Wednesday, June 21, 2017

ಏನು ಗೊತ್ತಿಲ್ಲವೋ ಅದನ್ನೇ ನಾವು ಗಟ್ಟಿಯಾಗಿ ನಂಬುತ್ತಿದ್ದೇವೆ

ಣಿಯ ಆರನೇ ಪುಣ್ಯಸ್ಮರಣೆ.
ಸಮಾಧಿಯತ್ತ ಚಲಿಸುತ್ತಿರುವ ಕುಟುಂಬ
ಧಣಿಯ ನಾಯಿ ಮುಂದೆಮುಂದೆ
ಧಣಿಯ ಕುಟುಂಬ ಹಿಂದೆಹಿಂದೆ

   ಅಷ್ಟೇ. ಹಾಯ್ಕು ಅಷ್ಟಕ್ಕೇ ನಿಂತು ಬಿಡುತ್ತದೆ. ಇಲ್ಲಿ ಧಣಿ ಯಾರು, ಆತ ಹೇಗಿದ್ದ, ಯಾಕೆ ಸತ್ತ 
ಅಂತನ್ನುವದನ್ನೆಲ್ಲ ನಾವೇ ಕಲ್ಪಿಸಿಕೊಳ್ಳಬೇಕೇ ಹೊರತು ವಿವರಣೆ ಇಲ್ಲಿ ನಿಷಿದ್ಧ. ಸುಮ್ಮನೇ ಯೋಚಿಸುತ್ತಿದ್ದೇನೆ. ಬಹುಶಃ ಈ ಲೋಕದಲ್ಲಿ ಎಲ್ಲವೂ ಬದಲಾಗುತ್ತದೆ ಅಥವಾ ಏನೂ 
ಬದಲಾಗುವದಿಲ್ಲ ಅಂತ ಈ ಹಾಯ್ಕು ಹೇಳುತ್ತಿದೆಯೇ? ನಿನ್ನೆ ಸ್ನೇಹಿತರೊಬ್ಬರು ಸಿಕ್ಕಿದ್ದರು. 
ಯೋಗದಲ್ಲಿ ಹಲವಾರು ಮೆಟ್ಟಿಲುಗಳನ್ನು ಏರಿದಂಥವರು. ಇತ್ತೀಚೆಗೆ ವಿಧಾನಸೌಧದ ಎದುರಿಗೆ 
ಅರ್ಧನಿಮಿಷಗಳ ಕಾಲ ಶೀರ್ಷಾಸನ ಹಾಕಿ ಗಿನ್ನೆಸ್ ಸಾಧನೆ ಮಾಡಿದ ಎರಡು ಸಾವಿರ 
ಯೋಗಪಟುಗಳಲ್ಲಿ ಇವರೂ ಇದ್ದರು. ಆ ದಿನದ ಫೋಟೋ ತೋರಿಸುತ್ತ ಹೇಗೆ ಇವತ್ತು ಯೋಗ ಅನ್ನುವದು ಕಾಂಡಿಮೆಂಟ್ಸ್,  ಗೂಡಂಗಡಿಗಳಂತೆ ಗಲ್ಲಿಗೊಂದರಂತೆ ತಲೆಯೆತ್ತುತ್ತಿವೆ ಅಂತ ಬೇಸರದಿಂದ ಹೇಳುತ್ತಿದ್ದರು.

