೋರ! ಅಸಡ್ಡೆಯಿಂದ 'ಹೋಗಾಚೆ' ಎನ್ನುವಂತೆ ದೂರದಿಂದಲೇ ಕೈ ಜಾಡಿಸುತ್ತಿರುವ ಜನರಲ್ ನ ಆಂಗಿಕಭಾಷೆಯನ್ನು ಅರ್ಥಮಾಡಿಕೊಳ್ಳದ ಈ ಪೋರ ಸೀದಾ ಎದುರಿಗೇ ಬಂದು ನಿಂತಿದ್ದಾನೆ ಮತ್ತು ವಿನಮ್ರನಾಗಿ ಹೇಳುತ್ತಿದ್ದಾನೆ:
“ಊರಿನ ಗೋಡೆಗಳ ಮೇಲೆ ಬಾಣ ಹೊಡೆದವರಿಗಾಗಿ ನೀವು ಕಾಯುತ್ತಿದ್ದೀರಂತೆ. ಹಾಗಾಗಿ ನಿಮ್ಮನ್ನು ಕಾಣಬೇಕೆಂದು ನಮ್ಮಪ್ಪ ನನ್ನನ್ನು ಇಲ್ಲಿಗೆ ಕಳಿಸಿದ..”

   ಗಾಬರಿ ಬೀಳುವ ಸರದಿ ಈಗ ಜನರಲ್ ದು. ಎಲಾ! ಅಷ್ಟೂ ಟಾರ್ಗೆಟ್ಟುಗಳ ಮಧ್ಯೆ ಬಾಣ ಹೊಡೆದಿದ್ದು ಈ ಪೋರನೇ?  ಮೊದಮೊದಲಿಗೆ ಅಸಡ್ಡೆಯಿಂದ ಜಬರಿಸುವ ಜನರಲ್ ನಂತರ ಸಾವರಿಸಿಕೊಂಡು ಪೋರನಿಗೆ ದುಂಬಾಲು ಬೀಳುತ್ತಾನೆ. ಹೇಗೆ ಇದೆಲ್ಲ ಸಾಧ್ಯ ಅಂತೆಲ್ಲ ಅವನನ್ನು ರಮಿಸತೊಡಗುತ್ತಾನೆ. ಜನರಲ್ ನಿತ್ರಾಣನಾಗಿದ್ದನ್ನು ನೋಡಿ ಪೋರ ನಿಧಾನಕ್ಕೆ ತನ್ನ ಚಿಪ್ಪಿನಿಂದ ಹೊರಬಂದು ಅರಳುತ್ತಿದ್ದಾನೆ. ಇಲ್ಲೀಗ ಪವಾಡ ಘಟಿಸುತ್ತಲಿದೆ. ಲೋಕದಲ್ಲಿ ಯಾರಿಗೂ ಗೊತ್ತಿರದ ತನ್ನ ಬಿಲ್ವಿದ್ಯಾ ಚತುರತೆಯನ್ನು ಪೋರ ತನ್ನ ಅಬೋಧ ನಗುವಿನೊಂದಿಗೆ ವಿವರಿಸುತ್ತಿರುವನು:

"ಇಕೋ ಇಲ್ಲಿ ನೋಡಿ, ಬಿಲ್ಲಿನಲ್ಲಿ ಹೀಗೆ ಬಾಣ ಇರಿಸಬೇಕು. ಹೀಗೆ ಬಿಲ್ಲಿನ ದಾರ ಬಿಗಿಯಾಗುವವರೆಗೆ ಎಳೆದು ಒಂದೇಟಿಗೆ ಬಾಣ ಚಿಮ್ಮಿಸಬೇಕು. ಆಮೇಲೆ ಬಾಣ ಎಲ್ಲಿ ಹೋಗಿ ನಾಟುತ್ತದೆಯೋ ಅಲ್ಲಿ ಹೋಗಿ ಟಾರ್ಗೆಟ್ಟಿನ ಚಿತ್ರ ಬಿಡಿಸಬೇಕು!"

