Wednesday, August 2, 2017

ಒಂದು ಕಿಲಾಡಿ ಕೃತ್ಯ ಹೆಣೆದ ಬೇಗುದಿಯ ಜಾಲಗಳು

ಹೆಣ್ಣು ಮಿಡತೆಗೆ
ವೈಧವ್ಯ ತಂದಿಟ್ಟ ಬೆಕ್ಕು
ಕಳ್ಳ ನಿದ್ರೆಯಲ್ಲಿದೆ!

ಜಾಪಾನಿನ ಕಿಕಾಕು ಎಂಬ ಹಾಯ್ಕುಕವಿ ಈ ಲೋಕದ ಕಪಟತನವನ್ನು ಸಹಜತೆಯೊಂದಿಗೆ 
ಮುಗುಮ್ಮಾಗಿ ತಳಕು ಹಾಕುವದು ಹೀಗೆ. ಕುತೂಹಲವೆಂದರೆ, ಪುರಾತನ ಅರವತ್ನಾಲ್ಕು ಕಲೆಗಳಲ್ಲಿ ಚೋರಮಾರ್ಗವೂ ಬರುತ್ತದೆ. ಪರಶುರಾಮರಲ್ಲಿ ವಿದ್ಯೆ ಕಲಿಯಲು ಕರ್ಣ ಕಳ್ಳದಾರಿ ಬಳಸುತ್ತಾನೆ. 
ಅದೇ ವಿದ್ಯೆ ಕಸಿಯಲು ದ್ರೋಣ ಕಳ್ಳದಾರಿಯಿಂದಲೇ ಶಿಷ್ಯನ ಹೆಬ್ಬೆರಳು ಕತ್ತರಿಸುತ್ತಾನೆ. 
ಮುಂದೊಮ್ಮೆ ಇದೇ ದಾರಿಯನ್ನೇ ಬಳಸಿಕೊಳ್ಳುವ ಧರ್ಮರಾಯ ಅದೇ ದ್ರೋಣನ ಸಾವಿಗೆ 
ಕಾರಣನಾಗುತ್ತಾನೆ. ವಾಲಿಯನ್ನು ಕೊಲ್ಲಲು ರಾಮನೂ ಇದೇ ಕಳ್ಳದಾರಿ ಬಳಸುತ್ತಾನೆಂದರೆ ಇನ್ನು 
ನಮ್ಮಂಥವರ ಪಾಡೇನು?

   ಫೇಸ್ ಬುಕ್ಕಂತೂ ಸರಿಯೇ ಸರಿ. ಇಲ್ಲಿ ಒಬ್ಬರ ಸಾಹಿತ್ಯವನ್ನು ಇನ್ಯಾರೋ ಕದ್ದು ತಮ್ಮದು ಅಂತ ಬರೆದುಕೊಳ್ಳುವದನ್ನು ಆಗೀಗ ನೋಡುತ್ತಿರುತ್ತೇವೆ. ಇದರಿಂದ ಮೂಲಬರಹಗಾರರಿಗೆ ಉಂಟಾಗುವ 
ನೋವು, ಸಿಟ್ಟು ಮತ್ತು ಬೇಸರಗಳನ್ನು ನಾನು ಬಲ್ಲೆ. ಇಷ್ಟಾದರೂ ಇಂಥ ಕಳ್ಳದಾರಿಗಳ ಕುರಿತಂತೆ 
ನನ್ನ ದೃಷ್ಟಿಕೋನ ಕೊಂಚ ಭಿನ್ನವಾಗಿದೆ. ಹೀಗೆ ಇನ್ನೊಬ್ಬರ ಕತೆ, ಕವಿತೆಗಳನ್ನು ಕದಿಯುವವರ ಬಗ್ಗೆ ನನಗೆ ಸಹಾನುಭೂತಿಯಿದೆ. ಯಾಕೆಂದರೆ ಇವರಿಗೆ ಸಾಹಿತ್ಯದ ಬಗ್ಗೆ ಒಲವಿದೆ. ಆದರೆ ಸದ್ಯಕ್ಕೆ ಅವರಿಗೆ ಕವಿತಾರಚನಾ ಸಾಮರ್ಥ್ಯ ಒಲಿದಿಲ್ಲ ಅಷ್ಟೇ. ಇಂಥವರಿಗೆ ಅವಮಾನ ಮಾಡುವದಕ್ಕಿಂತ ಕೊಂಚ ಪ್ರೀತಿಯಿಂದ ತಿಳಿಹೇಳಿದರೆ ಅವರಿಗೂ ತಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಬಹುದು. ಮುಂದೊಮ್ಮೆ ಸಾಹಿತ್ಯ ರಚನೆಯ ಅಮಲು ಅವರಿಗೂ ಅಂಟಬಹುದು.   
                                                           
   ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು. ಆಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ್ದೆ. ಪಾಕೆಟ್ ಮನಿ ಅಂತ ಎಂಥದ್ದೂ ಇರಲಿಲ್ಲ. ಕೈಗೆನೋ ಹೊಸ ಸೈಕಲ್ ಬಂದಿತ್ತು. ಗೆಳೆಯರು ಕ್ಯಾಂಟೀನಿನಲ್ಲಿ ಆಗೀಗ ಚಹಾ ಕುಡಿಸುತ್ತಿದ್ದರು. ನನ್ನ ಹತ್ತಿರ ಹಣ ಇರುತ್ತಿರಲಿಲ್ಲವಾದ್ದರಿಂದ ನಾನು ಅವರಿಗೆಲ್ಲ ಒಮ್ಮೆಯಾದರೂ ಒಂದು ತೊಟ್ಟು ಚಹಾ ಕುಡಿಸುವದು ಸಾಧ್ಯವೇ ಇರಲಿಲ್ಲ. ಹೀಗಾಗಿ ಗೆಳೆಯರು ಕ್ಯಾಂಟೀನಿಗೆ ಕರೆದಾಗಲೆಲ್ಲ ನಾಲ್ಕು ಸಲ ತಪ್ಪಿಸಿಕೊಳ್ಳುವದು, ಐದನೇ ಬಾರಿ ಏನೋ ಉಪಕಾರ ಮಾಡುತ್ತಿರುವವನಂತೆ ಅವರೊಂದಿಗೆ ಸೇರಿಕೊಳ್ಳುತ್ತಿದ್ದೆ. 

   ದಿನಗಳು ಉರುಳುತ್ತಿದ್ದವು. ಒಂದು ದಿನ ಸಾಯಂಕಾಲ ಯಥಾಪ್ರಕಾರ ಮನೆಯ ಹತ್ತಿರವಿದ್ದ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಗೆಳೆಯನೊಬ್ಬ ಮಾತುಮಾತಿನಲ್ಲೇ ತನ್ನ ಪರ್ಸಿನೊಳಗಿಂದ ಮುದ್ದೆಮುದ್ದೆಯಾಗಿದ್ದ ಐನೂರರ ನೋಟು ಹೊರತೆಗೆದು ನನ್ನ ಕೈಗಿಟ್ಟ. ಮುದ್ದೆ ಬಿಡಿಸಿ ನೋಡಿದರೆ ಏನಿತ್ತು? ಐನೂರು ನೋಟನ್ನು ನೀಟಾಗಿ ಹರಿದು ಹಾಕಲಾಗಿದ್ದ ಐದು ತುಂಡುಗಳು. ಆರನೇ ತುಂಡು ಮಾತ್ರ ಇಲ್ಲ! 'ಅದೇನು ಮಾಡ್ತೀಯೋ ಮಾಡ್ಕೋ!' ಅನ್ನುವ ಶೈಲಿಯಲ್ಲಿ ಆ ಐದೂ ತುಂಡುಗಳನ್ನು ನನ್ನ ಕೈಗಿಟ್ಟು ಹೋಗಿಬಿಟ್ಟಿದ್ದ. ಆವತ್ತು ಊಟ ಮುಗಿಸಿ ಮಲಗಿದವನಿಗೆ ಏನೇನೋ ಯೋಚನೆಗಳು. ಕಳೆದುಹೋಗಿದ್ದ ಆರನೇ ತುಂಡು ದಿಢೀರಂತ ಸಿಕ್ಕಂತೆ, ಐನೂರರ ನೋಟು ಚಲಾವಣೆಯಾದಂತೆ, ಕಾಲೇಜಿನಲ್ಲಿ ಗೆಳೆಯರಿಗೆ ಪಾರ್ಟಿ ಕೊಟ್ಟಂತೆ- ಏನೇನೋ ಕನಸು ಬಿದ್ದು ಸರಿಯಾಗಿ ನಿದ್ರಿಸಲಾಗಿರಲಿಲ್ಲ.  