   ನಿಜ, ಇಂಥ ಎಷ್ಟೋ ಅಂಗಡಿಗಳನ್ನು ನಾನು ನೋಡಿದ್ದಿದೆ. 'ಯೋಗ ಮತ್ತು ಧ್ಯಾನ ಕೇಂದ್ರ' ಅಂತ ಬೋರ್ಡು ಹಾಕಿಕೊಂಡಿರುತ್ತಾರೆ. ಮಜ ಅಂದರೆ, ಇದೊಂಥರ ಹಣ್ಣಿನಂಗಡಿಯವನು 'ತಾಜಾಹಣ್ಣು ಮತ್ತು ಬಾಳೆಹಣ್ಣಿನ ಅಂಗಡಿ' ಅಂತನ್ನುವ ಫಲಕ ತೂಗುಹಾಕಿದಂತೆ! ಯೋಗ ಅನ್ನುವದೇ ಒಂದು ಆಲದ ಮರ. ಅದಕ್ಕೆ ಎಂಟು ಬಿಳಲುಗಳು. ಅವು ಯೋಗದ ಅಷ್ಟಾಂಗಗಳು. ಧ್ಯಾನ ಅನ್ನುವದೂ ಈ ಅಷ್ಟಾಂಗಗಳ ಪೈಕಿ ಒಂದು. ಮಿಕ್ಕ ಏಳು ಅಂಗಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ ಮತ್ತು ಸಮಾಧಿ. ಹೀಗಿರುವಾಗ, 'ಧ್ಯಾನ'ವನ್ನು ಯೋಗದಿಂದ ಪ್ರತ್ಯೇಕಿಸಿ ‘ಯೋಗ ಮತ್ತು ಧ್ಯಾನ ಕೇಂದ್ರ' ಅಂತ ಬೋರ್ಡು ಹಾಕಿಕೊಂಡರೆ ಅದು ಎಷ್ಟು ಅಸಂಬದ್ಧ.

   ಬುದ್ಧ ಕೂಡ ಅಸಂಬದ್ಧನೇ. ಆತ ಯೋಗದ ಇನ್ನಿತರ ಮಜಲುಗಳ ಬಗ್ಗೆ ಹೇಳಲಿಲ್ಲ. ಆತನ ಗಮನವಿದ್ದಿದ್ದು ಕೇವಲ ಅಂತರಂಗ ಯೋಗದ ಕಡೆಗೆ. ಧ್ಯಾನದ ಕಡೆಗೆ. ದೇಹದ ಉಸಿರಾಟ ಮತ್ತು ಯೋಚನಾಕ್ರಮದ ಮೇಲೆ ಯಾರು ನಿಯಂತ್ರಣ ಸಾಧಿಸುತ್ತಾರೋ ಅವರೇ ಧ್ಯಾನಿಗಳು ಅಂತ ಬುದ್ಧ ಘೋಷಿಸಿದ. ಚೀನೀಯರು ಈ ಕ್ರಮವನ್ನು ಇನ್ನಷ್ಟು ಉತ್ತಮಗೊಳಿಸಿದರು. ಯಾವುದಕ್ಕೂ ಅಂಟಿಕೊಳ್ಳದೇ 'ಬಂದದ್ದೆಲ್ಲ ಬರಲಿ' ಅಂತನ್ನುವ ಧಾಟಿಗೆ ಹೊಂದಿಕೊಂಡ ಭಾರತದ ಧ್ಯಾನಗುರು ಚೀನಾದಲ್ಲಿ 'ಚಾನ್' ಗುರು ಅನಿಸಿಕೊಂಡ. ಜಾಪಾನಿನಲ್ಲಿ ಜೆನ್ ಗುರು ಅನಿಸಿಕೊಂಡ. 