ಮತ್ತೀಗ, ಜನರಲ್ ಮತ್ತೇ ತನ್ನ ಶಾಲೆಗೆ ಹಿಂದಿರುಗಿ ನಿಜದ ಧ್ಯಾನ ಕಲಿಯತೊಡಗಿದ
*
   ಅರಕಿಡಾ ಮೊರಿತಾಕೆ ಕಂಡಿದ್ದು ಬರೀ ಚಿಟ್ಟೆಯನ್ನು ಮಾತ್ರ. ಅಸಲಿಗೆ ಹೂವು ಅಲ್ಲಿರಲೇ ಇಲ್ಲ. ಕಳಚಿದ್ದು ಆತನ ಮನದಲ್ಲಿ ಮಾತ್ರ. ಇಷ್ಟಕ್ಕೂ ಪವಾಡ ಜರಗುವದು ಇಲ್ಲೇ: ಕಳಚಿದ ಹೂವೊಂದು ಮರಳಿ ರೆಂಬೆಯನ್ನೇರಲು ಎಷ್ಟು ಹಗುರಾಗಬೇಕು ಮತ್ತು ಎಷ್ಟು ಖಾಲಿಯಾಗಬೇಕು?                                                                                    
                                                                               -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 26.09.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


Wednesday, September 12, 2018

ಕಲೆ, ಕಲಾವಿದ ಮತ್ತು ಗೋಡೆಯಾಚೆಯ ಜಗತ್ತು!


ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 12.09.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, August 29, 2018

ಮುಗ್ಧತೆಯ ಕೊಂದವನಿಗೆ ಸಾಕ್ಷಾತ್ಕಾರವೂ ಒಂದು ಶೋಕಿ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 29.08.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, August 1, 2018

ಕತೆಯೆಂಬ ಮಂತ್ರವೂ ಕಥನವೆಂಬ ತಂತ್ರವೂ..


ಒಂದು ಕತೆಯ ಆರಂಭಕ್ಕೆ ಹಲವಾರು ದಾರಿಗಳು. ಈ ದಾರಿಯಲ್ಲಿ ಕತೆಗಾರನಿಗೆ ಕತೆ ಎಂಬುದು ಯಾವಾಗಲೂ ಒಂದು ಮಂತ್ರ. ಕಥನವೆಂಬುದು ಬರೀ ತಂತ್ರ. ಸಾಮಾನ್ಯವಾಗಿ ಕತೆ ಹೇಳುವ ಕತೆಗಾರ ಒಂದೊಂದು ರೀತಿಯ ಕಥನತಂತ್ರ ಪ್ರಯೋಗಿಸುತ್ತಾನೆ. ಆದರೆ ಒಮ್ಮೊಮ್ಮೆ ಇದೆಲ್ಲ ತಿರುವುಮುರುವು ಆಗುವದೂ ಉಂಟು. ಕತೆಗಿಂತ ಕಥನವೇ ಮಂತ್ರವಾಗಿ ಕತೆಯೇ ತಂತ್ರವಾಗುವದೂ ಉಂಟು. ಸಿಂಪಿ ಲಿಂಗಣ್ಣನವರು 'ಉತ್ತರ ಕರ್ನಾಟಕದ ಜಾನಪದ ಕಥೆಗಳು' (ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಕೃತಿಯಲ್ಲಿ ಒಂದು ಮಜವಾದ ಚಿತ್ರಣ ಕೊಡುತ್ತಾರೆ. ಹೇಗೆ ಒಂದು ಕುಟುಂಬದಲ್ಲಿ ಕತೆಗಿಂತ ಕಥನವೊಂದು ಮುಖ್ಯವಾಗಿ, ಅದು ಜೀವ-ಜೀವಗಳ ನಡುವೆ ಕೂಡಿಕೆಯ ಮಿಡಿಯಾಗಿ, ಸಹವಾಸದ ಪಾಡಾಗಿ ಕೊನೆಗೊಮ್ಮೆ ಅದು ಸಖ್ಯದ ಫಲವಾಗಿ ಪರಿಣಮಿಸುತ್ತದೆ ಅಂತ  ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಾರೆ. 