   ಬೆಳಿಗ್ಗೆ ಏಳುತ್ತಿದ್ದಂತೆ ತಲೆಯಲ್ಲಿ ಏನೇನೋ ಅಸ್ಪಷ್ಟ ಕಲ್ಪನೆಗಳು. ತಕ್ಷಣ ಇನ್ನೊಬ್ಬ ಗೆಳೆಯನ 
ಮನೆಯತ್ತ ಧಾವಿಸಿ ಆತನಿಗೆ ಐನೂರರ ನೋಟಿನ ವಿಷಯ ತಿಳಿಸಿದೆ. ಇಬ್ಬರ ತಲೆಯಲ್ಲೂ ಭಯಂಕರ ಐಡಿಯಾ. ಈ ಗೆಳೆಯನ ಬಂಧುವೊಬ್ಬ ಯಾವುದೋ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಆಗಿದ್ದ. ಹೀಗಾಗಿ ಆತನ ಬಳಿ ಸಾಕಷ್ಟು ಪಿಗ್ಮಿ ಹಣ ಯಾವಾಗಲೂ ಇದ್ದೇ ಇರುತ್ತಿತ್ತು. ಏನೇನೋ ಕಾರಣ ಹೇಳಿ ಆತನಿಂದ ಐನೂರರ ಹೊಸ ನೋಟೊಂದನ್ನು ಸಾಲ ಪಡೆದು ಇಬ್ಬರೂ ಮನೆಗೆ ಹಿಂದಿರುಗಿದೆವು. ನಂಬಿದರೆ ನಂಬಿ ಬಿಟ್ಟರೆ ಬಿಡಿ:  ಪಿಗ್ಮಿಯಿಂದ ಬಂದಿದ್ದ ಆ ಐನೂರರ ನೋಟನ್ನು ಎದುರಿಗಿಟ್ಟುಕೊಂಡು, ನಮ್ಮಲ್ಲಿದ್ದ ಐದು ತುಂಡುಗಳನ್ನು ಅಂಟಿನಿಂದ ಜೋಡಿಸಿ, ಕಳೆದುಹೋಗಿದ್ದ
ಆರನೇ ತುಂಡಿನಲ್ಲಿ ಏನೇನು ಇರಬೇಕಿತ್ತೋ ಅದೆಲ್ಲವನ್ನೂ ಬಿಳಿಹಾಳೆಯ ಮೇಲೆ ಕೇವಲ ಬಣ್ಣದ ಪೆನ್ಸಿಲ್ ನಿಂದ ಡ್ರಾಯಿಂಗ್ ಬಿಡಿಸಿ, ಅದನ್ನು ಆರನೇ ತುಂಡು ಕೂರುವ ಜಾಗದಲ್ಲಿ ಕೂರಿಸಿ- ಮೊದಲ ನೋಟಕ್ಕೆ ಒಂಚೂರೂ ಅನುಮಾನ ಬಾರದ ಹಾಗೆ ಕೇವಲ ಎರಡು ಗಂಟೆಗಳಲ್ಲಿ ಹೊಸ ನೋಟು ಉದ್ಭವವಾಗಿತ್ತು. 