   ವಿಚಿತ್ರವೆಂದರೆ, ಈ ಗುರುವಿಗೆ ಭುಜಕೀರ್ತಿಗಳಿರಲಿಲ್ಲ. ಕ್ಯಾಲೆಂಡರುಗಳಲ್ಲಿನ ತಲೆಯ ಹಿಂದೆ 
ಇರುವಂಥ ಪ್ರಭಾವಳಿಗಳಿರುವದಿಲ್ಲ. ಆತ ಸೀದಾಸಾದಾಮನುಷ್ಯ. ಇಂಥದೇ ಒಬ್ಬ ರೈತ 
ಜಾಪಾನಿನಲ್ಲಿದ್ದ. ಹೊಲದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ 
ಆತನ ಪ್ರೀತಿಯ ಕುದುರೆ ಮನೆಬಿಟ್ಟು ಓಡಿಹೋಗುತ್ತದೆ. ಕುದುರೆಯಿಲ್ಲದೇ ಒಬ್ಬನೇ ಹೊಲದಲ್ಲಿ 
ಕೆಲಸ ಮಾಡುತ್ತಿದ್ದಾಗ ಪಕ್ಕದ ಹೊಲದವನು ಬಂದು ಕಳೆದುಹೋದ ಕುದುರೆ ಬಗ್ಗೆ ಮಾತನಾಡುತ್ತ, 
'ನಿನಗೆ ಆಘಾತವಾಗಿರಬೇಕಲ್ಲ?' ಅಂತ ರೈತನಲ್ಲಿ ಸಂತಾಪ ವ್ಯಕ್ತಪಡಿಸುತ್ತಾನೆ. ಅದಕ್ಕೆ ರೈತ, 
'ಹೌದಾ, ಇರಲಿಬಿಡು' ಅಂತ ಉತ್ತರಿಸುತ್ತಾನೆ. ಮೂರು ದಿನ ಬಿಟ್ಟು ನೋಡಿದರೆ, ಕಳೆದುಹೋದ 
ಕುದುರೆ ಮೂರು ಹೊಸ ಕುದುರೆಗಳೊಂದಿಗೆ ಮನೆಗೆ ಮರಳಿರುತ್ತದೆ. ಪಕ್ಕದ ಹೊಲದವನು, 
'ಈ ಸಲ ನಿನಗೆ ಭಾರೀ ಖುಷಿಯಾಗಿರಬೇಕಲ್ವ?' ಅಂತ ಕುದುರೆಗಳನ್ನು ನೋಡುತ್ತ ಕೇಳುತ್ತಾನೆ. 
ಈ ರೈತ ಮಾತ್ರ ತಣ್ಣಗೇ 'ಹೌದಾ, ಇರಲಿಬಿಡು' ಅಂತ ಉತ್ತರಿಸುತ್ತಾನೆ. ಮರುದಿನ ರೈತನ ಮಗ ಹೊಸ 
ಕುದುರೆಯನ್ನೇರಲು ಹೋಗಿ ಬಿದ್ದು ಕಾಲುಮುರಿದುಕೊಳ್ಳುತ್ತಾನೆ. ಪಕ್ಕದ ಮನೆಯವನು ಸಂತಾಪ 
ವ್ಯಕ್ತಪಡಿಸಲು ಹೋದಾಗ ಈ ನಮ್ಮ ರೈತನದು ಮತ್ತದೇ ಉತ್ತರ: 
‘ಹೌದಾ, ಇರಲಿಬಿಡು!’

   ನಾಲ್ಕು ದಿನ ಕಳೆದ ಮೇಲೆ ಊರಿಗೆ ರಾಜಭಟರು ಬರುತ್ತಾರೆ. ಇಷ್ಟವಿದೆಯೋ ಇಲ್ಲವೋ ಅಂತ 
ಕೇಳದೇ ಮನೆಗೊಬ್ಬರಂತೆ ತಲಾ ಒಬ್ಬೊಬ್ಬ ವ್ಯಕ್ತಿಯನ್ನು ಸೈನ್ಯಕ್ಕೆ ಅಂತ ಹೆಸರು ನೊಂದಾಯಿಸಿಕೊಂಡು ಒತ್ತಾಯದಿಂದ ಕರೆದುಕೊಂಡು ಹೋಗುತ್ತಿರುತ್ತಾರೆ. ಆದರೆ ರೈತನ ಮಗ ಕಾಲು ಮುರಿದುಕೊಂಡಿರುವದನ್ನು ನೋಡಿ ಆತನನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ಈ ಸಲವೂ ಪಕ್ಕದ ಮನೆಯವನು ಬಂದು ರೈತನನ್ನು ಅಭಿನಂದಿಸುತ್ತ, ಹೇಗೆ ಎಲ್ಲ ಒಳ್ಳೆಯದಾಗುತ್ತಿದೆಯೆಂದು ವಿವರಿಸುತ್ತಿದ್ದಾಗ, ಈ ರೈತ ಎಂದಿನಂತೆ ಮಾಮೂಲಿನಂತೆ ಉತ್ತರಿಸುತ್ತಾನೆ: ಹೌದಾ, ಇರಲಿಬಿಡು!