   ಬಹುಶಃ ಅದೊಂದು ಉತ್ತರ ಕರ್ನಾಟಕದ ಯಾವುದೋ ಊರು. ಈಗಷ್ಟೇ ಮಳೆ ನಿಂತಿರುವ ಇಳಿಸಂಜೆ. ವರಾಂಡದಲ್ಲಿ ಪವಡಿಸಿರುವ ಒಂದು ಜೋಡಿ. ಇಬ್ಬರೂ ಓರಗೆಯವರಲ್ಲ. ಇಬ್ಬರೂ ಸರೀಕರಲ್ಲ. ಒಬ್ಬರ ಬಾಯಲ್ಲಿ ಹಲ್ಲು ಉಳಿದಿಲ್ಲ, ಇನ್ನೊಬ್ಬರ ಬಾಯಲ್ಲಿ ಹಲ್ಲೇ  ಬೆಳೆದಿಲ್ಲ. ಆದರೂ ಒಡನಾಡಿಗಳು. ಒಂದು ಅಜ್ಜಿ, ಒಂದು ಮೊಮ್ಮಗು. ಅಜ್ಜಿಯ ಕೈಹಿಡಿದ ಯಜಮಾನ ಯಾವತ್ತೋ ಕೈಬಿಟ್ಟು ಬಹುದೂರ ಸಾಗಿರುವನು. ಸದ್ಯಕ್ಕೆ ಮೊಮ್ಮಗನ ರೂಪದಲ್ಲೂ ಹೆಸರಿನಲ್ಲೂ ಉದ್ಭವನಾಗಿರುವನು. ಬೊಚ್ಚುಬಾಯಿಯ ಮಗು. ಅದು ಬಾಯನ್ನಗಲಿಸಿ ನಕ್ಕಾಗಲೆಲ್ಲ ಆ ನಗುವಿನಲ್ಲಿ ಯಜಮಾನನನ್ನೇ ಕಾಣುವ ಅಜ್ಜಿ. ಈ ಹಂತದಲ್ಲಿ ಅಜ್ಜಿಗೆ ಮಗು ಒಡನಾಡಿಯೋ, ಮಗುವಿಗೆ ಅಜ್ಜಿ ಒಡನಾಡಿಯೋ ಅಂತ ವಿವರಿಸುವದು ಕಷ್ಟ. ಹೀಗಿರುವಾಗ, ಈ ಇಳಿಸಂಜೆಯ ಕಥಾಸಮಯದಲ್ಲಿ ಒಡನಾಡಿಗಳ ಮಧ್ಯೆ ಅಲ್ಲೊಂದು ಪ್ರಶ್ನೋತ್ತರಮಾಲಿಕೆ ನಡೆಯುತ್ತಿದೆ. ಅಜ್ಜಿ ಕೇಳುತ್ತಿದ್ದಾಳೆ: 
"ಕತೆಕತೆ ಕಬ್ಬು, ಮೈಯೆಲ್ಲ ಜಿಬ್ಬು. ತಿಂದೆಯೋ? ಉಗುಳಿದೆಯೋ?"                 '                
'ಉಗುಳಿದೆ'                                                                                                                              "ಎಲ್ಲಿ ಉಗುಳಿದೆ?"                                                                                                              'ತಿಪ್ಪೆಯಲ್ಲಿ ಉಗುಳಿದೆ'                                                                                                            "ತಿಪ್ಪೆ ಏನು ಕೊಟ್ಟಿತು?"                                                                                                              'ಗೊಬ್ಬರ ಕೊಟ್ಟಿತು'                                                                                                                      "ಗೊಬ್ಬರ ಏನು ಮಾಡಿದೆ?"                                                                                                       'ತೋಟಕ್ಕೆ ಹಾಕಿದೆ'                                                                                                                      "ತೋಟ ಏನು ಕೊಟ್ಟಿತು?"                                                                                                            'ಹೂವು ಕೊಟ್ಟಿತು'                                                                                                                        "ಹೂವು ಏನು ಮಾಡಿದೆ?"                                                                                                              'ದೇವರಿಗೆ ಏರಿಸಿದೆ'                                                                                                                        "ದೇವರೇನು ಕೊಟ್ಟ?"                                                                                                                    'ಗಳಗಂಟೆ ಕೊಟ್ಟ!'  