   ಅಷ್ಟು ಅದ್ಭುತವಾಗಿ ಚಿತ್ರ ಬಿಡಿಸಿದ್ದ ಗೆಳೆಯನಿಗೆ ನಾನದನ್ನು ಏನು ಮಾಡುವೆನೆಂಬ ಕಲ್ಪನೆಯೂ ಇರಲಿಕ್ಕಿಲ್ಲ. ಅವನಿಗೆ ಅಂತಲ್ಲ, ಸ್ವತಃ ನನಗೇ ಈ ಐನೂರರ ನೋಟನ್ನು ಏನು ಮಾಡುವದೆಂದು ಗೊತ್ತಿರಲಿಲ್ಲ. ಎರಡು ದಿನ ಅದು ಸುಮ್ಮನೇ ನನ್ನ ಪುಸ್ತಕದ ಮಧ್ಯೆ ಮಲಗಿತ್ತು. ಮೂರನೇ ದಿನ ಯಾವಾಗ ಮನೆಯಲ್ಲಿ ಔಷಧಿ, ಮಾತ್ರೆ ತರಲೆಂದು ಐವತ್ತು ರೂಪಾಯಿ ಕೈಗಿಟ್ಟರೋ, ಅಲ್ಲಿಂದ ಶುರುವಾಯಿತು ಎದೆಯಲ್ಲಿ ಡವಡವ. ನನ್ನ ಈ ದಂಡಯಾತ್ರೆಯ 
ಕಳ್ಳಮಾರ್ಗದಲ್ಲಿ ಒಂದು ಅಡೆತಡೆಯಿತ್ತು. ನನ್ನದೇ ಹೊಸ ಸೈಕಲ್ಲು ಇತ್ತಾದರೂ ಅದನ್ನು ಈ ಘನಕಾರ್ಯಕ್ಕೆ ಬಳಸುವಂತಿರಲಿಲ್ಲ. ಗ್ಯಾರೇಜಿನಲ್ಲಿ ಪೇಂಟು ಹೊಡೆಯುತ್ತಿದ್ದ ಗೆಳೆಯನೊಬ್ಬನ ಚಾಕಚಕ್ಯತೆ ಪರೀಕ್ಷಿಸಲೆಂದು ನನ್ನ ಸೈಕಲ್ಲಿಗೆ ಅರ್ಧ ಹಳದಿ, ಇನ್ನರ್ಧ ಕೆಮ್ಮಣ್ಣು ಬಣ್ಣವನ್ನು ಹೊಡೆಸಿದ್ದೆ. ಹ್ಯಾಂಡಲ್ಲಿಗೆ ಕ್ಯಾಸೆಟ್ಟಿನ ಟೇಪ್ ಎಳೆಗಳನ್ನು ಗೊಂಚಲುಗೊಂಚಲಾಗಿ ಎಳೆಬಿಟ್ಟಿದ್ದೆ. ಸೈಕಲ್ ಮಧ್ಯದ ಟ್ರಯಾಂಗಲ್ ಬಾರ್ ಗಳ ಮೇಲೆ ಅದೆಂಥದೋ ಚೀನೀ ಅಕ್ಷರಗಳನ್ನು ರೇಡಿಯಂ ಸ್ಟಿಕ್ಕರ್ ನಿಂದ ಅಂಟಿಸಿ, ಯಾರಾದರೂ ಕೇಳಿದರೆ 'ಅದು ನನ್ನದೇ ಹೆಸರು ಮಾರಾಯ' ಅಂತ ಪುಂಗಿ ಬಿಡುತ್ತಿದ್ದೆ. ಹೀಗಿದ್ದ ನನ್ನ ಈ ವಾಹನಕ್ಕೆ 'ಗೌಳೇರ ಎಮ್ಮೆ' ಅಂತ 
ಹೆಸರಿಟ್ಟಿದ್ದೆ!  