   ಇಲ್ಲಿ ಎಲ್ಲ ಒಳ್ಳೆಯದಾಗಲಿಕ್ಕಿಲ್ಲ. ಆದರೆ ಎಲ್ಲ ಬದಲಾಗುತ್ತದೆ ಎಂದು ಒಬ್ಬ ಧ್ಯಾನ ಗುರುವಿಗೆ 
ಮಾತ್ರ ಗೊತ್ತಿದೆ. ಇಂಥದ್ದೇ ಬದಲಾವಣೆಗಳನ್ನು ಬುದ್ಧನೂ ಗಮನಿಸಿದ್ದ. ಒಂದು ದಿನ ಎಂದಿನಂತೆ 
ಆತ ಪ್ರವಚನದಲ್ಲಿದ್ದಾಗ ಆಸ್ತಿಕನೊಬ್ಬ ತನ್ನ ಸಂದೇಹ ಹೇಳಿಕೊಳ್ಳಲೆಂದು ಎದ್ದುನಿಂತ. 
ಎಂಥ ಸಂದಿಗ್ಧತೆ ನೋಡಿ: ಈ ಆಸ್ತಿಕನೋ ತನ್ನ ಒಂದಿಡೀ ಜೀವಮಾನವನ್ನೆಲ್ಲ ಭಗವಂತನ 
ಸೇವೆಯಲ್ಲಿ ತೊಡಗಿಸಿಕೊಂಡವನು. ಜೀವಮಾನದ ಗಳಿಕೆಯನ್ನೆಲ್ಲ ದೇವರ ಸೇವೆಗೆಂದು 
ಮುಡಿಪಾಗಿರಿಸಿದವನು. ಅಂಥವನಿಗೆ ಇದ್ದಕ್ಕಿದ್ದಂತೆ ಇವತ್ತು ಗುಮಾನಿ ಬಂದುಬಿಟ್ಟಿದೆ. 
ಅಕಸ್ಮಾತ್, ಹಾಗೊಂದು ವೇಳೆ ಜಗತ್ತಿನಲ್ಲಿ ದೇವರೇ ಇಲ್ಲದೇ ಹೋದರೆ?

   ನಿಜಕ್ಕೂ ಭಯಾನಕ. ಪ್ರತಿದಿನ ಪೂಜೆಗೆಂದು ಹತ್ತು ನಿಮಿಷ ಎತ್ತಿಡುವ ಆಸ್ತಿಕನಿಗೆ ಇಂಥದೊಂದು ಅನುಮಾನ ಬಂದರೆ ತೊಂದರೆಯೇನಿಲ್ಲ. ಸಂಕಟಬಂದಾಗ ಮಾತ್ರ ವೆಂಕಟರಮಣ ಅನ್ನುವವನಿಗೂ ಈ ಗುಮಾನಿ ಕಾಡಿದರೆ ಅದೇನೂ ದೊಡ್ಡದಲ್ಲ. ಆದರೆ ಜೀವನಪೂರ್ತಿ ಭಗವಂತನಿಗೆ ಎಲ್ಲವನ್ನೂ ಸಮರ್ಪಣಗೈದವನಿಗೆ ಈ ಅನುಮಾನ ನಿಜಕ್ಕೂ ಭಯಾನಕ. ಅಂತೆಯೇ ಆಸ್ತಿಕ ಬುದ್ಧನಲ್ಲಿ ಸಂದೇಹ ನಿವಾರಿಸಿಕೊಳ್ಳಲೆಂದು ಎದ್ದು ನಿಂತಿದ್ದಾನೆ. 