ಗಳಗಂಟೆ ಅಂತನ್ನುವಾಗ ಚಡ್ಡಿ ಹಾಕಿರದ ಮಗುವಿನ ಮುಖದಲ್ಲಿ ಖೊವ್ವೆನ್ನುವ ತುಂಟ ನಗು! ಅದನ್ನು ನಿಸೂರಾಗಿ ತುಂಬಿದ್ದು ಅಜ್ಜಿ. ಇದು ಕತೆಯೊಂದು ತನ್ನಷ್ಟಕ್ಕೆ ತಾನೇ ಸಿದ್ಧವಾಗುತ್ತಿದ್ದ ರೀತಿ. ಅಥವಾ, ಆಗಷ್ಟೇ ಹೆಣೆಯುತ್ತಿದ್ದ ಕತೆಯನ್ನು ಆಲಿಸಲೆಂದು ಆಕೆ ಶ್ರೋತೃಗಳನ್ನು ಸಿದ್ಧಪಡಿಸುತ್ತಿದ್ದ ರೀತಿ. ಇಂಥದೊಂದು ಪ್ರಶ್ನೋತ್ತರಮಾಲಿಕೆ ಸುರಳೀತವಾಗಿ ನಡೆಯಿತೆಂದರೆ ಆ ಸಂಜೆ ಅಲ್ಲೊಂದು ಹೊಸ ಕತೆ ಹುಟ್ಟಿತೆಂದೇ ಲೆಕ್ಕ. ಮಕ್ಕಳ ಕಥಾಸಮಯದ ಆರಂಭದಲ್ಲಿ ನಡೆಯುತ್ತಿದ್ದ ಈ ರೀತಿಯ 'ಕಥಾವ್ಯಾಯಾಮ' ಇವತ್ತು ನಡೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ವ್ಯಾಯಾಮ ಜಗತ್ತಿನ ನಾನಾ ಪ್ರಾಂತ್ಯಗಳಲ್ಲಿ ನಾನಾ ರೀತಿಯಲ್ಲಿವೆ.

   ಹೀಗೆ ವರಾಂಡದಲ್ಲಿ ಕತೆಯೊಂದು ತನ್ನಷ್ಟಕ್ಕೆ ತಾನೇ ತಯಾರಾಗಿ ಜಿನುಗುತ್ತಿರುವಾಗಲೇ ಒಳಮನೆಯ ಜೀವವೊಂದು ಮಂದಹಾಸ ಬೀರುತ್ತಲಿದೆ. ಇಡೀ ದಿನ ಕೆಲಸ ಮಾಡಿ ದಣಿದಿರುವ ಸೊಸೆ. ಕಾಲು ಚಾಚಿ ವಿಶ್ರಮಿಸುತ್ತಿರುವ ತುಂಬು ಗರ್ಭಿಣಿ. ಅವಳೊಳಗೆ ಏನೇನು ಕತೆಗಳಿವೆಯೋ?                                                                                                                 
                                                                ***                                                                                                                                                                  ಆಕೆ ಕಾಲು ಚಾಚಿ ವಿಶ್ರಮಿಸುತ್ತಿದ್ದಂತೆಯೇ ಹೊಟ್ಟೆಯೊಳಗೆ ಸಣ್ಣಗೆ
ಮಿಸುಕಾಟ. ಇದ್ದಕ್ಕಿದ್ದಂತೆ ಗರ್ಭದೊಳಗಿನ ಎರಡು ಭ್ರೂಣಗಳು ಸಕ್ರಿಯವಾದಂತೆ. ಹೆಣ್ಣೋ ಗಂಡೋ, ಆಸ್ತಿಕವೋ ನಾಸ್ತಿಕವೋ, ಫೆಮಿನಿಷ್ಟೋ ಸೋಶಲಿಷ್ಟೋ ಆಗಿರಬಹುದಾದ ಭ್ರೂಣಗಳು. ಎರಡೂ ಭ್ರೂಣಗಳಿಗೆ ಅಪರಿಮಿತ ಉತ್ಸಾಹವಿದ್ದಂತಿತ್ತು. ಹಾಗಾಗಿ ಅಲ್ಲೊಂದು ವಾಗ್ವಾದ ಶುರುವಾದಂತಿತ್ತು.  