   ಖಂಡಿತವಾಗಿಯೂ ಊರಲ್ಲಿ ಅಷ್ಟು ಅಸಡ್ಡಾಳ ಬಣ್ಣ ಹೊಡೆಸಿಕೊಂಡು ವಿಚಿತ್ರ ಅಲಂಕಾರ 
ಮಾಡಿಸಿಕೊಂಡಿದ್ದ ಸೈಕಲ್ಲು ನನ್ನೊಬ್ಬನದೇ ಆಗಿತ್ತೇನೋ. ಹೀಗಾಗಿ ನನ್ನ ದಂಡಯಾತ್ರೆಗೆ ಈ 
'ಎಮ್ಮೆ'ಯನ್ನು ಕರೆದೊಯ್ಯುವಂತಿರಲಿಲ್ಲ. ನೋಟಿನ ಚಿತ್ರ ಬಿಡಿಸಿದ್ದ ಗೆಳೆಯನ ಬಳಿ ಸೈಕಲ್ 
ಪಡೆದು ಪೆಡಲ್ ತುಳಿಯತೊಡಗಿದೆ. ಆಗಷ್ಟೇ ಹೊಸದಾಗಿ ಶುರುವಾಗಿದ್ದ ಔಷಧಿ ಅಂಗಡಿಯದು. 
ಸಿಕ್ಕಾಪಟ್ಟೆ ರಿಯಾಯಿತಿ ಕೊಡುತ್ತಿದ್ದುದರಿಂದ ಆ ಅಂಗಡಿ ಯಾವಾಗಲೂ ಹತ್ತು ಹದಿನೈದು 
ಗಿರಾಕಿಗಳಿಂದ ಗಿಜಿಗಿಡುತ್ತಿತ್ತು. ಕೆಲಸಗಾರ ಮತ್ತು ಮಾಲೀಕ ಎರಡೂ ಒಬ್ಬನೇ ಆಗಿದ್ದ ಆಸಾಮಿ 
ಅವಸರವಸರವಾಗಿ ಅತ್ತಂದಿತ್ತ ಓಡಾಡುತ್ತಿದ್ದ. ನಿಧಾನಕ್ಕೆ ಗುಂಪಿನಲ್ಲಿ ಸೇರಿಕೊಂಡ ನಾನು ಔಷಧಿ 
ಚೀಟಿ ತೋರಿಸುತ್ತ ಕೊಂಚ ಜೋರಾಗಿ ಕಿರುಚಿದ್ದೆ. ಪಾಪ, ಅವಸರದಲ್ಲಿದ್ದ ಆತ ನನ್ನ ಚೀಟಿ ನೋಡಿದವನೇ ಎಲ್ಲ ಔಷಧಿಗಳನ್ನು ತಂದಿಟ್ಟು ಹಣ ಕೇಳಿದ್ದಕ್ಕೆ, ಜೇಬಿನಲ್ಲಿದ್ದ ನವವಧುವಿನ ಮುಖ ಕಾಣಿಸದ ಹಾಗೆ ಸೀದಾ ಆತನ ಮುಖಕ್ಕೆ ಹಿಡಿದಿದ್ದೆ. ಓಡುತ್ತಲೇ ತನ್ನ ಗಲ್ಲಾಪೆಟ್ಟಿಗೆಯತ್ತ ಹೋದ ಆಸಾಮಿ ನೀಟಾಗಿ ನಾನೂರಾ ಐವತ್ತಕ್ಕೂ ಹೆಚ್ಚಿನ ಮೊತ್ತವನ್ನು ನನ್ನ ಕೈಗಿಟ್ಟಿದ್ದ! 

   ಅಷ್ಟೇ, ಹೋಗುವಾಗ ಮನೆಯಿಂದ ಕೇವಲ ಐದು ನಿಮಿಷದ ಹಾದಿಯಾಗಿದ್ದ ಕಳ್ಳದಾರಿ, ಅಲ್ಲಿಂದ 
ಹಿಂತಿರುಗಿ ಬರುವಾಗ ಅರ್ಧಗಂಟೆಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ಔಷಧಿ ಅಂಗಡಿಯಿಂದ ಹೊರಡುವಾಗ ಆ ಆಸಾಮಿಗೆ ಇದ್ದಕ್ಕಿದ್ದಂತೆ ನನ್ನ ಕರಾಮತ್ತು ಗೊತ್ತಾಗಿ ದಿಢೀರಂತ ಯಾವುದಾದರೂ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದುಬಿಟ್ಟರೇ? ಹಾಗಾಗಿ ಅಂಗಡಿಯಿಂದ ಸೀದಾ ಮನೆಗೆ ಹೋಗದೇ ಯಾವುದ್ಯಾವುದೋ ಸಂದಿಯಲ್ಲಿ ಸಾಗುತ್ತ ಇಡೀ ಊರನ್ನು ಸುತ್ತು ಹೊಡೆದು ಕೊನೆಗೆ ಹೇಗೋ ಮನೆ ತಲುಪಿದ್ದೆ. ಅದೊಂದು ಅದ್ಭುತ ಸಾಯಂಕಾಲವಾಗಿತ್ತು. ಕುಶಾಲಿಗೆಂದು ಹರಿದ ನೋಟು ಕೊಟ್ಟಿದ್ದ ಗೆಳೆಯನನ್ನು ಹುಡುಕಾಡಿ ವಗ್ಗರಣೆ ಗಿರಮಿಟ್ಟು, ಎರಡು ಮಿರ್ಚಿಬಜಿ ಕೊಡಿಸಿದ್ದೆ. ಆತನಿಗೆ ಅಚ್ಚರಿ. 'ಏನಾತಪೋ, ವಗ್ಗರಣಿ ಗಿಗ್ಗರಣಿ ಕೊಡಿಸ್ತಾ ಇದೀಯಲ್ಲ?' ಅಂತ ಕೇಳಿದವನಿಗೆ, 'ಏನಿಲ್ಲಪ, ಸುಮ್ಮನೇ ಬ್ಯಾಸರ ಆತು' ಅಂತ ಮುಗುಮ್ಮಾಗಿ ಹೇಳಿ ಆತನನ್ನು ಇನ್ನಷ್ಟು ಕಂಗಾಲು ಮಾಡಿದ್ದೆ. 