'ಇಲ್ಲ. ಈ ಲೋಕದಲ್ಲಿ ಭಗವಂತ ಇಲ್ಲವೇ ಇಲ್ಲ!' 
ಹಾಗಂತ ಬುದ್ಧ ಹೇಳುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಗುಸುಗುಸು. ಕೆಲವರಿಗೆ ಸಿಟ್ಟು. ಕೆಲವರಿಗೆ 
ಹತಾಶೆ. ಎದ್ದು ನಿಂತ ಆಸ್ತಿಕನಿಗೋ ಪರಮ ನಿರಾಳತನ. ಆತ ಬುದ್ಧನಿಗೆ ನಮಸ್ಕರಿಸಿ ಎದ್ದು 
ಹೋಗುತ್ತಾನೆ. ಮರುದಿನ ಮತ್ತೊಂದು ಪ್ರವಚನ. ಈ ಸಲ ಚಾರ್ವಾಕನೊಬ್ಬನಿಗೆ ಗುಮಾನಿ ಬಂದಿದೆ. 
ಜೀವನಪೂರ್ತಿ ಭಗವಂತನ ಅಸ್ತಿತ್ವವನ್ನು ಧಿಕ್ಕರಿಸುತ್ತಲೇ ಬಂದಿರುವ ಈ ಚಾರ್ವಾಕನಿಗೆ 
ಇದ್ದಕ್ಕಿದ್ದಂತೆ ಅನುಮಾನ ಕಾಡತೊಡಗಿದೆ: ಅಕಸ್ಮಾತ್ ಭಗವಂತ ಇರುವದೇ ನಿಜವಾದರೆ? 
ಯಾವತ್ತೂ ಬಾರದ ಚಾರ್ವಾಕ ಇವತ್ತು ಸಂಶಯ ನಿವಾರಣೆಗೆಂದು ಪ್ರವಚನಕ್ಕೆ ಬಂದಿದ್ದಾನೆ.

   'ಹೌದು, ಭಗವಂತ ಇರುವದು ಸತ್ಯ!' ಹಾಗಂತ ಬುದ್ಧ ಹೇಳುತ್ತಲೇ ಚಾರ್ವಾಕ ನಿರಾಳ ಭಾವದಿಂದ ನಿರ್ಗಮಿಸುತ್ತಾನೆ. ಆದರೆ ಅಲ್ಲಿದ್ದ ಸಭಿಕರಿಗೆ ಕೊಂಚ ಗಲಿಬಿಲಿ, ಕೊಂಚ ಬೇಸರ. ನಿನ್ನೆ ತಾನೇ ಈ ಬುದ್ಧ ದೇವರಿಲ್ಲ ಅಂದಿದ್ದ. ಇವತ್ತು ದೇವರಿದ್ದಾನೆ ಅಂತ ಹೇಳುತ್ತಿದ್ದಾನೆ. ಬುದ್ಧನಿಗೆ ಎಲ್ಲೋ ತಲೆಕೆಟ್ಟಿರಬೇಕು ಅಂತ ಅಲ್ಲಿದ್ದ ಸಭಿಕರಿಗೆ ಹೊಸ ಗುಮಾನಿಯೊಂದು ಏಳುತ್ತಲಿದೆ. ಆದರೆ ಬುದ್ಧ ಆಸ್ತಿಕ ಮತ್ತು ನಾಸ್ತಿಕ ಇಬ್ಬರಲ್ಲೂ ಹೊಸ ಯೋಚನೆಯೊಂದನ್ನು ಹುಟ್ಟುಹಾಕಿ ಆ ಮೂಲಕ ಬದಲಾವಣೆಗೆ ನಾಂದಿ ಹಾಡಿದ್ದ ಅಂತ ಹೇಗೆ ವಿವರಿಸುವದು? ಈ ಲೋಕದಲ್ಲಿ ನಮಗೆ ಏನು ಗೊತ್ತಿಲ್ಲವೋ ಅದನ್ನೇ ನಾವು ಗಟ್ಟಿಯಾಗಿ ನಂಬುತ್ತಿದ್ದೇವೆ ಅಂತ ಹೇಗೆ ಅರ್ಥ ಮಾಡಿಸುವದು? 