"ಅಬ್ಬಾ, ಅಂತೂ ಇಂತೂ ಅವತರಿಸಿಬಿಟ್ಟೆವು. ನಮಗಾಗಿ ಎಷ್ಟೊಂದು ಜೀವಗಳು ಸತ್ತು ಹೋದವು. ನಾವೇ ಗ್ರೇಟ್ ಅಲ್ವಾ?" ಅಂತ ಭ್ರೂಣವೊಂದು ಹೇಳುತ್ತಿದ್ದರೆ ಇನ್ನೊಂದು ಸುಮ್ಮನೇ ತಲೆಯಾಡಿಸುತ್ತಿತ್ತು. ಹುಟ್ಟಿದಾಗಿನಿಂದಲೂ ಹೀಗೇ. ಒಂದು ಭ್ರೂಣ ಸಿಕ್ಕಾಪಟ್ಟೆ ಉತ್ಸಾಹಿ. ಅದಕ್ಕೆ ಎಲ್ಲದರಲ್ಲೂ ಕುತೂಹಲ. ಹೊರಜಗತ್ತಿನ ಎಲ್ಲ ಚಟುವಟಿಕೆಗಳ ಬಗ್ಗೆ ತನ್ನದೇ ಆದ ಪ್ರತಿಕ್ರಿಯೆಗಳ ಮೂಲಕ ಸ್ಪಂದಿಸುತ್ತಿತ್ತು. ಎರಡನೇಯದು ಸ್ವಲ್ಪ ನಿಧಾನಿ. ಅದು ಎಲ್ಲವನ್ನೂ ಗ್ರಹಿಸುವತ್ತ ಗಮನ ಹರಿಸುತ್ತಿತ್ತೇ ಹೊರತು ಪ್ರತಿಕ್ರಿಯೆ ನೀಡುತ್ತಿರಲಿಲ್ಲ.    

   "ನೀನ್ಯಾಕೆ ಮಾತನಾಡುತ್ತಿಲ್ಲ? ಯಾವಾಗ ನೋಡಿದರೂ ಅದೇನೋ ಯೋಚನೆ ಮಾಡ್ತಾ ಇರ್ತೀಯ.." ಉತ್ಸಾಹಿ ಭ್ರೂಣ ಸಿಟ್ಟಿನಿಂದ ಕಿರುಚಿತು. ಎರಡನೇಯದು ಶಾಂತವಾಗಿತ್ತು. ಅದು  ನಿಧಾನವಾಗಿ, "ನಿಂಗೊತ್ತಿಲ್ಲ, ಇಷ್ಟು ದಿನ ನೀನು ಖುಷಿಖುಷಿಯಾಗಿದ್ದೆ. ಯಾಕೆಂದರೆ ಇಲ್ಲಿರುವದು ಒಂದೇ ಲೋಕ ಅಂತ ನೀನು ಭಾವಿಸಿದ್ದೆ. ಆದರೆ ನಾವು ಹೊರಹೋಗುವ ಸಮಯ ಬರುತ್ತಲಿದೆ. ಅದೊಂದು ವಿಚಿತ್ರ ಲೋಕ.." ಅಂತ ಅನ್ನುವಷ್ಟರಲ್ಲಿ ಉತ್ಸಾಹಿ ಭ್ರೂಣದ ಕುತೂಹಲ ಗರಿಗೆದರತೊಡಗಿತ್ತು. ಏನೂ..? ಇನ್ನೊಂದು ಲೋಕವಾ? ಹೇಗಿದೆ ಆ ಲೋಕ? ಏನೇನಿದೆ ಅಲ್ಲಿ? ಅಂತೆಲ್ಲ ಪ್ರಶ್ನೆಗಳ ಮಳೆಯನ್ನೇ ಸುರಿಸಿತು. ಇತ್ತ, ನಿಧಾನಿ ಭ್ರೂಣ ಕೊಂಚ ಚಿಂತಾಕ್ರಾಂತವಾಗಿತ್ತು. ಅದಕ್ಕೆ ತನ್ನ ಒಡನಾಡಿಯ ಭವಿಷ್ಯದ ಬಗ್ಗೆ ಚಿಂತೆ. 