   ಅದೆಲ್ಲ ಆಗಿ ಇಷ್ಟು ವರ್ಷಗಳಾದ ಬಳಿಕ ಮೊನ್ನೆ ಪುರಾತನ ಗೆಳೆಯನಿಗೆ ಫೋನು ಮಾಡಿದೆ. ಆತನಿಗೆ 'ಹೀಗೀಗೆ' ಅಂತ ಹಳೆಯ ಕತೆಯನ್ನೆಲ್ಲ ಹೇಳಿದೆ. ಗೆಳೆಯ ಬಿದ್ದುಬಿದ್ದು ನಗುತ್ತಿದ್ದ. ನಿನ್ನ ಅಕೌಂಟಿಗೆ ಐನೂರು ರೂಪಾಯಿ ಹಾಕುತ್ತಿರುವದಾಗಿಯೂ, ಅದನ್ನು ಆ ಅಂಗಡಿಯವನಿಗೆ ತಲುಪಿಸಿ, ನನ್ನ ಕತೆಯನ್ನೆಲ್ಲ ಹೇಳಿ, ಆತ ಅದನ್ನೆಲ್ಲ ನಂಬಿದ್ದೇ ಆದಲ್ಲಿ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿಸಬೇಕೆಂದೂ, ನಾನು ಆತನಲ್ಲಿ ಕ್ಷಮೆ ಕೇಳುವದಾಗಿಯೂ ವಿನಂತಿಸಿಕೊಂಡೆ. ಈ ಗೆಳೆಯನಿಗೆ ಏನನಿಸಿತೋ, ತಕ್ಷಣ "ಹಂಗಾದ್ರೆ ನಾನೂ ಅರ್ಧ ಕೊಡ್ತೀನಿ, ಯಾಕೆಂದರೆ ಡ್ರಾಯಿಂಗ್ ಬಿಡಿಸಿದವನು ನಾನು" ಅಂದುಬಿಟ್ಟ. ಇಷ್ಟು ವರ್ಷಗಳಾದರೂ ಗೆಳೆಯನಿಗೆ ನಾನು ಆ ನೋಟನ್ನು ಎಲ್ಲಿ ಚಲಾಯಿಸಿದ್ದೆ ಅಂತ ಹೇಳಿರಲಿಲ್ಲ. ಈಗ ನೆನಪಿಸಿಕೊಂಡು ಆ ಅಂಗಡಿಯ ಜಾಗ, ಹೆಸರು ಹೇಳಿದೆ. 'ಅಯ್ಯೋ ಮಾರಾಯ, ಆತ ಅಂಗಡಿ ಮುಚ್ಚಿ ಸುಮಾರು ವರ್ಷಗಳಾದವು. ಎಲ್ಲಿ ಹೋದ ಗೊತ್ತಿಲ್ಲ' ಅಂತ ಕೈಯೆತ್ತಿದ.