   ವಿಚಿತ್ರ ನೋಡಿ. ಭಗವಂತನಿದ್ದಾನೆ ಅಂತ ನಂಬಿದ್ದ ಆಸ್ತಿಕನಿಗೆ ಭಗವಂತನ ಬಗ್ಗೆ ಅನುಮಾನ ಹುಟ್ಟುವದೂ, ದೇವರಿಲ್ಲ ಅಂತ ಜೀವಮಾನವಿಡೀ ಸಾಧಿಸಿದ ನಾಸ್ತಿಕನಿಗೆ ದೇವನ ಇರುವಿಕೆಯ ಬಗ್ಗೆ ಆಶಾಭಾವ ಹುಟ್ಟುವದೂ ಏನನ್ನು ಪ್ರತಿನಿಧಿಸುತ್ತಿದೆ? ಇವರೆಲ್ಲ ತಮಗೆ ಯಾವುದರ ಬಗ್ಗೆ ಸಂಪೂರ್ಣ ಅರಿವು ಇರಲಿಲ್ಲವೋ ಅದೆಲ್ಲದರ ಬಗ್ಗೆ ಇಷ್ಟು ದಿನ ನಂಬಿಕೆ ಇರಿಸಿಕೊಂಡಿದ್ದರು ಅಂತಾಯಿತಲ್ಲ? ಬುದ್ಧ ಇದನ್ನೇ ಪಲ್ಲಟ ಮಾಡಿದ. ಕಣ್ಣುಮುಚ್ಚಿ ಯಾವುದನ್ನೂ ನಂಬಬೇಡಿ ಅಂದ!

   ಸದ್ಗುರು ಹೇಳುತ್ತಿದ್ದ ಈ ದೃಷ್ಟಾಂತವನ್ನು ಗಮನಿಸುತ್ತಿದ್ದಾಗ ಈ ಲೋಕದಲ್ಲಿ ನಡೆಯುವ ಬದಲಾವಣೆಗಳ ಚಿತ್ರಣ ನನ್ನ ಕಣ್ಣಮುಂದೆ ಬರುತ್ತಿದ್ದವು.

   ಇದೆಂಥ ಜೋಡಿಯೋ ಗೊತ್ತಿಲ್ಲ. ಜಗಳವಾಗಿಬಿಟ್ಟಿದೆ. ನಿನ್ನೆ ರಾತ್ರಿ ಯಾವುದೋ ಕಾರಣಕ್ಕೆ ಚಾಪೆ 
ಎತ್ತಿಕೊಂಡು ಇನ್ನೊಂದು ಕೋಣೆಗೆ ಹೋಗಿರುವ ಈ ಹೆಂಗಸು ಬೆಳಗಾದರೂ ಹಸನ್ಮುಖಿಯಾಗಿಲ್ಲ. 
ಈತನ ಯಾವ ಕವಿತಾ ಪ್ರಯತ್ನವೂ ಆಕೆಯನ್ನು ಶಮನ ಮಾಡಿದಂತಿಲ್ಲ. ಹೀಗಾಗಿ ಅವಳು ಏಳುವ 
ಮುನ್ನವೇ ಬಾಲ್ಕನಿಯಲ್ಲೊಂದು ಗುಲಾಬಿ ನೆಟ್ಟು ತಪ್ಪೊಪ್ಪಿಗೆಯನ್ನು ಬಿತ್ತಿ ಹೋಗಿರುವನು. 
ಇದನ್ನೆಲ್ಲ ಗಮನಿಸುತ್ತಿರುವ ಲೋಕವು ದೂರದಲ್ಲೆಲ್ಲೋ ತನ್ನದೇ ಧಾಟಿಯಲ್ಲಿ ಚೋದ್ಯವಾಡುತ್ತಿದೆ. 
ಗಾಳಿಗೆ ಬೆದರಿದ ತುಂಬು ಮೋಡವೊಂದು ಸ್ಥಳಾಂತರವಾಗುತ್ತಿದ್ದರೆ, ಹನಿಗಳಿಗಾಗಿ ಕಾತರಿಸುತ್ತಿರುವ 
ಬಯಲಿನ ಖಾಲಿ ಸೀಸೆಯೊಂದು ಅದೇ ಗಾಳಿಯನ್ನು ಆಧರಿಸಿ ಮೋಡದೆಡೆಗೆ ಶಿಳ್ಳೆ ಹಾಕುತ್ತಲಿದೆ. 