   "ನೋಡು, ಇಷ್ಟು ದಿನ ಹೇಗೋ ಏನೋ ಬೆಚ್ಚನೆಯ ಗರ್ಭದಲ್ಲಿದ್ದೆವು. ಹೊರಗೆ ಎಂತೋ ಏನೋ. ನಾವಂತೂ ಮನುಷ್ಯರ ಮುಖವನ್ನೇ ನೋಡಿಲ್ಲ. ಯಾಕೆಂದರೆ ನಮಗೆ ಕಣ್ಣೇ ಇನ್ನೂ ಬಂದಿಲ್ಲ. ಹೀಗಾಗಿ ಯಾರು ಹೇಗೆ ಅಂತ ಬರೀ ಅವರವರ ಧ್ವನಿಯ ಮೂಲಕ ಗುರುತಿಸುವದನ್ನು ರೂಢಿಸಿಕೊಂಡಿದ್ದೇವೆ. ಆದರೆ ಈ ಮನುಷ್ಯರೋ ಭಲೇ ಕಿಲಾಡಿಗಳು. ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕಾಗಿ ಯಾವನೋ ಒಬ್ಬ ಗೆದ್ದ ವ್ಯಕ್ತಿಗೆ ಜೋರಾಗಿ ಅಭಿನಂದನೆ ಹೇಳುತ್ತಿರುತ್ತಾನೆ. ಆದರೆ ಆ ಜೋರು ಹೇಳಿಕೆಯಲ್ಲಿ ಅಸಹನೆಯ ಸಣ್ಣ ಧ್ವನಿಯೂ ಮಿಳಿತವಾಗಿರುತ್ತದೆ. ಅದೂ ನನಗೆ ಕೇಳಿಸುತ್ತಿರುತ್ತದೆ. ಇನ್ನೊಂದೆಡೆ, ಯಾರೋ ಸತ್ತರೆಂದು ಇನ್ಯಾರೋ ಸಂತಾಪ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಆ ಸಂತಾಪದೊಳಗೇ ಸಣ್ಣದೊಂದು ಸಂತಸವೂ ಧ್ವನಿಸುತ್ತಿರುತ್ತದೆ. ಅದೂ ನನಗೆ ಕೇಳಿಸುತ್ತಿರುತ್ತದೆ. ಹೀಗಿರುವಾಗ, ಕೇವಲ ಧ್ವನಿಯನ್ನು ನಂಬಿರುವ ನಾವು ಮನುಷ್ಯರನ್ನು ಗುರುತಿಸುವದಾದರೂ ಹೇಗೋ?"

   ನಿಧಾನಿ ಭ್ರೂಣದ ಮಾತುಗಳನ್ನು ಕೇಳುತ್ತಲೇ ಉತ್ಸಾಹಿ ಭ್ರೂಣದ ಕೋಪ ನೆತ್ತಿಗೇರತೊಡಗಿತು. ಅದಕ್ಕೀಗ ಹೊರಜಗತ್ತಿನ ನಿಯಮಾವಳಿ ಬಗ್ಗೆ ಗೊಂದಲವಾದಂತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ತನ್ನ ಒಡನಾಡಿ ಎಂದಿಗೂ ತನ್ನೊಂದಿಗೆ ಒಳಗೊಂದು ಹೊರಗೊಂದು ಎಂಬಂತೆ ಕಣ್ಣಾಮುಚ್ಚಾಲೆಯಾಡಿಲ್ಲವೆಂದೂ ತಿಳಿದು ಸಂತಸಪಟ್ಟಿತು. ತಕ್ಷಣವೇ ಸಿಟ್ಟಿನಿಂದ, "ಹೌದೋ, ಅಲ್ಲಿ ಹಾಗೆಲ್ಲ ಉಂಟೋ? ಹಾಗಾದರೆ ನಮ್ಮ ಲೋಕದಿಂದ ಹೊರಗೆ ಹೋದವರ ಪೈಕಿ ಒಬ್ಬರೂ ನಮಗೆ ಇಂಥ ಸಂಗತಿಗಳ ಬಗ್ಗೆ ಹೊರಗಿನಿಂದ ಎಚ್ಚರಿಸಲಿಲ್ಲವಲ್ಲ.." ಅಂತೆಲ್ಲ ತನ್ನ ಹಿರಿಯರ ಬಗ್ಗೆ ಕೆಂಡ ಕಾರಿತು. 