   ಸದ್ಯಕ್ಕಂತೂ ಆ ಐನೂರು ನನ್ನ ಬಳಿಯೇ ಇದೆ. ಜೊತೆಗೊಂದು ಜಿಜ್ಞಾಸೆ ಕೂಡ. ಅಕಸ್ಮಾತ್ 
ಈ ದುಡ್ಡು ಹಿಂತಿರುಗಿಸಿದ್ದರೆ ಆಗ ದೊರಕುತ್ತಿದ್ದ ಸಮಾಧಾನ ದೊಡ್ಡದಾಗಿರುತ್ತಿತ್ತೋ ಅಥವಾ ಹಣ 
ಹಿಂದಿರುಗಿಸಲಾಗದೇ ಈಗ ನನ್ನೊಳಗೆ ಶಾಶ್ವತವಾಗಿ ಉಳಿದುಹೋಗಲಿರುವ ಅಸಮಾಧಾನ ದೊಡ್ಡದೋ?  
                                                                  -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 02.08.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

6 comments:

ನವೀನ್ ಮಧುಗಿರಿ said...

ಕಿಕಾಕುವಿನ ಹಾಯ್ಕು ಸಕ್ಕತ್! ಭಲೇ ಕಿಲಾಡಿ ಜೋಶಿ ಸರ್ ಸಹ ತುಂಬಾನೇ ಇಷ್ಟವಾದ್ರು. ಒಂದುವಾರದ ಹಿಂದೆ ಇಂಥದ್ದೊಂದು ಘಟನೆ ಜರುಗಿತು. ಪೆಟ್ರೋಲ್ ಹಾಕಿಸಿದಾಗ ಬಂಕಿನ ಹುಡುಗ ಐವತ್ತರ ನೋಟುಗಳನ್ನು ಚಕಚಕನೆ ಎಣಿಸಿ ಕೈಗಿಟ್ಟ. ಮತ್ತೇನೋ ಕೊಳ್ಳಲು ಮೆಡಿಕಲ್‌ಗೆ ಹೋಗಿದ್ದೆ. ಬಂಕಿನ ಹುಡುಗ ಕೊಟ್ಟ ಐವತ್ತರ ಒಂದು ನೋಟನ್ನು ಮೆಡಿಕಲ್ ನವರು ಹಿಂತಿರುಗಿಸಿ ‘ಇದು ಖೋಟಾ ನೋಟು ಇದು ಹೋಗಲ್ಲ. ಬೇರೆಯದು ಕೊಡಿ ಸರ್’ ಅಂದ್ಬಿಟ್ರು. ‘ಅದು ಹೇಗ್ರಿ ಗೊತ್ತಾಗುತ್ತೆ?’ ಎಂದು ಪ್ರಶ್ನಿಸಿದರೆ, ಇಲ್ನೋಡಿ ಸಾರ್ ಇಲ್ಲಿ 50 ಅಂತಿರಬೇಕಾದ ಜಾಗದಲ್ಲಿ ಹೂವಿನ ಚಿತ್ರವಿದೆ’ ಸಾಕ್ಷಿ ಸಮೇತ ವಿವರಿಸಿ ಉತ್ತರಿಸಿದ. ಈಗ ಈ ಐವತ್ತರ ನೋಟನ್ನು ಎಲ್ಲಿ ಚಲಾಯಿಸುವುದು? ನಾನು ಕಷ್ಟಪಟ್ಟು ದುಡಿದ ಹಣವೀಗ ಖೋಟಾನೋಟಾಗಿ ಬದಲಾಗಿದೆಯಲ್ಲ!
ನಿಮ್ಮ ಆಪರೇಷನ್ ಪೋಸ್ಟ್‌ಮಾರ್ಟಂ ಐನೂರರ ನೋಟಿನ ಪ್ರಸಂಗ, ಭಯವಿಲ್ಲದೆ ಐನೂರರ ನೋಟನ್ನು ಚಲಾಯಿಸಿದ ಧೈರ್ಯ ಇಷ್ಟವಾಯ್ತು.
ಗೌಳೇರ ಎಮ್ಮೆಯ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲವಿದೆ.

ಜಲನಯನ said...