   ನಿರಂತರ ಬದುಕಿನಲ್ಲಿ ಆಗೀಗ ಬದಲಾಗುವ ಪ್ರೇಮ, ಮೌನ, ಮುನಿಸುಗಳ ಮೂಡುಗಳನ್ನು ಝಗಮಗಿಸುವ ಹಿನ್ನೆಲೆಯಲ್ಲಿ ಚಿತ್ರಿಸುವ ಹಾಯ್ಕುಕವಿ, ಮುನಿಸಿಕೊಂಡು ಊಟಕ್ಕೆ ಕುಳಿತಿರುವ ಈ ಗಂಡುಹೆಣ್ಣುಗಳ ಬಗ್ಗೆ ಎಷ್ಟೆಲ್ಲ ಹೇಳುತ್ತಿದ್ದಾನೆ:

ನೀರವ ಮೊಂಬತ್ತಿ ರಾತ್ರಿಯೂಟ.
ನಿನ್ನೆಯವರೆಗೂ ಇಬ್ಬರ ಮಧ್ಯೆ ನೂರಾರು ಉದ್ಗಾರವಾಚಕಗಳು; 
ಸದ್ಯಕ್ಕೆ ಮೇಜಿನ ಹೊದಿಕೆಯಲ್ಲಿ ಎಂಭತ್ತಾರು ಚೌಕಗಳು!          

-     
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 21.06.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)   
 

3 comments:

sunaath said...

ಕಿರಿದರೊಳ್ ಪಿರಿದರ್ಥವ ಪೇಳುವ ಹೇಳುವ ಹಾಯ್ಕುಗಳಂತೇ ನಿಮ್ಮ ಲೇಖನಗಳೂ ಸಹ. ಅನೇಕ ಕಾ^ಲಮ್ ಲೇಖಕರ ಲೇಖನಗಳು ಜೊಳ್ಳಾಜೊಟ್ಟಿಯಾಗಿರುವಾಗ, ನಿಮ್ಮ ಕಾ^ಲಮ್ ಲೇಖನಗಳು ಮಾತ್ರ ಗಟ್ಟಿಕಾಳಾಗಿವೆ. ಸಂತೋಷವಾಗುತ್ತಿದೆ.

ರಾಘವೇಂದ್ರ ಜೋಶಿ said...

ಸುನಾಥ ಸರ್,

ನಿಮ್ಮ ಈ ಪ್ರೀತಿಯ ಮಾತುಗಳು ನನ್ನ ಈ ಬೆಳಗನ್ನು ಪ್ರಫುಲ್ಲಗೊಳಿಸಿದವು.
ಥ್ಯಾಂಕ್ಯೂ ಸರ್. :-)

ದೀಪಾ ಜೋಶಿ said...

ಮನೋಜ್ಞ ಲೇಖನ. ಪುಟ್ಟ ಹಾಯ್ಕುವಿನ ಬಲ ಹಿರಿದು.