   ನಿಧಾನಿ ಭ್ರೂಣ ಮುಗುಳ್ನಗುತ್ತಿತ್ತು. ಅದಕ್ಕೆ ಉತ್ಸಾಹಿ ಒಡನಾಡಿಯ ಬಗ್ಗೆ ಇನ್ನಿಲ್ಲದ ಪ್ರೀತಿ. ಕೊನೆಗೂ ಏನು ಹೇಳುವದೆಂದು ಗೊತ್ತಾಗದೇ  ಆದಷ್ಟೂ ಸರಳ ರೀತಿಯಲ್ಲಿ ಹೇಳತೊಡಗಿತು: ನೋಡೋ, ನಮ್ಮದು ಒಂಥರಾ ವಿಚಿತ್ರ ಭಾಷೆ. ಇಲ್ಲಿ ಮಾತುಕತೆ
ಬರೇ ಧ್ವನಿಯ ಮೂಲಕ ಆಗುವದಿಲ್ಲ. ನಮ್ಮಮ್ಮ ಹಿಡಿದಿರುವ ಚಾಕು ಈರುಳ್ಳಿಯನ್ನು ಕತ್ತರಿಸಿತೋ ಅಥವಾ ಅವಳ ಬೆರಳನ್ನು ಕತ್ತರಿಸಿತೋ ಅಂತ ಅವಳು ಹೇಳುವದಕ್ಕಿಂತ ಮೊದಲೇ ನಮಗೆ ಗೊತ್ತಾಗಿರುತ್ತದೆ. ಹೀಗಾಗಿ ನಮಗೆ ಭಾಷೆಯ ಅಗತ್ಯವೇ ಬೀಳದು. ಹೀಗಿರುವಾಗ, ಇಲ್ಲಿಂದ ಹೊರಗೆ ಹೋದವರು ಅಲ್ಲಿನ ನಿಯಮಾವಳಿ ಬಗ್ಗೆ ನಮಗ್ಯಾಕೆ ತಿಳಿಸುವದಿಲ್ಲ ಅಂತ ತಕರಾರು  ಎತ್ತುತ್ತೀಯಲ್ಲ? ನಿನಗೆ ಗೊತ್ತಾ, ನೀನು ಇಲ್ಲಿಂದ ಹೊರಬಿದ್ದ ಮೇಲೆ ನಿನಗೆ ಮಾತು ಬರುವವರೆಗೂ ಒಳಗಿರುವ ನನ್ನೊಂದಿಗೆ ಮಾತನಾಡಬಹುದು. ಆದರೆ ಯಾವಾಗ ನೀನು ಹೊರಗಿನ ಭಾಷೆ ಮಾತನಾಡತೊಡಗುತ್ತೀಯೋ, ಈ ನಮ್ಮ ಒಳಗಿನ ಭಾಷೆ ನಿನಗೆ ಮರೆತು ಹೋಗಿರುತ್ತದೆ. ಎಲ್ಲ ನಿಯಮಾವಳಿ ಗೊತ್ತಾದ ಬಳಿಕ ನೀನು ಮತ್ತೇ ಒಳಗೆ ಬರಲಾರೆ. ಒಳಗಿನವರೊಂದಿಗೆ ಮಾತನಾಡಲಾರೆ..

-ಅಂತೆಲ್ಲ ಹೊರ ನಿಯಮಾವಳಿಗಳ ಬಗ್ಗೆ  ಹೇಳುತ್ತಿದ್ದ ನಿಧಾನಿ ಭ್ರೂಣ ತನ್ನ ಉತ್ಸಾಹಿ ಒಡನಾಡಿಯನ್ನು ಸಂತೈಸುತ್ತಿರುವಂತೆ ಹಿತಾನುಭವ ಪಡೆಯುತ್ತಿದ್ದ ಗರ್ಭಿಣಿ ಸೊಸೆ ವರಾಂಡದಲ್ಲಿ ಇಣುಕುತ್ತಾಳೆ. ಬಹುಶಃ ಊಟ ಮುಗಿಸಿದ್ದ ಅಜ್ಜಿ ಮತ್ತು ಮೊಮ್ಮಗು ನಿದ್ದೆ ಹೋದಂತಿತ್ತು.
                                                               -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 01.08.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)