ರಾಘು ಹರಿದ ನೋಟುಗಳಿಗೆ ಸೆಲ್ಲೋಟೇಪ್ ಹಚ್ಚಿ ಬದಲಾಯಿಸಬೇಕಂದ್ರೆ ಊರಿನಿಂದ ೨ ಕಿಮೀ ದೂರದ ಅಡ್ಡರೋಡಿಗೆ ಹೋಗಿ ಅಲ್ಲಿ ಅವಸ್ರವಸರದ ವ್ಯಾಪಾರ ಮಾಡುವ ಅಂಗಡಿಗೆ ಹೋಗಿ ಚಲಾಯಿಸಿ ಬರುತ್ತಿದ್ದುದು ನೆನ್ಪಾಯ್ತು... ಚನ್ನಾಗಿದೆ... ಬಹಳದಿನ ಆಗಿತ್ತು ನಿಮ್ಮ ಮಾಯಾಲಾಂದ್ರ ನೋಡಿ...

sunaath said...

ಹಾಯ್ಕು ಸೂಪರ್ ಆಗಿದೆ. ನಿಮ್ಮ ಕಿಲಾಡಿತನಕ್ಕೆ ಭೇಶ್ ಎನ್ನುತ್ತಿದ್ದೇನೆ. ಇನ್ನು ಆದದ್ದದರ ಬಗೆಗೆ ಅಸಮಾಧಾನ ಪಟ್ಟುಕೊಳ್ಳುತ್ತ ಕೂಡಬೇಡಿ. ಏಕೆಂದರೆ, ನಿಮಗೂ ಸಹ ಮತ್ತೆಲ್ಲಿಯೋ ಲುಕ್ಸಾನು ಆಗಿರುತ್ತದೆ; ಆ ಅಂಗಡಿಯವನಿಗೂ ಸಹ ಮತ್ತೆಲ್ಲೋ ಹೆಚ್ಚಿನ ಲಾಭವಾಗಿರುತ್ತದೆ. ನಾವು ಹೋಗುವಾಗ, ಈ ಲಾಭ-ಲುಕ್ಸಾನುಗಳ ಮೊತ್ತ ಸೊನ್ನೆ ಆಗಲೇಬೇಕು,ನೋಡಿ!

ರಾಘವೇಂದ್ರ ಜೋಶಿ said...

ಬೆಳಕಿನ ಮಳೆಯ ನವೀನರೇ,
ಹಹಹ.. ನಿಮ್ಮ ಹಾಗೆ ನನಗೂ ಐವತ್ತರ ನೋಟಿನ ಅನುಭವ ಒಂದೆರೆಡು ಬಾರಿ ಆಗಿದೆ.
ಧನ್ಯವಾದಗಳು.

ರಾಘವೇಂದ್ರ ಜೋಶಿ said...


ಜಲನಯನದ ಅಜಾದ್ ಭಾಯ್,
ಹಹಹ.. ನನ್ನಂಥ ಕಿರಾತಕರು ತುಂಬ ಜನ ಇರುವರೆಂದು ತಿಳಿದು ಕೆಟ್ಟ ಸಮಾಧಾನವಾಯಿತು. ಧನ್ಯವಾದಗಳು

ರಾಘವೇಂದ್ರ ಜೋಶಿ said...

ಪ್ರೀತಿಯ ಸುನಾಥ ಸರ್,
ಹೌದು, ನೀವು ಅಂದುಕೊಂಡಂತೆ ಆವತ್ತಿನಿಂದ ಇವತ್ತಿನವರೆಗೂ ಅನೇಕ ಕಡೆ ಅನೇಕ ರೀತಿಯಲ್ಲಿ ನನಗೆ ಲುಕ್ಸಾನು ಆಗಿದ್ದುಂಟು ಮತ್ತು ಲುಕ್ಸಾನಾದ ಹಣದ ಮೊತ್ತ ಈ ಐನೂರು ರೂಪಾಯಿಗೆ ಹೋಲಿಸಿದರೆ ಎಷ್ಟೋ ಪಟ್ಟು ಹೆಚ್ಚಿನದಾಗಿದೆ. ಬಹುಶಃ ಬದುಕು ಈ ರೀತಿ ತನ್ನ cycle ಪೂರ್ತಿ ಮಾಡುತ್ತದೆ ಅಂತನಿಸುತ್ತದೆ.
ಧನ್ಯವಾದಗಳು.